'ಛಾಯಾಗ್ರಾಹಕನಿಗೆ ಕಣ್ಣೇ ಮೊದಲ ಕ್ಯಾಮರಾ!'

By Web DeskFirst Published Aug 20, 2019, 1:05 PM IST
Highlights

ಛಾಯಾಗ್ರಾಹನಿಗೆ ಕಣ್ಣೇ ಮೊದಲ ಕ್ಯಾಮರಾ| ವಿಶ್ವ ಛಾಯಾಚಿತ್ರ ನಿಮಿತ್ತ ಏರ್ಪಡಿಸಿದ್ದ ಚರ್ಚೆಯಲ್ಲಿ ಬೆಂಗಳೂರು ವಿವಿ ಕುಲಪತಿ ವೇಣುಗೋಪಾಲ್‌ ಅಭಿಮತ

ಬೆಂಗಳೂರು[ಆ.20]: ಪ್ರತಿ ಛಾಯಾಗ್ರಾಹಕನಿಗೆ ಆತನ ಕಣ್ಣುಗಳೇ ಮೊದಲ ಕ್ಯಾಮರಾಗಳಾಗಿರುತ್ತವೆ. ಕಣ್ಣಿನ ದೃಷ್ಟಿಆಧರಿಸಿ ಕೈಯಲ್ಲಿರುವ ಕ್ಯಾಮರಾದ ಲೆನ್ಸ್‌ ಸೆಟ್‌ ಮಾಡಿಕೊಳ್ಳಬೇಕು ಎಂದು ಬೆಂಗಳೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ. ಕೆ.ಆರ್‌. ವೇಣುಗೋಪಾಲ್‌ ಸಲಹೆ ನೀಡಿದರು.

ವಿಶ್ವ ಛಾಯಾಚಿತ್ರ ದಿನದ ಅಂಗವಾಗಿ ಸೋಮವಾರ ಪ್ರೆಸ್‌ಕ್ಲಬ್‌ನಲ್ಲಿ ಬೆಂಗಳೂರಿನ ಫೋಟೋ ಜರ್ನಲಿಸ್ಟ್‌ ಅಸೋಸಿಯೇಷನ್‌ ಹಮ್ಮಿಕೊಂಡಿದ್ದ ‘ಸಾಮಾಜಿಕ ಜಾಲತಾಣಗಳ ಯುಗದಲ್ಲಿ ಫೋಟೋ ಪತ್ರಿಕೋದ್ಯಮದ ಹೊಸ ಸವಾಲುಗಳು’ ಎಂಬ ವಿಷಯ ಕುರಿತು ಹಮ್ಮಿಕೊಂಡಿದ್ದ ಚರ್ಚೆಯಲ್ಲಿ ಅವರು ಮಾತನಾಡಿದರು.

ಅನಲಾಗ್‌ ಮತ್ತು ಡಿಜಿಟಲ್‌ ಕ್ಯಾಮರಾಗಳ ಪೈಕಿ ಅನಲಾಗ್‌ ಕ್ಯಾಮರಾವೇ ಉತ್ತಮವಾಗಿದೆ. ರಾಷ್ಟ್ರಪ್ರಶಸ್ತಿ ಪುರಷ್ಕೃತ ವಿಡಿಯೋಗ್ರಾಫರ್‌ ಟಿ.ಎಸ್‌. ಸತ್ಯಂ ಅವರು ಮೈಸೂರಿನಲ್ಲಿ ಕೇವಲ ಆರು ರು.ಗಳಿಗೆ ಕ್ಯಾಮರ ಖರೀದಿಸಿದ್ದರು. ಇಂದು ಲಕ್ಷಾಂತರ ರು. ಮೌಲ್ಯದ ಕ್ಯಾಮರಾಗಳಿವೆ. ಫೋಟೋವನ್ನು ಸೆರೆ ಹಿಡಿಯುವ ಛಾಯಾಗ್ರಾಹಕ ತನ್ನದೇ ರೀತಿಯಲ್ಲಿ ಸಿದ್ಧತೆ ನಡೆಸಬೇಕಾಗುತ್ತದೆ. ತಾಳ್ಮೆ ಬಹಳ ಮುಖ್ಯವಾಗುತ್ತದೆ ಎಂದು ಹೇಳಿದರು.

VIPಗಳ ವಿಭಿನ್ನ ಫೋಸ್ ಕ್ಲಿಕ್ಕಿಸೋ ಭಲೇ ಶಂಕರ...

ಕಾಪಿ ರೈಟ್‌ ಕಾಯ್ದುಕೊಳ್ಳುವ ಸವಾಲು:

‘ಕನ್ನಡಪ್ರಭ’ ಪ್ರಧಾನ ಸಂಪಾದಕ ರವಿ ಹೆಗಡೆ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಪ್ರತಿ ಕ್ಷೇತ್ರದಲ್ಲಿ ಒಂದೊಂದು ರೀತಿಯ ಸವಾಲುಗಳು ಎದುರಾಗುತ್ತಿವೆ. ಅದರಂತೆ ಛಾಯಾಗ್ರಾಹಕರಿಗೆ ಫೋಟೋ ಕೃತಿಸ್ವಾಮ್ಯ (ಕಾಪಿ ರೈಟ್‌) ಕಾಯ್ದುಕೊಳ್ಳುವುದು ಸವಾಲಿನ ಕೆಲಸವಾಗಿದೆ. ಸಾಮಾಜಿಕ ತಾಣಗಳಲ್ಲಿ ಹರಿಬಿಡುವ ಫೋಟೋಗಳಿಂದ ಛಾಯಾಗ್ರಾಹಕರಿಗೆ ಸಾಕಷ್ಟುಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ತಿಳಿಸಿದರು.

ಇದರ ನಡುವೆಯೂ ವಿಭಿನ್ನ ಫೋಟೋಗಳಿಗೆ ಬೇಡಿಕೆ ಇದ್ದೇ ಇದೆ. ಯಾವುದೇ ಕಾರ್ಯಕ್ರಮದಲ್ಲಿ ಎಲ್ಲರಿಗಿಂತ ವಿಭಿನ್ನ ದೃಷ್ಟಿಕೋನದ ಫೋಟೋಗಳನ್ನು ಕ್ಲಿಕ್ಕಿಸಿದರೆ, ಅವಕಾಶಗಳು ದೊರೆಯಲಿವೆ ಎಂದು ಹೇಳಿದರು.

ಸೈಬರ್‌ ಕ್ರೈಂ ಕೇಂದ್ರದ ಪೊಲೀಸ್‌ ಇನ್ಸ್‌ಪೆಕ್ಟರ್‌ ಕೆ.ಎನ್‌. ಯಶವಂತಕುಮಾರ್‌ ಮಾತನಾಡಿ, ಪ್ರಕಣಗಳನ್ನು ದಾಖಲಿಸುವ ಸಂದರ್ಭದಲ್ಲಿ ಮೂಲ ಫೋಟೋಗಳನ್ನು ನೀಡಿದರೆ ಪ್ರಕರಣವನ್ನು ಭೇದಿಸಲು ಸಾಧ್ಯವಾಗುತ್ತದೆ. ಅನಲಾಗ್‌ ಮತ್ತು ಡಿಜಿಟಲ್‌ ಸಾಕ್ಷ್ಯಗಳ ಪೈಕಿ ಡಿಜಿಟಲ್‌ ಪುರಾವೆಗಳು ಪ್ರಕರಣಗಳನ್ನು ಪತ್ತೆ ಹಚ್ಚಲು ಸಹಕಾರಿಯಾಗಲಿವೆ ಎಂದು ಹೇಳಿದರು.

ಮಾತನಾಡುವ ಸ್ವಾತಂತ್ರ್ಯವಿದೆ ಎಂದು ಯಾವುದೇ ವ್ಯಕ್ತಿ ಬಗ್ಗೆ ಅವಹೇಳನಕಾರಿಯಾಗಿ ಟ್ರೋಲ್‌ ಮಾಡಲು ಸಾಧ್ಯವಿಲ್ಲ. ಹೀಗೆ ಮಾಡುವಾಗ ವ್ಯಕ್ತಿಯು ಮಾನನಷ್ಟೆಮೊಕದ್ದಮೆ ದಾಖಲಿಸಬಹದು. ಮಹಿಳೆಯಾದರೆ, ಅವಮಾನ ಹಾಗೂ ಮಾನಕ್ಕೆ ಅಂಜಿ ಪ್ರಕರಣಗಳನ್ನು ದಾಖಲಿಸಿದಾಗ ಕ್ರಮ ಕೈಗೊಳ್ಳಬಹುದು ಎಂದು ತಿಳಿಸಿದರು.

ವಿಶ್ವ ಛಾಯಾಗ್ರಾಹಕರ ದಿನ: ಫೋಟೋಗ್ರಫಿಗೆ ಟಾಪ್ 5 ಕ್ಯಾಮೆರಾ ಫೋನ್‌ಗಳು!

ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಫೋಟೋಗ್ರಫಿ ವಿಭಾಗದ ಮಾಜಿ ಮುಖ್ಯಸ್ಥ ಕೆಂಪಣ್ಣ ಮಾತನಾಡಿ, ಪ್ರತಿ ಕಾರ್ಯಕ್ರಮದಲ್ಲಿ ಮುಂಜಾಗ್ರತೆ ವಹಿಸಿ ಕೆಲಸ ಮಾಡಿದರೆ ಮತ್ತು ವಿಭಿನ್ನವಾಗಿ ಕಾರ್ಯ ನಿರ್ವಹಿಸಿದರೆ ಅವಕಾಶಗಳನ್ನು ಗಿಟ್ಟಿಸಿಕೊಳ್ಳಲು ಸಾಧ್ಯ. ಎದುರಾಗುವ ಸವಾಲುಗಳನ್ನೇ ಅವಕಾಶಗಳೆಂದು ಪರಿಗಣಿಸಿ ಕಾರ್ಯ ನಿರ್ವಹಿಸಬೇಕಿದೆ ಎಂದು ಪ್ರೋತ್ಸಾಹದಾಯಕ ನುಡಿಗಳನ್ನು ಆಡಿದರು.

ಕಾರ್ಯಕ್ರಮವನ್ನು ಪಿಕಲ್‌ ಜಾರ್‌ ಸಂಸ್ಥಾಪಕ ಸಂಪಾದಕಿ ವಾಸಂತಿ ಹರಿಪ್ರಕಾಶ್‌ ಕಾರ್ಯಕ್ರಮ ನಿರೂಪಣೆ ಮಾಡಿದರು. ಅಸೋಸಿಯೇಷನ್‌ ಅಧ್ಯಕ್ಷ ಮೋಹನ್‌ಕುಮಾರ್‌ ಬಿ.ಎನ್‌., ಉಪಾಧ್ಯಕ್ಷ ಶೈಲೇಂದ್ರ ಭೋಜಕ್‌ ಹಾಗೂ ಪ್ರಧಾನ ಕಾರ್ಯದರ್ಶಿ ಗಣೇಶ್‌ ಕೆ.ಎಸ್‌. ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಆರೋಗ್ಯ ಕಾರ್ಡ್‌ ಭರವಸೆ ನೀಡಿದ ಮೇಯರ್‌

ಛಾಯಾಗ್ರಾಹಕರಿಗೆ ಆರೋಗ್ಯ ಕಾರ್ಡ್‌ ಹಾಗೂ ಸಂಘಕ್ಕೆ ಧನಸಹಾಯ ನೀಡುವ ಸಂಬಂಧ ಆಧಿಕಾರಿಗಳು ಮತ್ತು ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳುವುದಾಗಿ ಮೇಯರ್‌ ಗಂಗಾಂಬಿಕೆ ಮಲ್ಲಿಕಾರ್ಜುನ್‌ ಭರವಸೆ ನಿಡಿದರು.

ಪ್ರೆಸ್‌ಕ್ಲಬ್‌ನಲ್ಲಿ ಪೋಟೋ ಜರ್ನಲಿಸ್ಟ್‌ ಅಸೋಸಿಯೇಷನ್‌ ವತಿಯಿಂದ ಏರ್ಪಡಿಸಿದ್ದ ವಿಶ್ವ ಛಾಯಾಚಿತ್ರ ದಿನಾಚರಣೆಗೆ ಉದ್ಘಾಟಿಸಿದ ಅವರು, ಛಾಯಾಗ್ರಾಹಕರು ತಮ್ಮ ವೃತ್ತಿಯಲ್ಲಿ ಅನೇಕ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಚಿತ್ರ ತೆಗೆಯಲು ಜೀವವನ್ನು ಲೆಕ್ಕಿಸದೆ ಕೆಲವು ವೇಳೆ ಕಾರ್ಯ ನಿರ್ವಹಿಸುತ್ತಾರೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಉಪಮೇಯರ್‌ ಭದ್ರೇಗೌಡ, ವಿರೋಧ ಪಕ್ಷದ ನಾಯಕ ಪದ್ಮನಾಭರೆಡ್ಡಿ, ಆಡಳಿತ ಪಕ್ಷದ ನಾಯಕ ಅಬ್ದುಲ್‌ ವಾಜೀದ್‌, ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷೆ ಹೇಮಲತಾ ಗೋಪಾಲಯ್ಯ ಉಪಸ್ಥಿತರಿದ್ದರು.

click me!