Covid 19 Crisis: ಬೆಂಗಳೂರಿನಲ್ಲಿ ಕೋವಿಡ್ ಸೋಂಕು ಇಳಿಕೆ: ಬೆಳ್ಳಂದೂರಿನಲ್ಲಿ ಅತ್ಯಧಿಕ ಕೇಸ್‌!

By Kannadaprabha NewsFirst Published Jan 18, 2022, 6:45 AM IST
Highlights

*15,947 ಮಂದಿಗೆ ಸೋಂಕು: ಬೆಳ್ಳಂದೂರಿನಲ್ಲಿ ಅತ್ಯಧಿಕ ಕೇಸ್‌
*ವಿದೇಶದಿಂದ ಬಂದ 7 ಮಂದಿಗೆ ಸೋಂಕು
*ಆರ್‌ಎಂಆರ್‌ ಪಾರ್ಕ್ನಲ್ಲಿ ಇರುವ: ಕೋವಿಡ್‌ ಅರೈಕೆ ಕೇಂದ್ರ ಆರಂಭ

ಬೆಂಗಳೂರು (ಜ. 18): ರಾಜಧಾನಿಯಲ್ಲಿ ನಾಲ್ಕು ದಿನಗಳ ಬಳಿಕ ಕೊರೋನಾ ಸೋಂಕಿತರ (Covid 19) ಸಂಖ್ಯೆಯಲ್ಲಿ ಇಳಿಕೆಯಾಗಿದ್ದು, ಸೋಮವಾರ 15,947 ಜನರಲ್ಲಿ ಸೋಂಕು ಪತ್ತೆಯಾಗಿದೆ. ಐವರು ಸೋಂಕಿನಿಂದ ಮೃತಪಟ್ಟಿದ್ದಾರೆ. ಹೊಸ ಪ್ರಕರಣಗಳ ಪತ್ತೆಯಿಂದ ನಗರದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 1.57 ಲಕ್ಷಕ್ಕೆ ಹೆಚ್ಚಳವಾಗಿದೆ. ಹೊಸ ಸೋಂಕಿತರ ಪತ್ತೆಯಿಂದ ನಗರದಲ್ಲಿ ಈವರೆಗಿನ ಸೋಂಕಿತರ ಸಂಖ್ಯೆ 1,32,754ಕ್ಕೆ ಏರಿಕೆಯಾಗಿದೆ. 4888 ಮಂದಿ ಸೋಂಕಿತರು ಬಿಡುಗಡೆಯಾಗಿದ್ದು, ಇದುವರೆಗೆ 12,59,041 ಜನರು ಗುಣಮುಖರಾಗಿದ್ದಾರೆ. ಐವರ ಸಾವಿನಿಂದ ಈವರೆಗೆ ಸೋಂಕಿಗೆ ಬಲಿಯಾದವರ ಸಂಖ್ಯೆ 16,458ಕ್ಕೆ ಹೆಚ್ಚಳವಾಗಿದೆ.

ಪಾಲಿಕೆ ವ್ಯಾಪ್ತಿಯ ಬೆಳ್ಳಂದೂರು, ಬೇಗೂರು ಸೇರಿದಂತೆ 10 ವಲಯಗಳಲ್ಲಿ ಕಳೆದ ಏಳು ದಿನಗಳಲ್ಲಿ ಸೋಂಕಿತರಾಗುತ್ತಿರುವವರ ಸಂಖ್ಯೆ 200ರ ಗಡಿ ದಾಟಿದೆ. ಬೆಳ್ಳಂದೂರು 427, ಬೇಗೂರು 274, ನ್ಯೂತಿಪ್ಪಸಂದ್ರ 251, ರಾಜರಾಜೇಶ್ವರಿ ನಗರ 232, ಎಚ್‌ಎಸ್‌ಆರ್‌ ಲೇಔಟ್‌ 227, ಹೊರಮಾವು 226, ದೊಡ್ಡನೆಕ್ಕುಂದಿ 213, ಕೋರಮಂಗಲ 210 ಮತ್ತು ಹೆಮ್ಮಿಗೆಪುರ 217, ವಸಂತಪುರ 200 ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ.

ಕಂಟೈನ್ಮೆಂಟ್‌ ಸಂಖ್ಯೆ 627ಕ್ಕೆ ಏರಿಕೆ: ಇನ್ನು ಬಿಬಿಎಂಪಿಯ ಎಂಟು ವಲಯಗಳಲ್ಲಿ ಮೈಕ್ರೋ ಕಂಟೈನ್ಮೆಂಟ್‌ಗಳ ಸಂಖ್ಯೆ 627ಕ್ಕೆ ಏರಿಕೆಯಾಗಿದೆ. ಮಹದೇವಪುರ 251, ಬೊಮ್ಮನಹಳ್ಳಿ 132, ದಕ್ಷಿಣ 67, ಪಶ್ಚಿಮ 57, ಯಲಹಂಕ 68, ಪೂರ್ವ 41, ರಾಜರಾಜೇಶ್ವರಿ ನಗರ 6, ದಾಸರಹಳ್ಳಿ 5 ಕಂಟೈನ್ಮೆಂಟ್‌ಗಳನ್ನು ಗುರುತಿಸಲಾಗಿದೆ ಎಂದು ಪಾಲಿಕೆ ವರದಿ ಮಾಹಿತಿ ನೀಡಿದೆ.

ಇದನ್ನೂ ಓದಿBengaluru Covid 19 Guidelines: ನಗರದಲ್ಲಿ ಮಾಸಾಂತ್ಯವರೆಗೂ ನಿಷೇಧಾಜ್ಞೆ ಜಾರಿ!

ಆರ್‌ಎಂಆರ್‌ ಪಾರ್ಕ್ನಲ್ಲಿ ಇರುವ: ಕೋವಿಡ್‌ ಅರೈಕೆ ಕೇಂದ್ರ ಆರಂಭ: ಪಾಲಿಕೆ ಬೊಮ್ಮನಹಳ್ಳಿ ವಲಯದ ಆರ್‌ಎಂಆರ್‌ ಪಾರ್ಕ್ನಲ್ಲಿ 50 ಹಾಸಿಗೆಯ ಕೋವಿಡ್‌ ಆರೈಕೆ ಕೇಂದ್ರ ಸೋಮವಾರ ಪುನರಾರಂಭಗೊಂಡಿದೆ.ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ, ಪ್ರಣವ್‌ ಫೌಂಡೇಶನ್‌ ಮತ್ತು ಇತರೆ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಈ ಕೋವಿಡ್‌ ಆರೈಕೆ ಕೇಂದ್ರವನ್ನು ಕೊರೋನಾ ಎರಡನೇ ಅಲೆಯ ಸಂದರ್ಭದಲ್ಲಿ ಆರಂಭಿಸಲಾಗಿತ್ತು. ನಂತರ ಸೋಂಕು ಇಳಿಕೆಯಾಗಿದ್ದ ಕಾರಣ ಆರೈಕೆ ಕೇಂದ್ರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ, ಲಸಿಕಾಕರಣ, ಆರೋಗ್ಯ ತಪಾಸಣೆ ಮೊದಲಾದ ಕಾರ್ಯಗಳಿಗೆ ಮಾತ್ರ ಬಳಸಿಕೊಳ್ಳಲಾಗಿತ್ತು.

ಇದೀಗ ನಗರದಲ್ಲಿ ನಿತ್ಯ 20 ಸಾವಿರಕ್ಕೂ ಹೆಚ್ಚು ಸೋಂಕಿತ ಪ್ರಕರಣಗಳು ಪತ್ತೆಯಾಗುತ್ತಿರುವ ಹಿನ್ನೆಲೆಯಲ್ಲಿ ಈಗ ಮತ್ತೆ ಕೋವಿಡ್‌ ಆರೈಕೆ ಕೇಂದ್ರವನ್ನು ಆರಂಭಿಸಲಾಗಿದೆ. ಕೇಂದ್ರದಲ್ಲಿ ಆಮ್ಲಜನಕ ಸಹಿತವಾದ 50 ಹಾಸಿಗೆಗಳನ್ನು ಅಳವಡಿಸಲಾಗಿದೆ. ಬಿಬಿಎಂಪಿಯಿಂದ ಮೂವರು ಪರಿಣಿತ ವೈದ್ಯರು ಹಾಗೂ 9 ನರ್ಸ್‌ಗಳನ್ನು ನಿಯೋಜಿಸಲಾಗಿದೆ. ಹಾಗೆಯೇ ಮಹಾಲಕ್ಷ್ಮಿ ಲೇಔಟ್‌ ವಿಧಾನಸಭಾ ಕ್ಷೇತ್ರದ ನಾಗಪುರ ವಾರ್ಡ್‌ನಲ್ಲಿಯೂ ಕೋವಿಡ್‌ ಆರೈಕೆ ಕೇಂದ್ರವನ್ನು ಪ್ರಾರಂಭಿಸಲಾಗಿದ್ದು, ದಿನ 24 ಗಂಟೆಯೂ ಕಾರ್ಯನಿರ್ವಹಿಸುವಂತೆ ವ್ಯವಸ್ಥೆ ಮಾಡಲಾಗಿದೆ.

ಇದನ್ನೂ ಓದಿCovid-19 Crisis: ಭಾರತದಲ್ಲೀಗ ಕೋವಿಡ್‌ ಕೇಸ್‌ ಇಳಿಕೆ, ಪಾಸಿಟಿವಿಟಿ ದರ ಏರಿಕೆ

ವಿದೇಶದಿಂದ ಬಂದ 7 ಮಂದಿಗೆ ಸೋಂಕು: ವಿದೇಶದಿಂದ ಬೆಂಗಳೂರಿಗೆ ಆಗಮಿಸಿದ ಪ್ರಯಾಣಿಕರ ಪೈಕಿ ಏಳು ಮಂದಿಯಲ್ಲಿ ಕೋವಿಡ್‌-19 ಪತ್ತೆಯಾಗಿದೆ. ಬ್ರಿಟನ್‌ನಿಂದ ಆಗಮಿಸಿದ ನಾಲ್ವರು, ಯುಎಸ್‌ನಿಂದ ಬಂದ ಇಬ್ಬರು ಮತ್ತು ಸ್ವೀಡನ್‌ನಿಂದ ಬಂದ ಒಬ್ಬರಲ್ಲಿ ಸೋಂಕು ದೃಢಪಟ್ಟಿದೆ. ರಾಜ್ಯದಲ್ಲಿ ಈವರೆಗೆ ವಿದೇಶದಿಂದ ಬಂದ ಒಟ್ಟು 280 ಮಂದಿಯಲ್ಲಿ ಕೋವಿಡ್‌ ವರದಿಯಾಗಿದೆ. ಈ ಪೈಕಿ 264 ಮಂದಿ ಅಪಾಯಕಾರಿ ದೇಶಗಳಿಂದ ಬಂದಿದ್ದರು. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನವೆಂಬರ್‌ನಿಂದ ಈವರೆಗೆ ಒಟ್ಟು 29,908 ಮಂದಿಯನ್ನು ಪರೀಕ್ಷಿಸಲಾಗಿದ್ದು, ಈ ಪೈಕಿ 25,624 ಮಂದಿ ಅಪಾಯಕಾರಿ ದೇಶಗಳಿಂದ ಬಂದಿಳಿದಿದ್ದಾರೆ.

click me!