ಬೆಳಗಾವಿ: ಸ್ಮಶಾನದ ಪಕ್ಕದಲ್ಲೇ ಮಲಗಿದ ವಿದೇಶಿಗರು..!

By Kannadaprabha NewsFirst Published Jun 18, 2023, 1:23 PM IST
Highlights

ಸ್ಮಶಾನದಲ್ಲಿ ಮಲಗುವ ಮೂಲಕ ಸ್ಮಶಾನ ಕಂಡರೆ ದೂರ ಓಡುವ ಜನರಿಗೆ ಪ್ರವಾಸಿಗರಿಬ್ಬರು ಈ ಮೂಲಕ ಮೂಢನಂಬಿಕೆಯನ್ನೂ ತೊಡೆದುಹಾಕುವ ಯತ್ನ ಮಾಡಿದ್ದಾರೆ.

ಬೆಳಗಾವಿ(ಜೂ.18):  ಮಧ್ಯರಾತ್ರಿ ಸ್ಮಶಾನದ ಸುತ್ತಮುತ್ತ ಓಡಾಡಲು ಭಯಪಡುವ ಜನರ ಮಧ್ಯೆ, ಪ್ರವಾಸಿಗರು ಚಿತಾಗಾರದ ಸ್ಥಳದಲ್ಲಿಯೇ ರಾತ್ರಿ ಕಳೆದು, ಬೆಳಗ್ಗೆ ಪ್ರಯಾಣ ಬೆಳೆಸಿರುವ ಅಚ್ಚರಿ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲೂಕಿನ ರುಮೇವಾಡಿಯಲ್ಲಿ ನಡೆದಿದೆ.

ರಾಜ್ಯದ ವಿವಿಧ ಐತಿಹಾಸಿಕ ಹಾಗೂ ಪ್ರವಾಸಿ ತಾಣಗಳನ್ನು ವೀಕ್ಷಿಸಲು ಆಸ್ಪ್ರೇಲಿಯಾ ಮೂಲದ ವಿದೇಶಿಗರಿಬ್ಬರು ಬುಲೆಟ್‌ ಮೂಲಕ ಪ್ರವಾಸ ಆರಂಭಿಸಿದ್ದಾರೆ. ಅದರಂತೆ ಬೆಳಗಾವಿ ಜಿಲ್ಲೆಯ ವಿವಿಧ ತಾಣಗಳನ್ನು ವೀಕ್ಷಣೆ ಮಾಡಿದ್ದಾರೆ. ಬಳಿಕ ಖಾನಾಪೂರದ ಕಡೆಗೆ ಪ್ರಯಾಣ ಬೆಳೆಸಿದ ಪ್ರವಾಸಿಗರು, ರಾತ್ರಿಯಾಗುತ್ತಿದ್ದಂತೆ ಖಾನಾಪೂರ ತಾಲೂಕಿನ ರುಮೇವಾಡಿ- ಅನಮೋಡ್‌ ರಸ್ತೆ ಬದಿ ಪಕ್ಕ ಚೌಗುಲಾ ಸಹೋದದರು ತಮ್ಮ ಕೃಷಿ ಜಮೀನಿನಲ್ಲಿ ಚಿತಾಗಾರ ನಿರ್ಮಿಸಿ, ಅದಕ್ಕೆ ಶೆಡ್‌ ಹಾಕಿ ಮಳೆ ಮತ್ತು ಬಿಸಿಲಿನಿಂದ ರಕ್ಷಣೆಗೆ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಚಿತಾಗಾರ ಸ್ಥಳದಲ್ಲಿಯೇ ಜೋಳಿಗೆ ಹಾಸಿಗೆ ಮಾಡಿಕೊಂಡು ರಾತ್ರಿ ಕಳೆದಿದ್ದಾರೆ.

ಕರ್ನಾಟಕದಲ್ಲಿ ಮತಾಂತರ ನಿಷೇಧ ವಾಪಸ್‌ಗೆ ಆಕ್ರೋಶ

ಎಂದಿನಂತೆ ಬೆಳ್ಳಂ ಬೆಳಗ್ಗೆ ಜಮೀನಿಗೆ ಹೋಗಿದ್ದ ಚೌಗುಲಾ ಸಹೋದರರು ಚಿತಾಗಾರ ಪಕ್ಕದಲ್ಲಿ ತಮ್ಮ ಎರಡು ಬುಲೆಟ್‌ ವಾಹನಗಳನ್ನು ನಿಲ್ಲಿಸಿಕೊಂಡಿದ್ದಾರೆ. ಅಲ್ಲದೇ ಚಿತಾಗಾರದ ಎರಡು ಬದಿ ಕಂಬಗಳಿಗೆ ಜೋಳಿಗೆಯನ್ನು ಕಟ್ಟಿಕೊಂಡು ಅದರಲ್ಲಿ ಮಲಗಿರುವ ದೃಶ್ಯವನ್ನು ಕಂಡು ಅಚ್ಚರಿಗೆ ಒಳಗಾಗಿದ್ದಾರೆ. ಅಲ್ಲದೇ ಈ ಸುದ್ದಿ ಗ್ರಾಮದಲ್ಲಿ ಹರಡುತ್ತಿದ್ದಂತೆ ಗ್ರಾಮದಲ್ಲಿರುವ ಯುವಕರು ಮತ್ತು ಜನರು ಕುತೂಹಲದಿಂದ ಓಡೋಡಿ ಬಂದು ವೀಕ್ಷಣೆ ಮಾಡಿದ್ದಾರೆ. ಬಳಿಕ ಪ್ರವಾಸಿಗರು ಸ್ಥಳದಲ್ಲಿದ್ದ ಎಲ್ಲರೊಂದಿಗೆ ಕೆಲ ಸಮಯ ಕಳೆದು ತಮ್ಮ ಬುಲೆಟ್‌ ಏರಿ ಗೋವಾದತ್ತ ಪ್ರಯಾಣ ಬೆಳೆಸಿದರು. ಸ್ಮಶಾನದಲ್ಲಿ ಮಲಗುವ ಮೂಲಕ ಸ್ಮಶಾನ ಕಂಡರೆ ದೂರ ಓಡುವ ಜನರಿಗೆ ಪ್ರವಾಸಿಗರಿಬ್ಬರು ಈ ಮೂಲಕ ಮೂಢನಂಬಿಕೆಯನ್ನೂ ತೊಡೆದುಹಾಕುವ ಯತ್ನ ಮಾಡಿದ್ದಾರೆ.

click me!