
ಬೆಂಗಳೂರು(ಮೇ.02): ಜನತಾ ಕರ್ಫ್ಯೂ ಜಾರಿ ಹಿನ್ನೆಲೆಯಲ್ಲಿ ರಾಜಾಜಿನಗರದ ‘ಬೆಂಗಳೂರು ಇಸ್ಕಾನ್ ಮಂದಿರ’ ವತಿಯಿಂದ ನಗರದಲ್ಲಿ ಉಚಿತವಾಗಿ 8,000 ಆಹಾರ ಪೊಟ್ಟಣ ವಿತರಿಸಲಾಯಿತು.
ನಗರದ ಪೊಲೀಸ್ ಸಿಬ್ಬಂದಿಗೆ ಮತ್ತು ಊರುಗಳಿಗೆ ತೆರಳಲು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಕಾದು ಕುಳಿತಿದ್ದ ನೂರಾರು ಕಾರ್ಮಿಕರಿಗೆ ಆಹಾರ ಒದಗಿಸಿದೆ. ಶುಕ್ರವಾರದಿಂದ ಈ ಉಚಿತ ಆಹಾರ ವಿತರಣೆ ಕಾರ್ಯಕ್ರಮ ಆರಂಭವಾಗಿದ್ದು, ಎರಡು ದಿನದಲ್ಲಿ ಒಟ್ಟು 8,000 ಆಹಾರ ಪೊಟ್ಟಣ ನೀಡಿದೆ.
"
ಜನತಾ ಕರ್ಫ್ಯೂ ಜಾರಿಯಲ್ಲಿ ಇರುವವರೆಗೂ ಇಸ್ಕಾನ್ನ ಈ ಕಾರ್ಯ ಮುಂದುವರಿಯಲಿದೆ. ಸದ್ಯ ಪೊಲೀಸ್ ಸಿಬ್ಬಂದಿ ಹಾಗೂ ವಲಸೆ ಕಾರ್ಮಿಕರಿಗೆ ಪೊಟ್ಟಣ ವಿತರಿಸಿದ್ದು, ಮುಂದಿನ ದಿನಗಳಲ್ಲಿ ಬಡವರಿಗೆ, ಕೆಲಸವಿಲ್ಲದೇ ಹಸಿವಿನಿಂದ ಬಳಲುವವರಿಗೆ, ಊಟ ಅಗತ್ಯವಿರುವ ಎಲ್ಲರಿಗೂ ಆಹಾರ ಪೊಟ್ಟಣ ನೀಡಲಿದೆ.
ರಾಧಾ - ಕೃಷ್ಣ ದರ್ಶನ ಪಡೆದ ಪಾದ್ರಿಗಳ ತಂಡ
ಆಹಾರ ವಿತರಣೆ ತಂಡದಲ್ಲಿ ಒಟ್ಟು 50 ಮಂದಿ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪಾಲಿಕೆ ಸದಸ್ಯರು, ಆಯುಕ್ತರು, ಐಎಎಸ್ ಅಧಿಕಾರಿಗಳು ಮತ್ತಿತರರು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ಧಾವಿಸಿ ಸಿಬ್ಬಂದಿ ಕೊರೋನಾ ನಿಯಮ ಪಾಲಿಸಿ ಆಹಾರ ಪೂರೈಸುತ್ತಿದ್ದಾರೆ. ಕೊರೋನಾ ಮೊದಲ ಅಲೆ ಸಂದರ್ಭದಲ್ಲಿ ಕೇವಲ ಬೆಂಗಳೂರು ಅಷ್ಟೇ ಅಲ್ಲದೆ ಇಡಿ ದೇಶಾದ್ಯಂತ ಆಯಾ ಪ್ರದೇಶದಲ್ಲಿನ ಇಸ್ಕಾನ್ ಕೃಷ್ಣ ಮಂದಿರದಿಂದ ಉಚಿತವಾಗಿ ಸುಮಾರು 8 ತಿಂಗಳಿಗೂ ಹೆಚ್ಚು ಕಾಲ ಆಹಾರ ವಿತರಿಸಲಾಗಿತ್ತು ಎಂದು ಇಸ್ಕಾನ್ ಹಿರಿಯ ನಿರ್ವಾಹಕ (ಸಂಪರ್ಕ-ಯೋಜನೆ) ಕುಲಶೇಖರ ಚೈತನ್ಯ ದಾಸ್ ಮಾಹಿತಿ ನೀಡಿದರು.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ನ್ಯೂಸ್ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona