ಕಟ್ಟಡ ಕಾರ್ಮಿಕರಿಗೆ ಉಚಿತ ಬಸ್‌ಪಾಸ್ ಸೌಲಭ್ಯ

By Kannadaprabha NewsFirst Published Sep 26, 2022, 11:10 AM IST
Highlights
  • ಗರಿಷ್ಠ 45 ಕಿ.ಮೀ ಪ್ರಯಾಣ: 3 ತಿಂಗಳಗೊಮ್ಮೆ ನವೀಕರಣ
  • ಸ್ಮಾಟ್‌ಕಾರ್ಡ್‌ ಮಾದರಿ ಪಾಸ್‌ ಗ್ರಾಮ ಒನ್‌ನಲ್ಲಿ ಅರ್ಜಿ
  • -ಬಸ್‌ಪಾಸ್‌ ಪಡೆಯಲು ಗ್ರಾಮ-ಒನ್‌ ಮೂಲಕ ಅರ್ಜಿಸಬಹುದು
  • 3 ತಿಂಗಳಗೊಮ್ಮೆ ಬಸ್‌ಪಾಸ್‌ ನವೀಕರಿಸಿಕೊಳ್ಳಬಹುದು

ಚಿಕ್ಕಬಳ್ಳಾಪುರ (ಸೆ.26) : ಬೆಂಗಳೂರು ಮಹಾ ನಗರ ಪಾಲಿಕೆ ವ್ಯಾಪ್ತಿಯಲ್ಲಿ ನೋಂದಾಯಿತ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಮಹಾ ನಗರ ಸಾರಿಗೆ ಬಸ್‌ಗಳಲ್ಲಿ ಕಲ್ಪಿಸಲಾಗಿದ್ದ ರಿಯಾಯಿತಿ ಬಸ್‌ಪಾಸ್‌ ಸೌಲಭ್ಯ ಇದೀಗ ರಾಜ್ಯಾದ್ಯಂತ ವಿಸ್ತರಿಸಿ ರಾಜ್ಯ ಸರ್ಕಾರ ಆದೇಶಿಸಿದ್ದು ಇ-ಆಡಳಿತ ಅಭಿವೃದ್ಧಿಪಡಿಸಿರುವ ತಂತ್ರಾಂಶ ಮೂಲಕ ಬಸ್‌ಪಾಸ್‌ ವಿತರಣೆ ಆಗಲಿದೆ. ರಾಜ್ಯ ರಸ್ತೆ ಸಾರಿಗೆ ನಿಗಮ ಹೊರಡಿಸಿರುವ ಸುತ್ತೋಲೆ ಅನ್ವಯ ನೋಂದಾಯಿತ ಅರ್ಹ ಕಟ್ಟಡ ಹಾಗೂ ಇತರೇ ನಿರ್ಮಾಣ ಕಾರ್ಮಿಕರು ಬಸ್‌ಪಾಸ್‌ ಪಡೆಯಲು ಬೆಂಗಳೂರು-ಒನ್‌, ಕರ್ನಾಟಕ-ಒನ್‌ ಹಾಗೂ ಗ್ರಾಮ-ಒನ್‌ ಕೇಂದ್ರಗಳ ಮೂಲಕ ಅರ್ಜಿ ಸಲ್ಲಿಸಿ ಸ್ಮಾರ್ಚ್‌ ಕಾರ್ಡ್‌ ಮಾದರಿಯ ಬಸ್‌ಪಾಸ್‌ಗಳನ್ನು ಪಡೆಯಬಹುದಾಗಿದೆ.

Free Bus Pass: ಮಹಿಳಾ ಸಿಬ್ಬಂದಿಗೆ ಉಚಿತ ಬಸ್‌ ಪಾಸ್‌ ಕೊಡಿಸಲು ಗಾರ್ಮೆಂಟ್ಸ್‌ ನಿರ್ಲಕ್ಷ್ಯ

ಬಸ್‌ ಪ್ರಯಾಣ ಉಚಿತ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಸಹೋದರ ಸಂಸ್ಥೆಗಳಾದ ವಾಕರಸಾ ಸಂಸ್ಥೆ, ಕಕರಸಾ ನಿಗಮ ವ್ಯಾಪ್ತಿಯ ಜಿಲ್ಲೆಗಳಲ್ಲಿ ವಾಸ ಇರುವ ನೋಂದಾಯಿತ ಕಟ್ಟಡ ಮತ್ತ ಇತರೇ ನಿರ್ಮಾಣ ಕಾರ್ಮಿಕರಿಗೆ ಉಚಿತ ಪ್ರಯಾಣ ಬಸ್‌ಪಾಸ್‌ ವಿತರಣೆ ಆಗಲಿದೆ. ವಿಶೇಷವೆಂದರೆ ನೋಂದಾಯಿತ ಕಾರ್ಮಿಕರು ಯಾವುದೇ ಜಿಲ್ಲೆಯಲ್ಲಿ ನೋಂದಣಿ ಆಗಿದ್ದರೂ ಅವರು ಇಚ್ಛಿಸುವ ಪ್ರಾರಂಭಿಕ ಸ್ಥಳದಿಂದ 7 ಹಂತಗಳ ಒಟ್ಟು (ಗರಿಷ್ಠ 45 ಕಿ.ಮೀ ) ಉಚಿತವಾಗಿ ನಿಗಮದ ಬಸ್ಸುಗಳಲ್ಲಿ ಪ್ರಯಾಣಿಸಲು ಅವಕಾಶ ಕಲ್ಪಿಸಿದೆ.

ಕಟ್ಟಡ ಕಾರ್ಮಿಕರು ಉಚಿತ ಬಸ್‌ಪಾಸ್‌ ಪ್ರಯಾಣವನ್ನು ಕೇವಲ ನಗರ, ಸಾಮಾನ್ಯ ಹಾಗು ವೇಗದೂತ ಬಸ್‌ಗಳಿಗೆ ಮಾತ್ರ ಸೀಮಿತಗೊಳಿಸಲಾಗಿದೆ. ಪಾಸ್‌ ಅನ್ನು ಮೂರು ತಿಂಗಳಗೊಮ್ಮೆ ಕಾರ್ಮಿಕರು ನವೀಕರಿಸಿಕೊಳ್ಳುವುದು ಕಡ್ಡಾಯ. ಮರು ಅವಧಿಗೆ ಹೊಸದಾಗಿ ಅರ್ಜಿಯನ್ನು ಸೇವಾಸಿಂಧು ಪೋರ್ಟಲ್‌ ಮೂಲಕ ಪಾಸ್‌ ಪಡೆಯಲು ಅವಕಾಶ ಕಲ್ಪಿಸಿದೆ.

ಪ್ರಯಾಣಕ್ಕೆ 45 ಕಿಮೀ ನಿಗದಿ:

ಕಾರ್ಮಿಕರ ಉಚಿತ ಬಸ್‌ಪಾಸ್‌ ವಿತರಣೆ, ನಿರ್ವಹಣೆ ಹಾಗೂ ಪಾಸಿನ ನವೀಕರಣ ಕೆಲಸವನ್ನು ರಾಜ್ಯದ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯೆ ನಿರ್ವಹಿಸಲಿದೆ. ಒಮ್ಮೆ ಕಾರ್ಮಿಕರು ಬಸ್‌ಪಾಸ್‌ ಕಳೆದುಕೊಂಡರೆ ಕರ್ನಾಟಕ ಒನ್‌ಗೆ ತೆರಳಿ ಮನವಿ ಸಲ್ಲಿಸಿದರೆ ಸ್ಮಾರ್ಚ್‌ಕಾರ್ಡ್‌ನ ಮುದ್ರಣ ವೆಚ್ಚ ಪಡೆದು ಕಾರ್ಡ್‌ ವಿತರಿಸಲಿದೆ. ಬಸ್‌ ಪ್ರಯಾಣ ಗರಿಷ್ಠ 45 ಕಿ.ಮೀ ಮಿರಿದರೆ ಕಾರ್ಮಿಕರು ಕಡ್ಡಾಯವಾಗಿ ಟಿಕೆಟ್‌ ಖರೀದಿಸಿ ಪ್ರಯಾಣಿಸಬೇಕಿದೆ.

Students Bus Pass : ವಿದ್ಯಾರ್ಥಿ ಬಸ್‌ ಪಾಸ್‌ ಮಿತಿ 100 ಕಿ.ಮೀ.ಗೆ ಹೆಚ್ಚಳ?

ಸ್ಮಾಟ್‌ಕಾರ್ಡ್‌ನಲ್ಲಿ ಸಿಎಂ ಫೋಟೋ

ರಾಜ್ಯ ಸರ್ಕಾರ ರಾಜ್ಯದ ನೋಂದಾಯಿತ ಕಟ್ಟಡ ಹಾಗೂ ಇತರೇ ಕಾರ್ಮಿಕರಿಗೆ ವಿತರಿಸಲು ಆದೇಶಿಸಿರುವ ಬಸ್‌ಪಾಸ್‌ (ಸ್ಮಾಟ್‌ಕಾರ್ಡ್‌ಗಳಲ್ಲಿ) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕಾರ್ಮಿಕ ಸಚಿವ ಶಿವರಾಮ್‌ ಹೆಬ್ಬಾರ್‌ ಅವರ ಭಾವಚಿತ್ರಗಳು ಇರಲಿವೆ.

click me!