ಅಂಬಾರಿ ಹೊತ್ತ ಆನೆ ‘ಅಭಿಮನ್ಯು’ವಿನ ಪರಾಕ್ರಮ

By Kannadaprabha NewsFirst Published Oct 16, 2021, 12:52 PM IST
Highlights
  • ಕಾಡಾನೆ ಮತ್ತು ಹುಲಿಗಳ ಕಾರ್ಯಾಚರಣೆಗೂ ಸೈ, ಅಂಬಾರಿ ಹೊರಲು ಜೈ ಎನ್ನುವ ಗಜರಾಜ ಅಭಿಮನ್ಯು
  •  ಜಂಬೂಸವಾರಿಯಲ್ಲಿ ಸತತ 2ನೇ ಬಾರಿಗೆ 750 ಕೆ.ಜಿ. ತೂಕದ ಚಿನ್ನದ ಅಂಬಾರಿಯನ್ನು ಹೊರುವ ಮೂಲಕ ತನ್ನ ಪರಾಕ್ರಮ

ಬಿ. ಶೇಖರ್‌ ಗೋಪಿನಾಥಂ

 ಮೈಸೂರು (ಅ.16):  ಕಾಡಾನೆ ಮತ್ತು ಹುಲಿಗಳ ಕಾರ್ಯಾಚರಣೆಗೂ ಸೈ, ಅಂಬಾರಿ (Ambari) ಹೊರಲು ಜೈ ಎನ್ನುವ ಗಜರಾಜ ಅಭಿಮನ್ಯು (Abhimanyu) ಆನೆಯು ವಿಶ್ವವಿಖ್ಯಾತ ನಾಡಹಬ್ಬ ದಸರಾ (Dasara) ಮಹೋತ್ಸವದ ಜಂಬೂಸವಾರಿಯಲ್ಲಿ (Jambusavari) ಸತತ 2ನೇ ಬಾರಿಗೆ 750 ಕೆ.ಜಿ. ತೂಕದ ಚಿನ್ನದ ಅಂಬಾರಿಯನ್ನು (Goldem hwda) ಹೊರುವ ಮೂಲಕ ತನ್ನ ಪರಾಕ್ರಮವನ್ನು ಮತ್ತೊಮ್ಮೆ ಸಾಬೀತುಪಡಿಸಿತು.

ಅರಮನೆ (Palace) ಆವರಣದೊಳಗೆ ಸಾವಿರಾರು ಜನರ ನಡುವೆ ಸುಮಾರು 500 ಮೀಟರ್‌ ಅಂಬಾರಿ ಹೊತ್ತಿರುವ ಅಭಿಮನ್ಯು ಆನೆಯು (Elephant), ಮೈಸೂರಿನ (Mysuru) ರಾಜಮಾರ್ಗದಲ್ಲಿ ಲಕ್ಷಾಂತರ ಜನರ ಸಮ್ಮುಖದಲ್ಲಿ ಅಂಬಾರಿ ಹೊತ್ತು ಬನ್ನಿಮಂಟಪ ತಲುಪುವ ಕಾರ್ಯಕ್ಕೆ ಎದುರು ನೋಡುತ್ತಿದೆ.

ಕಳೆದ 22 ವರ್ಷಗಳಿಂದ ದಸರೆಯಲ್ಲಿ ಭಾಗವಹಿಸುತ್ತಿರುವ 56 ವರ್ಷದ ಅಭಿಮನ್ಯು ಆನೆಗೆ 2020ನೇ ದಸರಾ ಮಹೋತ್ಸವದಲ್ಲಿ ಮೊದಲ ಬಾರಿಗೆ ಚಿನ್ನದ ಅಂಬಾರಿಯನ್ನು ಹೊರುವ ಅವಕಾಶ ಸಿಕ್ಕಿತ್ತು. ಅದನ್ನು ಯಶಸ್ವಿಯಾಗಿ ನಿರ್ವಹಿಸುವ ಮೂಲಕ ಅಭಿಮನ್ಯು ಆನೆಯು 2021ನೇ ದಸರೆಯಲ್ಲಿ ಅಂಬಾರಿ ಹೊರುವಲ್ಲಿ ಯಶಸ್ವಿಯಾಯಿತು.

500 ಮೀಟರ್‌ ಅಂಬಾರಿ ಹೊತ್ತ ಅಭಿಮನ್ಯು ಆನೆಯು ಅರಮನೆಯಿಂದ ಬನ್ನಿಮಂಟಪದವರೆಗೆ 5 ಕಿ.ಮೀ. ಚಿನ್ನದ ಅಂಬಾರಿ ಹೊತ್ತು ಸಾಗುವ ಮೂಲಕ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಲು ಅವಕಾಶಕ್ಕಾಗಿ ಎದುರು ನೋಡುತ್ತಿದ್ದು, ಬಹುಶ ಇದು 2022ನೇ ದಸರೆಯಲ್ಲಿ ಈಡೇರುವ ಸಾಧ್ಯತೆ ಇದೆ.

ಜಂಬೂಸವಾರಿಯಲ್ಲಿ ನಾಡದೇವತೆ ಚಾಮುಂಡೇಶ್ವರಿ (Chamundeshwari) ಉತ್ಸವ ಮೂರ್ತಿ ಇರುವ 750 ಕೆ.ಜಿ. ತೂಕದ ಚಿನ್ನದ ಅಂಬಾರಿಯನ್ನು ಹೊತ್ತು ತಂದ ಅಭಿಮನ್ಯು ಆನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraja Bommai), ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿ ಆರ್‌.ಆರ್‌. ಅವಸ್ತಿ (RR Avasti), ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌ (ST Somashekar), ಮೇಯರ್‌ ಸುನಂದಾ ಪಾಲನೇತ್ರ (Sunanda Palanetra), ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ (Yaduveer Wadiyar), ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್‌ (Bagadi Goutham), ಪೊಲೀಸ್‌ ಆಯುಕ್ತ ಡಾ. ಚಂದ್ರಗುಪ್ತ (SP Chandragupta) ಅವರಿಂದ ಪುಷ್ಪಾರ್ಚನೆ ಮಾಡಿಸಿಕೊಂಡಿತು. ನಂತರ ಕುಮ್ಕಿ ಆನೆಗಳಾದ ಕಾವೇರಿ ಮತ್ತು ಚೈತ್ರಾ ಜೊತೆಗೆ ಸಾಗಿತು.

ದಸರಾ ಜಂಬೂಸವಾರಿಯಲ್ಲಿ ಕರ್ನಾಟಕ (Karnataka) ವಾದ್ಯಗೋಷ್ಠಿಯವರು ಕುಳಿತುಕೊಳ್ಳುವ ಗಾಡಿಯನ್ನು ಎಳೆಯುವ ಜವಾಬ್ದಾರಿ ನಿರ್ವಹಿಸಿದ್ದ ಅಭಿಮನ್ಯು ಆನೆಯು ನಂತರ ನೌಫತ್‌ ಆನೆಯಾಗಿ ಮೆರವಣಿಗೆಯಲ್ಲಿ ಸಾಗುತ್ತಿತ್ತು. ಅಲ್ಲದೆ, ಶ್ರೀರಂಗಪಟ್ಟಣ (Shrirangapattana) ದಸರೆಯಲ್ಲಿ ಮರದ ಅಂಬಾರಿಯನ್ನು 7- 8 ವರ್ಷ ಹೊತ್ತಿರುವ ಅನುಭವ ಸಹ ಹೊಂದಿತ್ತು. ಎರಡನೇ ಬಾರಿ ಅಭಿಮನ್ಯು ಆನೆಯು ಅಂಬಾರಿ ಹೊತ್ತಿದ್ದು, ಇದು ಅರಮನೆ ಆವರಣಕ್ಕೆ ಸೀಮಿತವಾಗಿದೆ.

ಹಿಂದಿನ ಅಂಬಾರಿ ಆನೆಗಳು

ದಸರಾ ಮೆರವಣಿಗೆಯಲ್ಲಿ ಮೊದಲು ದ್ರೋಣ ಆನೆಯು ಅಂಬಾರಿ ಹೊರುವ ಜವಾಬ್ದಾರಿ ನಿರ್ವಹಿಸುತ್ತಿತ್ತು. ದ್ರೋಣನ ನಂತರ ಬಲರಾಮ ಆನೆಯು ಸತತ 14 ಬಾರಿ ಅಂಬಾರಿ ಹೊತ್ತು ಸಾಧನೆ ಮಾಡಿತ್ತು. 2012ರಲ್ಲಿ ಬಲರಾಮ ಆನೆಗೆ ನಿಶ್ಯಕ್ತಿ ಕಾಡಿದ್ದರಿಂದ ಅರ್ಜುನ (Arjuna) ಆನೆಯು 2012 ರಿಂದ 2019 ರವರೆಗೆ ಸತತ 8 ಬಾರಿ ಅಂಬಾರಿ ಹೊರುವ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿತ್ತು.

ಅರ್ಜುನ ಆನೆಗೆ 60 ವರ್ಷ ತುಂಬಿದ ಹಿನ್ನೆಲೆಯಲ್ಲಿ 2020 ರಿಂದ ಅಭಿಮನ್ಯು ಆನೆಯು ಅಂಬಾರಿ ಹೊರುವ ಜವಾಬ್ದಾರಿ ನಿರ್ವಹಿಸುತ್ತಿದೆ. ಕಳೆದ 2 ವರ್ಷಗಳಿಂದ ಮಾವುತ ವಸಂತ ಮತ್ತು ಕಾವಾಡಿ ರಾಜು ಅವರು ಸಹ ಅಂಬಾರಿ ಹೊರಿಸುವ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದರು.

8ರಲ್ಲಿ 6 ಆನೆಗಳು ಮಾತ್ರ ಭಾಗಿ

ಈ ಬಾರಿ ದಸರಾ ಮಹೋತ್ಸವಕ್ಕೆ 8 ಆನೆಗಳನ್ನು ಕಾಡಿನಿಂದ (Forest) ನಾಡಿಗೆ ತರಲಾಗಿತ್ತು. ಈ ಪೈಕಿ 6 ಆನೆಗಳು ಮಾತ್ರ ಜಂಬೂಸವಾರಿಯಲ್ಲಿ ಭಾಗವಹಿಸಿತ್ತು. ಅಭಿಮನ್ಯು ಆನೆಗೆ ಅಂಬಾರಿ ಹೊರಿಸಲಾಯಿತು. ಇದರ ಅಕ್ಕಪಕ್ಕದಲ್ಲಿ ಕಾವೇರಿ ಮತ್ತು ಚೈತ್ರಾ ಕುಮ್ಕಿ ಆನೆಗಳು ಸಾಗಿದವು. ನಿಶಾನೆ ಆನೆಯಾಗಿ ಧನಂದಯ, ನೌಫತ್‌ ಆನೆಯಾಗಿ ಗೋಪಾಲಸ್ವಾಮಿ ಮತ್ತು ಸಾಲಾನೆಯಾಗಿ ಮೊದಲ ಬಾರಿಗೆ ದಸರೆಗೆ ಬಂದಿದ್ದ ಅಶ್ವತ್ಥಾಮ ಆನೆಯು ಮೆರವಣಿಗೆಯಲ್ಲಿ ಸಾಗಿತು.

ಉಳಿದಂತೆ ಮದ ಬಂದಿರುವ ವಿಕ್ರಮ ಆನೆಯನ್ನು ಜಂಬೂಸವಾರಿಯಿಂದ ಡಿಬಾರ್‌ ಮಾಡಲಾಗಿತ್ತು. ಹಾಗೆಯೇ, ಲಕ್ಷ್ಮಿ ಆನೆ ಸಹ ಮೆರವಣಿಗೆಯಿಂದ ದೂರ ಉಳಿದಿತ್ತು.

click me!