
ಮಂಗಳೂರು: ಪುತ್ತೂರು ನಗರಸಭಾ ವ್ಯಾಪ್ತಿಯ ಪಡೀಲು ರೈಲ್ವೇ ಸ್ಟೇಷನ್ ಬಳಿಯ ಕನಕದಾಸ ದಲಿತ ಕಾಲನಿಯ ಸುಮಾರು 16 ಕುಟುಂಬಗಳು ಮನೆ ಅಡಿಸ್ಥಳದ ಹಕ್ಕು ಪತ್ರಕ್ಕಾಗಿ ಪರದಾಡುತ್ತಿದ್ದು, ಈ ಕಾಲನಿ ನಿವಾಸಿಗಳು ಮಂಗಳವಾರ ಶಾಸಕ ಅಶೋಕ್ ರೈ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು. ಶೀಘ್ರವೇ ಅವರ ಬೇಡಿಕೆಯನ್ನು ಪರಿಗಣಿಸಿ ಇತ್ಯರ್ಥ ಮಾಡಿ ಎಂದು ಶಾಸಕರು ನಗರಸಭೆಗೆ ಸೂಚನೆ ನೀಡಿದ್ದಾರೆ.
ಕಾಲನಿಯಲ್ಲಿ ಸುಮಾರು 16 ಕುಟುಂಬಗಳು ಮನೆ ವಾಸವಾಗಿದೆ. ಇಲ್ಲಿ ಮನೆ ಮಾಡಿಕೊಂಡವರ ಮೂರು ತಲೆಮಾರು ಇಲ್ಲಿ ವಾಸವಾಗಿತ್ತು. ಅಂದಿನಿಂದ ಇಂದಿನ ತನಕ ಇಲ್ಲಿನ ಮನೆಯವರು ಮನೆ ಅಡಿಸ್ಥಳದ ಹಕ್ಕು ಪತ್ರಕ್ಕಾಗಿ ಹೋರಾಟ ಮಾಡುತ್ತಿದ್ದು, ಕಚೇರಿ ಅಲೆದಾಟ ಮಾಡುತ್ತಿದ್ದಾರೆ. ಆದರೆ ಇವರಿಗೆ ಪ್ರತೀ ಚುನಾವಣೆಯ ಸಮಯದಲ್ಲಿ ಹಕ್ಕು ಪತ್ರದ ಭರವಸೆ ಸಿಗುತ್ತದೆ ಚುನಾವಣೆ ಬಳಿಕ ಅದು ಮರೆತುಬಿಡುತ್ತಿದ್ದರು. ಈ ವಿಚಾರವನ್ನು ಮಂಗಳವಾರ ಶಾಸಕರಲ್ಲಿ ತಿಳಿಸಿದರು.
ಈ ಬಗ್ಗೆ ನಗರಸಭಾ ಕಮಿಷನರ್ ಅವರನ್ನು ಕರೆಸಿ ಸಭೆ ನಡೆಸಿದ ಶಾಸಕರು ಕನಕದಾಸ ಕಾಲನಿ ನಿವಾಸಿಗಳ ಮನೆ ಹಾಗೂ ಜಾಗದ ದಾಖಲೆ ಪತ್ರವನ್ನು ಪರಿಶೀಲನೆ ಮಾಡಿದರು. ಕಾಲನಿಯ ಎಲ್ಲ 16 ಕುಟುಂಬಗಳ ಮನೆಗಳಿಗೆ ಹಕ್ಕು ಪತ್ರ ಕೊಡಿಸುವಲ್ಲಿ ಕ್ರಮವಹಿಸಬೇಕು. ಜಾಗದ ದಾಖಲೆಯನ್ನು ಪರಿಶೀಲಿಸಿ ಪ್ರತೀ ಕುಟುಂಬಕ್ಕೆ 1.5 ಸೆಂಟ್ ಜಾಗವನ್ನು ನೀಡುವ ಮೂಲಕ ಅವರ ಇಷ್ಟು ವರ್ಷಗಳ ಸಂಕಷ್ಟಕ್ಕೆ ಪರಿಹಾರವನ್ನು ಒದಗಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ವೇಳೆ ಪುತ್ತೂರು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪೂರ್ಣೇಶ್ ಕುಮಾರ್ ಭಂಡಾರಿ ಹಾಗೂ ಕಾಲನಿ ನಿವಾಸಿಗಳು ಉಪಸ್ಥಿತರಿದ್ದರು.
100 ವರ್ಷದಿಂದ ನಗರಸಭಾ ವ್ಯಾಪ್ತಿಯಲ್ಲಿ ಕನಕದಾಸ ಕಾಲನಿ ನಿವಾಸಿಗಳ ಮನೆ ಅಡಿಸ್ಥಳಕ್ಕೆ ಹಕ್ಕುಪತ್ರ ಕೊಡಿ ಎಂದು ಅಲೆದಾಡುತ್ತಿದ್ದಾರೆ. ಈ ಕುಟುಂಬಗಳ ಬೇಡಿಕೆಯನ್ನು ಶೀಘ್ರವೇ ಈಡೇರಿಸುವ ಕೆಲಸ ಆಗಲಿದೆ. ನಗರಸಭಾ ವ್ಯಾಪ್ತಿಯಲ್ಲಿ ಬರುವ ಕಾರಣ ಕಮಿಷನರ್ ಅವರಿಗೆ ಸಮಸ್ಯೆ ಪರಿಹರಿಸುವಂತೆ ತಿಳಿಸಿದ್ದೇನೆ. ಶೀಘ್ರವೇ ಈ 16 ಕುಟುಂಬಗಳಿಗೆ ಹಕ್ಕು ಪತ್ರ ಕೊಡಿಸುವ ಕೆಲಸ ಆಗಲಿದೆ ಎಂದು ಶಾಸಕ ಅಶೋಕ್ ರೈ ಭರವಸೆ ನೀಡಿದ್ದಾರೆ.