
ಶಿವಮೊಗ್ಗ (ಏ.14): ಅಧಿಕಾರ ದಾಹ ಚಟುವಟಿಕೆಗಳಿಂದ ಬಳಲುತ್ತಿರುವ ರಾಜ್ಯ ಕಾಂಗ್ರೆಸ್ ಮುಖಂಡರ ನಡೆಯಿಂದಾಗಿ ರಾಜ್ಯ ರಾಜಕಾರಣದಲ್ಲಿ ಎರಡು ತಿಂಗಳ ಒಳಗಾಗಿ ಸಾಕಷ್ಟು ಬದಲಾವಣೆಗಳಾಗಲಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಭವಿಷ್ಯ ನುಡಿದರು.
ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಸಮಸ್ಯೆಗಳಿದ್ದರೂ ಸಹ ಮುಖ್ಯಮಂತ್ರಿ ಸಿದ್ಧರಾಮಯ್ಯ ಅಧಿಕಾರ ಉಳಿಸಿಕೊಳ್ಳಲು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಲು ಮುಸುಕಿನ ಗುದ್ದಾಟ ನಡೆಸುತ್ತಿದ್ದಾರೆ. ಇನ್ನೊಂದೆಡೆ ಹಲವಾರು ಶಾಸಕರು ಸಚಿವರಾಗಲು ಹಾತೊರೆಯುತ್ತಿದ್ದು, ದೆಹಲಿ ಯಾತ್ರೆ ಕೈಗೊಂಡಿದ್ದಾರೆ. ಇಡೀ ರಾಜ್ಯದಲ್ಲಿ ಆಡಳಿತ, ಅಭಿವೃದ್ಧಿ ನೋಡಬೇಕಾದವರು ಇಂತಹ ಕಚ್ಚಾಟದಲ್ಲಿ ತೊಡಗಿದರೆ ಅಭಿವೃದ್ಧಿ ಸಾಧ್ಯವಾಗುವುದಾದರೂ ಹೇಗೆ ಎಂದು ಪ್ರಶ್ನಿಸಿದರು.
ದಾವಣಗೆರೆ ಉಪಚುನಾವಣೆಯಿಂದ ಮುಸ್ಲಿಂ ಸಮುದಾಯದವರಲ್ಲಿ ಗೊಂದಲ ಉಂಟಾಗಿದೆ. ಆ ಧರ್ಮದ ನಾಯಕರುಗಳಲ್ಲಿ ಕಚ್ಚಾಟ ನಡೆಯುತ್ತಿದೆ. ಮುಸ್ಲಿಂರ ಓಟನ್ನೆ ನೆಚ್ಚಿಕೊಂಡಿದ್ದ ಕಾಂಗ್ರೆಸ್ ಗೆ ಈಗಿನ ಬೆಳವಣಿಗೆಯಿಂದ ಆ ಸಮುದಾಯದ ಮತಗಳು ಕೈ ಬಿಡುವ ಆತಂಕ ಎದುರಾಗಿದೆ. ಹೀಗಾಗಿ ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಸ್ತಿತ್ವದಲ್ಲಿ ಉಳಿಯುವುದೇ ಸಂಶಯ ಎಂದರು.
ಕೇಂದ್ರ ಸರ್ಕಾರ ಮಹಿಳಾ ಮೀಸಲಾತಿಯನ್ನು ಜಾರಿಗೆ ತರುತ್ತಿರುವುದು ಸ್ವಾಗತಿಸಿದ ಅವರು ಮಹಿಳೆಯರು ಆಡಳಿತಲ್ಲಿ ಸೈ ಎನಿಸಿಕೊಂಡ ಉದಾಹರಣೆಗಳು ನಮ್ಮ ಇತಿಹಾಸದಲ್ಲಿದೆ. ಇಂದಿರಾ ಗಾಂಧಿ, ಸುಷ್ಮಾ ಸ್ವರಾಜ್ ಸೇರಿದಂತೆ ಹಲವರು ಇದಕ್ಕೆ ಉದಾಹರಣೆ ಎಂದು ಹೇಳಿದರು. ಹಿರಿಯ ಗಾಯಕಿ ಆಶಾ ಬೋಸ್ಲೆ ನಿಧನಕ್ಕೆ ಈಶ್ವರಪ್ಪ ಸಂತಾಪ ಸೂಚಿಸಿದರು.