ಫ್ಲೆಕ್ಸ್‌ ಗಲಭೆ: ಶಿವಮೊಗ್ಗ ಬೂದಿ ಮುಚ್ಚಿದ ಕೆಂಡ

By Kannadaprabha NewsFirst Published Aug 17, 2022, 1:30 AM IST
Highlights
  • ಚೂರಿ ಇರಿದವನ ಕಾಲಿಗೆ ಗುಂಡಿಟ್ಟು ಅರೆಸ್ಟ್‌
  •  ನಗರದಲ್ಲಿ ನಿಷೇಧಾಜ್ಞೆ, ನೈಟ್‌ ಕಫä್ರ್ಯ ಜಾರಿ
  • ದ್ವಿಚಕ್ರ ವಾಹನದಲ್ಲಿ ಹಿಂಬದಿ ಸವಾರಿ ನಿಷೇಧ

 ಶಿವಮೊಗ್ಗ(ಆ.17) ಹಿಂದೂ ಕಾರ್ಯಕರ್ತ ಹರ್ಷ ಹತ್ಯೆ ಬಳಿಕ ಪ್ರಕ್ಷುಬ್ಧಗೊಂಡು ಶಾಂತವಾಗಿದ್ದ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ಇದೀಗ ಸಾವರ್ಕರ್‌-ಟಿಪ್ಪು ಫ್ಲೆಕ್ಸ್‌ ವಿವಾದದಿಂದಾಗಿ ಮತ್ತೆ ಉದ್ವಿಗ್ನಗೊಂಡಿದೆ. ನಗರವು ಸದ್ಯ ಮೇಲ್ನೋಟಕ್ಕೆ ಶಾಂತವಾಗಿದ್ದರೂ ಒಳಗೊಳಗೆ ಪರಿಸ್ಥಿತಿ ಬೂದಿಮುಚ್ಚಿದ ಕೆಂಡದಂತಿದೆ. ಮುನ್ನೆಚ್ಚರಿಕಾ ಕ್ರಮವಾಗಿ ನಗರದಲ್ಲಿ ಈಗಾಗಲೇ ನಿಷೇಧಾಜ್ಞೆ ಹೇರಲಾಗಿದ್ದು, ಬಿಗಿ ಬಂದೋಬಸ್‌್ತ ಕೈಗೊಳ್ಳಲಾಗಿದೆ.

ಸಾವರ್ಕರ್‌ ಚಿತ್ರದ ಬಗ್ಗೆ ಗಲಾಟೆ ಮಾಡಿದವನಿಗೆ ಶಿಕ್ಷೆ ಆಗಲಿ: ಬಿಎಸ್‌ವೈ

ಫ್ಲೆಕ್ಸ್‌ (Flex)ಗಲಾಟೆ ನಂತರ ಹಿಂದೂ ಯುವಕನ ಮೇಲೆ ನಡೆದ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಪ್ರಮುಖ ಆರೋಪಿಯನ್ನು ಶೂಟೌಟ್‌ ಮಾಡಿ ಬಂಧಿಸುವ ಮೂಲಕ ಕಿಡಿಗೇಡಿಗಳಿಗೆ ಕಠಿಣ ಕ್ರಮದ ಸಂದೇಶ ರವಾನಿಸಿದ್ದಾರೆ. ಪ್ರಕರಣದಲ್ಲಿ ಸೋಮವಾರ ರಾತ್ರಿಯಷ್ಟೇ ಇಬ್ಬರನ್ನು ಬಂಧಿಸಿದ್ದು, ಈ ಮೂಲಕ ಚೂರಿ ಇರಿತಕ್ಕೆ ಸಂಬಂಧಿಸಿ ಒಟ್ಟಾರೆ ಮೂವರನ್ನು ಬಂಧಿಸಿದಂತಾಗಿದೆ.

ಜನ ಸಂಚಾರ ವಿರಳ: ಶಿವಮೊಗ್ಗದಲ್ಲಿ ಅಹಿತಕರ ಘಟನೆ ಹಿನ್ನೆಲೆಯಲ್ಲಿ ಶಿವಮೊಗ್ಗ-ಭದ್ರಾವತಿ ಅವಳಿ ನಗರದಲ್ಲಿ ಸೋಮವಾರ ರಾತ್ರಿಯಿಂದಲೇ ಜಾರಿಗೆ ಬರುವಂತೆ ಆ.18ರ ರಾತ್ರಿವರೆಗೆ ನಿಷೇಧಾಜ್ಞೆ ಹೇರಲಾಗಿದ್ದು, ಸಾರ್ವಜನಿಕರಲ್ಲಿ ಭೀತಿ ಮನೆ ಮಾಡಿರುವ ಹಿನ್ನೆಲೆಯಲ್ಲಿ ನಗರದ ಪ್ರಮುಖ ಸ್ಥಳಗಳಲ್ಲಿ ಮಂಗಳವಾರ ಪೊಲೀಸ್‌ ಪಥ ಸಂಚಲನ ನಡೆಸಲಾಗಿದೆ. ಅಕ್ಕಪಕ್ಕದ ಜಿಲ್ಲೆಗಳಿಂದ ಹೆಚ್ಚುವರಿ ಪೊಲೀಸರನ್ನು ಸ್ಥಳಕ್ಕೆ ಕರೆಸಲಾಗಿದ್ದು, ಹಿರಿಯ ಅಧಿಕಾರಿಗಳು ಸ್ಥಳದಲ್ಲೇ ಬೀಡು ಬಿಟ್ಟಿದ್ದಾರೆ. ನಗರದಲ್ಲಿ ಜನಸಂಚಾರಕ್ಕೆ ಯಾವುದೇ ಅಡ್ಡಿ ಇರದಿದ್ದರೂ ಜನ ಮತ್ತು ವಾಹನ ಸಂಚಾರ ವಿರಳವಾಗಿದ್ದು, ಮಂಗಳವಾರ ನಗರದಲ್ಲಿ ಬಸ್‌ ಸಂಚಾರ ಸ್ಥಗಿತಗೊಂಡಿತ್ತು. ಅಂಗಡಿ-ಮುಂಗಟ್ಟುಗಳೂ ಬಾಗಿಲು ಹಾಕಿದ್ದವು.

ಶಿವಮೊಗ್ಗದಲ್ಲಿ ಮತ್ತೆ ಹೊತ್ತಿದ ಧರ್ಮದ ಕಿಚ್ಚು: ಸ್ವಾತಂತ್ರ್ಯ ಹೋರಾಟಗಾರರ ಬ್ಯಾನರ್‌ ಹರಿದು ಉದ್ಧಟತನ

ದ್ವಿಚಕ್ರ ವಾಹನ ಸಂಚಾರ ನಿರ್ಬಂಧ: ಕಳೆದೆರಡು ವಾರಗಳ ಹಿಂದೆ ನಡೆದ ಸರಣಿ ಹತ್ಯೆಗಳ ಹಿನ್ನೆಲೆಯಲ್ಲಿ ಮಂಗಳೂರಲ್ಲಿ ದ್ವಿಚಕ್ರ ವಾಹನಗಳಲ್ಲಿ ಹಿಂಬದಿ ಸವಾರರಿಗೆ ನಿಷೇಧ ಹೇರಿ ವಾಪಸ್‌ ಪಡೆದ ವಿವಾದಾತ್ಮಕ ನಿಯಮವನ್ನು ಈಗ ಶಿವಮೊಗ್ಗ ನಗರದಲ್ಲಿ ಮಂಗಳವಾರದಿಂದ ಜಾರಿಗೆ ಬರುವಂತೆ ಜಾರಿಗೊಳಿಸಲಾಗಿದೆ. ಅದರಂತೆ ದ್ವಿಚಕ್ರ ವಾಹನ ಸವಾರರು ಹಿಂಬದಿಯಲ್ಲಿ 40 ವರ್ಷಕ್ಕಿಂತ ಕಿರಿಯ ಗಂಡಸರನ್ನು ಕೂರಿಸಿಕೊಂಡು ಹೋಗುವುದನ್ನು (40 ವರ್ಷ ಮೇಲ್ಪಟ್ಟವಯಸ್ಕರು ಮತ್ತು ಮಹಿಳೆಯರು, ಮಕ್ಕಳನ್ನು ಕೂರಿಸಿಕೊಳ್ಳಬಹುದು) ನಿಷೇಧಿಸಲಾಗಿದೆ. ಅಲ್ಲದೆ, ರಾತ್ರಿ 9 ರಿಂದ ಬೆಳಗಿನ ಜಾವ 5ರವರೆಗೆ ದ್ವಿಚಕ್ರ ವಾಹನಗಳು (ತುರ್ತು ಸಂದರ್ಭವನ್ನು ಹೊರತುಪಡಿಸಿ) ರಸ್ತೆಗಿಳಿಯುವುದನ್ನು ನಿಷೇಧಿಸಲಾಗಿದೆ.

ಆರೋಪಿ ಮೇಲೆ ಫೈರಿಂಗ್‌: ಫ್ಲೆಕ್ಸ್‌ ಗಲಾಟೆ ಬಳಿಕ ಹಿಂದೂ ಯುವಕನ ಮೇಲೆ ನಡೆದ ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿ ಸೋಮವಾರ ರಾತ್ರಿಯಷ್ಟೇ ಇಬ್ಬರನ್ನು ಬಂಧಿಸಿದ್ದ ಪೊಲೀಸರು, ಮತ್ತೊಬ್ಬ ಪ್ರಮುಖ ಆರೋಪಿ ಜಬೀವುಲ್ಲಾನನ್ನು ಬಂಧಿಸಲೆಂದು ಹೋದಾಗ ಮಂಗಳವಾರ ಬೆಳಗ್ಗೆ ಆತ ಪ್ರತಿದಾಳಿ ನಡೆಸಿದ ಘಟನೆ ನಡೆದಿದೆ. ನಗರದ ತೀರ್ಥಹಳ್ಳಿ ರಸ್ತೆ ಬಳಿ ಆರೋಪಿ ಪೊಲೀಸರ ಮೇಲೆಯೇ ಹಲ್ಲೆಗೆ ಯತ್ನಿಸಿ ಪರಾರಿಯಾಗಲು ಮುಂದಾಗಿದ್ದು, ಈ ವೇಳೆ ಆತ್ಮರಕ್ಷಣೆಗಾಗಿ ಪೊಲೀಸರು ಜಬೀವುಲ್ಲಾ ಕಾಲಿಗೆ ಎರಡು ಸುತ್ತು ಗುಂಡುಹಾರಿಸಿ ಬಂಧಿಸಿದ್ದಾರೆ. ಗುಂಡೇಟು ತಗುಲಿ ಗಾಯಗೊಂಡ ಆರೋಪಿಯನ್ನು ವಶಕ್ಕೆ ಪಡೆದು ಮೆಗ್ಗಾನ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪ್ರಮುಖ ನಾಯಕರ ಭೇಟಿ:

ಚೂರಿ ಇರಿತದಿಂದ ಗಂಭೀರ ಗಾಯಗೊಂಡಿರುವ ಪ್ರೇಮ್‌ ಸಿಂಗ್‌ ಅವರನ್ನು ಕೇಂದ್ರ ಸಚಿವ ನಾರಾಯಣಸ್ವಾಮಿ, ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ, ಸಂತೋಷ್‌ ಗುರೂಜಿ ಮತ್ತಿರರು ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.

click me!