ಬಾಗಲಕೋಟೆ: ಚಾಲನೆ ಮಾಡುವಾಗಲೇ ಹೃದಯಾಘಾತ ಸಂಭವಿಸಿದರೂ, ತನ್ನ ಪ್ರಾಣ ಹೋಗುವ ಕಡೆಯ ಕ್ಷಣದಲ್ಲಿ ಸಮಯಪ್ರಜ್ಞೆ ಮೆರೆದ ಲಾರಿ ಚಾಲಕರೊಬ್ಬರು ದೊಡ್ಡ ಅನಾಹುತವನ್ನು ತಪ್ಪಿಸಿ ಮಾನವೀಯತೆ ಮೆರೆದಿರುವ ಘಟನೆ ಜಿಲ್ಲೆಯ ಇಳಕಲ್ ನಗರದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಮೃತ ಚಾಲಕನನ್ನು ಜಮ್ಮು ಕಾಶ್ಮೀರದ ಕಥುವಾ ಜಿಲ್ಲೆಯ ಬಸೋಳಿ ಪಟ್ಟಣದ ನಿವಾಸಿ ಇನ್ಸಾರ್ ಅಹ್ಮದ್ (60) ಎಂದು ಗುರುತಿಸಲಾಗಿದೆ. ಇವರು ತಮ್ಮ ಲಾರಿಯೊಂದಿಗೆ ಕುಷ್ಟಗಿ ಮಾರ್ಗದತ್ತ ಪ್ರಯಾಣಿಸುತ್ತಿದ್ದರು. ಇಳಕಲ್ ನಗರದ ಹತ್ತಿರ ಹೆದ್ದಾರಿಯಲ್ಲಿ ಸಾಗುತ್ತಿದ್ದಾಗ ಇನ್ಸಾರ್ ಅವರಿಗೆ ಇದ್ದಕ್ಕಿದ್ದಂತೆ ತೀವ್ರ ಹೃದಯಾಘಾತ ಸಂಭವಿಸಿದೆ.
ಹೃದಯಾಘಾತದ ತೀವ್ರ ನೋವು ಕಾಣಿಸಿಕೊಂಡ ತಕ್ಷಣ, ಚಾಲಕ ಇನ್ಸಾರ್ ಅಹ್ಮದ್ ಗಾಬರಿಯಾಗದೆ ಅದ್ಭುತ ಸಮಯಪ್ರಜ್ಞೆ ಮೆರೆದಿದ್ದಾರೆ. ವೇಗವಾಗಿ ಚಲಿಸುತ್ತಿದ್ದ ಲಾರಿ ನಿಯಂತ್ರಣ ತಪ್ಪಿ ಇತರ ವಾಹನಗಳಿಗೆ ಡಿಕ್ಕಿಯಾದರೆ ದೊಡ್ಡ ಪ್ರಾಣಾಪಾಯ ಸಂಭವಿಸಬಹುದು ಎಂದು ಅರಿತ ಅವರು, ನೋವಿನ ನಡುವೆಯೂ ಲಾರಿಯನ್ನು ಸುರಕ್ಷಿತವಾಗಿ ರಸ್ತೆಯ ಪಕ್ಕಕ್ಕೆ ನಿಲ್ಲಿಸಿದ್ದಾರೆ. ಲಾರಿ ನಿಲ್ಲಿಸಿದ ಕೆಲವೇ ಕ್ಷಣಗಳಲ್ಲಿ ಅವರು ಸ್ಟೇರಿಂಗ್ ಮೇಲೆಯೇ ಮಲಗಿ ಕೊನೆಯುಸಿರೆಳೆದಿದ್ದಾರೆ.
ತಾನು ಸಾಯುವ ಮುನ್ನ ರಸ್ತೆಯಲ್ಲಿದ್ದ ಜನರ ಜೀವ ಉಳಿಸಿದ ಚಾಲಕನ ಈ ಕಾರ್ಯಕ್ಕೆ ಸಾರ್ವಜನಿಕರು ಭಾವುಕರಾಗಿ ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ. ವಿಷಯ ತಿಳಿದ ತಕ್ಷಣ ಇಳಕಲ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.