ಕುಷ್ಟಗಿ: ಕಾರು-ಲಾರಿ ಮುಖಾಮುಖಿ ಡಿಕ್ಕಿ, ನಾಲ್ವರ ದುರ್ಮರಣ

By Kannadaprabha NewsFirst Published Sep 20, 2020, 12:37 PM IST
Highlights

ಲಾರಿ ಮತ್ತು ಕಾರು ಮುಖಾಮುಖಿ ಡಿಕ್ಕಿ| ನಾಲ್ವರ ಸಾವು| ಕೊಪ್ಪಳ ಜಿಲ್ಲೆ ಕುಷ್ಟಗಿ ಪಟ್ಟಣದಲ್ಲಿ ನಡೆದ ಘಟನೆ| ಈ ಸಂಬಂಧ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲು| ಅಪಘಾತದ ಬಳಿಕ ಲಾರಿಯನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾದ ಚಾಲಕ| 

ಕುಷ್ಟಗಿ(ಸೆ.20): ಪಟ್ಟಣದ ಹೊರ ವಲಯದ ಅಗ್ನಿಶಾಮಕ ದಳದ ಕಚೇರಿಯ ಮುಂದೆ ಶುಕ್ರವಾರ ರಾತ್ರಿ ಲಾರಿ ಮತ್ತು ಕಾರು ಮುಖಾಮುಖಿ ಡಿಕ್ಕಿ ಹೊಡೆದಿದ್ದರಿಂದ ಕಾರಿನಲ್ಲಿದ್ದ ನಾಲ್ವರು ಮೃತಪಟ್ಟ ಘಟನೆ ನಡೆದಿದೆ.

ಶುಕ್ರವಾರ ರಾತ್ರಿ ಪಟ್ಟಣದ ಹೊರ ವಲಯದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮಹಾರಾಷ್ಟ್ರದಿಂದ ಹೊಸಪೇಟೆ ಕಡೆಗೆ ತೆರಳುತ್ತಿರುವ ಸಂದರ್ಭದಲ್ಲಿ ಎದುರಿಗೆ ಲಾರಿಯೊಂದು ಬಂದು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ನಾಲ್ವರ ಪೈಕಿ ಸಂದೀಪ ಕಾಂಬಳೆ (ಚಾಲಕ), ಪ್ರಕಾಶ ಬನಸೊಡೆ, ಅಲ್ತಾಫ್‌ ಯೂಸೂಫ್‌ ತಾಂಬೋಳಿ ಎನ್ನುವವರು ಸ್ಥಳದಲ್ಲಿಯೇ ಮರಣ ಹೊಂದಿದರು.

ಕೊಪ್ಪಳ: ಕೊರೋನಾ ಗೆದ್ದಿದ್ದ ಶತಾಯುಷಿ ಕಮಲಮ್ಮ ಲಿಂಗೈಕ್ಯ

ಕಾರಿನಲ್ಲಿದ್ದ ಮಹಿಳೆಯೊಬ್ಬರಿಗೆ ಸಹ ತೀವ್ರ ಸ್ವರೂಪದ ಗಾಯಗಳಾಗಿದ್ದವು. ಅವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಆನಂತರ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿತ್ತು. ಅಲ್ಲಿಯೇ ಮೃತಪಟ್ಟರು ಎಂದು ಪಿಎಸ್‌ಐ ಚಿತ್ತರಂಜನ್‌ ಹೇಳಿದರು.

ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಲಾರಿ ಚಾಲಕ ತಾನು ಚಲಿಸುತ್ತಿದ್ದ ರಸ್ತೆಯನ್ನು ಬಿಟ್ಟು ಅಡ್ಡ ರಸ್ತೆಗೆ ಬಂದಿದ್ದರಿಂದ ಈ ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ. ಲಾರಿ ಚಾಲಕ ಲಾರಿಯನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ. ಆತನ ಪತ್ತೆ ಕಾರ‍್ಯ ಮುಂದುವರಿಸಲಾಗಿದೆ ಎಂದು ಪಿಎಸ್‌ಐ ಹೇಳಿದರು.

click me!