ಶಿಕ್ಷಣ ಜಾಗೃತಿಯಿಂದಷ್ಟೇ ದೇವದಾಸಿ ಪದ್ಧತಿ ನಿರ್ಮೂಲನೆ’

By Kannadaprabha NewsFirst Published Dec 28, 2023, 9:41 AM IST
Highlights

ಸಮಾಜದ ಅನಿಷ್ಠ ಆಚರಣೆಯಾದ ದೇವದಾಸಿ ಪದ್ಧತಿ ನಿರ್ಮೂಲನೆ ಶಿಕ್ಷಣದಿಂದ ಮಾತ್ರ ಸಾಧ್ಯ. ಅಧ್ಯಯನ, ಸಂಶೋಧನೆಗಳೊಂದಿಗೆ ಈ ಪದ್ಧತಿಯನ್ನು ಅವಲೋಕಿಸಿ, ಸಮಸ್ಯೆಗಳ ಸ್ವರೂಪ ಅರಿತು, ಪರಿಹಾರ ಒದಗಿಸುವಲ್ಲಿ ಸರ್ಕಾರ ಮುಂದಾಗಬೇಕು ಎಂದು ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಎಂ. ವೆಂಕಟೇಶ್ವರಲು ಹೇಳಿದರು.

  ತುಮಕೂರು :  ಸಮಾಜದ ಅನಿಷ್ಠ ಆಚರಣೆಯಾದ ದೇವದಾಸಿ ಪದ್ಧತಿ ನಿರ್ಮೂಲನೆ ಶಿಕ್ಷಣದಿಂದ ಮಾತ್ರ ಸಾಧ್ಯ. ಅಧ್ಯಯನ, ಸಂಶೋಧನೆಗಳೊಂದಿಗೆ ಈ ಪದ್ಧತಿಯನ್ನು ಅವಲೋಕಿಸಿ, ಸಮಸ್ಯೆಗಳ ಸ್ವರೂಪ ಅರಿತು, ಪರಿಹಾರ ಒದಗಿಸುವಲ್ಲಿ ಸರ್ಕಾರ ಮುಂದಾಗಬೇಕು ಎಂದು ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಎಂ. ವೆಂಕಟೇಶ್ವರಲು ಹೇಳಿದರು.

ತುಮಕೂರು ವಿಶ್ವವಿದ್ಯಾನಿಲಯದ ಕಾರ್ಯ ಅಧ್ಯಯನ ಮತ್ತು ಸಂಶೋಧನ ವಿಭಾಗ ಹಾಗೂ ಮತ್ತು ಸಮೂಹ ಸಂವಹನ ವಿಭಾಗದ ಆಶ್ರಯದಲ್ಲಿ ಬುಧವಾರ ಆಯೋಜಿಸಿದ್ದ ‘ಗಾಡ್ಸ್ ವೈವ್ಸ್ ಮೆನ್ಸ್ ಸ್ಲೇವ್ಸ್’ ಎಂಬ ಸಾಕ್ಷ್ಯಚಿತ್ರದ ಪ್ರದರ್ಶನ ಮತ್ತು ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

Latest Videos

ವಾಸ್ತವತೆಯ ಅರಿವನ್ನು ಮೂಡಿಸುವ ಇಂಥ ಸಂಶೋಧನಾಧಾರಿತ ಸಾಕ್ಷ್ಯಚಿತ್ರಗಳು ತಳ ಸಮುದಾಯದ ನೋವನ್ನು ಹೊರಹಾಕುತ್ತವೆ. ಅನಿಷ್ಠ ಪದ್ಧತಿಗಳ ನಿರ್ಮೂಲನೆಯಲ್ಲಿ ಸರ್ಕಾರದ ಜೊತೆ ವಿದ್ಯಾವಂತ ಸಮಾಜವೂ ಅರಿವು ಮೂಡಿಸುವಲ್ಲಿ ಕೈಜೋಡಿಸಬೇಕು. ಜ್ಞಾನಾರ್ಜನೆಗೆ ಪೂರಕವಾದ ಸಮಾಜ ನಿರ್ಮಿಸಿದಾಗ ನಕಾರಾತ್ಮಕ ಅಂಶಗಳನ್ನು ತೊರೆದು ಜೀವಿಸಬಹುದು ಎಂದರು.

ವೇಶ್ಯಾವಾಟಿಕೆ, ಮಂಗಳಮುಖಿಯರ ಹಲವಾರು ಸಮಸ್ಯೆಗಳಿಗೆ ಸಮಾಜವೇ ಉತ್ತರಿಸಬೇಕು. ಈ ಆಚರಣೆ, ಪದ್ಧತಿಗಳೆಲ್ಲವೂ ಪ್ರಸ್ತುತ ಕಾಲಮಾನದ ಸಮಸ್ಯೆಗಳಾಗಿವೆ. ಆತ್ಮಾವಲೋಕನ ಮಾಡಿಕೊಳ್ಳುವ ಕಾಲ ಇದಾಗಿದೆ ಎಂದು ತಿಳಿಸಿದರು.

21 ನೆಯ ಜ್ಞಾನಾರ್ಜನೆಯ ಶತಮಾನದಲ್ಲಿ ಸಂಶೋಧನೆ, ಆವಿಷ್ಕಾರಗಳಾಗಬೇಕು. ಮೂಢನಂಬಿಕೆಗಳನ್ನು ಶಿಕ್ಷಣನಿಂದ ಸಂಪೂರ್ಣ ನಿರ್ಮೂಲನೆ ಮಾಡುವ ಜವಾಬ್ದಾರಿಯನ್ನು ನಾವೆಲ್ಲರೂ ಹೊರಬೇಕು ಎಂದು ಹೇಳಿದರು.

ಸಾಕ್ಷ್ಯಚಿತ್ರದ ನಿರ್ದೇಶಕಿ ಪೂರ್ಣಿಮಾ ರವಿ ಮಾತನಾಡಿ, 2008 ರಲ್ಲಿ ಸರ್ಕಾರವು ಮಾಡಿದ ಸಮೀಕ್ಷೆಯ ಪ್ರಕಾರ ಕರ್ನಾಟಕದಲ್ಲಿ 35 ವರ್ಷಕ್ಕೂ ಮೇಲ್ಪಟ್ಟ ವಯಸ್ಸಿನ 46000 ದೇವದಾಸಿಯರಿದ್ದಾರೆ. ಕರ್ನಾಟಕ ದೇವದಾಸಿ ವಿಮೋಚನ ಸಮಿತಿಯ ಪ್ರಕಾರ ವಯಸ್ಸಿನ ಮಿತಿಯನ್ನು ಪರಿಗಣಿಸದೆಯೆ ಒಟ್ಟು 80000 ಕ್ಕೂ ಹೆಚ್ಚು ದೇವದಾಸಿಯರಿದ್ದಾರೆ. 1982 ರಲ್ಲೇ ನಿಷೇಧವಾದರೂ ಹೈದರಾಬಾದ್-ಕರ್ನಾಟಕ ಭಾಗದಲ್ಲಿ ಹೆಚ್ಚಾಗಿ ಇಂದಿಗೂ ಕಾಡುತ್ತಿರುವ ಅನಿಷ್ಠ ಆಚರಣೆ ದೇವದಾಸಿ ಪದ್ಧತಿ ಎಂದರು.

ದೇವದಾಸಿ ಪದ್ಧತಿಯಿಂದ ಕೆಲ ವರ್ಗದವರನ್ನು ಹೊರತಂದು, ಶಿಕ್ಷಣದ ಅವಕಾಶ ಕಲ್ಪಿಸಿಕೊಟ್ಟು, ಕೆಲವೇ ದಿನಗಳಲ್ಲಿ ದೇವದಾಸಿ ಪದ್ಧತಿ ಮುಕ್ತ ಸಮಾಜ ನಿರ್ಮಾಣದಕನಸನ್ನು ಹೊತ್ತಿರುವುದೇ ಈ ಸಾಕ್ಷ್ಯಚಿತ್ರ ಎಂದು ಹೇಳಿದರು.

78 ನಿಮಿಷಗಳ ‘ಗಾಡ್ಸ್ ವೈವ್ಸ್ ಮೆನ್ಸ್ ಸ್ಲೇವ್ಸ್’ ಸಾಕ್ಷ್ಯಚಿತ್ರದ ಪ್ರದರ್ಶನದಲ್ಲಿ ವಿವಿಯ ವಿವಿಧ ಸ್ನಾತಕೋತ್ತರ ವಿಭಾಗಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕರ್ನಾಟಕದ ಕೆಲವು ಭಾಗಗಳಲ್ಲಿ ಇನ್ನೂ ಚಾಲ್ತಿಯಲ್ಲಿರುವ ದೇವದಾಸಿ ಪದ್ಧತಿಯ ನೋವುಗಳನ್ನು ಅನಾವರಣಗೊಳಿಸುವ ಸಾಕ್ಷ್ಯಚಿತ್ರದ ಕುರಿತು ವಿದ್ಯಾರ್ಥಿಗಳೊಂದಿಗೆ ಸಾಕ್ಷ್ಯಚಿತ್ರದ ನಿರ್ದೇಶಕಿ ಮತ್ತು ಕಾರ್ಯನಿರ್ವಾಹಕ ನಿರ್ಮಾಪಕ ಸಂವಾದ ನಡೆಸಿದರು.

ಸಾಕ್ಷ್ಯಚಿತ್ರದ ಕಾರ್ಯನಿರ್ವಾಹಕ ನಿರ್ಮಾಪಕ ರವಿನಾರಾಯಣ, ತುಮಕೂರು ವಿವಿ ಸ್ನಾತಕೋತ್ತರ ಸಮಾಜಕಾರ್ಯ ವಿಭಾಗದ ಅಧ್ಯಕ್ಷ ಪ್ರೊ. ರಮೇಶ್ ಬಿ., ಪ್ರಾಧ್ಯಾಪಕ ಪ್ರೊ.ಕೆ.ಜಿ. ಪರಶುರಾಮ, ಪತ್ರಿಕೋದ್ಯಮ ವಿಭಾಗದ ಸಂಯೋಜಕ ಡಾ.ಸಿಬಂತಿ ಪದ್ಮನಾಭ ಕೆ.ವಿ. ಉಪಸ್ಥಿತರಿದ್ದರು.

1930ರ ವರೆಗೂ ದೇವದಾಸಿ ಪದ್ಧತಿ ಎನ್ನುವುದು ದೈವಿಕ ಹಾಗೂ ಪವಿತ್ರ ಆಚರಣೆಯಾಗಿತ್ತು. ಹೆಣ್ಣನ್ನು ಲಕ್ಷ್ಮೀ ಎಂದು ಪೂಜಿಸುತ್ತಿದ್ದ ಕಾಲವದು. ಕಲೆಯ ಅನಾವರಣವೇ ದೇವದಾಸಿ ಪದ್ಧತಿ ಎಂಬುದಾಗಿತ್ತು. ಮೂಢನಂಬಿಕ, ಭಯ, ತಳ ಸಮುದಾಯದ ಆರ್ಥಿಕ ಪರಿಸ್ಥಿತಿಯ ಅಳಲನ್ನು ಕೀಳು ಮಟ್ಟದಲ್ಲಿ ಬಳಸಿಕೊಳ್ಳುವ ವರ್ಗದಿಂದಾಗಿ ಈ ಅನಿಷ್ಟ ಪದ್ಧತಿ ವೇಶ್ಯಾವಾಟಿಕೆಯಾಗಿ ಬದಲಾಗಿ ಇಂದಿಗೂ ಜೀವಂತವಾಗಿದೆ.

ನಾಹೀದಾ ಜಮ್ ಜಮ್, ಕುಲಸಚಿವರು, ತುಮಕೂರು ವಿವಿ 

click me!