
ಬಳ್ಳಾರಿ (ಏ.3): ಬದುಕಿನ ಹೊಸ ಕನಸುಗಳನ್ನು ಹೊತ್ತು ಮದುವೆಯಾದ ತಿಂಗಳಲ್ಲೇ ನವಜೋಡಿಯೊಂದು ಭೀಕರ ರಸ್ತೆ ಅಪಘಾತದಲ್ಲಿ ಅಸುನೀಗಿರುವ ಘಟನೆ ಸಂಭವಿಸಿದೆ. ಈ ಸಾವು ಕುಟುಂಬಸ್ಥರ ಪಾಲಿಗೆ ಬರಸಿಡಿಲಿನಂತೆ ಅಪ್ಪಳಿಸಿದೆ. ಬಳ್ಳಾರಿ ತಾಲೂಕಿನ ಜೋಳದ ರಾಶಿ ಗ್ರಾಮದ ರಕ್ಷಿತಾ (24) ಮತ್ತು ಬೆಂಗಳೂರಿನ ಪವನ್ (29) ಕಳೆದ ತಿಂಗಳಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆಯ ನಂತರ ಮೊದಲ ಜಾತ್ರೆಗಾಗಿ ತಮ್ಮ ಊರಿಗೆ ಬರಲು ದಂಪತಿ ನಿರ್ಧರಿಸಿದ್ದರು. ಅದರಂತೆ ಬೆಂಗಳೂರಿನಿಂದ ಬಳ್ಳಾರಿಗೆ ಕಾರಿನಲ್ಲಿ ಪ್ರಯಾಣ ಬೆಳೆಸಿದ್ದಾಗ, ದೊಡ್ಡಬಳ್ಳಾಪುರದ ಬಳಿ ಲಾರಿ ಮತ್ತು ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿದೆ.
ಅಪಘಾತದ ತೀವ್ರತೆ ಎಷ್ಟು ಭೀಕರವಾಗಿತ್ತೆಂದರೆ, ಪವನ್ ಮತ್ತು ರಕ್ಷಿತಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇಬ್ಬರೂ ಯುವಕ-ಯುವತಿಯರಾಗಿದ್ದು, ಬದುಕಿ ಬಾಳಬೇಕಾದ ಜೋಡಿ ಹೀಗೆ ಅರ್ಧದಲ್ಲೇ ಇಹಲೋಕ ತ್ಯಜಿಸಿದ್ದು ಗ್ರಾಮಸ್ಥರಲ್ಲಿ ತೀವ್ರ ಶೋಕವನ್ನುಂಟು ಮಾಡಿದೆ.
ಜಾತ್ರೆಗೆಂದು ಸಂಭ್ರಮದಿಂದ ಊರಿಗೆ ಮರಳಿ ಬರಬೇಕಾಗಿದ್ದ ನವಜೋಡಿ, ಮರಳಿ ಬಾರದ ಲೋಕಕ್ಕೆ ಪಯಣಿಸಿರುವುದು ಕುಟುಂಬಸ್ಥರ ಆಕ್ರಂದನಕ್ಕೆ ಕಾರಣವಾಗಿದೆ. ಜೋಳದ ರಾಶಿ ಗ್ರಾಮದಲ್ಲಿ ಮೃತದೇಹಗಳು ಆಗಮಿಸುತ್ತಿದ್ದಂತೆ ಕುಟುಂಬಸ್ಥರು ಮತ್ತು ಸಂಬಂಧಿಕರ ರೋಧನ ಮುಗಿಲು ಮುಟ್ಟಿದೆ. ಸಂತೋಷದ ದಿನಗಳಲ್ಲಿ ಬರಬೇಕಾಗಿದ್ದ ದಂಪತಿಗಳು ಶವವಾಗಿ ಮನೆಗೆ ಬಂದ ದೃಶ್ಯ ನೆರೆದಿದ್ದವರ ಕಣ್ಣಾಲಿಗಳನ್ನು ತೇವಗೊಳಿಸಿದೆ.