
ಕೇರಳ ರಾಜ್ಯದಲ್ಲಿ ನಡೆಯಲಿರುವ ಚುನಾವಣೆಯ ಹಿನ್ನೆಲೆ ಅಕ್ರಮ ಮದ್ಯ ಸಾಗಾಟಕ್ಕೆ ತಡೆಹಿಡಿಯಲು ಅಬಕಾರಿ ಇಲಾಖೆ ಕಟ್ಟೆಚ್ಚರ ವಹಿಸಿದೆ. ಇದರ ಭಾಗವಾಗಿ ಗೋವಾದ ಮಡಗಾಂವ್ನಿಂದ ಕಾರವಾರ ಮಾರ್ಗವಾಗಿ ಕೇರಳದತ್ತ ಸಾಗುತ್ತಿದ್ದ ಮಂಗಳಾ ಲಕ್ಷದ್ವೀಪ ಎಕ್ಸ್ಪ್ರೆಸ್ ರೈಲಿನ ಮೇಲೆ ಅಬಕಾರಿ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ ಅಕ್ರಮ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.
ಚುನಾವಣಾ ಹಿನ್ನೆಲೆ ನೆರೆ ರಾಜ್ಯಗಳ ಗಡಿಭಾಗಗಳು ಹಾಗೂ ರೈಲು ಮಾರ್ಗಗಳಲ್ಲಿ ತೀವ್ರ ನಿಗಾವಹಿಸಲಾಗಿದೆ. ಈ ಹಿನ್ನೆಲೆಯಲ್ಲಿ ಏಪ್ರಿಲ್ 1ರಂದು ಅಬಕಾರಿ ಇಲಾಖೆಯ ಅಧಿಕಾರಿಗಳ ತಂಡವು ಮಡಗಾಂವ್ನಿಂದ ಕುಮಟಾವರೆಗೆ ರೈಲಿನಲ್ಲಿ ಪ್ರಯಾಣಿಸಿ, ಬೋಗಿಗಳಲ್ಲಿ ಸುದೀರ್ಘ ತಪಾಸಣೆ ನಡೆಸಿತು.
ರೈಲಿನ ಜನರಲ್ ಬೋಗಿಗಳ ಪರಿಶೀಲನೆಯ ವೇಳೆ, ಒಂದು ಬೋಗಿಯಲ್ಲಿ ಅನುಮಾನಾಸ್ಪದವಾಗಿ ಬಿಟ್ಟುಹೋಗಿದ್ದ ಬ್ಯಾಗ್ ಪತ್ತೆಯಾಯಿತು. ಬ್ಯಾಗ್ ತೆರೆಯುತ್ತಿದ್ದಂತೆ ಅದರೊಳಗೆ ತಲಾ 500 ಮಿಲಿ ಸಾಮರ್ಥ್ಯದ 24 ಕಿಂಗ್ಫಿಶರ್ ಪ್ರೀಮಿಯಂ ಬಿಯರ್ ಕ್ಯಾನ್ಗಳು ಅಡಗಿಸಿಟ್ಟಿರುವುದು ಕಂಡುಬಂದಿದೆ.
ಬ್ಯಾಗ್ ಯಾರದ್ದು ಎಂಬುದು ಪತ್ತೆಯಾಗದೆ, ಯಾವುದೇ ಪ್ರಯಾಣಿಕರು ಅದರ ಮಾಲೀಕತ್ವವನ್ನು ಒಪ್ಪಿಕೊಳ್ಳದ ಕಾರಣ, ಅಬಕಾರಿ ಅಧಿಕಾರಿಗಳು ಮದ್ಯವನ್ನು ಜಪ್ತಿ ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ಕಾರ್ಯಾಚರಣೆಯನ್ನು ಕಾರವಾರ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕರ ನೇತೃತ್ವದಲ್ಲಿ, ಅಂಕೋಲಾ ಮತ್ತು ಕಾರವಾರ ವಲಯದ ಅಬಕಾರಿ ನಿರೀಕ್ಷಕರು ಹಾಗೂ ಜಿಲ್ಲಾ ತಂಡದ ಸಿಬ್ಬಂದಿ ಸಂಯುಕ್ತವಾಗಿ ನಡೆಸಿದರು.
ಕೇರಳ ಚುನಾವಣೆಯ ಹಿನ್ನೆಲೆ ಅಕ್ರಮ ಮದ್ಯ ಸಾಗಾಟವನ್ನು ತಡೆಗಟ್ಟಲು ಇಂತಹ ತಪಾಸಣೆಗಳನ್ನು ಮುಂದುವರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರೈಲು ಮಾರ್ಗಗಳಲ್ಲಿಯೂ ತೀವ್ರ ನಿಗಾವಹಿಸಲಾಗಿದ್ದು, ಸಂಶಯಾಸ್ಪದ ಚಟುವಟಿಕೆಗಳ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ.