ಬಾಗಲಕೋಟೆ: ಬಾರದ ಮುಂಗಾರು ಮಳೆ, ಆಕಾಶದತ್ತ ಅನ್ನದಾತರ ಚಿತ್ತ..!

Published : Jun 24, 2023, 10:00 PM IST
ಬಾಗಲಕೋಟೆ: ಬಾರದ ಮುಂಗಾರು ಮಳೆ, ಆಕಾಶದತ್ತ ಅನ್ನದಾತರ ಚಿತ್ತ..!

ಸಾರಾಂಶ

ಜೂನ್‌ ಮೊದಲ ವಾರದಲ್ಲಿ ಮುಂಗಾರು ಮಳೆ ಆರಂಭವಾಗಬೇಕಿತ್ತು. ಆದರೆ ಇನ್ನು ಮುಂಗಾರು ಮಳೆ ಆರಂಭವಾಗಿಲ್ಲ. ಇದರಿಂದ ರೈತರ ಮುಖದಲ್ಲಿ ಬರಗಾಲ ಛಾಯೆ ಆವರಿಸಿದೆ. ಯುಗಾದಿಗೆ ಹೊಸ ಮಳೆಗಾಲ ಆರಂಭವಾಗಿದ್ದರೂ ಅಲ್ಪ ಸ್ವಲ್ಪ ಮಳೆಯಿಂದ ಭೂಮಿಯನ್ನು ಉಳುಮೆ ಮಾಡಿ ರೈತರು ಬಿತ್ತನೆಗೆ ಸಜ್ಜಾಗಿದ್ದರು. ಬೀಜ ಮತ್ತು ಗೊಬ್ಬರವನ್ನು ಖರೀದಿಸಿ ರೈತರು ಕೈಕಟ್ಟಿ ಕುಳಿತುಕೊಂಡಿದ್ದಾರೆ. 

ಮಹೇಶ ಆರಿ

ಮಹಾಲಿಂಗಪುರ(ಜೂ.24):  ಮುಂಗಾರು ಆರಂಭಗೊಂಡು 15 ದಿನ ಕಳೆದರೂ ಇನ್ನೂ ಮಳೆರಾಯನ ದರ್ಶನವಿಲ್ಲ. ಮಳೆಯನ್ನೇ ನಂಬಿ ಬಿತ್ತನೆಗೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದ ಅನ್ನದಾತನಿಗೆ ಮಳೆ ಬರದೇ ಇರುವುದು ಸಿಡಿಲಾಘಾತ ಉಂಟು ಮಾಡಿದೆ. ಹೀಗಾಗಿ ಇನ್ನೂ ಮುಂದಾದರೂ ಮಳೆ ಬರಬಹುದು ಎಂಬ ನಿರೀಕ್ಷೆಯಲ್ಲೇ ಆಕಾಶದತ್ತ ಮುಖ ಮಾಡಿ ಕುಳಿತುಕೊಂಡಿದ್ದಾರೆ.

ಜೂನ್‌ ಮೊದಲ ವಾರದಲ್ಲಿ ಮುಂಗಾರು ಮಳೆ ಆರಂಭವಾಗಬೇಕಿತ್ತು. ಆದರೆ ಇನ್ನು ಮುಂಗಾರು ಮಳೆ ಆರಂಭವಾಗಿಲ್ಲ. ಇದರಿಂದ ರೈತರ ಮುಖದಲ್ಲಿ ಬರಗಾಲ ಛಾಯೆ ಆವರಿಸಿದೆ. ಯುಗಾದಿಗೆ ಹೊಸ ಮಳೆಗಾಲ ಆರಂಭವಾಗಿದ್ದರೂ ಅಲ್ಪ ಸ್ವಲ್ಪ ಮಳೆಯಿಂದ ಭೂಮಿಯನ್ನು ಉಳುಮೆ ಮಾಡಿ ರೈತರು ಬಿತ್ತನೆಗೆ ಸಜ್ಜಾಗಿದ್ದರು. ಬೀಜ ಮತ್ತು ಗೊಬ್ಬರವನ್ನು ಖರೀದಿಸಿ ರೈತರು ಕೈಕಟ್ಟಿ ಕುಳಿತುಕೊಂಡಿದ್ದಾರೆ. ಮುಂಗಾರು ಬಿತ್ತನೆಗೆ ರೋಹಿಣಿ ಮಳೆಯನ್ನೇ ರೈತರು ನಂಬಿದ್ದರು. ಆಕಾಶದಲ್ಲಿ ಮೋಡಗಳು ಕರಿಗಟ್ಟದೇ ಬರಿ ಗಾಳಿಬಿಸಿ ಮೋಡಗಳು ಬಂದು ಮಾಯವಾಗುವ ದೃಶ್ಯ ಸಾಮಾನ್ಯವಾಗಿದೆ. ನೈಋುತ್ಯ ಮುಂಗಾರು ಮೃಗಶಿರಾ ಮಳೆ ಆರಂಭವಾಗಬೇಕಿತ್ತು. ಆದರೆ ವಾತಾವರಣ ಬಿಸಿಲಿನಿಂದ ಬೇಸಿಗೆಯಂತಾಗಿದೆ.

ಬಾಗಲಕೋಟೆ: ಗೃಹಜ್ಯೋತಿ, ಹೆಸರು ಬದಲಿಸಲು ಹಣ ಸುಲಿಗೆ

ಇಡೀ ದೇಶದಲ್ಲಿ ಮುಂಗಾರು ಮಳೆ ಆರಂಭ ವಿಳಂಬವಾಗಿದೆ. ಆದ್ದರಿಂದ ದೇಶದ ಆಹಾರ ಉತ್ಪಾದನೆ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ. ಮುಂಗಾರು ಬಿತ್ತನೆ ವಿಳಂಬ ಆದರೆ ಹಿಂಗಾರಿಗೂ ಹೊಡೆತ ಬೀಳುತ್ತದೆ. ಇದರಿಂದ ಬೆಳೆ ಇಳುವರಿ ಕಡಿಮೆ ಆಗುತ್ತದೆ. ಕೆಲವೊಂದು ಬೆಳೆಗಳ ಬಿತ್ತನೆ ತಿಥಿ ಮಿತಿಯಲ್ಲಿ ವ್ಯತ್ಯಾಸವಾದರೆ ಇಳುವರಿ ಕಡಿಮೆ ಆಗುತ್ತದೆ ಎಂಬುದು ರೈತರ ಆತಂಕವಾಗಿದೆ.

ಕೃಷಿ ಚಟುವಟಿಕೆ ಸ್ತಬ್ಧ:

ಗಾಯದ ಮೇಲೆ ಬರೆ, ಬರೆ ಮೇಲೆ ಮತ್ತೆ ಉಪ್ಪು ಸವರುವುದು ಎನ್ನುವಂತೆ ಈ ವಷÜರ್‍ವೂ ಬರಗಾಲ ಎದುರಾಗುವ ಸಾಧ್ಯತೆ ದಟ್ಟವಾಗಿದೆ. ರಾಜ್ಯದಲ್ಲಿ ಅರ್ಧದಷ್ಟು ಮುಂಗಾರು ಮಳೆಯ ಕಾಲ ಮುಗಿದಿದೆ. ಜೂನ್‌ನಲ್ಲಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆಯ ಕೊರತೆ ಎದ್ದು ಕಾಣುತ್ತಿದೆ. ಕೃಷಿ ಚಟುವಟಿಕೆಗಳು ಸ್ತಬ್ಧವಾಗಿವೆ. ಇದ ಬೆಳೆ ಉಳಿದರೆ ಸಾಕು ಎನ್ನುವ ಮನಸ್ಥಿತಿಗೆ ಬಂದು ನಿಂತ ರೈತರು. ರಾಜ್ಯದಲ್ಲಿ ಈ ಶೇ.40ರಷ್ಟು ಮಳೆಯ ಕೊರತೆಯಾಗಿದೆ. ಮುಂಗಾರು ಕಣ್ಣಾಮುಚ್ಚಾಲೆಯಿಂದ ಕೃಷಿ ಚಟುವಟಿಕೆ ಆರಂಭಿಸೋಕೆ ನೇಗಿಲಯೋಗಿ ಮೀನಾಮೇಷ ಎನಿಸುತ್ತಿದ್ದಾರೆ.

ಬಾಗಲಕೋಟೆ: ಕೃಷ್ಣನ ಒಡಲು ಕ್ಷೀಣ; ದರ್ಶನ ನೀಡಿದ ಈಶ್ವರ..!

ಅರಣ್ಯ ಬೆಳೆಸಿ:

ಕಾಡು ಇದ್ದರೆ ನಾಡು ಕಾಡು ಇಲ್ಲದಿದ್ದರೆ ಸುಡುಗಾಡು ಎಂಬ ನಾನ್ನುಡಿಯಂತೆ ಬರ ತಡೆಯುವ ಕ್ರಮವಾಗಿ ಹೆಚ್ಚು ಹೆಚ್ಚು ಗಿಡಗಳನ್ನು ಬೆಳೆಸಿ ಅರಣ್ಯ ಬೆಳೆಯುವುದರಿಂದ ವಾತಾವರಣ ಸಮತೋಲನ ಮತ್ತು ಮಳೆ ಹೆಚ್ಚಾಗುತ್ತದೆ. ಇದರಿಂದ ಉಷ್ಣತೆ ಕಡಿಮೆಯಾಗುತ್ತದೆ. ಇದರಿಂದ ಸಕಲ ಜೀವರಾಶಿಗಳು ಬದುಕಲು ನೇರವಾಗುತ್ತದೆ. ಪ್ರತಿಯೊಬ್ಬ ಪ್ರಜೆಯುವು ವರ್ಷಕ್ಕೆ ಕನಿಷ್ಠ ಮೂರು ಗಿಡ ನೆಟ್ಟು ಬೆಳೆಸಬೇಕೆಂಬ ಕಠಿಣ ಕಾನೂನು ಜಾರಿಮಾಡಿ ಅರಣ್ಯ ಬೆಳವಣಿಗೆಗೆ ಸರ್ಕಾರ ದಿಟ್ಟನಿರ್ಧಾರ ತೆಗೆದುಕೊಳ್ಳುವುದು ಇಂದಿನ ಅವಶ್ಯವಾಗಿದೆ.

ಅಂತರ್ಜಲ ಪಾತಾಳಕ್ಕೆ

ಮಳೆಯಾದೇ ಇರುವ ಕಾರಣಕ್ಕೆ ಅಂತರ್ಜಲಮಟ್ಟ ಭಾರೀ ಕುಸಿತ ಕಂಡಿದೆ. ಈ ಹಿನ್ನೆಲೆಯಲ್ಲಿ ಅಲ್ಲಲ್ಲಿ ನೀರು ಕೊಡುತ್ತಿದ್ದ ಬೋರ್‌ವೇಲ್‌ಗಳು ಸಹಿತ ಬಂದ್‌ ಆಗಿವೆ. ಹೀಗಾಗಿ ಜನರು ನೀರಿಗಾಗಿ ಪರಿತಪಿಸುವಂತಾಗಿದೆ. ಕನಿಷ್ಠ ಒಂದು ಸಾವಿರ ಅಡಿ ಬೋರ್‌ ಕೊರೆದರು ನೀರು ಸಿಗುವ ಸಾಧ್ಯತೆ ಕಮ್ಮಿಯಾಗಿದೆ. ಬಹುತೇಕ ಈಗಿರುವ ವಾಣಿಜ್ಯ ಬೆಳೆಗಳು ಒಣಗಲು ಪ್ರಾರಂಭವಾಗಿವೆ. ಹೀಗೆ ಒಂದೆರಡು ವಾರ ಮುಂದುವರೆದರೆ ಅರ್ಧದಷ್ಟು ಬೆಳೆ ಒಣಗಿ ಹೋಗಲಿದೆ.
ಈ ಬಾರಿ ಮುಂಗಾರು ಮಳೆ ವಿಳಂಬದಿಂದಾಗಿ ಬರ ಅವರಿಸುವ ಸಾಧ್ಯತೆ ಹೆಚ್ಚಾಗಿದೆ. ಇದರಿಂದ ದೇಶದ ಆಹಾರ ಕೊರತೆ ಆಗುವ ಲಕ್ಷಣ ಇದೆ. ಅಲ್ಲದೆ ಇದೇ ರೀತಿ ಮಳೆರಾಯ ಕೈಕೊಡುತ್ತಾ ಹೋದರೆ ರೈತರ ಬಾಳು ಕಂಗಾಲಾಗಿ ಹೋಗುತ್ತದೆ ಅಂತ ರೈತ ಗಂಗಾಧರ ಮೇಟಿ ತಿಳಿಸಿದ್ದಾರೆ.

PREV
Read more Articles on
click me!

Recommended Stories

ಬೆಂಗಳೂರು ಕಬ್ಬನ್‌ಪಾರ್ಕ್‌ ಪುಷ್ಪ ಪ್ರದರ್ಶನಕ್ಕೆ ಇಂದು ತೆರೆ
ಪುಟಿನ್‌ಗೆ ಇಲ್ಲೇ ಎಲೆಕ್ಷನ್‌ ನಿಲ್ಲೋಕೆ ಟಿಕೆಟ್‌ ಕೊಡ್ತಾರೆ ಅಂದ್ಕೊಂಡಿದ್ದೆ.. ಸಂತೋಷ್‌ ಲಾಡ್‌ ಲೇವಡಿ