
ಬೆಂಗಳೂರು: ಪಾದಚಾರಿ ಮಾರ್ಗ (ಫುಟ್ಪಾತ್) ಒತ್ತುವರಿ ತೆರವುಗೊಳಿಸುವ ಸರ್ಕಾರದ ಕ್ರಮ ರಾಜಧಾನಿಯಲ್ಲಿ ಬೀದಿಬದಿ ವ್ಯಾಪಾರಿಗಳು ಮತ್ತು ಆಡಳಿತ ಮಂಡಳಿಯ ನಡುವೆ ದೊಡ್ಡ ಸಮರಕ್ಕೆ ನಾಂದಿ ಹಾಡಿದೆ. ಫುಟ್ಪಾತ್ ಅಭಿವೃದ್ಧಿಯ ನೆಪದಲ್ಲಿ ಬಲವಂತವಾಗಿ ಒಕ್ಕಲೆಬ್ಬಿಸುತ್ತಿರುವುದನ್ನು ಖಂಡಿಸಿ, ಜುಲೈ 8ರಂದು (ಇಂದು) ನಗರದಾದ್ಯಂತ ಬೀದಿಬದಿ ವ್ಯಾಪಾರ ಬಂದ್ ಮಾಡಿ, ಸ್ವಾತಂತ್ರ್ಯ ಉದ್ಯಾನದಲ್ಲಿ (ಫ್ರೀಡಂ ಪಾರ್ಕ್) ಬೃಹತ್ ಪ್ರತಿಭಟನೆ ನಡೆಸುವುದಾಗಿ ಬೀದಿಬದಿ ವ್ಯಾಪಾರಿಗಳ ಜಂಟಿ ಕ್ರಿಯಾ ಸಮಿತಿ ಘೋಷಿಸಿದೆ.
ಇತ್ತೀಚೆಗೆ ನಡೆದ ಸುದ್ದಿಗೋಷ್ಠಿಯಲ್ಲಿ ಬೀದಿಬದಿ ವ್ಯಾಪಾರಿಗಳ ಸಂಘದ (ಸಿಐಟಿಯು) ಪ್ರಧಾನ ಕಾರ್ಯದರ್ಶಿ ಬಸಮ್ಮ ಅವರು ಸರ್ಕಾರದ ಧೋರಣೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. "ಕಾನೂನುಬದ್ಧವಾಗಿ ನಮಗೆ ಈಗಾಗಲೇ ಗುರುತಿನ ಚೀಟಿಗಳನ್ನು (ಐಡಿ ಕಾರ್ಡ್) ನೀಡಲಾಗಿದೆ. ಹೀಗಿದ್ದರೂ ಯಾವುದೇ ಮುನ್ಸೂಚನೆ ನೀಡದೆ, ಏಕಾಏಕಿ ನಮ್ಮನ್ನು ಎತ್ತಂಗಡಿ ಮಾಡುತ್ತಿರುವುದು ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ಆದೇಶಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಸರ್ಕಾರದ ಈ ಅಮಾನವೀಯ ಕ್ರಮವನ್ನು ಖಂಡಿಸಿ ಆರು ಪ್ರಮುಖ ಸಂಘಟನೆಗಳು ಜಂಟಿಯಾಗಿ ಬೀದಿಗೆ ಇಳಿಯುತ್ತಿವೆ" ಎಂದು ಅವರು ಎಚ್ಚರಿಸಿದರು.
ನಗರದಲ್ಲಿ ನಡೆಯುವ ರಸ್ತೆ ಅಪಘಾತಗಳು ಮತ್ತು ಸಾವುಗಳಿಗೆ ಬೀದಿಬದಿ ವ್ಯಾಪಾರಿಗಳೇ ಕಾರಣ ಎಂಬ ಆರೋಪವನ್ನು ಸಂಘಟನೆಗಳು ತೀವ್ರವಾಗಿ ತಿರಸ್ಕರಿಸಿವೆ. "ಬೆಂಗಳೂರಿನಲ್ಲಿ ಜನರು ಸಾಯುತ್ತಿರುವುದು ರಸ್ತೆ ಗುಂಡಿಗಳು ಹಾಗೂ ಕಳಪೆ ಮೂಲಸೌಕರ್ಯಗಳಿಂದಲೇ ಹೊರತು ಬಡ ವ್ಯಾಪಾರಿಗಳಿಂದಲ್ಲ. ಇತ್ತೀಚೆಗೆ ಸಾವಿಗೀಡಾದ 300 ಪಾದಚಾರಿಗಳ ಪೈಕಿ ಒಬ್ಬರಾದರೂ ಬೀದಿಬದಿ ವ್ಯಾಪಾರಿಗಳಿಂದಾಗಿ ಸತ್ತಿದ್ದಾರೆಯೇ?" ಎಂದು ಪ್ರಶ್ನಿಸಿದ ಬಸಮ್ಮ, ಅಧಿಕಾರಿಗಳ ಬೇಜವಾಬ್ದಾರಿ ಹೇಳಿಕೆಗಳನ್ನು ತಕ್ಷಣವೇ ವಾಪಸ್ ಪಡೆಯಬೇಕೆಂದು ಆಗ್ರಹಿಸಿದರು.
ಬೀದಿಬದಿ ವ್ಯಾಪಾರಿಗಳ ಸಂಘದ ರಾಜ್ಯ ಸಹ ಕಾರ್ಯದರ್ಶಿ ಎಂ.ಎಂ.ರವಿಚಂದ್ರನ್ ಮಾತನಾಡಿ, "ಸರ್ಕಾರದ ಈ ಏಕಪಕ್ಷೀಯ ತೀರ್ಮಾನದಿಂದ ನಗರದ ಸುಮಾರು 2 ಲಕ್ಷ ಬಡ ವ್ಯಾಪಾರಿಗಳು ಹಾಗೂ ಅವರನ್ನು ನಂಬಿಕೊಂಡಿರುವ 10 ಲಕ್ಷಕ್ಕೂ ಹೆಚ್ಚು ಕುಟುಂಬ ಸದಸ್ಯರು ಬೀದಿಗೆ ಬೀಳುವಂತಾಗಿದೆ" ಎಂದು ಆತಂಕ ವ್ಯಕ್ತಪಡಿಸಿದರು.
ಒಟ್ಟು 12 ಸಂಘಟನೆಗಳ ಪೈಕಿ ಸದ್ಯ 6 ಪ್ರಮುಖ ಒಕ್ಕೂಟಗಳು ಈ ಹೋರಾಟಕ್ಕೆ ಕೈಜೋಡಿಸಿವೆ.
ಬೆಳಗ್ಗೆ 6 ಗಂಟೆಯಿಂದಲೇ ವ್ಯಾಪಾರ ಬಂದ್ ಮಾಡಿ ಪ್ರತಿಭಟನೆಗೆ ಕರೆ ನೀಡಲಾಗಿದ್ದರೂ, ನಗರದಲ್ಲಿ ಬಂದ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಒಟ್ಟು 12 ಸಂಘಟನೆಗಳ ಪೈಕಿ ಕೇವಲ 6 ಸಂಘಟನೆಗಳು ಮಾತ್ರ ಬೆಂಬಲ ನೀಡಿರುವುದರಿಂದ ಒಗ್ಗಟ್ಟಿನ ಕೊರತೆ ಎದ್ದುಕಾಣುತ್ತಿದೆ.
ಕೆ.ಆರ್. ಮಾರ್ಕೆಟ್ (ಕೃಷ್ಣರಾಜೇಂದ್ರ ಮಾರುಕಟ್ಟೆ) ಸೇರಿದಂತೆ ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ಹೂವು, ಹಣ್ಣು ಹಾಗೂ ತರಕಾರಿ ವ್ಯಾಪಾರ ಎಂದಿನಂತೆ ಸಾಗಿದೆ. ರಸ್ತೆ ಬದಿ ವ್ಯಾಪಾರಿಗಳು ಕೂಡ ಬೆಳಗ್ಗೆ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದಾರೆ. "ನಾವು ಹೊಟ್ಟೆಪಾಡಿನ ವ್ಯಾಪಾರವನ್ನು ಪೂರ್ತಿ ನಿಲ್ಲಿಸಲು ಸಾಧ್ಯವಿಲ್ಲ. ಆದರೆ ಈ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ. ಬೆಳಗ್ಗಿನ ವ್ಯಾಪಾರ ಮುಗಿಸಿ, 10 ಗಂಟೆಯ ನಂತರ ನಾವೆಲ್ಲರೂ ಫ್ರೀಡಂ ಪಾರ್ಕ್ ಪ್ರತಿಭಟನೆಗೆ ತೆರಳುತ್ತೇವೆ" ಎಂದು ಹಲವು ವ್ಯಾಪಾರಿಗಳು ತಿಳಿಸಿದ್ದಾರೆ.
ಇತ್ತ ಫ್ರೀಡಂ ಪಾರ್ಕ್ನಲ್ಲಿ ಬೃಹತ್ ವೇದಿಕೆ ಸಿದ್ಧವಾಗುತ್ತಿದ್ದು, ಜಂಟಿ ಹೋರಾಟ ಸಮಿತಿಯ ಕಾರ್ಯಕರ್ತರು ಮಾರುಕಟ್ಟೆ ಹಾಗೂ ರಸ್ತೆ ರಸ್ತೆಗಳಲ್ಲಿ ಸಂಚರಿಸಿ, ವ್ಯಾಪಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಕೋರಿ ಕರಪತ್ರಗಳನ್ನು ಹಂಚುತ್ತಿದ್ದಾರೆ. ಸರ್ಕಾರ ಈ ಬಡ ವ್ಯಾಪಾರಿಗಳ ಕೂಗಿಗೆ ಹೇಗೆ ಸ್ಪಂದಿಸುತ್ತದೆ ಎಂಬುದನ್ನು ಕಾದುನೋಡಬೇಕಿದೆ.