Crop Insurance Golmaal: ಬೆಳೆ ವಿಮೆ ಕಂತು ಕಟ್ಟಿದ ರೈತ​ರಿ​ಗಿಲ್ಲ ಪರಿ​ಹಾ​ರ..!

By Kannadaprabha NewsFirst Published Dec 17, 2021, 12:17 PM IST
Highlights

*  ಕಾಣದ ಕೈಗ​ಳಿಂದ ಯೋಜನೆ ದುರ್ಬ​ಳ​ಕೆ
*  ಅಕ್ರಮ ನಡೆ​ದರೂ ಕ್ರಮ ಕೈಗೊ​ಳ್ಳದ ಅಧಿ​ಕಾ​ರಿ​ಗ​ಳು
*  ಒಂದೊಂದಾಗಿ ಬೆಳಕಿಗೆ ಬರುತ್ತಿರುವ ಮೋಸದ ಪ್ರಕರಣಗಳು
 

ಗದಗ/ಡಂಬಳ(ಡಿ.17):  ಡಂಬಳ ಹೋಬಳಿ ವ್ಯಾಪ್ತಿಯ ರೈತರು(Farmers) ಪ್ರಾಮಾ​ಣಿ​ಕ​ವಾಗಿ ಬೆಳೆ ವಿಮೆ(Crop Insurance) ಕಂತು ಕಟ್ಟಿ​ದರೂ ಪರಿ​ಹಾರ ಇನ್ನೂ ಸಿಕ್ಕಿಲ್ಲ. ಆದರೆ ಬೆಳೆ ವಿಮೆ ಮಾಡಿ​ಸ​ದ​ವರ ಹೆಸ​ರಲ್ಲೂ ಕಾಣದ ಕೈಗಳ ಕೈವಾಡ ಇದ್ದು, ಫಸಲ್‌ ಬಿಮಾ ಯೋಜ​ನೆ​ಯ​ನ್ನು ದುರ್ಬ​ಳಕೆ ಮಾಡಿ​ಕೊಂಡ ಪ್ರಕ​ರಣ ತಡ​ವಾಗಿ ಬೆಳ​ಕಿಗೆ ಬಂದಿ​ದೆ. ಪ್ರಕ​ರ​ಣ​ಕ್ಕೆ ಸಂಬಂಧಿಸಿ ಸಮಗ್ರ ತನಿಖೆ ನಡೆಸಿ ರೈತರಿಗೆ ನ್ಯಾಯ ಒದಗಿಸಲು ಆಗ್ರ​ಹಿಸಿ ರೈತರೊಬ್ಬರು ಪ್ರಸಕ್ತ ಸಾಲಿನ ಜುಲೈ ತಿಂಗಳಲ್ಲಿಯೇ ಮನವಿ ಸಲ್ಲಿಸಿದ್ದರು. ಈ ಪ್ರಕ​ರ​ಣ​ವೀಗ ಮುನ್ನೆ​ಲೆಗೆ ಬಂದಿ​ದ್ದು, ಕೋಟ್ಯಂತರ ರು. ಗೋಲ್‌​ಮಾಲ್‌ ಆಗಿ​ರುವ ಶಂಕೆ ವ್ಯಕ್ತ​ವಾ​ಗಿ​ದೆ.

ಏನಿದು ಹೊಸ ಸಮಸ್ಯೆ?:

ಯೋಜನೆ ದುರ್ಬ​ಳ​ಕೆ​ಯಾದ ಬಗ್ಗೆ ಮುಂಡರಗಿ ತಹಸೀಲ್ದಾರ್‌ ಹಾಗೂ ಜಿಲ್ಲಾಡಳಿತಕ್ಕೆ ಕಂದಾಪುರ ಗ್ರಾಮದ ರೈತ ಬಸವರಡ್ಡಿ, ಇನ್ನಿತರರು ಮನವಿ ಸಲ್ಲಿಸಿದ್ದಾರೆ. ಡಂಬಳ ಹೋಬಳಿ ವ್ಯಾಪ್ತಿಯಲ್ಲಿ ಯಾರದೋ ರೈತರ ಹೆಸರಿನಲ್ಲಿ ಇನ್ನ್ಯಾರೋ ವಿಮಾ ಕಂತು ಭರ್ತಿ ಮಾಡಿ ಹಣ ಲಪಟಾಯಿಸಿದ್ದಾರೆ. ಆದರೆ ಇದಕ್ಕಿಂತಲೂ ಮೊದಲೇ ತಾವು ಕಳೆದ ಜು. 31ರಂದೇ ಮನವಿ ಸಲ್ಲಿಸಿ ಸತತ 3 ವರ್ಷಗಳಿಂದ ಫಸಲ್‌ ಬಿಮಾ(Fasal Bima Yojana) ಕಂತು ತುಂಬುತ್ತಾ ಬಂದಿದ್ದೇವೆ. ಪ್ರಸಕ್ತ ಸಾಲಿನಲ್ಲಿಯೂ ತುಂಬಿದ್ದೇವೆ. ಈ ವರ್ಷ ಅತಿಯಾದ ಮಳೆಯಾಗಿ ಬೆಳೆಹಾನಿಯಾಗಿದೆ. ಆದರೆ ಕದಾಂಪುರ, ಚುರ್ಚಿಹಾಳ ಗ್ರಾಮಗಳ ಜಮೀನುಗಳು ನೀರಾವರಿ ವ್ಯಾಪ್ತಿಗೆ ಬರುತ್ತವೆ. ಹೀಗಾಗಿ ವಿಮಾ ಪರಿಹಾರ ಬರುವುದಿಲ್ಲ ಎಂದು ವಿಮೆ ಕಂಪನಿ ಅಧಿಕಾರಿಗಳು ಹೇಳುತ್ತಾರೆ. ಆದರೆ ಯಾರದೋ ಹೆಸರಿನಲ್ಲಿ ಇನ್ನ್ಯಾರೋ ಬೆಳೆವಿಮೆ ಕಂತು ಕಟ್ಟಿ ಪರಿಹಾರ(compensation) ಪಡೆದರೂ ಅಧಿಕಾರಿಗಳು ಮಾತ್ರ ಅದರ ಬಗ್ಗೆ ಪರಿಶೀಲನೆ ನಡೆಸುತ್ತಿಲ್ಲ. ಇದನ್ನೆಲ್ಲ ಗಮನಿಸಿದರೆ ಅಧಿಕಾರಿಗಳು ಇದರಲ್ಲಿ ಶಾಮೀಲಾಗಿದ್ದಾರೆ ಎಂದು ರೈತರು ಆರೋ​ಪಿ​ಸಿ​ದ್ದಾ​ರೆ.

Crop Insurance Fraud: ರೈತರ ಬೆಳೆವಿಮೆ ಪರಿಹಾರ ಕಬಳಿಸಲು ಖದೀಮರ ಯತ್ನ

ಯಾವೆಲ್ಲ ಗ್ರಾಮ​ಗ​ಳು?:

ಡಂಬಳ ಹೋಬಳಿಯ ಡೋಣಿ, ಡಂಬಳ, ಹಳ್ಳಿಕೇರಿ, ಹಳ್ಳಿಗಡಿ, ಪೇಠಾ ಆಲೂರ, ಬರದೂರ ಮೇವುಂಡಿ, ಯಕ್ಲಾಸಪುರ, ಗುಡ್ಡದಬೂದಿಹಾಳ, ಮುರಡಿ, ಶಿವಾಜಿ ನಗರ, ಕದಾಂಪುರ, ಚಿಕ್ಕವಡ್ಡಟ್ಟಿ, ಡೋಣಿ ತಾಂಡ, ಹೈತಾಪುರ, ವೆಂಕಟಾಪುರ ಮುಂತಾದ ಗ್ರಾಮಗಳಲ್ಲಿ ಈ ರೀತಿಯ ಮೋಸದ ಪ್ರಕರಣಗಳು ಒಂದೊಂದಾಗಿ ಬೆಳಕಿಗೆ ಬರುತ್ತಿದ್ದು, ಇದರಲ್ಲಿ ದೊಡ್ಡ ಸಣ್ಣ ಎನ್ನುವ ಭೇದಭಾವವಿಲ್ಲದೇ ಎಲ್ಲ ಅಧಿಕಾರಿಗಳು, ಸಿಬ್ಬಂದಿ ಶಾಮೀಲಾಗಿದ್ದಾರೆ ಎನ್ನುವುದು ರೈತರ ಗಂಭೀರ ಆರೋಪ.

ಕೆಲವು ಪ್ರಮುಖ ಅಧಿಕಾರಿಗಳೊಂದಿಗೆ ಶಾಮೀಲಾಗಿರುವ ಏಜೆಂಟರು, ಶ್ರೀಮಂತರು, ಸ್ವಜಾತಿಯ ರೈತರನ್ನು ಮಾತ್ರ ಗುರುತಿಸಿ ಬೆಳೆ ವಿಮೆ ಪರಿಹಾರ ಬಂದ ಮೇಲೆ ಶೇ. 30ರಷ್ಟು ರೈತರಿಗೆ ನೀಡುವುದು, ಇನ್ನುಳಿದ ಶೇ. 70ರಷ್ಟು ಹಣವನ್ನು ಏಜೆಂಟರಿಗೆ ನೀಡಬೇಕು ಎನ್ನುವ ಅಲಿಖಿತ ಒಪ್ಪಂದ ಮಾಡಿದ್ದಾರೆ. ರೈತರ ಹೊಲದಲ್ಲಿ ಬೆಳೆಯದೇ ಇದ್ದರೂ ಮೆಣಸಿನಕಾಯಿ ಸೇರಿದಂತೆ ಖಾತ್ರಿಯಾಗಿ ಯಾವ ಬೆಳೆ ವಿಮೆ ಪರಿಹಾರ ಬರುತ್ತದೆಯೋ ಅದೇ ಬೆಳೆಗೆ ವಿಮಾ ಕಂತು ಭರ್ತಿ ಮಾಡಿದ್ದಾರೆ ಎಂಬ ಆರೋಪ ರೈತರಿಂದ ಕೇಳಿಬಂದಿದೆ.

Crop Insurance: ವಿಮೆ ಮಾಡಿಸುವ ಮುನ್ನವೇ ಬೆಳೆ ಹಾನಿ..!

ಕೃಷಿ ಇಲಾಖೆಗೆ ವಿಮಾ ಜಮೆ​ಯಾದ ಮಾಹಿತಿ ಮಾತ್ರ ಬರುತ್ತದೆ. ಆದರೆ ಕಂಪನಿಯವರಿಗೂ ನಮಗೆ ಯಾವುದೇ ಸಂಬಂಧ ಇಲ್ಲ. ರೈತರು ತಾವು ಬೆಳೆದ ಬೆಳೆಗಳಿಗೆ(Crop) ಬೆಳೆವಿಮೆ ತುಂಬುತ್ತಾರೆ. ಅದರ ಪ್ರಕಾರ ಬೆಳೆ ಜಿಪಿಎಸ್‌(GPS) ಆಧರಿಸಿ ಬೆಳೆ ವಿಮೆ ರೈತರಿಗೆ ಜಮೆ ಆಗುತ್ತದೆ ಅಂತ ಮುಂಡರಗಿ ಕೃಷಿ ಅಧಿಕಾರಿ ವೆಂಕಟೇಶ ಮೂರ್ತಿ ತಿಳಿಸಿದ್ದಾರೆ. 

ವಿಮೆ ವಿಷಯವಾಗಿ ಜಿಲ್ಲಾದ್ಯಂತ ಭಾರಿ ಗೋಲ್‌ಮಾಲ್‌ ಆಗಿದೆ. ಎಸಿಬಿ ದಾಳಿಯಲ್ಲಿ ಸಿಕ್ಕು 7 ಕೋಟಿಗೂ ಅಧಿಕ ಆಸ್ತಿ ಹೊಂದಿದ್ದ, ಈ ಹಿಂದೆ ಗದಗ ಕೃಷಿ ಇಲಾಖೆ ಜಂಟಿ ನಿರ್ದೇಶಕರಾಗಿದ್ದ ಅಧಿ​ಕಾ​ರಿಯ ಸಂಪತ್ತು ಹೆಚ್ಚಿತ್ತು. ಕೂಡಲೇ ಜಿಲ್ಲಾಡಳಿತ ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಅಂತ ಮುಂಡರಗಿ ಹೋರಾಟಗಾರ ವೈ.ಎನ್‌.ಗೌಡರ ಹೇಳಿದ್ದಾರೆ. 
 

click me!