ಕಾರು ಅಡ್ಡಗಟ್ಟಿ 80 ಲಕ್ಷ ಎಗರಿಸಿದ ನಕಲಿ ಪೊಲೀಸರು!

Published : Jan 03, 2023, 05:50 AM IST
 ಕಾರು ಅಡ್ಡಗಟ್ಟಿ 80 ಲಕ್ಷ ಎಗರಿಸಿದ ನಕಲಿ ಪೊಲೀಸರು!

ಸಾರಾಂಶ

ಪೊಲೀಸರ ಸೋಗಿನಲ್ಲಿ ನಾಲ್ವರು ದುಷ್ಕರ್ಮಿಗಳು ಅಡಿಕೆ ಮಂಡಿ ಮಾಲಿಕನ ಕಾರನ್ನು ಅಡ್ಡಗಟ್ಟಿಚಾಲಕನನ್ನು ಹೆದರಿಸಿ .80 ಲಕ್ಷವನ್ನು ದೋಚಿ ಪರಾರಿ ಆಗಿರುವ ಘಟನೆ ವಿಲ್ಸನ್‌ಗಾರ್ಡನ್‌ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

 ಬೆಂಗಳೂರು (ಜ. 03):  ಪೊಲೀಸರ ಸೋಗಿನಲ್ಲಿ ನಾಲ್ವರು ದುಷ್ಕರ್ಮಿಗಳು ಅಡಿಕೆ ಮಂಡಿ ಮಾಲಿಕನ ಕಾರನ್ನು ಅಡ್ಡಗಟ್ಟಿಚಾಲಕನನ್ನು ಹೆದರಿಸಿ .80 ಲಕ್ಷವನ್ನು ದೋಚಿ ಪರಾರಿ ಆಗಿರುವ ಘಟನೆ ವಿಲ್ಸನ್‌ಗಾರ್ಡನ್‌ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಡಿ.27ರಂದು ಮಧ್ಯಾಹ್ನ 1.45ರ ಸುಮಾರಿಗೆ ಕೆ.ಎಚ್‌.ರಸ್ತೆ ಸಮೀಪ ಈ ಘಟನೆ ನಡೆದಿದೆ. ತುಮಕೂರು (Tumakur )  ಜಿಲ್ಲೆಯ ತವಡೇಹಳ್ಳಿ ಗ್ರಾಮದ ಅಡಿಕೆ ಮಂಡಿ ಮಾಲಿಕ ಮೋಹನ್‌ ಅವರ ಕಾರು ಚಾಲಕ ಚಂದನ್‌(28) ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ನಕಲಿ ಪೊಲೀಸರ (Police)  ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಡಿಕೆ ಮಂಡಿ ಮಾಲಿಕ ಮೋಹನ್‌ ಬಳಿ ಚಂದನ್‌ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ. ಡಿ.27ರಂದು ಬೆಳಗ್ಗೆ 9ಕ್ಕೆ ಮಾಲಿಕ ಮೋಹನ್‌, ಚಂದನ್‌ ಹಾಗೂ ಅಂಗಡಿಯ ಕೆಲಸಗಾರ ಕುಮಾರಸ್ವಾಮಿಯನ್ನು ಕರೆದು .80 ಲಕ್ಷ ನಗದು ಹಾಗೂ ಕಾರನ್ನು ನೀಡಿದ್ದರು. ಈ ಹಣವನ್ನು ತಮಿಳುನಾಡಿನ ಸೇಲಂಗೆ ತೆಗೆದುಕೊಂಡು ಹೋಗಿ ತಮಗೆ ಕರೆ ಮಾಡುವಂತೆ ಸೂಚಿಸಿದ್ದರು.

ಅದರಂತೆ ಚಂದನ್‌ ಮತ್ತು ಕುಮಾರಸ್ವಾಮಿ ಕಾರಿನಲ್ಲಿ ಹಣ ಇರಿಸಿಕೊಂಡು ಸೇಲಂನತ್ತ ಪ್ರಯಾಣ ಬೆಳೆಸಿದ್ದರು. ಮಧ್ಯಾಹ್ನ 1.45ರ ಸುಮಾರಿಗೆ ನಾಯಂಡಹಳ್ಳಿ, ಮೈಸೂರು ರಸ್ತೆ ಮುಖಾಂತರ ಕೆ.ಎಚ್‌.ರಸ್ತೆಗೆ ರಿವೋಲಿ ಜಂಕ್ಷನ್‌ ಬಳಿ ಸಿಗ್ನಲ್‌ಗಾಗಿ ಕಾಯುವಾಗ, ಪಕ್ಕದಲ್ಲೇ ಪೊಲೀಸ್‌ ಸ್ಟಿಕ್ಕರ್‌ ಅಂಟಿಸಿರುವ ಸ್ವಿಫ್‌್ಟಕಾರೊಂದು ಬಂದು ನಿಂತಿದೆ. ಕೂಡಲೇ ಕಾನ್‌ಸ್ಟೇಬಲ್‌ ಸಮಸ್ತ್ರದಲ್ಲಿದ್ದ ಇಬ್ಬರು ಲಾಠಿ ಹಿಡಿದು ಚಂದನ್‌ ಅವರ ಕಾರಿನ ಬಳಿ ಬಂದಿದ್ದಾರೆ. ಬಳಿಕ ಸ್ವಿಫ್‌್ಟಕಾರಿನತ್ತ ತೋರಿಸಿ ಅಲ್ಲಿ ನಮ್ಮ ಸಬ್‌ಇನ್‌ಸ್ಪೆಕ್ಟರ್‌ ಕುಳಿತ್ತಿದ್ದಾರೆ ಎಂದು ತೋರಿಸಿ ತೆಲುಗು ಭಾಷೆಯಲ್ಲಿ ಮಾತನಾಡಿದ್ದಾರೆ.

ಬಳಿಕ ಚಂದನ್‌ ಮತ್ತು ಕುಮಾರಸ್ವಾಮಿಯನ್ನು ಕಾರಿನಿಂದ ಕೆಳಗಿ ಇಳಿಸಿ, ಹಿಂಬದಿ ಸೀಟಿಗೆ ಕೂರಿಸಿದ್ದಾರೆ. ಬಳಿಕ ಆರೋಪಿಗಳು ಕಾರನ್ನು ತಾವೇ ಚಾಲನೆ ಮಾಡಿಕೊಂಡು ಔಟ್‌ರಿಚ್‌ ಶಾಲೆ ಸಮೀಪದ ಮೋರಿ ಬಳಿಗೆ ಬಂದಿದ್ದಾರೆ. ಈ ವೇಳೆ ಸ್ವಿಫ್‌್ಟಕಾರು ಹಿಂಬಾಲಿಸಿಕೊಂಡು ಅದೇ ಸ್ಥಳಕ್ಕೆ ಬಂದಿದೆ. ಬಳಿಕ ಕಾನ್‌ಸ್ಟೇಬಲ್‌ ಸಮವಸ್ತ್ರದಲ್ಲಿ ಇಬ್ಬರು ಚಂದನ್‌ ಮತ್ತು ಕುಮಾರಸ್ವಾಮಿಗೆ ದೈಹಿಕ ಹಲ್ಲೆ ನಡೆಸಿ, ಕಾರು ಕೀ ಕಿತ್ತುಕೊಂಡು, ಸೀಟಿನ ಕೆಳಗೆ ಇರಿಸಿದ್ದ .80 ಲಕ್ಷವನ್ನು ಎತ್ತಿಕೊಂಡಿದ್ದಾರೆ. ಇಬ್ಬರು ಪೊಲೀಸ್‌ ಠಾಣೆಗೆ ಬಂದು ನಮ್ಮನ್ನು ಕಾಣುವಂತೆ ಹೇಳಿ ಸ್ವಿಫ್‌್ಟಕಾರಿನಲ್ಲಿ ಪರಾರಿಯಾಗಿದ್ದಾರೆ. ಬಳಿಕ ಚಂದನ್‌ ಠಾಣೆಗೆ ಬಂದು ದೂರು ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗೊತ್ತಿದ್ದವರಿಂದಲೇ ಕೃತ್ಯ?

ಪೊಲೀಸರ ಸೋಗಿನಲ್ಲಿ ಕಾರನ್ನು ಅಡ್ಡಗಟ್ಟಿಹಣ ದರೋಡೆ ಮಾಡಲಾಗಿದೆ. ಅಡಿಕೆ ಮಂಡಿ ವ್ಯವಹಾರದ ಬಗ್ಗೆ ಚೆನ್ನಾಗಿ ಗೊತ್ತಿದ್ದವರೇ ಈ ಕೃತ್ಯ ಮಾಡಿರುವ ಸಾಧ್ಯತೆಯಿದೆ. ತುಮಕೂರಿನಿಂದಲೂ ದುಷ್ಕರ್ಮಿಗಳು, ಚಂದನ್‌ ಅವರ ಕಾರನ್ನು ಹಿಂಬಾಲಿಸಿ ಕೆ.ಎಚ್‌.ರಸ್ತೆಯಲ್ಲಿ ಅಡ್ಡಗಟ್ಟಿಪೊಲೀಸರೆಂದು ಹೆದರಿಸಿ ಹಣ ತೆಗೆದುಕೊಂಡು ಹೋಗಿರುವ ಸಾಧ್ಯತೆಯಿದೆ. ಘಟನಾ ಸ್ಥಳದ ಸುತ್ತಮುತ್ತಲ ಸಿಸಿಟಿವಿ ಕ್ಯಾಮರಾ ದೃಶ್ಯಾವಳಿ ಪರಿಶೀಲಿಸಿರುವ ಪೊಲೀಸರು ದುಷ್ಕರ್ಮಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

ತಿಂಗಳ ಹಿಂದಷ್ಟೇ ಕೆಲಸಕ್ಕೆ

ಕಾರು ಚಾಲಕ ಚಂದನ್‌ ಅಡಿಕೆ ಮಂಡಿ ಮಾಲಿಕ ಮೋಹನ್‌ ಅವರ ಬಳಿ ಎರಡು ವರ್ಷ ಕಾರು ಚಾಲಕನಾಗಿ ಕೆಲಸ ಮಾಡಿ ಬಳಿಕ ಬಿಟ್ಟಿದ್ದ. ಇದೀಗ ಒಂದು ತಿಂಗಳ ಹಿಂದೆಯಷ್ಟೇ ಮತ್ತೆ ಕಾರು ಚಾಲಕನಾಗಿ ಕೆಲಸಕ್ಕೆ ಸೇರಿಕೊಂಡಿದ್ದ ಎನ್ನಲಾಗಿದೆ. ಹೀಗಾಗಿ ಪೊಲೀಸರು ಚಂದನ್‌ನನ್ನು ವಿಚಾರಣೆ ನಡೆಸುತ್ತಿದ್ದಾರೆ. ಪೊಲೀಸರ ಸೋಗಿನಲ್ಲಿ ದರೋಡೆ ಮಾಡಿದ ದುಷ್ಕರ್ಮಿಗಳ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ.

PREV
Read more Articles on
click me!

Recommended Stories

Jagadish Shettar: ಬೆಳಗಾವಿ, ಕಳಸಾ-ಬಂಡೂರಿ, ರೈಲ್ವೆ ಯೋಜನೆಗಳ ಬಗ್ಗೆ ಸಂಸದ ಶೆಟ್ಟರ್ ನೀಡಿದ ಭರವಸೆ ಏನು?
Hulikal Ghat Landslide: ಹುಲಿಕಲ್ ಘಾಟ್‌ನಲ್ಲಿ ವಾಹನಗಳ ಸಂಚಾರ ಆರಂಭ; ತೀರ್ಥಹಳ್ಳಿ-ಕುಂದಾಪುರ ಸಂಪರ್ಕ ಪುನಾರಂಭ!