
ಕಲಬುರಗಿ(ಆ.03): ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಮೈಬಣ್ಣ ಕುರಿತಂತೆ ಹೇಳಿಕೆ ನೀಡಿ ವಿವಾದಕ್ಕೀಡಾಗಿರುವ ಮಾಜಿ ಗೃಹ ಸಚಿವರು ಹಾಗೂ ಹಾಲಿ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ವಿರುದ್ಧ ಕಲಬುರಗಿ ನಗರದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಂಗ್ರೆಸ್ ಯುವ ಮುಖಂಡ ರಾಜೀವ ಜಾನೆ ಅವರು ಮೈಬಣ್ಣದ ಕುರಿತಂತೆ ಕೀಳು ಅಭಿರುಚಿಯ ಹೇಳಿಕೆ ನೀಡುವ ಮೂಲಕ ಮಾಜಿ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಡಾ. ಖರ್ಗೆ ಅವರನ್ನು ಅವಹೇಳನ ಮಾಡಿದ್ದಾರೆ. ಇವರ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಕೋರಿ ಇಲ್ಲಿನ 5ನೇ ಹೆಚ್ಚುವರಿ ಜೆಎಂಎಫ್ಸಿ ನ್ಯಾಯಾಲಯದ ಗಮನ ಸೆಳೆದಿದ್ದರು.
ಬೀದರ್: ಖರ್ಗೆ, ಖಂಡ್ರೆ ವಿರುದ್ಧ ವರ್ಣಭೇದದ ಮಾತು, ಶಾಸಕ ಅರಳಿ ಖಂಡನೀಯ
ರಾಜೀವ ಜಾನೆಯವರ ಕೋರಿಕೆ ಪರಿಶೀಲಿಸಿದ್ದ ಸದರಿ ನ್ಯಾಯಾಲಯ ಇದು ಅಸಂಜ್ಞೆಯ ಅಪರಾಧವಾಗಿದ್ದು, ಭಾರತೀ ದಂಡ ಸಂಹಿತೆಯ 504ನೇ ಕಲಂನಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮಾಡುವಂತೆ ಅನುಮತಿಸಿತ್ತು. ನ್ಯಾಯಾಲಯದ ಅನುಮತಿ ಹಿನ್ನೆಲೆಯಲ್ಲಿ ಇಲ್ಲಿನ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.