ಹಾಲಕ್ಕಿಗಳ ಪ. ಪಂಗಡಕ್ಕೆ ಸೇರ್ಪಡೆಗೆ ಅಮಿತ್‌ ಶಾಗೆ ಆಗ್ರಹಿಸಿದ ರೂಪಾಲಿ

By Kannadaprabha NewsFirst Published Oct 16, 2021, 11:41 AM IST
Highlights

*  ಗೋವಾದಲ್ಲಿ ಅಮಿತ್‌ ಶಾ ಭೇಟಿಯಾದ ಶಾಸಕಿ ರೂಪಾಲಿ ನಾಯ್ಕ
*  ನೌಕಾನೆಲೆಯಲ್ಲಿ ಶಿಪ್‌ಯಾರ್ಡ್‌ ನಿರ್ಮಾಣ
*  ಸೀಬರ್ಡ್‌ ನೌಕಾನೆಲೆ ಹಾಗೂ ದೇಶದ ರಕ್ಷಣೆಗಾಗಿ ಆಸ್ತಿ-ಪಾಸ್ತಿ ತ್ಯಾಗ
 

ಕಾರವಾರ(ಅ.16): ಹಾಲಕ್ಕಿ ಒಕ್ಕಲಿಗರನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡುವುದು, ಸೀಬರ್ಡ್‌ ನಿರಾಶ್ರಿತರನ್ನು ರಾಷ್ಟ್ರೀಯ ಸಂತ್ರಸ್ತರೆಂದು ಪರಿಗಣಿಸುವುದು, ಹುಬ್ಬಳ್ಳಿ-ಅಂಕೋಲಾ(Hubballi-Ankola) ರೈಲು(Railway) ಮಾರ್ಗಕ್ಕೆ ಚಾಲನೆ, ನೌಕಾನೆಲೆಯಲ್ಲಿ ಶಿಪ್‌ಯಾರ್ಡ್‌ ಹಾಗೂ ಸರ್ವೀಸ್‌ ಇಂಡಸ್ಟ್ರಿ ಸ್ಥಾಪನೆ ಮಾಡಬೇಕೆಂದು ಕಾರವಾರ-ಅಂಕೋಲಾ(Karwar-Ankola) ವಿಧಾನಸಭೆ ಕ್ಷೇತ್ರದ ಶಾಸಕಿ ರೂಪಾಲಿ ನಾಯ್ಕ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೆ ಮನವಿ ಮಾಡಿದ್ದಾರೆ.

ಗುರುವಾರ ಗೋವಾಕ್ಕೆ(Goa) ಆಗಮಿಸಿದ ಅಮಿತ್‌ ಶಾ(Amit Shah) ಅವರನ್ನು ಭೇಟಿಯಾದ ರೂಪಾಲಿ ನಾಯ್ಕ(Roopali Naik), ಕಾರವಾರ ಅಂಕೋಲಾ ವಿಧಾನಸಭೆ ಕ್ಷೇತ್ರದ ಅಭಿವೃದ್ಧಿಗಾಗಿ ಆಗ್ರಹಿಸಿದ್ದಾರೆ. 

ಹಾಲಕ್ಕಿ ಒಕ್ಕಲಿಗರ ಪ. ಪಂಗಡಕ್ಕೆ ಸೇರ್ಪಡೆಗೆ ಮನವಿ:

ಮೀನುಗಾರರಿಗೆ 3 ಸಾವಿರ ರೂ ನೆರವು, ಸಿಎಂಗೆ ಶಾಸಕಿ ರೂಪಾಲಿ ನಾಯ್ಕ್‌ ಧನ್ಯವಾದ

ಪರಿಶಿಷ್ಟ ಪಂಗಡಕ್ಕೆ(Scheduled Caste) ತಮ್ಮನ್ನು ಸೇರ್ಪಡೆ ಮಾಡಬೇಕೆನ್ನುವುದು ಸುಮಾರು 1.50 ಲಕ್ಷದಷ್ಟು ಜನಸಂಖ್ಯೆ ಹೊಂದಿರುವ ಹಾಲಕ್ಕಿ ಒಕ್ಕಲಿಗರ(Halakki Okkaliga) ಬಹುಕಾಲದ ಬೇಡಿಕೆಯಾಗಿದೆ. ಪದ್ಮಶ್ರೀ ಸುಕ್ರಿ ಗೌಡ ಹಾಗೂ ಪದ್ಮಶ್ರೀ ತುಳಸಿ ಗೌಡ ಇದೇ ಸಮುದಾಯದಿಂದ ಬಂದು ನಾಡಿಗೆ, ರಾಷ್ಟ್ರಕ್ಕೆ ಹೆಮ್ಮೆ ತಂದಿದ್ದಾರೆ. ಹಾಲಕ್ಕಿ ಒಕ್ಕಲಿಗರ ಬಗ್ಗೆ ಈಗಾಗಲೇ ವೈಜ್ಞಾನಿಕ ಅಧ್ಯಯನ ನಡೆಸಲಾಗಿದೆ ಹಾಗೂ ಇವರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಬಗ್ಗೆ ಈಗಾಗಲೇ ಕೇಂದ್ರ ಸರ್ಕಾರಕ್ಕೆ ಶಿಫಾರಸನ್ನೂ ಮಾಡಲಾಗಿದೆ. ಹಾಲಕ್ಕಿ ಒಕ್ಕಲಿಗರ ಈ ನ್ಯಾಯಯುತ ಬೇಡಿಕೆಯನ್ನು ಈಡೇರಿಸಲು ಕ್ರಮ ಕೈಗೊಳ್ಳುವಂತೆ ಶಾಸಕರು ಮನವಿ ಮಾಡಿ, ಹಾಲಕ್ಕಿ ಒಕ್ಕಲಿಗರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಅಮಿತ್‌ ಶಾ ಅವರಿಗೆ ಮಾಹಿತಿ ನೀಡಿದರು.

ಸೀಬರ್ಡ್‌ ನಿರಾಶ್ರಿತರ ಕುಟುಂಬಕ್ಕೊಂದು ಉದ್ಯೋಗ:

ಸೀಬರ್ಡ್‌(Seabird) ನೌಕಾನೆಲೆಯಲ್ಲಿ 4,604 ಕುಟುಂಬಗಳು ನಿರಾಶ್ರಿತರಾಗಿವೆ. ಈಗ 968 ಜನರಿಗೆ ಉದ್ಯೋಗ(Jobs) ನೀಡಲಾಗಿದೆ. ದೇಶದ(India) ರಕ್ಷಣೆಗಾಗಿ ತ್ಯಾಗ ಮಾಡಿದ ಉಳಿದ ನಿರಾಶ್ರಿತರ ಪ್ರತಿ ಕುಟುಂಬಕ್ಕೊಂದು ಉದ್ಯೋಗ ನೀಡುವಂತಾಗಬೇಕು ಎಂದು ಮನವಿ ಮಾಡಿದರು.

ಸೀಬರ್ಡ್‌ ನೌಕಾನೆಲೆ ನಿರಾಶ್ರಿತರು ದೇಶದ ರಕ್ಷಣೆಗಾಗಿ ತಮ್ಮ ಆಸ್ತಿ-ಪಾಸ್ತಿಯನ್ನು ತ್ಯಾಗ ಮಾಡಿದ್ದಾರೆ. ಈ ಕಾರಣಕ್ಕಾಗಿ ಇವರನ್ನು ರಾಷ್ಟ್ರೀಯ ಸಂತ್ರಸ್ತರೆಂದು(Victims) ಪರಿಗಣಿಸಿ ಪ್ರತಿ ಕುಟುಂಬಕ್ಕೆ ಒಂದು ಉದ್ಯೋಗ, ಇತರ ಸೌಲಭ್ಯ ಕಲ್ಪಿಸಿ ಅವರು ಗೌರವಯುತವಾಗಿ ಬದುಕಲು ಅವಕಾಶ ಮಾಡಿಕೊಡಬೇಕು ಎಂದು ವಿನಂತಿಸಿದರು.

ಹುಬ್ಬಳ್ಳಿ ಅಂಕೋಲಾ ರೈಲು ಮಾರ್ಗ:

ಅಂದಿನ ಪ್ರಧಾನಿಮಂತ್ರಿ ಅಟಲ್‌ ಬಿಹಾರಿ ವಾಜಪೇಯಿ(Atal Bihari Vajpayee) ಅವರು ಶಿಲಾನ್ಯಾಸ ಮಾಡಿದ ಹುಬ್ಬಳ್ಳಿ ಅಂಕೋಲಾ ರೈಲು ಮಾರ್ಗ ಕಾನೂನು ಹಾಗೂ ಪರಿಸರದ ತೊಡಕಿನಿಂದ ಸ್ಥಗಿತಗೊಂಡಿದೆ. ಈ ರೈಲು ಮಾರ್ಗಕ್ಕೆ ಇರುವ ಕಾನೂನಿನ ಅಡ್ಡಿ ಆತಂಕಗಳನ್ನು ನಿವಾರಣೆ ಮಾಡಲು ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಕರಾವಳಿಯ ಪ್ರದೇಶದ ಅಭಿವೃದ್ಧಿಯ ಬಾಗಿಲು ತೆರೆಯುವ ಹುಬ್ಬಳ್ಳಿ ಅಂಕೋಲಾ ರೈಲು ಮಾರ್ಗ ನಿರ್ಮಾಣಕ್ಕೆ ಚಾಲನೆ ನೀಡಬೇಕು ಎಂದು ಮನವಿ ಮಾಡಿದರು.

ನೌಕಾನೆಲೆಯಲ್ಲಿ ಶಿಪ್‌ಯಾರ್ಡ್‌ ನಿರ್ಮಾಣ:

ನೌಕಾನೆಲೆಯಲ್ಲಿ ಶಿಪ್‌ಯಾರ್ಡ್‌ ನಿರ್ಮಾಣ, ನೌಕಾನೆಲೆಗೆ ಅಗತ್ಯವಿರುವ ಉಪಕರಣ, ಸಾಮಗ್ರಿಗಳ ಉತ್ಪಾದನೆಗೆ ಕೈಗಾರಿಕೆಗಳನ್ನು ಸ್ಥಾಪನೆ ಮಾಡುವ ಮೂಲಕ ನಿರಾಶ್ರಿತರು ಹಾಗೂ ಸ್ಥಳೀಯರಿಗೆ ಉದ್ಯೋಗಾವಕಾಶ ದೊರಕಿಸಿಕೊಟ್ಟು, ಈ ಪ್ರದೇಶದ ಆರ್ಥಿಕ ಚಟುವಟಿಕೆ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಶಾಸಕರು ವಿನಂತಿಸಿದರು.

ದೇಶದ ರಕ್ಷಣೆಗಾಗಿ ತ್ಯಾಗ ಮಾಡಿದ ನಿರಾಶ್ರಿತರಿಗೆ ಮೂರು ದಶಕಗಳಿಂದ ಕಗ್ಗಂಟಾಗಿದ್ದ ಪರಿಹಾರವನ್ನು ನರೇಂದ್ರ ಮೋದಿ ನೇತೃತ್ವದ ಬಿಜೆಪಿ(BJP) ಸರ್ಕಾರ ಕೇಂದ್ರದಲ್ಲಿ ಆಡಳಿತಕ್ಕೆ ಬಂದ ತರುವಾಯ ಪರಿಹಾರ(Compensation) ನೀಡುವಂತಾಯಿತು. ಇದಕ್ಕಾಗಿ ನರೇಂದ್ರ ಮೋದಿ(Narendra Modi) ಹಾಗೂ ಕೇಂದ್ರ ಸರ್ಕಾರಕ್ಕೆ(Central Government) ಶಾಸಕಿ ರೂಪಾಲಿ ನಾಯ್ಕ, ಅಮಿತ್‌ ಶಾ ಮೂಲಕ ಕೃತಜ್ಞತೆ ಸಲ್ಲಿಸಿದರು.
 

click me!