
ಹನೂರು (ಏ.14): ಬಾಬಾ ಸಾಹೇಬರು ವಿಶ್ವ ಮೆಚ್ಚುವಂತಹ ಮಹಾನಾಯಕ. ಅವರು ಹಾಕಿಕೊಟ್ಟಿರುವ ಮಾರ್ಗದಲ್ಲಿ ನಾವು ನಡೆದಾಗ ಮಾತ್ರ ಇಂಥ ಕಾರ್ಯಕ್ರಮಗಳಿಗೆ ಅರ್ಥ ಸಿಗುತ್ತದೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಹನೂರಿನಲ್ಲಿ 3 ದಿನ ನಡೆಯುವ ಅಂಬೇಡ್ಕರ್ ಹಬ್ಬದ ಮೊದಲ ದಿನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಅಂಬೇಡ್ಕರ್ ಹೇಳಿದಂತೆ ತಾವು ಮತ ಚಲಾಯಿಸುವಾಗ ರಾಜಕಾರಣಿಗಳ ಬಳಿ ಯಾವುದೇ ಆಸೆ ಆಮಿಷಗಳಿಗೆ ಬಲಿಯಾಗದೆ, ನನ್ನ ಮತ ನನ್ನ ವೈಯಕ್ತಿಕವಾದಂತಹ ಇಚ್ಛೆ. ನನ್ನ ನಾಯಕನನ್ನು ಆಯ್ಕೆ ಮಾಡಿಕೊಳ್ಳುವುದು ನನ್ನ ಧರ್ಮ. ನಾನು ಯಾವುದೇ ಆಸೆಗಳಿಗೆ ಬಲಿಯಾಗದೆ ಮತ ಚಲಾಯಿಸುತ್ತೇನೆಂಬ ಪ್ರತಿಜ್ಞೆ ಮಾಡಿದಾಗ ಮಾತ್ರ ಇಂಥ ಕಾರ್ಯಕ್ರಮಗಳಿಗೆ ಮೌಲ್ಯ ಹೆಚ್ಚಾಗುತ್ತದೆ.
ಜೊತೆಗೆ ಯುವಕರು ವಿದ್ಯಾರ್ಥಿಗಳು ಬಾಬಾ ಸಾಹೇಬರ ಪುಸ್ತಕಗಳನ್ನು ಹೆಚ್ಚು ಓದುವುದರಿಂದ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದರು. ಸಾಹಿತಿ ಹನೂರು ಚನ್ನಪ್ಪ ಮಾತನಾಡಿ, ದುನಿಯಾ ವಿಜಯ್ ಅವರು ಇತ್ತೀಚಿನ ದಿನಗಳಲ್ಲಿ ಬಾಬಾ ಸಾಹೇಬರ ಪುಸ್ತಕಗಳನ್ನು ಸುದೀರ್ಘವಾಗಿ ಅಧ್ಯಯನ ಮಾಡುವ ಮೂಲಕ ಅವರ ಮೌಲ್ಯಗಳನ್ನು ತಮ್ಮಲ್ಲಿ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುತ್ತಿದ್ದಾರೆ ಎಂದರು.
ಸಾಹಿತಿ ಹ ರಾ ಮಹೇಶ್ ಮಾತನಾಡಿ, ಜಾತಿ ವ್ಯವಸ್ಥೆ ಹಾಗೂ ಅಸ್ಪೃಶ್ಯತೆ ದೇಶದಲ್ಲಿ ಇನ್ನೂ ಜೀವಂತವಾಗಿದೆ. ಇದು ಬದಲಾವಣೆಯಾದರೆ ಮಾತ್ರ ಪ್ರಬುದ್ಧ ಭಾರತ ನಿರ್ಮಿಸಲು ಸಾಧ್ಯ ಎಂದರು. ಇದೇ ಸಂದರ್ಭದಲ್ಲಿ ಮೈಸೂರು ಮಾಜಿ ಮೇಯರ್ ಪುರುಷೋತ್ತಮ್, ಡಿವೈಎಸ್ಪಿ ಮಹಾನಂದ್, ತುಮಕೂರು ಜಿಲ್ಲಾ ಅಪರ ಪೊಲೀಸ್ ವರಿಷ್ಠಾಧಿಕಾರಿ ಗೋಪಾಲ್, ಹನೂರು ಪಟ್ಟಣದ ಯಜಮಾನರು, ಪಟ್ಟಣ ಪಂಚಾಯ್ತಿ ಮಾಜಿ ಸದಸ್ಯರು ಸೇರಿ ಹಲವರಿದ್ದರು.