'ಆನಂದ ಸಿಂಗ್‌ಗೆ ಸೋಲಿನ ರುಚಿ ತೋರಿಸಿ ಸೂಕ್ತ ಸಂದೇಶ ರವಾನಿಸಿ'

By Web DeskFirst Published Dec 1, 2019, 8:40 AM IST
Highlights

ಶಾಸಕರು ಹಣಬಲ, ತೋಳ್ಬಲಗಳಿಂದ ಬೇಕಾಬಿಟ್ಟಿ ನಡೆದುಕೊಳ್ಳುತ್ತಿದ್ದಾರೆ| ಸಂವಿಧಾನ ಆಶಯಕ್ಕೆ ವಿರುದ್ಧವಾಗಿ ವರ್ತಿಸುತ್ತಿದ್ದಾರೆ| ಐದು ವರ್ಷಗಳ ಕಾಲ ಜನರ ಸೇವೆ ಮಾಡು ಎಂದು ಮತದಾರರು ಆದೇಶಿಸಿದ್ದಾರೆ| ಇವರು ಬರೀ ಒಂದೂವರೆ ವರ್ಷದೊಳಗೆ ರಾಜೀನಾಮೆ ನೀಡುತ್ತಾರೆ ಎಂದ ರಮೇಶ ಕುಮಾರ|

ಹೊಸಪೇಟೆ(ಡಿ.01): ಜನಾದೇಶ ಧಿಕ್ಕರಿಸಿ ಮತದಾರರಿಗೆ ದ್ರೋಹ ಮಾಡಿದ ಆನಂದ ಸಿಂಗ್‌ ಅವರನ್ನು ವಿಜಯನಗರ ಕ್ಷೇತ್ರದ ಮತದಾರರು ಸೋಲಿಸಿ, ಸೂಕ್ತ ಸಂದೇಶ ರವಾನಿಸಬೇಕು ಎಂದು ಮಾಜಿ ಸ್ಪೀಕರ್‌ ಹಾಗೂ ಕಾಂಗ್ರೆಸ್‌ನ ಹಿರಿಯ ಮುಖಂಡ ರಮೇಶ ಕುಮಾರ್‌ ಮನವಿ ಮಾಡಿದ್ದಾರೆ.

ಉಪ ಚುನಾವಣೆ ಹಿನ್ನೆಲೆಯಲ್ಲಿ ಶನಿವಾರ ಕಾಂಗ್ರೆಸ್‌ ಅಲ್ಪಸಂಖ್ಯಾತ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದರು.ಜನಪ್ರತಿನಿಧಿಗಳು ತಾವು ರಾಜೀನಾಮೆ ಸಲ್ಲಿಸಬೇಕಾದರೆ ಮತ ನೀಡಿದ ಜನರನ್ನು ಕೇಳಬೇಕು. ಆದರೆ, ಆನಂದ ಸಿಂಗ್‌ ಯಾರಿಗೆ ಹೇಳಿ ರಾಜಿನಾಮೆ ನೀಡಿದರು ಎಂದು ಪ್ರಶ್ನಿಸಿದರಲ್ಲದೆ, ಬಾಂಬೆಯಿಂದ ವಿಶೇಷ ವಿಮಾನದ ಮೂಲಕ ಬಂದು ಆನಂದ ಸಿಂಗ್‌ ರಾಜೀನಾಮೆ ನೀಡಿದರು. ಹೀಗೆ ಮಾಡಲು ಮತದಾರರ ಅನುಮತಿ ಪಡೆದುಕೊಂಡಿದ್ದರೇ ಎಂದು ಕೇಳಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಶಾಸಕರು ಹಣಬಲ, ತೋಳ್ಬಲಗಳಿಂದ ಬೇಕಾಬಿಟ್ಟಿ ನಡೆದುಕೊಳ್ಳುತ್ತಿದ್ದಾರೆ. ಸಂವಿಧಾನ ಆಶಯಕ್ಕೆ ವಿರುದ್ಧವಾಗಿ ವರ್ತಿಸುತ್ತಿದ್ದಾರೆ. ಐದು ವರ್ಷಗಳ ಕಾಲ ಜನರ ಸೇವೆ ಮಾಡು ಎಂದು ಮತದಾರರು ಆದೇಶಿಸಿದ್ದಾರೆ. ಇವರು ಬರೀ ಒಂದೂವರೆ ವರ್ಷದೊಳಗೆ ರಾಜೀನಾಮೆ ನೀಡುತ್ತಾರೆ. ಇಂತಹವರನ್ನು ಭಗವಂತ ಕ್ಷಮಿಸುತ್ತಾನಾ ಎಂದು ಪ್ರಶ್ನಿಸಿದರಲ್ಲದೆ, ಭಗವಂತ ಆಜ್ಞೆಯನ್ನು ಮೀರಿ ನಡೆದರೆ, ರಾಕ್ಷಸನತಕ್ಕೆ ಸಮಾನ. ಇಂತಹ ರಾಕ್ಷಸರು ಜನರ ಮಧ್ಯೆ ಇರಬಾರದು. ಒಂದು ವೇಳೆ ಜನತೆ ಮಧ್ಯೆ ಇದ್ದರೆ ದೇವರ ಅಸ್ವಿತ್ವವೇ ಅಣುಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್‌ ಮಾತನಾಡಿ, ಯಾವ ಪುರುಷಾರ್ಥಕ್ಕಾಗಿ ಆನಂದಸಿಂಗ್‌ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ಮತದಾರರು ಪ್ರಶ್ನಿಸಬೇಕು. ಕುದುರೆ ರೀತಿಯಲ್ಲಿ ಮಾರಾಟವಾಗಿದ್ದು, ಈ ಚುನಾವಣೆಯಲ್ಲಿ ತಕ್ಕಶಾಸ್ತಿಯಾಗಲಿದೆ ಎಂದರು.

ಕಿತ್ತೂರ ಚೆನ್ನಮ್ಮಳಿಗೆ ಮಲ್ಲಪ್ಪ ಶೆಟ್ಟಿಮೋಸ ಮಾಡಿದ. ಟಿಪ್ಪು ಸುಲ್ತಾನನಿಗೆ ಮೀರ ಸಾದಿಕ್‌ ಮೋಸಗೈದ. ಅದೇ ರೀತಿ ವಿಜಯನಗರ ಕ್ಷೇತ್ರದಲ್ಲಿ ಆನಂದಸಿಂಗ್‌ ಜನರಿಗೆ ಮೋಸ ಮಾಡಿದರು. ಈ ಘಟನೆ ವಿಜಯನಗರ ಇತಿಹಾಸದಲ್ಲಿ ಉಳಿಯಲಿದೆ ಎಂದು ತಿಳಿಸಿದರು.

ಎಸ್‌.ಆರ್‌. ಪಾಟೀಲ್‌ ಮಾತನಾಡಿದರು. ಶಾಸಕರಾದ ಪಿ.ಟಿ. ಪರಮೇಶ್ವರನಾಯ್ಕ, ಭೀಮಾನಾಯ್ಕ, ಜೆ.ಎನ್‌. ಗಣೇಶ, ರಾಜ್ಯಸಭಾ ಸದಸ್ಯ ನಾಸೀರ ಹುಸೇನ್‌, ವಿಧಾನ ಪರಿಷತ್‌ ಸದಸ್ಯ ಕೆ.ಸಿ. ಕೊಂಡಯ್ಯ, ಎಸ್‌.ಆರ್‌. ಪಾಟೀಲ್‌, ಅಬ್ದುಲ್‌ ವಹಾಬ್‌, ಬಸವರಾಜ ರಾಯರಡ್ಡಿ, ಬಿ. ಶಿವಯೋಗಿ, ದೀಪಕ ಸಿಂಗ್‌ ಇನ್ನಿತರರಿದ್ದರು.

ಡಿಸೆಂಬರ್ 5ರಂದು ಕರ್ನಾಟಕದಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, 9ರಂದು ಫಲಿತಾಂಶ ಪ್ರಕಟವಾಗಲಿದೆ.
 

click me!