ಮಾತೃಭಾಷೆಯಲ್ಲೇ ಶಿಕ್ಷಣ ನೀಡಲು ಆದ್ಯತೆ ನೀಡಿ: ಶಾಸಕ ಪ್ರದೀಪ್‌ ಈಶ್ವರ್‌

By Kannadaprabha NewsFirst Published Aug 6, 2023, 6:57 PM IST
Highlights

ಶಿಕ್ಷಣದಲ್ಲಿ ಮಾತೃಭಾಷೆಗೆ ಮೊದಲ ಪ್ರಾತಿನಿದ್ಯ ನೀಡಿ, ಆಗ ತಂತಾನೆ ಎಲ್ಲಾ ಭಾಷೆಗಳು ಕರಗತವಾಗುತ್ತವೆ. ಜೀವನದಲ್ಲಿ ಗುರಿ ಇರಲಿ, ಗುರಿ ಸಾಧನೆಗೆ ಗುರುವಿರಲಿ. ಸರ್ಕಾರಿ ಶಾಲೆ-ಕಾಲೇಜುಗಳ ಬಗ್ಗೆ ತಾತ್ಸಾರ ಸಲ್ಲದು, ಏಕೆಂದರೆ ಸರ್ಕಾರಿ ಶಾಲೆ-ಕಾಲೇಜುಗಳಲ್ಲಿ ಉ್ತಮ ಮತ್ತು ನುರಿತ ಶಿಕ್ಷಕರು ಇರುತ್ತಾರೆ ಎಂದು ಶಾಸಕ ಪ್ರದೀಪ್‌ ಈಶ್ವರ್‌ ಹೇಳಿದರು.

ಚಿಕ್ಕಬಳ್ಳಾಪುರ (ಆ.06): ಶಿಕ್ಷಣದಲ್ಲಿ ಮಾತೃಭಾಷೆಗೆ ಮೊದಲ ಪ್ರಾತಿನಿದ್ಯ ನೀಡಿ, ಆಗ ತಂತಾನೆ ಎಲ್ಲಾ ಭಾಷೆಗಳು ಕರಗತವಾಗುತ್ತವೆ. ಜೀವನದಲ್ಲಿ ಗುರಿ ಇರಲಿ, ಗುರಿ ಸಾಧನೆಗೆ ಗುರುವಿರಲಿ. ಸರ್ಕಾರಿ ಶಾಲೆ-ಕಾಲೇಜುಗಳ ಬಗ್ಗೆ ತಾತ್ಸಾರ ಸಲ್ಲದು, ಏಕೆಂದರೆ ಸರ್ಕಾರಿ ಶಾಲೆ-ಕಾಲೇಜುಗಳಲ್ಲಿ ಉ್ತಮ ಮತ್ತು ನುರಿತ ಶಿಕ್ಷಕರು ಇರುತ್ತಾರೆ ಎಂದು ಶಾಸಕ ಪ್ರದೀಪ್‌ ಈಶ್ವರ್‌ ಹೇಳಿದರು. ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾಲೇಜು ವತಿಯಿಂದ ಏರ್ಪಡಿಸಿದ್ದ 2023-24ನೇ ಸಾಲಿನ ಸಾಂಸ್ಕೃತಿಕ, ಕ್ರೀಡಾ, ಎನ್‌ಸಿಸಿ, ಎನ್‌ಎಸ್‌ಎಸ್‌, ರೆಡ್‌ಕ್ರಾಸ್‌, ಸ್ಕೌಟ್ಸ್‌ ಮತ್ತು ಗೈಡ್ಸ್‌ ,ಪ್ರಥಮ ಪದವಿ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭಹಾಗೂ ಇತರೆ ಚಟುವಟಿಕೆಗಳ ಉದ್ಘಾಟಿಸಿ ಅವರು ಮಾತನಾಡಿದರು.

ಅಗತ್ಯ ಇದ್ದರಿಗೆ ಸಹಾಯ ಮಾಡುವುದೇ ದಾನ: ಯಾರೇ ಆಗಲಿ ಸಂಪತ್ತು ಹೆಚ್ಚಾಗಿ ದಾನ ಮಾಡುವುದಲ್ಲ. ಅವಶ್ಯಕತೆ ಇರುವವರಿಗೆ ಬೇಕಾದಾಗ ನೀಡುವುದೇ ದಾನ. ಕೇವಲ ನನ್ನ ಕ್ಷೇತ್ರದ ವಿದ್ಯಾರ್ಥಿಗಳಿಗೆ ಮಾತ್ರ ಉಚಿತವಾಗಿ ಸಿಇಟಿ, ಮತ್ತು ನೀಟ್‌ ತರಬೇತಿ ಕೇಂದ್ರ ತೆರೆದು ಚಿಕ್ಕಬಳ್ಳಾಪುರ ವಿಧಾನ ಸಭಾ ಕ್ಷೇತ್ರದ ಎಲ್ಲ ಪಿಯುಸಿ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿಯನ್ನು ಉಚಿತವಾಗಿ ನೀಡಲಾಗುವುದು. ವಾಣಿಜ್ಯ ವಿದ್ಯಾರ್ಥಿಗಳಿಗೆ ಸಿಎ ತರಬೇತಿ ಮತ್ತು ಪದವಿ ಪೊರೈಸಿದವರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಎಎಸ್‌,ಐಎಎಸ್‌,ಐಪಿಎಸ್‌,ಐಆರ್‌ಎಸ್‌ ಸೇರಿದಂತೆ ಎಲ್ಲಾ ತರಬೇತಿಗಳನ್ನು ವಸತಿ ಮತ್ತು ಊಟ ತಿಂಡಿಯೊಂದಿಗೆ ಶೀಘ್ರದಲ್ಲೇ ವ್ಯವಸ್ಥೆ ಮಾಡಲಾಗುವುದು ಎಂದರು.

ಎಲ್ಲಾ ವರ್ಗದ ಜನರ ಅಭಿವೃದ್ದಿಗೆ ಕಾಂಗ್ರೆಸ್‌ ಸರ್ಕಾರದಿಂದ ಕೆಲಸ: ಸಚಿವ ವೆಂಕಟೇಶ್‌

ಸರ್ಕಾರಿ ಮತ್ತು ಅನುದಾನಿತ ಪ್ರೌಢಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿಯ ವಿದ್ಯಾರ್ಥಿಗಳಿಗೆ ಕಾರ್ಪೊರೇಟ್‌ ಶಾಲೆಗಳ ಮಾದರಿಯಲ್ಲಿ ಡಿಸೆಂಬರ್‌ ನಿಂದ ತರಬೇತಿಯನ್ನು ಬೆಂಗಳೂರಿನಲ್ಲಿ ನೀಡಿ, ಪರೀಕ್ಷೆಯಲ್ಲಿ 625 ಅಂಕಗಳಿಗೆ 625ದನ್ನು ಪಡೆಯುವಂತೆ ತಯಾರಿ ನೀಡಲಾಗುವುದು. ಇದಕ್ಕೆ ಸುಮಾರು 10 ಕೋಟಿ ರೂಪಾಯಿಗಳು ವೆಚ್ಚವಾಗಲಿದ್ದು , ಆ ಹಣವನ್ನು ನಾನೇ ಭರಿಸುತ್ತೇನೆ. ಕ್ಷೇತ್ರದ ಎಲ್ಲಾ 19 ಸಾವಿರ ವಿದ್ಯಾರ್ಥಿಗಳಿಗೆ ಗಣೇಶ ಚರ್ತುಥಿ ಹಬ್ಬಕ್ಕೆ ಒಂದು ಜೊತೆ ಬಟ್ಟೆಗಳನ್ನು ಮತ್ತು ಕ್ಷೇತ್ರದ ಎಲ್ಲಾ ಮಹಿಳೆಯರಿಗೆ ವರಮಹಾಲಕ್ಷ್ಮೀ ಹಬ್ಬಕ್ಕೆ ಸೀರೆ ಅರಿಷಿಣ ಕುಂಕುಮ ಹಾಗೂ ಸರ್ಕಾರಿ ಪದವಿ ಕಾಲೇಜಿನ ವಿದ್ಯಾರ್ಥಿಗಳಿಗೂ ಸಮವಸ್ತ್ರ ನೀಡಲಾಗುವುದು ಎಂದರು.

ತಂದೆ, ತಾಯಿಯ ಪ್ರೀತಿ ದೊಡ್ಡದು: ಲವ್‌ ವೈಫಲ್ಯ ಆಯಿತೆಂದು ಯಾರೂ ಆತ್ಮಹತ್ಯೆ ಮಾಡಿಕೊಳ್ಳ ಬೇಡಿ, ಲವ್‌ ಫೇಲಾದರೆ ಮತ್ತೊಬ್ಬರು ನಿಮ್ಮನ್ನು ಪ್ರೀತಿಸಲು ಕಾಯುತ್ತಿರುತ್ತಾರೆ. ನೀವು ಪ್ರೀತಿಸುವ ಹುಡುಗಿಗಿಂತ ನಿಮ್ಮ ತಾಯಿ ನಿಮ್ಮ ಮೇಲಿಟ್ಟಿರುವ ಪ್ರೀತಿ ದೊಡ್ಡದು. ನೀವು ಪ್ರೀತಿಸುವ ಹುಡುಗನಿಗಿಂತ ನಿಮ್ಮ ತಂದೆ ನಿಮ್ಮ ಮೇಲಿಟ್ಟಿರುವ ಪ್ರೀತಿ ದೊಡ್ಡದು. ಪೋಷಕರು ನಿಮ್ಮನ್ನು ಕಾಲೇಜಿಗೆ ಕಳುಹಿಸ ಬೇಕಾದರೆ ಅವರ ಪರಿಶ್ರಮ ಎಷ್ಟುಎಂಬ ಬಗ್ಗೆ ವಿದ್ಯಾಥಿಗಳಿಗೆ ಅರಿವಿರಲಿ. ಸ್ವಾರ್ಥ ತುಂಬಿದ ಜಗತ್ತಿನಲ್ಲಿ ತಂದೆ-ತಾಯಿಯರ ನಿಸ್ವಾರ್ಥ ಪ್ರೇಮ ದೊಡ್ಡದು ಎಂಬುದನ್ನು ಮರೆಯದಿರಿ ಎಂದರು. ಮಾಜಿ ಶಾಸಕರುಗಳಾದ, ಕೆ.ಬಿ.ಪಿಳ್ಳಪ್ಪ, ಸಿ.ವಿ.ವೆಂಕಟರಾಯಪ್ಪ, ಎ.ಮುನಿಯಪ್ಪ, ರೇಣುಕಾ ರಾಜೆಂದ್ರನ್‌ ರವರುಗಳ ಹೆಸರಲ್ಲಿ ಬಿಎ, ಬಿ.ಕಾಂ, ಬಿಎಸ್‌ಸಿ, ಬಿಬಿಎಂ, ಬಿಸಿಹೆಚ್‌ನ ಐದು ವಿಭಾಗಗಳಿಗೂ ಚಿನ್ನದ ಪದಕಗಳನ್ನು ನೀಡುವ ಭರವಸೆ ನೀಡಿದರು.

ನುಡಿದಂತೆ ನಡೆದಿರುವ ಕಾಂಗ್ರೆಸ್‌ ಸರ್ಕಾರ: ಸಚಿವ ಮುನಿಯಪ್ಪ

ಈ ವೇಳೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಮುನಿರಾಜು,ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೋ.ಜಿಡಿ.ಚಂದ್ರಯ್ಯ,ಪ್ರಾಧ್ಯಾಪಕರಾದ ಎಲ್‌.ನಾಗರಾಜ, ಡಾ.ಶಫೀಅಹ್ಮದ್‌,ಡಾ.ಸಿ.ಕೆ.ಜಗದೀಶ್‌,ಡಾ.ನಾಗೇಂದ್ರಯ್ಯ,ಡಾ.ಪಿ.ಸುನೀತ,ಶಭಾನ ಅಂಜುಂ, ಡಾ.ಜಿ.ವಿ.ಶ್ರೀನಿವಾಸಮೂರ್ತಿ, ಕೆ.ಶ್ರೀಹರಿ, ಡಾ.ಕೆ.ಆರ್‌.ಶಿವಶಂಕರ್‌, ಎಸ್‌.ಶ್ರೀನಿವಾಸ್‌, ಎಂ.ವೆಂಕಟೇಶ್‌,ಸದಾಶಿವ, ವೀಣಾ, ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ಹಳೇವಿದ್ಯಾರ್ಥಿಗಳ ಸಂಘ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರು ಸೇರಿದಂತೆ ಮತ್ತಿತರರು ಇದ್ದರು.

click me!