ಲಂಚಾವತಾರ: ಪ್ರಧಾನಿಗೆ ದೂರು ನೀಡಿದ್ದ ಕಂಟ್ರಾಕ್ಟರ್‌ ಮೇಲೇ ಕೇಸ್‌..!

By Girish GoudarFirst Published May 10, 2022, 7:45 AM IST
Highlights

*  ಸಂಕಷ್ಟಕ್ಕೆ ಸಿಲುಕಿದ ಗಂಗಾವತಿ ಗುತ್ತಿಗೆದಾರ
*  ಅಧಿಕಾರಿಗಳಿಂದ ಪರ್ಸಂಟೇಜ್‌ ಕಿರುಕುಳ
*  ಪರ್ಸೆಂಟೇಜ್‌ ನೀಡಿದ್ದರೂ ಇನ್ನಷ್ಟು ಕೇಳುತ್ತಿದ್ದಾರೆ
 

ಕೊಪ್ಪಳ(ಮೇ.10): ನರೇಗಾ ಯೋಜನೆಯಲ್ಲಿ ಸಾಮಗ್ರಿ ಪೂರೈಕೆ ಮಾಡಿದ ಬಾಕಿ ಬಿಲ್‌ ಹಣ ಪಾವತಿಗೆ ಪರ್ಸೆಂಟೇಜ್‌ ನೀಡಿದರೂ ಬಿಲ್‌ ಪಾವತಿ ಮಾಡುತ್ತಿಲ್ಲ. ಈ ಕುರಿತು ದಾಖಲೆ ಸಮೇತ ಪ್ರಧಾನಿ ನರೇಂದ್ರ ಮೋದಿ(Narendra Modi) ಅವರಿಗೆ ಪತ್ರ ಬರೆದರೆ ನನ್ನ ವಿರುದ್ಧವೇ ಗಂಗಾವತಿ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಸೆಕ್ಷನ್‌ 406 ಅಡಿಯಲ್ಲಿ ತಾಲೂಕು ಪಂಚಾಯ್ತಿಯವರು ದೂರು ನೀಡಿ ಎಫ್‌ಐಆರ್‌(FIR) ದಾಖಲು ಮಾಡಿದ್ದಾರೆ ಎಂದು ಗುತ್ತಿಗೆದಾರರೊಬ್ಬರು ಅಳಲು ತೋಡಿಕೊಂಡಿದ್ದಾರೆ.

ರಾಜ್ಯದಲ್ಲಿ(Karnataka) ಪರ್ಸಂಟೇಜ್‌ ಕಿರುಕುಳಕ್ಕೆ(Percentage Harassment) ಸಂಬಂಧಿಸಿ ಇಬ್ಬರು ಗುತ್ತಿಗೆದಾರರು ಆತ್ಮಹತ್ಯೆಗೆ(Suicide) ಶರಣಾದ ಬೆನ್ನಲ್ಲೇ ಈ ಘಟನೆ ನಡೆದಿದೆ. ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗುತ್ತಿಗೆದಾರ(Contractor) ಯರ್ರಿಸ್ವಾಮಿ(Yarriswamy), ಕಾರಟಗಿ ತಾಲೂಕು ವ್ಯಾಪ್ತಿಯ ಮುಷ್ಟೂರು ಗ್ರಾಮ ಪಂಚಾಯ್ತಿಗೆ ನಿಯಮಾನುಸಾರ ಸಾಮಗ್ರಿ ಪೂರೈಕೆ ಮಾಡಿದ್ದೇನೆ. ಆದರೂ ಕೊಡಬೇಕಾದ ಬಿಲ್‌ ಪೂರ್ತಿ ಕೊಡುತ್ತಿಲ್ಲ. ಇದಕ್ಕಾಗಿ ಪರ್ಸಂಟೇಜ್‌ ನೀಡಿದ್ದೇನೆ. ಇನ್ನಷ್ಟುಕೊಡುವಂತೆ ಸತಾಯಿಸುತ್ತಿದ್ದಾರೆ. ಅಧಿಕಾರಿಗಳಿಗೆ ನಾನು ಪರ್ಸಂಟೇಜನ್ನು ಫೋನ್‌ಪೇ ಮತ್ತು ಗೂಗಲ್‌ಪೇ ಮೂಲಕ ಪಾವತಿ ಮಾಡಿದ್ದೇನೆ.

ಕೊಪ್ಪಳದ 60 ಗ್ರಾಮ ಎಣ್ಣೆ ಮುಕ್ತ, ಮಾರಿದ್ರೆ ಬೀಳುತ್ತೆ ದಂಡ

ಸುಮಾರು .15 ಲಕ್ಷ ನನಗೆ ಬರಬೇಕಾಗಿದ್ದರೂ ಇದುವರೆಗೂ ಕೇವಲ 4.88 ಲಕ್ಷ ಪಾವತಿ ಮಾಡಿದ್ದಾರೆ. ಉಳಿದ ಹಣಕ್ಕೆ ಗೋಳಾಡಿಸುತ್ತಿದ್ದಾರೆ. ನಾನು ಸಾಲ ಮಾಡಿ ಸಾಮಗ್ರಿ ಪೂರೈಕೆ ಮಾಡಿದ್ದೇನೆ. ಈ ಬಗ್ಗೆ ಗ್ರಾಮ ಪಂಚಾಯ್ತಿ ಅಧ್ಯಕ್ಷರು, ಪಿಡಿಒ ಅವರನ್ನು ವಿಚಾರಿಸಿದರೆ ಉಡಾಫೆಯ ಮಾತುಗಳನ್ನಾಡುತ್ತಾರೆ. ನನಗೆ ಸಂದಾಯವಾಗಬೇಕಿರುವ ಹಣವನ್ನು ರೆಹನಾ ಎಂಟರ್‌ಪ್ರೈಸ್‌ಗೆ ವರ್ಗಾವಣೆ ಮಾಡಿದ್ದಾರೆ ಎಂದು ಆರೋಪಿಸಿದರು. ರೆಹನಾ ಎಂಟರ್‌ಪ್ರೈಸಿಸ್‌ಗೂ ನನಗೂ ಸಂಬಂಧವಿಲ್ಲ ಎಂದು ಆರೋಪಿಸಿದರು.

ಪ್ರಧಾನಿಗೆ ಪತ್ರ ಬರೆದಿದ್ದೇನೆ:

ಯಾರಾರ‍ಯರಿಗೆ ಹಣ ಪಾವತಿ ಮಾಡಿದ್ದೇನೆ ಎನ್ನುವ ದಾಖಲೆ ನೀಡಿದ್ದೇನೆ. ಆಡಿಯೋ ರೆಕಾರ್ಡ್‌ ಸಹ ಮಾಡಿದ್ದೇನೆ. ಹೀಗಾಗಿ ಎಲ್ಲ ದಾಖಲೆಯೊಂದಿಗೆ ಪ್ರಧಾನಿ ಮೋದಿಗೆ ಸುದೀರ್ಘ ಪತ್ರ ಬರೆದಿದ್ದೇನೆ. ಈಗ ನನ್ನ ವಿರುದ್ಧ ಲಂಚ ನೀಡಿರುವುದು ತಪ್ಪು ಮತ್ತು ಸರ್ಕಾರದ ನಿಯಮಾವಳಿಗೆ ವಿರುದ್ಧವಾಗಿ ನಡೆದುಕೊಂಡಿದ್ದೀರಿ ಎಂದು ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಿದ್ದಾರೆ. ಶಾಸಕ ಬಸವರಾಜ ದಡೇಸುಗೂರು ಹಾಗೂ ಜಿ.ಪಂ. ಸಿಇಒ ಜಿಯಾ ತರನ್ನುಮ್‌ ಅವರ ಒತ್ತಡದಿಂದಾಗಿ ತಾ.ಪಂ. ಇಒ ಅವರು ದೂರು ನೀಡಿದ್ದಾರೆ. ಇದರಿಂದ ಮನನೊಂದಿದ್ದೇನೆ ಎಂದರು.

ಏನಿದು ವಿವಾದ?

- ಕಾರಟಗಿ ತಾಲೂಕಿನ ಮುಷ್ಟೂರು ಗ್ರಾ.ಪಂ.ಗೆ ಗುತ್ತಿಗೆದಾರನಿಂದ ಸಾಮಗ್ರಿ ಪೂರೈಕೆ
- 15 ಲಕ್ಷ ರು.ನಲ್ಲಿ. 4.88 ಲಕ್ಷ ಮಾತ್ರ ಗುತ್ತಿಗೆದಾರನಿಗೆ ಬಿಲ್‌ ಹಣ ಪಾವತಿ ಸಿದ್ದಾರೆ
- ಪರ್ಸೆಂಟೇಜ್‌ ನೀಡಿದ್ದರೂ ಇನ್ನಷ್ಟು ಕೇಳುತ್ತಿದ್ದಾರೆ: ಮೋದಿಗೆ ಗುತ್ತಿಗೆದಾರ ದೂರು
- ಲಂಚ ನೀಡಿದ್ದು ತಪ್ಪೆಂದು ಈಗ ನನ್ನ ವಿರುದ್ಧವೇ ಕೇಸ್‌ ಹಾಕಿದ್ದಾರೆ: ಗುತ್ತಿಗೆದಾರ
 

click me!