Belagavi: ಗೋಡೆ ಬಿದ್ದ ಮನೆಯಲ್ಲೇ ವಾಸಿಸುತ್ತಿದ್ದ ವೃದ್ಧೆಯರ ನೆರವಿಗೆ ಬಂದ ಫೇಸ್‌ಬುಕ್ ಫ್ರೆಂಡ್ಸ್ ಸರ್ಕಲ್

By Govindaraj SFirst Published Jul 15, 2022, 12:28 AM IST
Highlights

• ಧಾರಾಕಾರ ಮಳೆಗೆ ಧರೆಗುರುಳಿತ್ತು ಮನೆ ಗೋಡೆ
• ಕೋರ್ಟ್‌ನಲ್ಲಿ ವ್ಯಾಜ್ಯ ಹಿನ್ನೆಲೆ ಮುರುಕಲು ಮನೆಯಲ್ಲಿ ವಾಸವಿದ್ದ ವೃದ್ಧೆಯರು
• ಡಿಸಿ ಗಮನಕ್ಕೆ ಬರ್ತಿದ್ದಂತೆ ವೃದ್ಧೆಯರಿಗೆ ಸಾಂತ್ವನ ಕೇಂದ್ರದಲ್ಲಿ ಆಸರೆ

ಬೆಳಗಾವಿ (ಜು.15): ಬೆಳಗಾವಿ ನಗರ ಸೇರಿ ಜಿಲ್ಲೆಯಾದ್ಯಂತ ಕಳೆದ ಎರಡು ವಾರಗಳಿಂದ ಧಾರಾಕಾರ ಮಳೆ ಆಗುತ್ತಿದೆ. ಮಳೆಯಿಂದ ಮನೆ ಗೋಡೆ ಕುಸಿದಿದ್ದರೂ ಇಬ್ಬರು ವೃದ್ಧೆಯರೂ ಅದೇ ಮುರಕಲು ಮನೆಯಲ್ಲಿ ವಾಸಿಸುತ್ತಿರುವ ಘಟನೆ ‌ಬೆಳಗಾವಿಯ ಕ್ಯಾಂಪ್ ಪ್ರದೇಶದಲ್ಲಿ ನಡೆದಿತ್ತು. ಈ ಬಗ್ಗೆ ಬೆಳಗಾವಿಯ ಫೇಸ್‌ಬುಕ್ ಫ್ರೆಂಡ್ಸ್ ಸರ್ಕಲ್‌ನ ಮುಖ್ಯಸ್ಥ ಡಿ.ಆರ್.ಸಂತೋಷಗೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ್ದರು. 

ಎಷ್ಟೇ ಮನವೊಲಿಸಿದರೂ ಮನೆಯಲ್ಲಿ ಇರುವ ವೃದ್ಧೆಯರು ಮನೆ ಬಿಟ್ಟು ಹೊರಬರಲು ಒಪ್ಪಲಿಲ್ಲ. ಕೊನೆಗೆ ಬೆಳಗಾವಿ ಡಿಸಿ ನಿತೇಶ್ ಪಾಟೀಲ್ ಗಮನಕ್ಕೆ ತಂದಾಗ ಸ್ಥಳಕ್ಕೆ ಮಹಾನಗರ ಪಾಲಿಕೆ ಅಧಿಕಾರಿಗಳು ಹಾಗೂ ಪೊಲೀಸರನ್ನು ಕಳಿಸಿ ವೃದ್ಧೆಯರನ್ನು ಶ್ರೀನಗರದ ಮಹಿಳಾ ಸಾಂತ್ವನ ಕೇಂದ್ರಕ್ಕೆ ಶಿಫ್ಟ್ ಮಾಡಿಸಿದ್ದಾರೆ ವೃದ್ಧೆಯರಿಗೆ ಅಗತ್ಯ ನೆರವು ನೀಡುವ ಭರವಸೆ ನೀಡಿದ್ದಾರೆ.

ಮೋದಿ, ಬೊಮ್ಮಾಯಿ ಜನಪರ ಆಡಳಿತ ಮೆಚ್ಚಿ ಬಿಜೆಪಿ ಸೇರಿದ ಕಾಂಗ್ರೆಸ್‌ ಕಾರ್ಯಕರ್ತರು

ಮೈದುಂಬಿ ಧುಮ್ಮುಕ್ಕುತ್ತಿದೆ ಗೊಡಚಿನಮಲ್ಕಿ ಫಾಲ್ಸ್: ಇನ್ನು ಪಶ್ಚಿಮ ಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆ ಹಿನ್ನೆಲೆ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಗೊಡಚಿನಮಲ್ಕಿ ಜಲಪಾತ ಮೈದುಂಬಿ ಧುಮ್ಮುಕ್ಕುತ್ತಿದೆ.‌ ಬಂಡೆ ಕಲ್ಲುಗಳ ಮೇಲೆ ಹಂತ ಹಂತವಾಗಿ ನೀರು ಧುಮ್ಮುಕ್ಕುತ್ತಿರುವ ನಯನ ಮನೋಹರ ದೃಶ್ಯ ತುಂಬಿಕೊಳ್ಳಲು ತಂಡೋಪತಂಡವಾಗಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಜಲಪಾತ ಬಳಿ ಪ್ರವಾಸಿಗರು ತೆರಳದಂತೆ‌ ಪೊಲೀಸರು ಎಚ್ಚರಿಕೆ ವಹಿಸಿದ್ದು ಜಲಪಾತ ಸಮೀಪ ಕ್ರೈಮ್ ಸೀನ್ ಟೇಪ್ ಕಟ್ಟಿದ್ದಾರೆ. ದೂರದಿಂದಲೇ ಜಲವೈಭವ ಕಣ್ತುಂಬಿಕೊಂಡು ಪ್ರವಾಸಿಗರು ವಾಪಸ್ ಆಗುತ್ತಿದ್ದಾರೆ.

ಬೆಳಗಾವಿಯಲ್ಲಿ ಮಳೆಯ ಅಬ್ಬರ: ನೆರೆಯ ಮಹಾರಾಷ್ಟ್ರದ ಘಟ್ಟಪ್ರದೇಶ ಮತ್ತು ಬೆಳಗಾವಿ ಜಿಲ್ಲೆಯಲ್ಲಿ ಮಳೆ ಅಬ್ಬರ ಮುಂದುವರಿದಿದೆ. ಪರಿಣಾಮವಾಗಿ ಕೃಷ್ಣಾ ಸೇರಿದಂತೆ ಅದರ ಉಪನದಿಗಳಾದ ವೇದಗಂಗಾ, ದೂಧಗಂಗಾ ನದಿಗಳ ನೀರಿನ ಒಳಹರಿವಿನ ಪ್ರಮಾಣ ಹೆಚ್ಚಳವಾಗುತ್ತಿದೆ. ಜತೆಗೆ ಮಲಪ್ರಭಾ, ಘಟಪ್ರಭಾ ನದಿಗಳ ಹರಿವಿನಲ್ಲಿಯೂ ಏರಿಕೆ ಕಂಡಿದ್ದು ಚಿಕ್ಕೋಡಿ ತಾಲೂಕಿನಲ್ಲಿ ಮುಳುಗಡೆಯಾಗಿದ್ದ ಆರು ಸೇತುವೆಗಳು ಯಥಾಸ್ಥಿತಿಯಲ್ಲೇ ಇವೆ. 

ಗ್ರಾಮೀಣ ರಸ್ತೆಗಳ ನವೀಕರಣಕ್ಕೆ ಹಸಿರು ನಿಶಾನೆ; ಸಚಿವ ಉಮೇಶ ಕತ್ತಿ ಪ್ರಯತ್ನಕ್ಕೆ ಫಲ

ಕೊಯ್ನಾ ಸೇರಿದಂತೆ ಮಹಾರಾಷ್ಟ್ರದ 4 ಪ್ರಮುಖ ಅಣೆಕಟ್ಟೆಗಳೇ ಇನ್ನೂ ಶೇ.50ರಷ್ಟು ಭರ್ತಿಯಾಗದ ಕಾರಣ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಸದ್ಯಕ್ಕೆ ಪ್ರವಾಹ ಭೀತಿ ಇಲ್ಲ. ಆದರೆ ಈ ಅಣೆಕಟ್ಟೆಗಳನ್ನು ಹೊರತುಪಡಿಸಿ ಮಳೆಯಿಂದಲೇ ಕೃಷ್ಣಾ ನದಿಗೆ ಒಂದು ಲಕ್ಷ ಕ್ಯುಸೆಕ್‌ಗೂ ಅಧಿಕ ಪ್ರಮಾಣದ ನೀರು ಬರುತ್ತಿದೆ.  ಬೆಳಗಾವಿಯಲ್ಲಿ ಬಳ್ಳಾರಿ ನಾಲೆ ತುಂಬಿ ಹರಿಯುತ್ತಿದ್ದು 5 ಗ್ರಾಮಗಳಲ್ಲಿ ಹೊಲಗದ್ದೆಗಳು ಸಂಪೂರ್ಣ ಮುಳುಗಡೆಯಾಗಿವೆ. ಖಾನಾಪುರ ತಾಲೂಕಿನ 4 ಶಾಲಾ ಕಟ್ಟಡಗಳಿಗೆ ಹಾನಿಯುಂಟಾಗಿದೆ.

click me!