ಕಳೆದ 25 ವರ್ಷಗಳಿಂದ ಈ ಭಾಗದ ರೈತರು ನೀರಾವರಿ ಯೋಜನೆಗಳ ಬಗ್ಗೆ ಅತೀ ಆಶಯ ಹೊಂದಿದ್ದರು. ಅದರಂತೆಯೇ ಈಗ ಅವರ ಆಶಯ ಈಡೇರಿದ್ದು, ಸತ್ತಿಗೇರಿ ಏತ ನೀರಾವರಿ ಯೋಜನೆಯ ಕಾಮಗಾರಿಗೆ ಭೂಮಿ ಪೂಜೆ ನೆರವೇರುವ ಮೂಲಕ ಅವರ ಕನಸು ಸಾಕಾರಗೊಳ್ಳುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಯರಗಟ್ಟಿ (ಏ.02): ಕಳೆದ 25 ವರ್ಷಗಳಿಂದ ಈ ಭಾಗದ ರೈತರು ನೀರಾವರಿ ಯೋಜನೆಗಳ ಬಗ್ಗೆ ಅತೀ ಆಶಯ ಹೊಂದಿದ್ದರು. ಅದರಂತೆಯೇ ಈಗ ಅವರ ಆಶಯ ಈಡೇರಿದ್ದು, ಸತ್ತಿಗೇರಿ ಏತ ನೀರಾವರಿ ಯೋಜನೆಯ ಕಾಮಗಾರಿಗೆ ಭೂಮಿ ಪೂಜೆ ನೆರವೇರುವ ಮೂಲಕ ಅವರ ಕನಸು ಸಾಕಾರಗೊಳ್ಳುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು. ಇಲ್ಲಿಗೆ ಸಮೀಪದ ಸತ್ತಿಗೇರಿ ಗ್ರಾಮದಲ್ಲಿ ಕರ್ನಾಟಕ ರಾಜ್ಯ ನೀರಾವರಿ ನಿಗಮದಡಿಯಲ್ಲಿ ₹546 ಕೋಟಿ ಮೊತ್ತದ ಏತ ನೀರಾವರಿ ಯೋಜನೆ ಕಾಮಗಾರಿಗೆ ಭೂಮಿಪೂಜೆ ನೇರವೇರಿಸಿ ಮಾತನಾಡಿದರು.
ಯರಗಟ್ಟಿ ತಾಲೂಕಿನ 11 ಗ್ರಾಮಗಳ 6878 ಹೆಕ್ಟರ್ (17000 ಎಕರೆ) ಜಮೀನುಗಳು ಎತ್ತರ ಪ್ರದೇಶದಲ್ಲಿರುವ ಹಿನ್ನೆಲೆಯಲ್ಲಿ ಘಟಪ್ರಭಾ ಯೋಜನೆ, ಮಲಪ್ರಭಾ ಯೋಜನೆ, ವೀರಭದ್ರೇಶ್ವರ ಏತ ನೀರಾವರಿ ಯೋಜನೆ ಹಾಗೂ ರಾಮೇಶ್ವರ ಏತ ನೀರಾವರಿ ಯೋಜನೆ ಒಳಪಡದೇ ಸಂಪೂರ್ಣವಾಗಿ ನೀರಾವರಿ ಸೌಲಭ್ಯದಿಂದ ವಂಚಿತವಾಗಿತ್ತು. ಇದನ್ನು ಅರಿತು ಶಾಸಕ ವಿಶ್ವಾಸ ವೈದ್ಯ ಅವರ ಸತತ ಪ್ರಯತ್ನದಿಂದ ಇಂದು ಈ ಕಾಮಗಾರಿ ಪೂಜೆ ನೆರವೇರಿಸಿರುವುದು ನನಗೆ ಸಂತೋಷ ತಂದಿದೆ ಎಂದರು.
ಗೋಕಾಕ ತಾಲೂಕಿನ ತಳಕಟನಾಳ ಗ್ರಾಮದ ಘಟಪ್ರಭಾ ನದಿಯಿಂದ ಮಳೆಗಾಲದಲ್ಲಿ ಮುಂಗಾರು ಬೆಳೆಗಾಗಿ 1 ಟಿಎಂಸಿ ನೀರನ್ನು ಉಪಯೋಗಿಸಿಕೊಂಡು ಬೆಳಗಾವಿ ಜಿಲ್ಲೆಯ ಯರಗಟ್ಟಿ ತಾಲೂಕಿನ 11 ಗ್ರಾಮಗಳ ಒಟ್ಟು ಸುಮಾರು 6878 ಹೆಕ್ಟೇರ್ ಜಮೀನಿಗೆ ನೀರಾವರಿ ಕಲ್ಪಿಸಲು ಯೋಜಿಸಲಾಗಿದೆ ಎಂದು ತಿಳಿಸಿದರು. ಶಾಸಕ ವಿಶ್ವಾಸ ವೈದ್ಯ ಮಾತನಾಡಿ, ಸುಮಾರು 25 ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ನೀರಾವರಿ ಯೋಜನೆಯು ಇಂದು ನಮ್ಮ ನಾಯಕರಾದ ಸತೀಶ ಜಾರಕಿಹೊಳಿ ಅವರಿಂದ ವಿದ್ಯುಕ್ತವಾಗಿ ಚಾಲನೆಗೊಂಡಿದೆ. ಈ ಭಾಗದ ರೈತರ ಕನಸು ಸಾಕಾರಗೊಂಡಿದೆ. ನೂತನ ತಾಲೂಕಿನ ಯರಗಟ್ಟಿಗೆ ಉಳಿದ ಸರ್ಕಾರಿ ಕಚೇರಿಗಳನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು. ಸತ್ತಿಗೇರಿ ಗ್ರಾಮಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರ ಪ್ರಾರಂಭಿಸಲಾಗುವುದು ಎಂದು ಭರವಸೆ ನೀಡಿದರು.
ಶಾಸಕ ಯತ್ನಾಳ್ ಕಾಂಗ್ರೆಸ್ಗೆ ಸೂಟ್ ಆಗಲ್ಲ: ಸಚಿವ ಸತೀಶ್ ಜಾರಕಿಹೊಳಿ
ಈ ವೇಳೆ ಭಾಗೋಜಿಕೊಪ್ಪದ ಮಠದ ಶಿವಲಿಂಗ ಮುರುಘರಾಜೇಂದ್ರ ಸ್ವಾಮೀಜಿ, ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಕೊರಕೊಪ್ಪದ ರೇವಣ್ಣ ಸಿದ್ದೇಶ್ವರ ಶರಣರು ಸಾನ್ನಿಧ್ಯ ವಹಿಸಿದ್ದರು. ಕಿತ್ತೂರ ಶಾಸಕ ಬಾಬಾಸಾಹೇಬ ಪಾಟೀಲ, ತಹಸೀಲ್ದಾರ್ ಎಂ.ವಿ.ಗುಂಡಪ್ಪಗೋಳ, ಎಪಿಎಂಸಿ ಅಧ್ಯಕ್ಷ ನೀಲಕಂಠ ಸಿದ್ದಬಸವನವರ, ರವೀಂದ್ರ ಯಲಿಗಾರ, ಸವದತ್ತಿ ಎಪಿಎಂಸಿ ಅಧ್ಯಕ್ಷ ಚಂದ್ರು ಪೂಜೇರ, ಉಮೇಶ ಬಾಳಿ, ಶಂಕರ ಇಟ್ನಾಳ, ಬಂಗಾರೆಪ್ಪ ಹರಳಿ, ಪ್ರಕಾಶ ವಾಲಿ, ಉಮೇಶ ಮಾಗುಂಡನವರ, ಮಲ್ಲಿಕಸಾಬ್ ಬಾಗವಾನ, ಶ್ರೀಶೈಲ ಸಂಗಪ್ಪನವರ, ಗೋಪಾಲ ದಳವಾಯಿ, ದೀಪಾ ಸಂಗಪ್ಪನವರ, ಗ್ರಾಪಂ ಅಭಿವೃದ್ಧಿ ಅಧಿಕಾರಿ ಎ.ಬಿ.ಬಂಗಾರಿ, ಕಾಂಗ್ರೇಸ್ ಪಕ್ಷದ ಕಾರ್ಯಕರ್ತರು ಮುಂತಾದವರು ಇದ್ದರು.