ಉತ್ತರ ಕನ್ನಡದ ಆಗಸದಲ್ಲಿ ನಿಗೂಢ ವಿಮಾನ ಹಾರಾಟ, ಆತಂಕಪಡುವ ಅಗತ್ಯವಿಲ್ಲವೆಂದು ಜಿಲ್ಲಾಡಳಿತ ಸ್ಪಷ್ಟನೆ

Published : May 09, 2026, 07:38 PM IST
Aircraft Flying

ಸಾರಾಂಶ

ಉತ್ತರ ಕನ್ನಡ ಜಿಲ್ಲೆಯಲ್ಲಿ ಇತ್ತೀಚೆಗೆ ಕಂಡುಬರುತ್ತಿರುವ ಕಡಿಮೆ ಎತ್ತರದ ವಿಮಾನ ಹಾರಾಟವು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದೆ. ಇದು ಖನಿಜ ಅನ್ವೇಷಣೆಗಾಗಿ ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣಾ ಸಂಸ್ಥೆ ನಡೆಸುತ್ತಿರುವ ವೈಜ್ಞಾನಿಕ ಸಮೀಕ್ಷೆಯಾಗಿದ್ದು, ಭಯಪಡುವ ಅಗತ್ಯವಿಲ್ಲ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಇತ್ತೀಚೆಗೆ ಕೆಳಹಂತದಲ್ಲಿ ವಿಮಾನ ಹಾರಾಟ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ಆತಂಕ ಮೂಡಿರುವುದನ್ನು ಗಮನಿಸಿದ ಜಿಲ್ಲಾ ಆಡಳಿತ, ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಯಾವುದೇ ಭಯಪಡಬೇಕಾದ ಅವಶ್ಯಕತೆ ಇಲ್ಲ ಎಂದು ತಿಳಿಸಿದೆ.

ಗೋವಾ ಹಾಗೂ ಕರ್ನಾಟಕ ರಾಜ್ಯಗಳಲ್ಲಿ ಸಮೀಕ್ಷೆ

ಜಿಲ್ಲಾ ಆಡಳಿತ ಬಿಡುಗಡೆ ಮಾಡಿದ ಪ್ರಕಟಣೆಯ ಪ್ರಕಾರ, ಈ ವಿಮಾನ ಹಾರಾಟವು ಖನಿಜ ಅನ್ವೇಷಣೆಗೆ ಸಂಬಂಧಿಸಿದ ವೈಜ್ಞಾನಿಕ ಸಮೀಕ್ಷೆಯ ಭಾಗವಾಗಿದೆ. ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣಾ ಸಂಸ್ಥೆ (Geological Survey of India) ವತಿಯಿಂದ ‘ನ್ಯಾಶನಲ್ ಏರೋ ಜಿಯೋಫಿಸಿಕಲ್ ಮ್ಯಾಪಿಂಗ್ ಪ್ರೋಗ್ರಾಂ’ ಅಡಿಯಲ್ಲಿ ಮಹಾರಾಷ್ಟ್ರ, ಗೋವಾ ಹಾಗೂ ಕರ್ನಾಟಕ ರಾಜ್ಯಗಳಲ್ಲಿ ಈ ಸಮೀಕ್ಷಾ ಕಾರ್ಯ ನಡೆಯುತ್ತಿದೆ.

ವಿಶೇಷ ವೈಜ್ಞಾನಿಕ ಉಪಕರಣ ಅಳವಡಿಸಿಕೊಂಡ ವಿಮಾನ

ಈ ಯೋಜನೆಯ ಅಂಗವಾಗಿ ಉತ್ತರ ಕನ್ನಡ ಜಿಲ್ಲೆಯ ವಿವಿಧ ಭಾಗಗಳಲ್ಲಿ ವಿಶೇಷ ವೈಜ್ಞಾನಿಕ ಉಪಕರಣಗಳನ್ನು ಅಳವಡಿಸಿಕೊಂಡ ವಿಮಾನಗಳು ಕಡಿಮೆ ಎತ್ತರದಲ್ಲಿ ಹಾರಾಟ ನಡೆಸುತ್ತಿವೆ. ಭೂಗರ್ಭದಲ್ಲಿರುವ ಖನಿಜ ಸಂಪತ್ತಿನ ವಿವರಗಳನ್ನು ಸಂಗ್ರಹಿಸುವುದು ಈ ಸಮೀಕ್ಷೆಯ ಪ್ರಮುಖ ಉದ್ದೇಶವಾಗಿದೆ.

ಸಮೀಕ್ಷೆಯಿಂದ ಸಂಗ್ರಹಿಸಲ್ಪಡುವ ಮಾಹಿತಿಯನ್ನು ಸರ್ಕಾರ ಹಾಗೂ ಖಾಸಗಿ ಸಂಸ್ಥೆಗಳು ಖನಿಜ ಅನ್ವೇಷಣೆಗೆ ಬಳಸಿಕೊಳ್ಳಲು ಅವಕಾಶ ಮಾಡಿಕೊಡಲಾಗುತ್ತದೆ. ಜೊತೆಗೆ, ಈ ಮಾಹಿತಿಯನ್ನು ‘ನ್ಯಾಶನಲ್ ಜಿಯೋಸೈನ್ಸ್ ಡೇಟಾ ರೆಪೊಸಿಟರಿ’ ಮೂಲಕ ಸಾರ್ವಜನಿಕರಿಗೂ ಲಭ್ಯವಾಗುವಂತೆ ವ್ಯವಸ್ಥೆ ಮಾಡಲಾಗಿದೆ.

ಹೀಗಾಗಿ, ಜಿಲ್ಲೆಯಲ್ಲಿ ನಡೆಯುತ್ತಿರುವ ಈ ಕೆಳಹಂತದ ವಿಮಾನ ಹಾರಾಟವು ಸಂಪೂರ್ಣವಾಗಿ ವೈಜ್ಞಾನಿಕ ಸಮೀಕ್ಷೆಗೆ ಸಂಬಂಧಿಸಿದ್ದು, ಇದರಿಂದ ಯಾವುದೇ ಅಪಾಯ ಅಥವಾ ಆತಂಕಕ್ಕೆ ಕಾರಣವಿಲ್ಲ ಎಂದು ಜಿಲ್ಲಾ ಆಡಳಿತ ಸ್ಪಷ್ಟಪಡಿಸಿದೆ. ಸಾರ್ವಜನಿಕರು ಈ ಬಗ್ಗೆ ಅನಗತ್ಯ ಭಯಕ್ಕೆ ಒಳಗಾಗದೆ ಸಹಕರಿಸುವಂತೆ ಮನವಿ ಮಾಡಲಾಗಿದೆ.

PREV
Read more Articles on
click me!

Recommended Stories

ಮಾರುಕಟ್ಟೆಗೆ ಲಗ್ಗೆ ಇಟ್ಟ ಅಂಕೋಲಾದ ವಿಶೇಷ ಕರಿ ಇಶಾಡ್ ಮಾವು, ರುಚಿಗೆ ಸಾಟಿಯೇ ಇಲ್ಲ
ಶಾರದಾಂಬೆ To ಧರ್ಮಸ್ಥಳಕ್ಕೆ ಶಿಫ್ಟ್: ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಜೋರಾಯ್ತು ಆಣೆ-ಪ್ರಮಾಣ!