ಶೀಘ್ರ ಶುರುವಾಗುತ್ತಿದೆ ಜನಗಣತಿ : ಹೊಸ ವಿಧಾನ

By Kannadaprabha NewsFirst Published Mar 3, 2020, 12:53 PM IST
Highlights

ಈ ಬಾರಿ ಮನೆಗಣತಿ ಕಾರ್ಯವನ್ನು ಮೊಬೈಲ್‌ ಆ್ಯಪ್‌ ಮೂಲಕ ಸಹ ನಡೆಸಲು ಅವಕಾಶ ಕಲ್ಪಿಸಲಾಗಿದೆ. ದೇಶ ಸ್ವಾತಂತ್ರ್ಯ ಪಡೆದ ಬಳಿಕ ನಡೆಯುತ್ತಿರುವ 8ನೇ ಜನಗಣತಿ ಇದಾಗಿದೆ.

ಶಿವಮೊಗ್ಗ [ಮಾ.03]: ಜನಗಣತಿ ಕಾರ್ಯ ಮುಂದಿನ 10 ವರ್ಷಗಳ ಅವಧಿಗೆ ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್‌ ತಿಳಿಸಿದರು.

ನಗರದಲ್ಲಿ  ಜಿಲ್ಲಾಧಿಕಾರಿ ಕಚೇರಿ ಹೊಸ ಸಭಾಂಗಣದಲ್ಲಿ ಜನಗಣತಿ ಅಧಿಕಾರಿಗಳ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಈ ಬಾರಿ ಮನೆಗಣತಿ ಕಾರ್ಯವನ್ನು ಮೊಬೈಲ್‌ ಆ್ಯಪ್‌ ಮೂಲಕ ಸಹ ನಡೆಸಲು ಅವಕಾಶ ಕಲ್ಪಿಸಲಾಗಿದೆ. ದೇಶ ಸ್ವಾತಂತ್ರ್ಯ ಪಡೆದ ಬಳಿಕ ನಡೆಯುತ್ತಿರುವ 8ನೇ ಜನಗಣತಿ ಇದಾಗಿದ್ದು, ಇದೇ ಮೊದಲ ಬಾರಿಗೆ ಡಿಜಿಟಲ್‌ ಜನಗಣತಿ ಕೈಗೊಳ್ಳಲಾಗುತ್ತಿದೆ. ಮನೆಗಣತಿ ಪೂರ್ಣಗೊಂಡ ಬಳಿಕ ಮುಂದಿನ ವರ್ಷದ ಫೆ. 9 ರಿಂದ 28 ರವರೆಗೆ ವೈಯಕ್ತಿಕ ಜನಗಣತಿ ನಡೆಯಲಿದೆ ಎಂದು ಅವರು ಹೇಳಿದರು.

ಜನಗಣತಿಗೆ ಪೂರ್ವಭಾವಿಯಾಗಿ ಏ. 15 ರಿಂದ ಮೇ 29 ರ ವರೆಗೆ ಜಿಲ್ಲೆಯಾದ್ಯಂತ ಮನೆ ಪಟ್ಟಿಮತ್ತು ಮನೆಗಣತಿ ಹಾಗೂ ರಾಷ್ಟ್ರೀಯ ಜನಸಂಖ್ಯಾರಿಜಿಸ್ಟರ್‌ ಪರಿಷ್ಕರಣೆ ಕಾರ್ಯ ನಡೆಯಲಿದೆ ಎಂದರು.

ಜನಗಣತಿಯಲ್ಲಿ ಸಂಗ್ರಹಿಸಲಾಗುವ ಮಾಹಿತಿ ಆಧಾರದಲ್ಲಿ ಪ್ರತಿಯೊಂದು ಯೋಜನೆಗಳನ್ನು ರೂಪಿಸಲಾಗುತ್ತದೆ. ಆದ್ದರಿಂದ ಗಣತಿ ಸಂದರ್ಭದಲ್ಲಿ ನಿಖರವಾದ ಮಾಹಿತಿಯನ್ನು ಸಂಗ್ರಹಿಸಬೇಕು. ಯಾವುದೇ ಗೊಂದಲಕ್ಕೆ ಆಸ್ಪದವಿಲ್ಲದಂತೆ ಗಣತಿ ಕಾರ್ಯ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.

60 ಸಾವಿರ ತಲುಪಿದ ಅಡಕೆ ದರ : ಬೆಳೆಗಾರರು ಖುಷ್...

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಸಾಂಖ್ಯಿಕ ಇಲಾಖೆ ಉಪನಿರ್ದೇಶಕ ಕೇಶವ ನಾಯ್ಕ್ ಮಾತನಾಡಿ, ಮನೆ ಪಟ್ಟಿಮತ್ತು ಮನೆಗಣತಿ ಸಂದರ್ಭದಲ್ಲಿ ಮನೆ, ಕಟ್ಟಡ ಸೇರಿದಂತೆ ಎಲ್ಲಾ ನಿರ್ಮಾಣಗಳ ಮೂಲಭೂತ ಸೌಲಭ್ಯಗಳಿಗೆ ಸಂಬಂಧಿಸಿದಂತೆ ಒಟ್ಟು 34 ಪ್ರಶ್ನೆಗಳಿದ್ದು, ಪ್ರತಿಯೊಂದು ಮಾಹಿತಿಗಳನ್ನು ಸಂಗ್ರಹಿಸಬೇಕು. 650 ರಿಂದ 800 ಜನರಿಗೆ ಅಥವಾ 150 ರಿಂದ 180 ಮನೆಗಳಿಗೆ ತಲಾ ಒಬ್ಬರು ಗಣತಿದಾರರನ್ನು ನೇಮಕ ಮಾಡಲಾಗುವುದು. ಪ್ರತಿ 6 ಗಣತಿದಾರರಿಗೆ ಒಬ್ಬರು ಮೇಲ್ವಿಚಾರಕರನ್ನು ನೇಮಕ ಮಾಡಲಾಗಿದೆ ಎಂದರು.

ಜನಗಣತಿ ಸಂದರ್ಭದಲ್ಲಿ ಪಡೆದ ಮಾಹಿತಿ ಗೌಪ್ಯವಾಗಿದ್ದು, ಅದನ್ನು ಸಾಕ್ಷಿಯಾಗಿ ಸಹ ಸ್ವೀಕರಿಸುವಂತಿಲ್ಲ. 2010 ರಲ್ಲಿ ಸಂಗ್ರಹಿಸಲಾಗಿರುವ ಎನ್‌.ಪಿ.ಆರ್‌. ಮಾಹಿತಿಯನ್ನು ಇದೇ ಸಂದರ್ಭದಲ್ಲಿ ಪರಿಷ್ಕರಣೆ ಮಾತ್ರ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.

ಅಪರ ಜಿಲ್ಲಾಧಿಕಾರಿ ಜಿ.ಅನುರಾಧಾ ಅವರು ಮಾತನಾಡಿದರು. ಮಹಾನಗರ ಪಾಲಿಕೆ ಆಯುಕ್ತ ಚಿದಾನಂದ ವಠಾರೆ, ಯೋಜನಾ ನಿರ್ದೇಶಕ ಡಾ. ನಾಗೇಂದ್ರ ಹೊನ್ನಳ್ಳಿ, ಜಿಲ್ಲಾ ಸಾಂಖ್ಯಿಕ ಅಧಿಕಾರಿ ಬ್ರಿಜೆಟ್‌ ವರ್ಗೀಸ್‌ ಉಪಸ್ಥಿತರಿದ್ದರು.

click me!