ಕೋವಿಡ್‌ ವೈರಸ್ ಏನೂ ಮಾಡಲ್ಲ; ಉಂಡು ಧೈರ್ಯವಾಗಿರಬೇಕಷ್ಟೇ..!

By Kannadaprabha NewsFirst Published Jul 22, 2020, 12:06 PM IST
Highlights

ವೈದ್ಯರು ಹಾಗೂ ಸಿಬ್ಬಂದಿ ಸೂಚಿಸುವ ಔಷಧಿಗಳನ್ನು ತೆಗೆದುಕೊಂಡು ಲವಲವಿಕೆಯಿಂದ ಇದ್ದರೆ ಕೊರೊನಾ ಸೋಂಕು ನಮ್ಮನ್ನು ಯಾವುದೇ ರೀತಿಯಲ್ಲಿ ಬಾಧಿಸದು ಎಂದು ಅನುಭವ ಹಂಚಿಕೊಂಡಿದ್ದಾನೆ. ಕೋವಿಡ್-19 ಸೋಂಕು ಪಾಸಿಟಿವ್ ಬಂದಿದೆ ಎಂದು ತಿಳಿದಾಗ, ಮೊದಲು ಸ್ವಲ್ಪ ಭಯವಾಯಿತು. ಗ್ರಾಮದ ಅನೇಕರು ಫೋನ್ ಮಾಡಿ ಧೈರ್ಯ ತುಂಬಿದರು ಎಂದು ಕೊರೋನಾ ಗೆದ್ದ ಯುವಕ ಆತ್ಮವಿಶ್ವಾಸದ ಮಾತುಗಳನ್ನು ಆಡಿದ್ದಾನೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ಚಿತ್ರದುರ್ಗ(ಜು.22): ಕೋವಿಡ್ ಖಂಡಿತಾ ಏನೂ ಮಾಡಲ್ಲ. ಧೈರ್ಯವಾಗಿರಬೇಕಷ್ಟೇ. ಆಸ್ಪತ್ರೆಯಲ್ಲಿ ಆರಾಮವಾಗಿ ಅಡ್ಡಾಡಿಕೊಂಡು, ಊಟ ಮಾಡಿಕೊಂಡಿದ್ರೆ ತಂತಾನೆ ಹೋಗುತ್ತೆ. ಇದು ಕೋವಿಡ್ ಜಯಿಸಿ ಬಂದ ಹೊಸದುರ್ಗ ತಾಲೂಕಿನ ಶಿವನಕಟ್ಟೆ ಗ್ರಾಮದ ಯುವಕನ ಪ್ರೇರಣೆ ನುಡಿಗಳಿವು. 

ಹೊಸದುರ್ಗದ ಕೆಕೆ ಪುರ ಕೋವಿಡ್ ಹೆಲ್ತ್ ಕೇರ್ ಸೆಂಟರ್ ನಲ್ಲಿ ಕೆಲವು ದಿನಗಳ ಕಾಲ ಚಿಕಿತ್ಸೆ ಪಡೆದು ಸೋಮವಾರವಷ್ಟೇ ಗುಣಮುಖರಾಗಿ ಬಿಡುಗಡೆಯಾಗಿದ್ದ. ಬೆಂಗಳೂರಿನಿಂದ ಸ್ವಗ್ರಾಮ ಶಿವನೇಕಟ್ಟೆಗೆ ಜೂನ್ ತಿಂಗಳಲ್ಲಿ ಆಗಮಿಸಿದಾಗ ಆಶಾ ಕಾರ್ಯಕರ್ತೆಯರು ಮನೆಗೆ ಭೇಟಿ ನೀಡಿ ನೀವು ಬೆಂಗಳೂರಿನಿಂದ ಬಂದಿದ್ದೀರ, ಸ್ವ್ಯಾಬ್ ಪರೀಕ್ಷೆ ಮಾಡಿಸಿ ಎಂದು ಮನವಿ ಮಾಡ್ದಿದರು. ಪರಿಣಾಮ ಜುಲೈ 7 ರಂದು ಸ್ವ್ಯಾಬ್ ಪರೀಕ್ಷೆ ಮಾಡಿಸಲಾಯಿತು. ನಂತರ ಜುಲೈ 17ಕ್ಕೆ ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು. ಆನಂತರ ನನಗೆ ಕೆಮ್ಮು, ನೆಗಡಿ, ಜ್ವರ ಸೇರಿದಂತೆ ಯಾವುದೇ ರೀತಿಯ ರೋಗ ಲಕ್ಷಣಗಳು ಇರಲಿಲ್ಲ ಎಂದು ಯುವಕ ತಿಳಿಸಿದ್ದಾನೆ. 

ಕೋವಿಡ್ ಹೆಲ್ತ್‌ಕೇರ್ ಸೆಂಟರ್‌ನಲ್ಲಿ ಉತ್ತಮ ಚಿಕಿತ್ಸೆ ನೀಡಿದರು. ಗುಣಮಟ್ಟದ ಊಟ ಮತ್ತು ತಿಂಡಿ, ಬಿಸಿ ನೀರು, ಹಾಗೂ ಮಿಟಮಿನ್ ಸಿ ಮಾತ್ರೆಗಳನ್ನು ಕಾಲಕಾಲಕ್ಕೆ ನೀಡುತ್ತಿದ್ದರು. ವೈದ್ಯರು ಹಾಗೂ ಸಿಬ್ಬಂದಿ ಸೂಚಿಸುವ ಔಷಧಿಗಳನ್ನು ತೆಗೆದುಕೊಂಡು ಲವಲವಿಕೆಯಿಂದ ಇದ್ದರೆ ಕೊರೊನಾ ಸೋಂಕು ನಮ್ಮನ್ನು ಯಾವುದೇ ರೀತಿಯಲ್ಲಿ ಬಾಧಿಸದು ಎಂದು ಅನುಭವ ಹಂಚಿಕೊಂಡಿದ್ದಾನೆ. ಕೋವಿಡ್-19 ಸೋಂಕು ಪಾಸಿಟಿವ್ ಬಂದಿದೆ ಎಂದು ತಿಳಿದಾಗ, ಮೊದಲು ಸ್ವಲ್ಪ ಭಯವಾಯಿತು. ಗ್ರಾಮದ ಅನೇಕರು ಫೋನ್ ಮಾಡಿ ಧೈರ್ಯ ತುಂಬಿದರು. ಇದರ ಜೊತೆಗೆ ಕೋವಿಡ್ ಹೆಲ್ತ್ ಕೇರ್ ಸೆಂಟರ್‌ನಲ್ಲಿರುವ ವೈದ್ಯರು, ಶುಶ್ರೂಷಕರು ಮಕ್ಕಳಂತೆ ಭಾವಿಸಿ ಚಿಕಿತ್ಸೆ ನೀಡಿದರು. ಇದರಿಂಗಾಗಿ ಬೇಗ ಗುಣಮುಖರಾಗಲು ಸಹಾಯಕವಾಯಿತು ಎಂದು ವಿವರಿಸಿದ್ದಾನೆ. 

'ಜಗತ್ತು ಸಾಕಾಯ್ತು, ಡಿಪ್ರೆಷನ್‌ಗೆ ಬಾಯ್': ಬಿಗ್‌ಬಾಸ್ ಸ್ಪರ್ಧಿಯ ಮೊಬೈಲ್ ಸ್ವಿಚ್‌ಆಫ್

ನನ್ನ ಸಂಪರ್ಕದಿಂದಾಗಿ ನಮ್ಮ ತಾಯಿಗೂ ಕೋವಿಡ್ ಪಾಸಿಟಿವ್ ಇರುವುದು ದೃಢಪಟ್ಟಿದ್ದು, ಅವರೂ ಕೂಡ ಕೆ. ಕೆ.ಪುರ ಹೆಲ್ತ್ ಕೇರ್ ಸೆಂಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಧೈರ್ಯವಾಗಿರು, ಏನೂ ಆಗಲ್ಲ ಎಂದು ತಾಯಿಗೆ ಆತ್ಮಸ್ಥೈರ್ಯ ತುಂಬಿದ್ದೇನೆ. ಆಸ್ಪತ್ರೆಯಿಂದ ಕೆಲವು ಮಾತ್ರೆಗಳನ್ನು ನೀಡಿದ್ದು, ಇನ್ನೂ ಕೆಲ ದಿನಗಳ ಕಾಲ ಹೋಂ ಕ್ವಾರಂಟೈನ್‌ನಲ್ಲಿರಲು ಸೂಚಿಸಿದ್ದಾರೆ ಎಂದು ಯುವಕ ಹೇಳಿದ್ದಾನೆ.

ಹೊಸದುರ್ಗದ ಕೆ.ಕೆ.ಪುರ ಕೋವಿಡ್ ಹೆಲ್ತ್ ಕೇರ್ ಸೆಂಟರ್ ನಿಂದ ಚಿಕಿತ್ಸೆ ಪಡೆದು ಗುಣಮುಖರಾದ ಅನಿವಾಳ ಗ್ರಾಮದ 27 ವರ್ಷದ ಯುವಕ ಹಾಗೂ ಎಂ.ಜಿ.ದಿಬ್ಬ ಗ್ರಾಮದ 28 ವರ್ಷದ ಯುವಕನನ್ನು ಹೆಲ್ತ್ ಕೇರ್ ಸೆಂಟರ್‌ನಿಂದ ಬಿಡುಗಡೆ ಮಾಡಲಾಗಿದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ. ಚಂದ್ರಶೇಖರ ಕಂಬಾಳಿಮಠ ಮಾಹಿತಿ ನೀಡಿದ್ದಾರೆ.  

click me!