ಬ್ರ್ಯಾಂಡಿಗಿಂತ ಕನ್ನಡ ಪುಸ್ತಕದ್ದೇ ದೊಡ್ಡ ಗಮ್ಮತ್ತು: ಗಂಗಾವತಿ ಪ್ರಾಣೇಶ್‌

By Kannadaprabha NewsFirst Published Nov 7, 2022, 10:23 PM IST
Highlights

ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕೆಂದರೆ ಕನ್ನಡ ಸಾಹಿತ್ಯ, ಕನ್ನಡದ ಪುಸ್ತಕದ ದಾಸರಾಗಬೇಕು. ಬಿಯರ್‌, ಬ್ರ್ಯಾಂಡಿಗಳಿಗಿಂತ ಕನ್ನಡ ಪುಸ್ತಕದ ಮತ್ತೇ ದೊಡ್ಡ ಗಮ್ಮತ್ತು ಎಂದು ಹಾಸ್ಯ ಕಲಾವಿದ ಬಿ. ಪ್ರಾಣೇಶ ಅಭಿಪ್ರಾಯಪಟ್ಟರು. 

ಕಾರಟಗಿ (ನ.07): ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕೆಂದರೆ ಕನ್ನಡ ಸಾಹಿತ್ಯ, ಕನ್ನಡದ ಪುಸ್ತಕದ ದಾಸರಾಗಬೇಕು. ಬಿಯರ್‌, ಬ್ರ್ಯಾಂಡಿಗಳಿಗಿಂತ ಕನ್ನಡ ಪುಸ್ತಕದ ಮತ್ತೇ ದೊಡ್ಡ ಗಮ್ಮತ್ತು ಎಂದು ಹಾಸ್ಯ ಕಲಾವಿದ ಬಿ. ಪ್ರಾಣೇಶ ಅಭಿಪ್ರಾಯಪಟ್ಟರು. ಇಲ್ಲಿನ ಪದ್ಮಶ್ರೀ ಕನ್ವೆನ್ಷನ್‌ ಹಾಲ್‌ನಲ್ಲಿ ಭಾನುವಾರ ಇಲ್ಲಿ ಸ್ಫಟಿಕ ಪ್ರಕಾಶನ ಹಾಗೂ ಅಖಿಲ ಭಾರತೀಯ ಸಾಹಿತ್ಯ ಪರಿಷತ್‌ ಏರ್ಪಡಿಸಿದ್ದ ಕಾರಟಗಿ ತಾಲೂಕು ಇತಿಹಾಸ ಮತ್ತು ಸಂಸ್ಕೃತಿ ಕುರಿತ ಪುಸ್ತಕಗಳನ್ನು ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ನಮ್ಮ ಜನರು ಪುಸ್ತಕಗಳನ್ನು ಹಣ ಕೊಟ್ಟು ಓದಬೇಕು. ಆ ಮೂಲಕ ಕನ್ನಡ ಸಾಹಿತ್ಯ, ಕನ್ನಡ ಪುಸ್ತಕಗಳಿಗೆ ಪ್ರೋತ್ಸಾಹಿಸಬೇಕು. ಸಾಹಿತ್ಯ, ಕನ್ನಡ ಪುಸ್ತಕಗಳು ಯಾವತ್ತೂ ಒಂದೇ ದಿನದಲ್ಲಿ ರಚನೆ ಮಾಡುವಂಥದಲ್ಲ. ನಿರಂತರ ಅಧ್ಯಯನ, ಓದಿನಿಂದ ರಚನೆಯಾಗುತ್ತದೆ ಎಂದರು.

ಮಠಗಳನ್ನು ದೂರ ಇಡಿ: ಡಾ. ಉಮೇಶ ಗುರಿಕಾರ ಮತ್ತು ಕಾರಟಗಿ ವಿರೂಪಾಕ್ಷೇಶ್ವರ ಸ್ವಾಮಿ ಅವರ ‘ಸ್ವಾತಂತ್ರ್ಯ ಹೋರಾಟದಲ್ಲಿ ಕಾರಟಗಿ’ ಎನ್ನುವ ಪುಸ್ತಕದ ಕುರಿತು ಸಂಶೋಧಕ ಡಾ. ಶರಣಬಸಪ್ಪ ಕೋಲ್ಕಾರ್‌ ಮಾತನಾಡಿ, ಇಂದು ನಾವು ಜಾತಿ, ಮತ, ಭೇದ, ಮಠಗಳನ್ನು ದೂರ ಸರಿಸಿ ಇತಿಹಾಸಗಳನ್ನು ರಚಿಸಬೇಕಾಗಿದೆ. ಓದುವ ವ್ಯವಧಾನವನ್ನು ಕಳೆದುಕೊಂಡಿಕೊಂಡಿದ್ದೇವೆ. ಚರಿತ್ರೆಯ ಮೂಲಕ ಸಂಸ್ಕೃತಿ ಬೆಳೆಸಲು ಸಾಧ್ಯ. ವೀರಗಲ್ಲು, ಮಾಸ್ತಿಗಲ್ಲು ನಮ್ಮೂರಿನ ಚರಿತ್ರೆಯ ದಾಖಲೆಗಳು. ಇವುಗಳನ್ನು ಸಂಗ್ರಹಿಸಬೇಕಾಗಿದೆ ಎಂದರು.

Latest Videos

ಮೀಸಲಾತಿ ಸಿಗುವವರೆಗೂ ಹೋರಾಟ: ಬಸವಜಯ ಮೃತ್ಯುಂಜಯ ಶ್ರೀ

ಇತಿಹಾಸ ಸುಲಭವಲ್ಲ: ಕಾರಟಗಿ ವಿರೂಪಾಕ್ಷೇಶ್ವರ ಸ್ವಾಮಿ ಅವರ ‘ಕಾರಟಗಿ ಪರಿಸರ ಶಾಸನ ಮತ್ತು ದೇವಾಲಯ ಸಂಸ್ಕೃತಿ’ ಪುಸ್ತಕದ ಕುರಿತು ಉಪನ್ಯಾಸಕ ಡಾ. ಜಾಜಿ ದೇವೇಂದ್ರಪ್ಪ ಮಾತನಾಡಿ, ಕತೆ, ಕಾವ್ಯ, ಕಾದಂಬರಿ ಬರೆಯಬಹುದು. ಪುರಾವೆಗಳಿಲ್ಲದೇ ಚರಿತ್ರೆ ಬರೆಯಲು ಸಾಧ್ಯವಿಲ್ಲ. ವೀರಗಲ್ಲು, ಗಜಲಕ್ಷ್ಮೀ ಕಲ್ಲುಗಳು ಚರಿತ್ರೆಯ ಪುರಾವೆಗಳು. ಇತಿಹಾಸ ಮತ್ತು ಚರಿತ್ರೆ ರಚನೆಯ ವೇಳೆ ಅಂತೆ- ಕಂತೆಗಳಿಗೆ, ಸುಳ್ಳುಗಳಿಗೆ, ಪುರಾಣಗಳಿಗೆ ಅವಕಾಶವಿಲ್ಲ. ಸತ್ಯ ಮತ್ತು ಪುರಾವೆಗಳೆ ಸಂಶೋಧನೆಗೆ ಮೂಲ ಆಧಾರ ಎಂದರು.

ಡಾ. ಉಮೇಶ ಗುರಿಕಾರ ಅವರ ‘ಕಾರಟಗಿ ತಾಲೂಕು ಚರಿತ್ರೆ ಮತ್ತು ಸಂಸ್ಕೃತಿ’ ಪುಸ್ತಕದ ಕುರಿತು ಡಾ. ಬಸವರಾಜ ಬಳಿಗಾರ್‌ ಮಾತನಾಡಿದರು. ಕಾರಟಗಿ ವಿರೂಪಾಕ್ಷೇಶ್ವರ ಅವರ ‘ಅಂತ್ಯಸಂಸ್ಕಾರ ಮಾಡಿದ ಕೈಗಳಿಗೆ ಅನಂತ ಶರಣು’ ಕವನ ಸಂಕಲನದ ಕುರಿತು ಉಪನ್ಯಾಸಕಿ ಗಂಗಮ್ಮ ಹಿರೇಮಠ ಮಾತನಾಡಿದರು. ಶಾಸಕರ ಬಸವರಾಜ ದಢೇಸೂಗೂರು, ನಾಗರಾಜ ತಂಗಡಗಿ, ಗಾಯತ್ರಿ ತಿಮ್ಮಾರೆಡ್ಡಿ ಗಿಲೇಸ್ಗೂರು ಮತ್ತು ಜೆ. ಮಿಥಿಲೇಶ್ವರ ನಾಲ್ಕು ಪುಸ್ತಕಗಳನ್ನು ಬಿಡುಗಡೆ ಮಾಡಿದರು. ಸಾಹಿತಿ ಎಸ್‌.ವಿ. ಪಾಟೀಲ್‌, ಗುಂಡೂರು, ಶಾಸಕ ಬಸವರಾಜ ದಢೇಸೂಗೂರು, ಗಿರಿಜಾ ಶಂಕರಪಾಟೀಲ್‌, ವಿ.ಎಚ್‌. ನಾಯಾಕ, ಲೀಲಾ ಮಲ್ಲಿಕಾರ್ಜುನ ಮಾತನಾಡಿದರು.

ರೈತರ ಸಮಗ್ರ ಅಭಿವೃದ್ಧಿಗೆ ಸಹಕಾರ: ಸಚಿವ ಶಿವರಾಮ್‌ ಹೆಬ್ಬಾರ್‌

ಸಿಂಧನೂರು ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ಸಿ.ಬಿ. ಚಿಲ್ಕರಾಗಿ ಕವಿಗೋಷ್ಠಿಯ ಆಶಯ ಮಾತುಗಳನ್ನಾಡಿದರು. ಅಧ್ಯಕ್ಷತೆಯನ್ನು ಪೊ›. ಸಿದ್ದು ಯಾಪಲಪರವಿ ವಹಿಸಿದ್ದರು. 15 ಕವಿಗಳು ಕವಿತೆ ವಾಚಿಸಿದರು. ಸಾಧಕರನ್ನು ಸನ್ಮಾನಿಸಲಾಯಿತು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಈ ವೇಳೆ ಉದ್ಯಮಿಗಳಾದ ಕೆ. ಸಣ್ಣಸೂಗಪ್ಪ, ಪಿ. ಗೋವಿಂದರಾಜ್‌, ಪ್ರಹ್ಲಾದ ಶೆಟ್ಟಿ, ಡಾ. ಎಸ್‌.ಬಿ. ಶೆಟ್ಟರ್‌, ಡಾ. ಶಿಲ್ಪಾ ದಿವಟರ್‌, ಸೌಮ್ಯಾ ಕಂದಗಲ್‌, ಡಾ. ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ, ಡಾ. ಸಿದ್ಧಯ್ಯ ತಾತನವರು, ವೀರಭದ್ರ ಶರಣರು, ಮರುಳಸಿದ್ದಯ್ಯಸ್ವಾಮಿ, ಲೇಖಕರಾದ ಡಾ. ಉಮೇಶ ಗುರಿಕಾರ, ಕಾರಟಗಿ ವಿರೂಪಾಕ್ಷೇಶ್ವರಸ್ವಾಮಿ ಇದ್ದರು.

click me!