ಪತ್ನಿ, ಅತ್ತೆ, ಮಾವನ ಕಾಟಕ್ಕೆ ಯುವಕ ಆತ್ಮಹತ್ಯೆ : ಎಲ್ಲವನ್ನೂ ರೆಕಾರ್ಡ್ ಮಾಡಿ ಇಟ್ಟ

By Kannadaprabha NewsFirst Published Nov 18, 2020, 1:25 PM IST
Highlights

ಕಲಹಕ್ಕೆ ಬೇಸತ್ತು ಯುವಕನೋರ್ವ ಆತ್ಮಹತ್ಯೆಗೆ ಶರಣಾದ ಘಟನೆ ತುಮಕೂರಿನಲ್ಲಿ ನಡೆದಿದೆ. ಸಾಯುವ ಮುನ್ನ ಎಲ್ಲವನ್ನು ರೆಕಾರ್ಡ್ ಮಾಡಿಟ್ಟಿದ್ದಾನೆ

ತುರುವೇಕೆರೆ (ನ.18):  ಪತ್ನಿ, ಅತ್ತೆ, ಮಾವನ ಕಿರುಕುಳ ತಾಳಲಾರದೇ ಯುವಕನೋರ್ವ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ರಂಗನಹಳ್ಳಿಯಲ್ಲಿ ನಡೆದಿದೆ.

ಗ್ರಾಮದ ಬಸವಯ್ಯರ ಪುತ್ರ ಲೋಕೇಶ್‌(28) ಮೃತ ದುರ್ದೈವಿ. ತಮ್ಮ ಸಂಬಂ​ಧಿ ಬೆಂಗಳೂರಿನ ಲಗ್ಗೆರೆಯಲ್ಲಿರುವ ರಾಜು ಧನಲಕ್ಷಿತ್ರ್ಮ ದಂಪತಿಯ ಎರಡನೇ ಮಗಳು ಹೇಮಾಳನ್ನು ಲೋಕೇಶ್‌ ಕಳೆದ ಎರಡುವರೆ ವರ್ಷದ ಹಿಂದೆ ಮದುವೆಯಾಗಿದ್ದ. ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಲೋಕೇಶ್‌ ಕೆಲಸ ಮಾಡುತ್ತಿದ್ದ. ಕೆಲ ತಿಂಗಳ ಕಾಲ ಅನ್ಯೋನ್ಯವಾಗಿದ್ದವಾಗಿದ್ದ ಸಂಸಾರದಲ್ಲಿ ಬಿರುಕು ಪ್ರಾರಂಭವಾಗಿತ್ತು.

ಪತ್ನಿ ಹೇಮಾಳ ಚಾಡಿ ಮಾತಿನಿಂದ ತನ್ನ ಮಗಳನ್ನು ಸಾಕಲು ಯೋಗ್ಯನಲ್ಲವೆಂದು ಅತ್ತೆ ಮಾವ ಹಂಗಿಸುತ್ತಿದ್ದರು. ಗಂಡ ಹೆಂಡತಿ ನೆಮ್ಮದಿಯಿಂದ ಸಂಸಾರ ಮಾಡಲು ಬಿಡುತ್ತಿಲ್ಲ ಎಂದು ಲೋಕೇಶ್‌ ತನ್ನ ಪೋಷಕರಿಗೆ ಹೇಳಿದ್ದ. ಕೆಲ ಸಂದರ್ಭದಲ್ಲಿ ಎರಡು ಕುಟುಂಬದ ಜಗಳ ಪೊಲೀಸ್‌ ಠಾಣೆಯ ಮೆಟ್ಟಿಲನ್ನೂ ಸಹ ಏರಿತ್ತು. ಹಿರಿಯರ ರಾಜಿ ಯತ್ನವೂ ನಡೆದಿತ್ತು. ಆದರೂ ಸಹ ಎರಡು ಕುಟುಂಬದಲ್ಲಿ ವೈಮನಸ್ಸು ಇದ್ದೇ ಇತ್ತು.

ವಿಷ ಸೇವನೆ:

ತನ್ನನ್ನು ಪದೇ ಪದೇ ಪತ್ನಿ, ಅತ್ತೆ ಮತ್ತು ಮಾವ ಹಂಗಿಸುತ್ತಲೇ ಇದ್ದಾರೆ. ತನಗೆ ಮಕ್ಕಳಿಲ್ಲ ಎಂದು ಮೂದಲಿಸುತ್ತಿದ್ದಾರೆ. ನನ್ನನ್ನು ನೆಮ್ಮದಿಯಿಂದ ಇರಲು ಬಿಡುತ್ತಿಲ್ಲ. ನನ್ನನ್ನು ಮಾವ ಕೊಲ್ಲುವುದಾಗಿ ಬೆದರಿಕೆ ಹಾಕುತ್ತಿದ್ದಾನೆ ಎಂದು ಆರೋಪಿಸಿ ಲೋಕೇಶ್‌ ವಿಷ ಸೇವನೆ ಮುನ್ನ ವಿಡಿಯೋ ರೆಕಾರ್ಡ್‌ ಮಾಡಿ ತನ್ನ ಕುಟುಂಬದ ಸದಸ್ಯರಿಗೆ ಮತ್ತು ಸ್ನೇಹಿತರಿಗೆ ಕಳಿಸಿ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳಿದ್ದಾನೆ.

ಠಾಣೆಗೆ ದೂರು:

ಬೆಂಗಳೂರಿನಿಂದ ತುರುವೇಕೆರೆಗೆ ಬಂದಿದ್ದ ಲೋಕೇಶ್‌ ಪೋಲಿಸ್‌ ಠಾಣೆಯ ಬಳಿಯೇ ವಿಷ ಸೇವನೆ ಮಾಡಿ ತಾನು ವಿಷ ಸೇವನೆ ಮಾಡಿರುವುದಾಗಿಯೂ, ತನ್ನ ಸಾವಿಗೆ ತನ್ನ ಪತ್ನಿ ಹೇಮಾ, ಅತ್ತೆ ಧನಲಕ್ಷಿತ್ರ್ಮ, ಮಾವ ರಾಜುವೇ ಕಾರಣ ಎಂದು ಲೋಕೇಶ್‌ ಪೊಲಿಸ್‌ ಠಾಣೆಗೆ ತೆರಳಿ ನೇರವಾಗಿ ಹೇಳಿ ದೂರಿದ್ದಾನೆ. ಇವನ ಪರಿಸ್ಥಿತಿ ಕಂಡ ಪೊಲಿಸರು ಕೂಡಲೇ ಪಕ್ಕದಲ್ಲೇ ಇದ್ದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೇ ಲೋಕೇಶ್‌ ಕೊನೆಯುಸಿರೆಳೆದಿದ್ದಾನೆ.

ನಟೋರಿಯಸ್ ರೌಡಿಶೀಟರ್ ಮಂಜನ ಮೇಲೆ ಫೈರಿಂಗ್ ...

ಲೋಕೇಶ್‌ಗೆ ರಾಜುವಿನ ಮೊದಲನೆ ಮಗಳನ್ನು ಮದುವೆಗೆ ಗೊತ್ತು ಮಾಡಲಾಗಿತ್ತು. ನಿಶ್ಚಿತಾರ್ಥವೂ ಮುಗಿದಿತ್ತು. ಆದರೆ ಮೊದಲ ಮಗಳು ಬೇರೊಬ್ಬನೊಂದಿಗೆ ಮದುವೆಯಾಗಿದ್ದರಿಂದ ಮನೆಯ ಗೌರವದ ಪ್ರಶ್ನೆ ಎಂದು ತನ್ನ ಎರಡನೇ ಮಗಳು ಹೇಮಾಳನ್ನು ಲೋಕೇಶ್‌ ಗೆ ಕೊಟ್ಟು ಮದುವೆ ಮಾಡಲಾಗಿತ್ತು. ಆದರೆ ಹೇಮಾಳಿಗೆ ಲೋಕೇಶ್‌ ನನ್ನು ಮದುವೆಯಾಗಲು ಇಷ್ಟವಿರದ ಕಾರಣ ತನ್ನ ತಮ್ಮನಿಗೆ ಇಲ್ಲದ ಕಿರುಕುಳ ನೀಡಿ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣರಾಗಿದ್ದಾರೆ ಎಂದು ಲೋಕೇಶ್‌ನ ಸಹೋದರ ಮಂಜುನಾಥ ಪೋಲಿಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ತನ್ನ ತಮ್ಮನ ಸಾವಿಗೆ ಕಾರಣರಾಗಿರುವ ಲೋಕೇಶ್‌ನ ಪತ್ನಿ ಹೇಮಾ, ಮಾವ ರಾಜು, ಅತ್ತೆ ಧನಲಕ್ಷಿತ್ರ್ಮ ಹಾಗೂ ಅವರೊಂದಿಗೆ ಕೈಜೋಡಿಸಿರುವ ಲಗ್ಗೆರೆಯ ಫೈನಾನ್ಷಿಯರ್‌ ಕುಮಾರ್‌ ಮತ್ತು ಮಹಿಳಾ ಸಂಘಟನೆಯ ಕಾರ್ಯಕರ್ತೆ ಜಯಲಕ್ಷ್ಮಿ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದಾರೆ.

ಸ್ಥಳೀಯ ಪೋಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

click me!