ಕೋಲಾರ: ದರ ಕುಸಿತ, ಈಗ ಬಜ್ಜಿ ಮೆಣಸಿನಕಾಯಿ ಸರದಿ, ಸಂಕಷ್ಟದಲ್ಲಿ ಅನ್ನದಾತ..!

By Kannadaprabha NewsFirst Published Nov 15, 2023, 4:00 AM IST
Highlights

ಕಳೆದ ಎರಡು ಮೂರು ತಿಂಗಳಿಂದ ರೈತರು ಬೆಳೆದ ಯಾವುದೇ ಬೆಳೆಗೆ ಮಾರುಕಟ್ಟೆಯಲ್ಲಿ ಸೂಕ್ತವಾದ ಬೆಲೆ ಸಿಗುತ್ತಿಲ್ಲ. ಬೆಳೆ ತೆಗೆಯಲು ಖರ್ಚು ಮಾಡಿದ ಅಸಲು ಸಹ ವಾಪಸ್ ಬಾರದೆ ನಷ್ಟಕ್ಕೊಳಗಾಗುವಂತಾಗಿದೆ.

ಬಂಗಾರಪೇಟೆ(ನ.15): ಟೊಮೆಟೋ,ಚೆಂಡು ಹೂ ನಂತರ ಈಗ ಬಜ್ಜಿ ಮೆಣಸಿನಕಾಯಿ ಬೆಳೆಗಾರರಿಗೂ ದರ ಕುಸಿತದ ಬಿಸಿ ತಟ್ಟಿದೆ. ಬಜ್ಜಿ ಮೆಣಸಿನಕಾಯಿ ಬೆಳೆ ಬೆಳೆದು ಲಕ್ಷಾಂತರ ರು.ಗಳ ನಷ್ಟವನ್ನು ತಲೆ ಮೇಲೆ ಹೊರುವಂತಾಗಿದೆ.
ಕಳೆದ ಎರಡು ಮೂರು ತಿಂಗಳಿಂದ ರೈತರು ಬೆಳೆದ ಯಾವುದೇ ಬೆಳೆಗೆ ಮಾರುಕಟ್ಟೆಯಲ್ಲಿ ಸೂಕ್ತವಾದ ಬೆಲೆ ಸಿಗುತ್ತಿಲ್ಲ. ಬೆಳೆ ತೆಗೆಯಲು ಖರ್ಚು ಮಾಡಿದ ಅಸಲು ಸಹ ವಾಪಸ್ ಬಾರದೆ ನಷ್ಟಕ್ಕೊಳಗಾಗುವಂತಾಗಿದೆ.
ಚೆಂಡು ಹೂ ಬೆಳೆದು ಕೈ ಸುಟ್ಟುಕೊಂಡರು

ಶ್ರಾವಣ ಮಾಸದಲ್ಲಿ ಚೆಂಡು ಹೂವು ಬೆಳೆದ ರೈತರಿಗೆ ಬಂಪರ್ ಬೆಲೆ ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದರು, ಆದರೆ ಶ್ರಾವಣದಲ್ಲಿ ಚೆಂಡು ಹೂವನ್ನು ಕೇಳುವವರಿಲ್ಲದೆ ಅನೇಕ ರೈತರು ನೂರಾರು ಎಕರೆಯಲ್ಲಿ ಬೆಳೆದಿದ್ದ ಚೆಂಡೂವನ್ನು ಕಟಾವು ಮಾಡಿದರೂ ಕಟಾವು ಮಾಡಲು ಕೂಲಿಯಾಳುಗಳಿಗೆ ಹಣ ಕೊಡುವಷ್ಟೂ ಹಣ ಕೈ ಸೇರಲಿಲ್ಲ. ಅನೇಕ ರೈತರು ಹೂವನ್ನು ತೋಟಗಳಿಂದ ಕಟಾವು ಮಾಡದೆ ಬಿಟ್ಟಿದ್ದರು. ಇನ್ನೂ ಕೆಲ ರೈತರು ರಸ್ತೆಗಳಲ್ಲಿ ಚೆಲ್ಲಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು. ಬಳಿಕ ದಸಾರದಲ್ಲಾದರೂ ಚೆಂಡು ಹಾಗೂ ಸೇವಂತಿ ಹೂವು ಬೆಳೆದ ರೈತರನ್ನು ಕೈಹಿಡಿಯಬಹುದೆಂಬ ನಿರೀಕ್ಷೆಯೂ ಹುಸಿಯಾಗಿತ್ತು.

KGF​ನಲ್ಲಿ ಕೈಗಾರಿಕಾ ಟೌನ್ ಶಿಪ್ ನಿರ್ಮಾಣ, ಕೋಚಿಮುಲ್​ ವಿಭಜಿಸಲ್ಲ: ಸಿಎಂ ಸಿದ್ದರಾಮಯ್ಯ

ಈಗ ದೀಪಾವಳಿ ಹಬ್ಬ ಸಹ ಹೂವು ಬೆಳೆಗಾರರ ಕೈಹಿಡಿದಿಲ್ಲ. ದರ ಕುಸಿತದ ಸರದಿಗೆ ಈಗ ಬಜ್ಜಿ ಮೆಣಸಿನಕಾಯಿ ಸೇರಿದೆ. ತಾಲೂಕಿನ ಹಲವು ಹೋಬಳಿಗಳಲ್ಲಿ ಬಜ್ಜಿ ಮೆಣಸಿನಕಾಯಿ ಬೆಳೆ ಹಾಕಲಾಗಿದೆ, ಆದರೆ ಬೆಲೆ ಇಲ್ಲದೆ ಕಾಯಿ ಭೂತಾಯಿ ಮಡಿಲು ಸೇರುವಂತಾಗಿದೆ.

ಬಜ್ಜಿ ಮೆಣಸಿನಕಾಯಿ ದರ ಕೆಜಿಗೆ ₹8

ಬೂದಿಕೋಟೆ ಹೋಬಳಿಯ ದಿನ್ನೂರು ಗ್ರಾಮದ ನಾಗೇಶ್ ಎಂಬ ರೈತ ತನ್ನ ಎರಡು ಎಕರೆ ಜಮೀನಿನಲ್ಲಿ ಬಜ್ಜಿ ಮೆಣಸಿನಕಾಯಿ ಬೆಳೆ ಹಾಕಿದ್ದಾರೆ. ಎಕರೆಗೆ ೧ಲಕ್ಷ ವೆಚ್ಚವಾಗಿದೆ. ೨ ಲಕ್ಷ ಖರ್ಚು ಮಾಡಿ ಎರಡು ಎಕರೆಯಲ್ಲಿ ಬಜ್ಜಿ ಮೆಣಸಿನಕಾಯಿ ಬೆಳೆದಿದ್ದಾರೆ. ಒಂದು ಸಸಿಗೆ ೩ ರು. ತಗುಲುತ್ತದೆ. ಇದಲ್ಲದೆ ಬೆಳೆಗೆ ಔಷಧಿ ಸಿಂಪಡಿಸಿ ರೋಗ ತಗುಲದಂತೆ ಕಾಪಾಡಬೇಕು ಇಷ್ಟೆಲ್ಲಾ ಬೆಳೆ ರಕ್ಷಣೆ ಮಾಡಿ ಫಸಲನ್ನು ಮಾರುಕಟ್ಟೆಗೆ ಸಾಗಿಸಿದರೆ, ಮಾರುಕಟ್ಟೆಯಲ್ಲಿ ಕೆಜಿಗೆ ೮ ರು.ಗೆ ಕೇಳುತ್ತಾರೆ ಎಂದು ಹತಾಶೆ ವ್ಯಕ್ತಪಡಿಸಿದರು.

ಟೀಕಿಸುವವರಿಗೆ ಕೋಲಾರ ಜಿಲ್ಲಾಭಿವೃದ್ಧಿಯೇ ಉತ್ತರ: ಸಿಎಂ ಸಿದ್ದರಾಮಯ್ಯ

ಈ ಹಿಂದೆ ಬಜ್ಜಿ ಮೆಣಸಿನಕಾಯಿ ದರ ಕೆಜಿಗೆ ೨೦ ರು.ಗಳಿತ್ತು. ಈಗ ದಿಡೀರನೆ ಬೆಲೆ ಕುಸಿತ ಕಂಡಿರುವುದರಿಂದ ರೈತರಿಗೆ ಬೆಳೆಗೆ ಹಾಕಿರುವ ಬಂಡವಾಳ ಸಹ ವಾಪಸ್ ಬಾರದಂತಾಗಿದೆ. ಇದರಿಂದ ಆತಂಕಗೊಂಡಿರುವ ರೈತರು ಕಾಯಿ ಕೀಳದೆ ತೋಟದಲ್ಲೇ ಬಿಟ್ಟಿದ್ದಾರೆ. ಕಾಯಿ ಕಿತ್ತು, ಸಾಗಿಸಲು ಬೇಕಾಗುವಷ್ಟು ಹಣವೂ ಮಾರಾಟದಿಂದ ಬರುವುದಿಲ್ಲ. ಆದ್ದರಿಂದ ಕೆಲವು ರೈತರು ಬಜ್ಜಿ ಮೆಣಸಿನಕಾಯಿಗಳನ್ನು ಕೀಳದೆ ತೋಟದಲ್ಲಿಯೇ ಮಣ್ಣಾಗುವಂತೆ ಮಾಡಿದ್ದಾರೆ.
ಬೆಂಬಲ ಬೆಲೆ ನೀಡುವಂತೆ ಒತ್ತಾಯ

ಯಾವುದೇ ಬೆಳೆ ರೈತರ ಕೈಹಿಡಿಯದೆ ಕೈಕೊಡುತ್ತಿರುವುದರಿಂದ ಅನ್ನದಾತರು ಕೃಷಿಯಿಂದ ದೂರ ಉಳಿಯುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಕೂಡಲೆ ರೈತರ ನೆರವಿಗೆ ದಾವಿಸಿ ಬೆಂಬಲ ಬೆಲೆ ಘೋಷಿಸಬೇಕೆಂದು ಬೆಳೆಗಾರರು ಒತ್ತಾಯಿಸಿದ್ದಾರೆ.

click me!