Kolar: ಅಮಾಯಕರ ಪ್ರಾಣದ ಜತೆ ಚೆಲ್ಲಾಟ: ಜಿಲೆಟಿನ್ ಕಡ್ಡಿ ಬಳಸಿ ಬೃಹತ್ ಬಂಡೆಗಳ ಸ್ಫೋಟ..!

By Girish GoudarFirst Published Jun 14, 2022, 10:40 PM IST
Highlights

*   ಎಲ್ಲ ತಿಳಿದಿದ್ರು ಅಧಿಕಾರಿಗಳು ಮೌನ 
*  ಮಾಮೂಲಿ ಫಿಕ್ಸ್ ಮಾಡಿಕೊಂಡಿದ್ದಾರಾ?ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು 
*  ರಾತ್ರೋ ರಾತ್ರಿ ಅಲ್ಲಿ ನಡೆಯುವ ಕಾನೂನು ಬಾಹಿರ ಕೆಲಸಗಳು ಯಾರ ಗಮನಕ್ಕೂ ಬಂದಿಲ್ವಾ? 
 

ವರದಿ: ದೀಪಕ್, ಏಷಿಯಾನೆಟ್ ಸುವರ್ಣ ನ್ಯೂಸ್, ಕೋಲಾರ 

ಕೋಲಾರ(ಜೂ.14): ಅದು ಬೃಹತ್ ಕಲ್ಲು ಬಂಡೆಗಳು ಇರುವ ಪ್ರದೇಶ. ಸಾಕಷ್ಟು ವರ್ಷಗಳಿಂದ ಅಲ್ಲಿ ಕ್ರಷರ್‌ಗಳು ಕೆಲಸ ನಿರ್ವಹಿಸುತ್ತಿವೆ. ದಿನಕ್ಕೆ ನೂರಾರು ಲೋಡ್‌ನಲ್ಲಿ ಜಲ್ಲಿ, ಎಂ ಸ್ಯಾಂಡ್ ಸೇರಿದಂತೆ ಕಟ್ಟಡ ನಿರ್ಮಾಣಕ್ಕೆ ಬೇಕಿರುವ ವಸ್ತುಗಳನ್ನು ಸರಬರಾಜು ಮಾಡಲಾಗ್ತಿದೆ. ಆದ್ರೆ ರಾತ್ರೋ ರಾತ್ರಿ ಅಲ್ಲಿ ನಡೆಯುವ ಕಾನೂನು ಬಾಹಿರ ಕೆಲಸಗಳು ಯಾರ ಗಮನಕ್ಕೂ ಬಂದಿಲ್ವಾ ಅನ್ನೋ ಅನುಮಾನ ಕಾಡ್ತಿದೆ. 

ಎತ್ತ ನೋಡಿದರೂ ಬೃಹತ್ ಕಲ್ಲುಬಂಡೆಗಳು. ಬಂಡೆಗಳ ಮಧ್ಯೆ ಕೆಲಸ ಮಾಡ್ತಿರುವ ಕೂಲಿ ಕಾರ್ಮಿಕರು.ಎಗ್ಗಿಲ್ಲದೆ ಸಾಗುತ್ತಿರುವ ಬೃಹತ್ ಲಾರಿಗಳು.ಇವೆಲ್ಲಾ ದೃಶ್ಯಗಳು ಕಂಡು ಬಂದಿದ್ದು, ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಮಾಸ್ತಿ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ಟೇಕಲ್ ಹೋಬಳಿಯ ಕ್ರಷರ್ ಗಳ ಬಳಿ. ಈಗೆ ಕ್ರಷರ್ ಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಈ ಕೂಲಿ ಕಾರ್ಮಿಕರು ದೂರದ ಉತ್ತರ ಭಾರತ,ತಮಿಳುನಾಡು ಹಾಗೂ ಆಂಧ್ರ ರಾಜ್ಯಕ್ಕೆ ಸೇರಿದವರು.ಒಪ್ಪತ್ತಿನ ಊಟಕ್ಕೆ ಪರದಾಡುವ ಇವರ ನೋವನ್ನೇ ಬಂಡವಾಳ ಮಾಡಿಕೊಂಡಿರುವ ಇಲ್ಲಿನ ಕೆಲ ಕ್ರಷರ್ ಮಾಲೀಕರು ಜೀವದ ಜೊತೆ ಚೆಲ್ಲಾಟವಾಡ್ತಿದ್ದಾರೆ.ಹೌದು ಅಕ್ರಮವಾಗಿ ಜಿಲೇಟಿನ್ ಕಡ್ಡಿಗಳನ್ನು ಸಂಗ್ರಹಿಸಿ ಕೆಲ ಕ್ರಷರ್ ಮಾಲೀಕರು ಬೇಗ ಹಣ ಮಾಡುವ ಆಸೆಯಿಂದ ರಾತ್ರೋರಾತ್ರಿ ಬೃಹತ್ ಬಂಡೆಗಳನ್ನು ಬ್ಲಾಸ್ಟ್ ಮಾಡುತ್ತಿರುವ ಆರೋಪಗಳು ಕೇಳಿ ಬರುತ್ತಿದೆ.ರಾಜ್ಯದ ಹಲವೆಡೆ ಜಿಲೇಟಿನ್ ಕಡ್ಡಿ ಬಳಸಿ ಸ್ಪೋಟಗೊಳಿಸುವ ವೇಳೆ ಹಲವಾರು ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ, ಕೆಲವರ ದೇಹವಂತು ಗುರುತು ಸಿಗದೆ ಇರುವಷ್ಟು ಛಿದ್ರ ಛಿದ್ರವಾಗಿ ಕುಟುಂಬಸ್ಥರ ಆಕ್ರಂದನದ ದೃಶ್ಯವನ್ನು ನೋಡಿದ್ದೇವೆ,ಆಗಿದ್ರು ಸಹ ಟೇಕಲ್ ಭಾಗದಲ್ಲಿ ಮಾತ್ರ ಎಗ್ಗಿಲದೆ ಜಿಲೇಟಿನ್ ಕಡ್ಡಿಗಳನ್ನು ಬಳಸಿ ಅಮಾಯಕರ ಜೀವದ ಜೊತೆ ಚೆಲ್ಲಾಟವಾಡ್ತಿದ್ದಾರೆ.

Kalaburagi; ಪಠ್ಯಪುಸ್ತಕ ಪರಿಷ್ಕರಣೆ ವಿರೋಧಿಸಿ ಜೂ.15ರಿಂದ ಅಹೋರಾತ್ರಿ ಸತ್ಯಾಗ್ರಹ

ಇನ್ನು ಇದು ನಿನ್ನೆ ಮೊನ್ನೆಯಿಂದ ನಡೆಯುತ್ತಿರುವ ಅಕ್ರಮ ಚಟುವಟಿಕೆ ಅಲ್ಲ. ಸಾಕಷ್ಟು ವರ್ಷಗಳಿಂದ ನಡೆದುಕೊಂಡು ಬಂದಿದ್ದು,ಜಿಲ್ಲೆಯ ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿಗಳು ಹಾಗೂ ಪೊಲೀಸರು ಮಾತ್ರ ಕಣ್ಣಿದ್ದೂ ಕುರುಡರಾಗಿದ್ದಾರೆ ಅಂತ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ಕೇವಲ ನಾಮಕಾವಸ್ಥೆಗೆ ಮಾತ್ರ ವರ್ಷಕೊಮ್ಮೆ ಭೇಟಿ ಕೊಟ್ಟು ಹೋಗುತ್ತಿರೋದು ನೋಡ್ತಿದ್ರೆ ಕ್ರಷರ್ ಮಾಲೀಕರಿಂದ ಮಾಮೂಲಿ ಫಿಕ್ಸ್ ಮಾಡಿಕೊಂಡಿದ್ದಾರ ಅನ್ನೋ ಅನುಮಾನ ಮೂಡ್ತಿದ್ದೆ ಅಂತಿದ್ದಾರೆ,ಸ್ಥಳೀಯರು.

ಇನ್ನು ಜಿಲೆಟಿನ್ ಸ್ಫೋಟ ರಾತ್ರಿ ವೇಳೆ ನಡೆಯುವ ಕೆಲಸ ,ಆ ವೇಳೆ ಯಾರಿಗೂ ತಿಳಿಯೋದಿಲ್ಲ ಎಂದು ಬೃಹತ್ ಬಂಡೆಗಳನ್ನು ಸ್ಫೋಟಿಸುತ್ತಾರೆ. ಇದರಿಂದ ನಮಗೆ ಸಾಕಷ್ಟು ಭಯ ಉಂಟಾಗಿದ್ದು, ಎಲ್ಲಿ ಮನೆ ಹಾಗೂ ಪ್ರಾಣ ಸಂಭವಿಸುತ್ತೋ  ಅಂತ ಸ್ಥಳೀಯರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಆತಂಕ ಹೊರ ಹಾಕ್ತಿದ್ದಾರೆ.ಒಂದೂ ವೇಳೆ ಜಿಲೇಟಿನ್ ಸ್ಫೋಟದ ವೇಳೆ ಏನಾದ್ರು ಹೆಚ್ಚು ಕಡಿಮೆ ಆದ್ರೆ ಅದ್ಯಾವುದು ಹೊರ ಬರೋದಿಲ್ಲ,ಅಧಿಕಾರಿಗಳು ಶಾಮಿಲು ಆಗಿದ್ದಾರ ಅಂತ ಇಲ್ಲಿನ ಸ್ಥಳೀಯರು ಅನುಮಾನ ವ್ಯಕ್ತ ಪಡಿಸುತ್ತಿದ್ದಾರೆ.

ಒಟ್ಟಾರೆ ಟೇಕಲ್ ಭಾಗದಲ್ಲಿರುವ ಕೆಲ ಕ್ರಷರ್ ಮಾಲೀಕರು,ಅಮಾಯಕರ ಜೀವದ ಜೊತೆ ಚೆಲ್ಲಾಟವಾಡ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳಿಗೆ ಅದ್ಯಾಕೆ ಮೌನವಾಗಿದ್ದಾರೆ ಅನ್ನೋ ಅನುಮಾನ ಕಾಡ್ತಿದೆ. ಇನ್ನಾದ್ರೂ ಅಧಿಕಾರಿಗಳು ಎಚ್ಚೆತ್ತು ಮುಂದಾಗುವ ಅನಾಹುತಗಳನ್ನು ತಪ್ಪಿಸಲಿ ಅನ್ನೋದು ನಮ್ಮ ಆಶಯ ಕೂಡ.
 

click me!