
ಗದಗ (ಮೇ.26): ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿಯಿಂದಾಗಿ ಜಿಲ್ಲೆಗಳ ನೈಸರ್ಗಿಕ ಸಂಪನ್ಮೂಲಗಳಿಂದ ಸಿಗುವ ಆದಾಯ ಸ್ಥಳೀಯ ರೈತರಿಗೆ ದೊರೆತಿಲ್ಲ. ಜಿಲ್ಲೆಯಲ್ಲಿರುವ ವಿಂಡ್ ಫ್ಯಾನ್ ಹಾಗೂ ಸೋಲಾರ್ ವಿದ್ಯುತ್ ಘಟಕಗಳಿಂದ ಲಭಿಸುವ ಆದಾಯ ರೈತರಿಗೆ ಸಿಗುವಂತಾದರೆ ಜಿಲ್ಲೆಯ ಜಿಡಿಪಿ ದೇಶದಲ್ಲೇ 5 ಅಥವಾ 6ನೇ ಸ್ಥಾನಕ್ಕೆ ಏರಿಕೆಯಾಗುವ ಸಾಮರ್ಥ್ಯ ಹೊಂದಿದೆ ಎಂದು ಕಾನೂನು ಹಾಗೂ ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ತಿಳಿಸಿದರು.
ಜಿಲ್ಲಾಡಳಿತ ಭವನದ ಮುಖ್ಯ ಸಭಾಂಗಣದಲ್ಲಿ ಜಿಲ್ಲಾ ಯೋಜನಾ ಸಮಿತಿ ಹಾಗೂ 2027- 28ನೇ ಸಾಲಿನ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಜನರ ಯೋಜನೆ ರೂಪಿಸುವ ಕುರಿತು ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಾಜ್ಯದ ಅಭಿವೃದ್ಧಿ ಹೊಂದಿದ ಜಿಲ್ಲೆಗಳ ಪಟ್ಟಿಯಲ್ಲಿ ಗದಗ ಹೆಸರು ಇಲ್ಲದಿರಬಹುದು. ಆದರೆ ರಾಜ್ಯದಲ್ಲಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಜಿಲ್ಲೆಗಳಲ್ಲಿ ಸಾಲಿನಲ್ಲಿ ಗದಗ ಜಿಲ್ಲೆ ನಂಬರ್ 1 ಸ್ಥಾನದಲ್ಲಿರಲಿದೆ ಎಂದರು.
ಸಭೆಯಲ್ಲಿ ಜಲತಜ್ಞ ರಾಜೇಂದ್ರ ಸಿಂಗ್ ಮಾತನಾಡಿ, 1992ರ ಮೊದಲು ದೇಶದಲ್ಲಿ ಪರಿಸರ ಹಾಗೂ ಸಂಸ್ಕೃತಿಯನ್ನು ಒಳಗೊಂಡ ಅಭಿವೃದ್ಧಿ ಮಾದರಿ ಇತ್ತು. ಈಗ ಅಭಿವೃದ್ಧಿ ಎಂಬುದು ಕೇವಲ ಮೂಲ ಸೌಕರ್ಯ ನಿರ್ಮಾಣಕ್ಕೆ ಸೀಮಿತವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ರಾಜಸ್ಥಾನದ ಅನೇಕ ಜಿಲ್ಲೆಗಳಿಗಿಂತ ಗದಗ ಭಾಗದಲ್ಲಿ ಮಳೆಯ ಪ್ರಮಾಣ ಉತ್ತಮವಾಗಿದೆ. ಹೀಗಾಗಿ ಇಲ್ಲಿನ ಮಣ್ಣು ಹಾಗೂ ನೀರನ್ನು ಸಂರಕ್ಷಿಸಿದರೆ ಜಿಲ್ಲೆಯ ಅಭಿವೃದ್ಧಿಗೆ ದೊಡ್ಡ ಉತ್ತೇಜನ ಸಿಗುತ್ತದೆ ಎಂದರು.
ಸಿರಿಧಾನ್ಯಗಳ ಮಹತ್ವ ಕುರಿತು ಮಾತನಾಡಿದ ಡಾ. ಖಾದರ ಅವರು, ಜನರಿಗೆ ಅಕ್ಕಿ ನೀಡುವ ಬಗ್ಗೆ ಮಾತ್ರ ಸರ್ಕಾರಗಳು ಯೋಚಿಸುತ್ತಿವೆ. ಆದರೆ ಅಕ್ಕಿ ಬೆಳೆಯುವ ಮಣ್ಣಿನ ಸಂರಕ್ಷಣೆ ಕುರಿತು ಚರ್ಚೆಯಾಗುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು. ಹಸಿರು ಕ್ರಾಂತಿಯ ನಂತರ ವಿಶ್ವದ ಶೇ. 42ರಷ್ಟು ಭೂಮಿ ಬರಡಾಗಿದೆ. ಕಾರ್ಪೊರೇಟ್ ಕಂಪನಿಗಳ ಪ್ರಭಾವದಿಂದ ಕರ್ನಾಟಕದಲ್ಲಿ ಪಂಜಾಬ್ಗಿಂತಲೂ ಹೆಚ್ಚು ಗೋದಿ ಸೇವನೆ ನಡೆಯುತ್ತಿದೆ ಎಂದ ಅವರು, ನಮ್ಮ ಆಹಾರವನ್ನು ನಾವೇ ಬೆಳೆದು ಸೇವಿಸುವಂತಾದಾಗ ಮಾತ್ರ ಸ್ವಾಭಿಮಾನಿ ಬದುಕು ಸಾಧ್ಯ. ಇದರಿಂದ ನಾವು ರೋಗ ಮುಕ್ತರಾಗಲು ಕೂಡಾ ಸಾಧ್ಯವಿದೆ. ವೈದ್ಯರು, ಔಷಧ ಗುಳಿಗೆಗಳಿಗೆ ಖರ್ಚು ಮಾಡುವ ಹಣವೆಲ್ಲ ಉಳಿಯುತ್ತದೆ ಎಂದರು.