ಕಾಂಗ್ರೆಸ್‌ ಸರ್ಕಾರದ ಸಾಧನೆ ಮನವರಿಕೆಗಾಗಿ ಮನೆಮನೆಗೆ ತೆರಳಿ

By Kannadaprabha NewsFirst Published Mar 19, 2023, 5:41 AM IST
Highlights

ಬಿಜೆಪಿ ಸರ್ಕಾರದ ವೈಫಲ್ಯಗಳಿಂದ ಜನರು ಬೇಸತ್ತಿದ್ದು, ಕಾಂಗ್ರೆಸ್‌ ಸರ್ಕಾರದ ಸಾಧನೆಗಳ ಮನವರಿಕೆಗಾಗಿ ಕಾರ್ಯಕರ್ತರು ಮನೆಮನೆಗೆ ತೆರಳಬೇಕು ಎಂದು ಡಾ. ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು

 ರಾವಂದೂರು : ಬಿಜೆಪಿ ಸರ್ಕಾರದ ವೈಫಲ್ಯಗಳಿಂದ ಜನರು ಬೇಸತ್ತಿದ್ದು, ಕಾಂಗ್ರೆಸ್‌ ಸರ್ಕಾರದ ಸಾಧನೆಗಳ ಮನವರಿಕೆಗಾಗಿ ಕಾರ್ಯಕರ್ತರು ಮನೆಮನೆಗೆ ತೆರಳಬೇಕು ಎಂದು ಡಾ. ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.

ಪಿರಿಯಾಪಟ್ಟಣ ತಾಲೂಕಿನ ದೊಡ್ಡಬೇಲಾಳು ಗ್ರಾಮದಲ್ಲಿ ಕಾಂಗ್ರೆಸ್‌ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ವರ್ಗಾವಣೆ ದಂಧೆ, ಪರೀಕ್ಷೆ ಅಕ್ರಮ, ಸ್ಯಾಂಟ್ರೋ ರವಿ, ನೇಮಕಾತಿಯಲ್ಲಿ ಅಕ್ರಮ ಪ್ರಕರಣ ಸೇರಿದಂತೆ ಅನೇಕ ಹರಗಣರಗಳ ಮೂಲಕ ರಾಜ್ಯದ ಬಿಜೆಪಿ ಸರ್ಕಾರ ಭ್ರಷ್ಟಚಾರದಲ್ಲಿ ಮುಳುಗಿದೆ, ಬಿಜೆಪಿಯನ್ನು ಕಿತ್ತೊಗೊಯ್ಯಬೇಕು ಎಂಬ ಮನಸ್ಸು ಜನಸಾಮಾನ್ಯರಲ್ಲಿ ಮೂಡಿಸಿದ್ದು, ಕಾಂಗ್ರೆಸ್‌ ಕಾರ್ಯಕತರು ಜನರಿಗೆ ಕಾಂಗ್ರೆಸ್‌ ಸಾಧನೆಗಳು ಮತ್ತು ಭರವಸೆಗಳನ್ನು ತಲುಪಿಸುವ ಮೂಲಕ ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ತರಬೇಕಿದೆ ಎಂದು ತಿಳಿಸಿದರು.

ಈ ಬಾರಿ ಕಾಂಗ್ರೆಸ್‌ ಸರ್ಕಾರ ರಚನೆಯಾಗುವುದು ಖಚಿತ: ಯತೀಂದ್ರ ಸಿದ್ದರಾಮಯ್ಯ

ಮಾಜಿ ಶಾಸಕ ಕೆ. ವೆಂಕಟೇಶ್‌ ಮಾತನಾಡಿ, ಸಿದ್ದರಾಮಯ್ಯರನ್ನು ಮುಖ್ಯಮಂತ್ರಿ ಮಾಡುವ ಅವಕಾಶ ತಪ್ಪಿಸಿದ್ದು ದೇವೇಗೌಡರು, ಕುತಂತ್ರ, ಸ್ವಾರ್ಥ ಸಾಧನೆ ಮಾಡುವ ಏಕೈಕ ಪಕ್ಷ ಎಂದರೆ ಜೆಡಿಎಸ್‌ ಅದರ ಅಧಿಕಾರದ ಹಂಬಲ ಒಳಜಗಳ ಬೀದಿಗೆ ಬಂದಿದೆ, ಮನೆಯವರೆಲ್ಲರೂ ಅಧಿಕಾರಕ್ಕೆ ಹಪಹಪಿಸುತ್ತಿದ್ಧಾರೆ. ಪ್ರಸ್ತುತ ಜಿ.ಟಿ. ದೇವೇಗೌಡ ಮತ್ತು ಕೆ. ಮಹದೇವ್‌ ಪರಿಸ್ಥಿತಿ ಅನ್ನ ಹಳಸಿತ್ತು ನಾಯಿಯು ಹಸಿದಿತ್ತು ಎಂಬ ಪರಿಸ್ಥಿತಿಯಲ್ಲಿ ಇದೆ ಎಂದು ಟೀಕಿಸಿದರು.

ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್‌, ಅಮೀತ್‌ ದೇವರಹಟ್ಟಿ, ತಾಪಂ ಮಾಜಿ ಸದಸ್ಯ ಟಿ. ಈರಯ್ಯ, ಕೆಪಿಸಿಸಿ ಸದಸ್ಯರಾದ ನಿತಿನ್‌ ವೆಂಕಟೇಶ್‌, ಅನಿಲ್‌, ತಾಲೂಕು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಡಿ.ಟಿ. ಸ್ವಾಮಿ ಇದ್ದರು.

ಬೆಲೆ ಏರಿಕೆ ಬದುಕು ಮೂರಾಬಟ್ಟೆ

ನಂಜನಗೂಡು (ಮಾ.17): ಬಿಜೆಪಿ ಸರ್ಕಾರ ಬೆಲೆ ಏರಿಕೆಯ ಮೂಲಕ ರೈತರ ಬದುಕನ್ನು ಮೂರಾಬಟ್ಟೆಮಾಡುತ್ತಿದೆ ಎಂದು ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿದರು. ತಾಲೂಕಿನ ಚಿಕ್ಕಯ್ಯಛತ್ರ ಗ್ರಾಮದಲ್ಲಿ 50 ಲಕ್ಷ ರು. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ರೈತ ಸಂಪರ್ಕ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಸಾಲಮನ್ನಾ, ಕೃಷಿ ಭಾಗ್ಯ, ಹಾಲಿನ ಸಬ್ಸಿಡಿ ಹೆಚ್ಚಳ, ಹೈನುಗಾರಿಕೆಗೆ ಉತ್ತೇಜನ ಸೇರಿದಂತೆ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದು ರೈತರ ಬದುಕನ್ನು ಸುಧಾರಣೆ ಮಾಡಲಾಗಿತ್ತು. ಮೋದಿ ನೇತೃತ್ವದ ಬಿಜೆಪಿಯ ಕೇಂದ್ರ ಸರ್ಕಾರ ರೈತರ ಆದಾಯವನ್ನು ದ್ವಿಗುಣಗೊಳಿಸುವುದಾಗಿ ಭರವಸೆ ನೀಡಿತ್ತು. 

ಆದರೆ ರಸಗೊಬ್ಬರ ಬೆಲೆ ಏರಿಕೆ, ಅಗತ್ಯ ವಸ್ತುಗಳ ಬೆಲೆ ಏರಿಕೆ, ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ ಮೂಲಕ ರೈತರ ಬದುಕನ್ನು ಮೂರಾಬಟ್ಟೆಮಾಡಿದೆ ಎಂದು ದೂರಿದರು. ತಾಲೂಕಿನ ಚಿಕ್ಕಯ್ಯನ ಛತ್ರದ ರೈತ ಸಂಪರ್ಕ ಕೇಂದ್ರದ ಕಾಮಗಾರಿ ಹಲವಾರು ವರ್ಷಗಳಿಂದ ಜಾಗದ ಸಮಸ್ಯೆಯಿಂದ ನೆನೆಗುದಿಗೆ ಬಿದ್ದಿತ್ತು. ಈಗ ಸ್ಥಳೀಯ ಮುಖಂಡರ ಸಹಾಯದಿಂದ ಸಮಸ್ಯೆಯನ್ನು ಬಗೆಹರಿಸಿ 50 ಲಕ್ಷ ವೆಚ್ಚದಲ್ಲಿ ಕಾಮಗಾರಿ ಮುಕ್ತಾಯವಾಗಿ ಕಟ್ಟಡ ಉದ್ಘಾಟನೆಗೊಂಡಿದೆ. ಇದರಿಂದ ಈ ಭಾಗದ ರೈತರಿಗೆ ಸಕಾಲದಲ್ಲಿ ನೆರವು ದೊರಕುವ ಮೂಲಕ ಸಹಾಯವಾಗಲಿದೆ ಎಂದರು. ತಾಂಡ್ಯ ಕೈಗಾರಿಕಾ ಪ್ರದೇಶದಲ್ಲಿ 1.4 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ದಿ ಕಾಮಗಾರಿ, ತಾಂಡವಪುರ, ಕುಪ್ಪರವಳ್ಳಿ, ಬಿಳಿಗೆರೆ ಸರ್ಕಾರಿ ಶಾಲೆಯಲ್ಲಿ ವಿವೇಕ ಯೋಜನೆಯಲ್ಲಿ ತಲಾ 15 ಲಕ್ಷ ರು. ವೆಚ್ಚದಲ್ಲಿ ನೂತನ ಶಾಲಾ ಕಟ್ಟಡ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದರು.

ಕುಡಿಯುವ ನೀರಿನ ಕೊರತೆ ನೀಗಿಸಿದ ಬಿಜೆಪಿ: ಸಿಎಂ ಬೊಮ್ಮಾಯಿ

ಟೋಲ್‌ ಸಮಸ್ಯೆ ಬಗೆಹರಿಸಲಿ: ಬೆಂಗಳೂರು-ಮೈಸೂರು ದಶಪಥ ರಸ್ತೆಯಲ್ಲಿ ಹೆಚ್ಚಿನ ಟೋಲ್‌ ಸುಂಕ ವಸೂಲಿ ಮಾಡುತ್ತಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ. ಈ ಬಗ್ಗೆ ಸಾರ್ವಜನಿಕರು ತಮ್ಮ ಅಳಲು ತೋಡಿಕೊಂಡರೂ ಸಹ ರಾಜ್ಯ ಸರ್ಕಾರ ಸ್ಪಂದಿಸುತ್ತಿಲ್ಲ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ಬಗ್ಗೆ ಪರಿಶೀಲನೆ ನಡೆಸಿ ಸಾರ್ವಜನಿಕರಿಗೆ ಹೆಚ್ಚಿನ ಹೊರೆಯಾಗದಂತೆ ಟೋಲ್‌ ದರ ನಿಗದಿಪಡಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸುತ್ತೇನೆ ಎಂದರು.

click me!