'ಸುಪ್ರೀಂ ತೀರ್ಪಿನವರೆಗೆ ಶಬರಿಮಲೆ ಹುಂಡಿಗೆ ಕಾಸು ಹಾಕ್ಬೇಡಿ'..!

By Kannadaprabha NewsFirst Published Dec 9, 2019, 8:45 AM IST
Highlights

ಶಬರಿಮಲೆಯಲ್ಲಿ ಭಕ್ತರು ಹಾಕುವ ಕೋಟ್ಯಂತರ ರುಪಾಯಿ ಹಣವನ್ನು ಬ್ಯಾಂಕ್‌ನಲ್ಲಿಟ್ಟು ಅದರ ಬಡ್ಡಿ ತಿನ್ನುತ್ತಿದ್ದಾರೆ. ಅಂಥವರಿಗೆ ಪಾಠ ಕಲಿಸಬೇಕಾಗಿದೆ. ಶಬರಿಮಲೆ ಅಯ್ಯಪ್ಪ ಸ್ವಾಮಿ ಭಕ್ತರ ಅಪೇಕ್ಷೆಯ ಪ್ರಕಾರ ಸರ್ವೋಚ್ಚ ನ್ಯಾಯಾಲಯದ ತೀರ್ಪು ಬರುವವರೆಗೆ ಶಬರಿಮಲೆ ಹುಂಡಿಗೆ ಹಣ ಹಾಕಬೇಡಿ ಎಂದು ಉತ್ತರಾಖಂಡ ಕಪಿಲಾಶ್ರಮದ ಶ್ರೀ ರಾಮಚಂದ್ರ ಭಾರತೀ ಸ್ವಾಮೀಜಿ ಕರೆ ನೀಡಿದ್ದಾರೆ.

ಮಂಗಳೂರು(ಡಿ.09): ಶಬರಿಮಲೆ ಅಯ್ಯಪ್ಪ ಸ್ವಾಮಿ ಭಕ್ತರ ಅಪೇಕ್ಷೆಯ ಪ್ರಕಾರ ಸರ್ವೋಚ್ಚ ನ್ಯಾಯಾಲಯದ ತೀರ್ಪು ಬರುವವರೆಗೆ ಶಬರಿಮಲೆ ಹುಂಡಿಗೆ ಹಣ ಹಾಕಬೇಡಿ ಎಂದು ಉತ್ತರಾಖಂಡ ಕಪಿಲಾಶ್ರಮದ ಶ್ರೀ ರಾಮಚಂದ್ರ ಭಾರತೀ ಸ್ವಾಮೀಜಿ ಕರೆ ನೀಡಿದ್ದಾರೆ.

ನಗರದ ಕುದ್ಮುಲ್‌ ರಂಗರಾವ್‌ ಪುರಭವನದಲ್ಲಿ ಶ್ರೀ ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂನ ದ.ಕ. ಜಿಲ್ಲಾ ಘಟಕದ ವತಿಯಿಂದ ಭಾನುವಾರ ನಡೆದ ಅಯ್ಯಪ್ಪ ಭಕ್ತರ ಬೃಹತ್‌ ಸಮಾವೇಶದಲ್ಲಿ ಅವರು ಮಾತನಾಡಿದ್ದಾರೆ.

ಮಲ್ಪೆಯಲ್ಲಿ ಬೀದಿ ನಾಯಿಗಳ ರ್‍ಯಾಂಪ್‌ ವಾಕ್, ಶ್ವಾನ ನಡೆಯುವ ಚಂದ ನೋಡಿ

ಶಬರಿಮಲೆಯಲ್ಲಿ ಭಕ್ತರು ಹಾಕುವ ಕೋಟ್ಯಂತರ ರುಪಾಯಿ ಹಣವನ್ನು ಬ್ಯಾಂಕ್‌ನಲ್ಲಿಟ್ಟು ಅದರ ಬಡ್ಡಿ ತಿನ್ನುತ್ತಿದ್ದಾರೆ. ಅಂಥವರಿಗೆ ಪಾಠ ಕಲಿಸಬೇಕಾಗಿದೆ. ಆದರೆ ಇದರಿಂದಾಗಿ ಅಯ್ಯಪ್ಪ ಸ್ವಾಮಿಯ ಮೇಲಿನ ಭಕ್ತಿ ಕಡಿಮೆಯಾಗಕೂಡದು. ಭಕ್ತರೆಲ್ಲರೂ ಬಹುದೊಡ್ಡ ಸಂಖ್ಯೆಯಲ್ಲಿ ಅಯ್ಯಪ್ಪ ದರ್ಶನ ಪಡೆಯೋಣ. ದೇವರ ಪ್ರಸಾದ ತಂದು ಹಂಚೋಣ. ಆದರೆ ಭಕ್ತರ ಆಶಯದಂತೆ ತೀರ್ಪು ಬರುವವರೆಗೂ ಹುಂಡಿಗೆ ಮಾತ್ರ ಕಾಸು ಹಾಕೋದು ಬೇಡ ಎಂದು ಸ್ವಾಮೀಜಿ ಸಲಹೆ ನೀಡಿದ್ದಾರೆ.

32 ಕೋಟಿ ಏರ್‌ಟೆಲ್‌ ಗ್ರಾಹಕರ ಮಾಹಿತಿ ರಕ್ಷಿಸಿದ ಮೈಸೂರಿಗ!

ಶಬರಿಮಲೆ ವಿವಾದ ಆರಂಭವಾದ ಬಳಿಕ 9 ಸಾವಿರ ಮಂದಿ ಭಕ್ತರನ್ನು ಕೇರಳ ಸರ್ಕಾರ ಜೈಲಿಗಟ್ಟಿದೆ. ಇಂತಹ ಸರ್ಕಾರಕ್ಕೆ ಬಿಸಿ ಮುಟ್ಟಿಸಲೇಬೇಕಾಗಿದೆ. ಅಯ್ಯಪ್ಪ ಗುಡಿಗೆ ಭೇಟಿ ನೀಡುವವರು ಇಡೀ ದೇಶದಲ್ಲಿ ಕರ್ನಾಟಕದವರೇ ಹೆಚ್ಚು. ಕೇರಳದವರು 4ನೇ ಸ್ಥಾನದಲ್ಲಿದ್ದಾರೆ ಎನ್ನುವುದು ಗೊತ್ತಿರಬೇಕು. ಹುಂಡಿಗೆ ಹಣ ಹಾಕುವವರಲ್ಲಿ ಕೇರಳ ಬಿಟ್ಟು ಹೊರ ರಾಜ್ಯದವರೇ ಅಧಿಕ. ಆದ್ದರಿಂದ ಹುಂಡಿಗೆ ಹಣ ಹಾಕದಿರುವ ತೀರ್ಮಾನ ಅಗತ್ಯವಾಗಿದೆ ಎಂದವರು ಪ್ರತಿಪಾದಿಸಿದರು.

ಹೋರಾಟಕ್ಕೆ ಸಿದ್ಧರಾಗಿ:

ಸಮಾವೇಶ ಉದ್ಘಾಟನೆ ನೆರವೇರಿಸಿದ ಪಂದಳ ಸಂಸ್ಥಾನಂನ ಪಂದಳರಾಜ ಶಶಿಕುಮಾರ್‌ ವರ್ಮ ಮಾತನಾಡಿ, ಶಬರಿಮಲೆ ವಿಚಾರದಲ್ಲಿ ನ್ಯಾಯ ಸಿಗುವವರೆಗೆ ‘ಸ್ವಾಮಿಯೇ ಅಯ್ಯಪ್ಪ’ ಎನ್ನುವುದೇ ಆಯುಧವಾಗಲಿ. ಅದೇ ಬಲದಿಂದ ಮುಂದಿನ ಹೋರಾಟಕ್ಕೆ ಭಕ್ತರೆಲ್ಲರೂ ಸಿದ್ಧರಾಗಬೇಕು. ಕೇರಳ ಸರ್ಕಾರ ಕೈಗೊಂಡ ತೀರ್ಮಾನಗಳು ಅಯ್ಯಪ್ಪ ಭಕ್ತರ ಸ್ವಾಭಿಮಾನಕ್ಕೆ ಕೊಡಲಿಯೇಟು ನೀಡಿವೆ. ಹೋರಾಟದ ಮೂಲಕವೇ ಶಬರಿಮಲೆ ಪಾವಿತ್ರ್ಯತೆಯನ್ನು ಕಾಯ್ದುಕೊಳ್ಳಬೇಕಾಗಿದೆ ಎಂದು ಹೇಳಿದ್ದಾರೆ.

ಈ ಸ್ಥಾನಗಳ ಮೇಲೆ ಉಚ್ಚಾಟಿತ ಮುಖಂಡರ ಕಣ್ಣು.

ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂನ ರಾಷ್ಟ್ರೀಯ ಅಧ್ಯಕ್ಷ ಟಿ.ಬಿ. ಶೇಖರ್‌ ಅಧ್ಯಕ್ಷತೆ ವಹಿಸಿದ್ದರು. ಇದಕ್ಕೂ ಮೊದಲು ನಡೆದ ಶೋಭಾಯಾತ್ರೆಗೆ ಶರವು ದೇವಸ್ಥಾನದ ಆಡಳಿತ ಮೊಕ್ತೇಸರ ಶರವು ರಾಘವೇಂದ್ರ ಶಾಸ್ತ್ರಿ ಚಾಲನೆ ನೀಡಿದ್ದಾರೆ.

ಅಯ್ಯಪ್ಪ ಸೇವಾ ಸಮಾಜಂನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಈರೋಡ್‌ ಎನ್‌. ರಾಜನ್‌, ರಾಜ್ಯ ಉಪಾಧ್ಯಕ್ಷ ವಿ.ಕೃಷ್ಣ ಪ್ಪ, ರಾಷ್ಟ್ರೀಯ ಕೋಶಾಧಿಕಾರಿ ವಿನೋದ್‌, ಉಪಾಧ್ಯಕ್ಷ ಡಾ.ಮುನಿರಾಜ್‌, ಸಾರ್ವಜನಿಕ ಸಂಪನ್ಮೂಲ ಅಧಿಕಾರಿ ಎನ್‌. ಜಯರಾಮ, ಕೇರಳ ಹಿಂದೂ ಐಕ್ಯ ವೇದಿಕೆಯ ಶ್ರೀಧರನ್‌, ಆಳ್ವಾಸ್‌ ಹೋಮಿಯೋಪತಿ ಕಾಲೇಜು ಪ್ರಾಂಶುಪಾಲ ಡಾ.ಪ್ರವೀಣ್‌ರಾಜ್ ಆಳ್ವ, ಕೃಷ್ಣ ಶೆಟ್ಟಿಕೆಳಗಿನಗುತ್ತು, ಪತಂಜಲಿ ಯೋಗ ಶಿಕ್ಷಣ ತರಬೇತಿಯ ಪ್ರಾಂತ ಸಂಚಾಲಕ ರವೀಶ್‌, ಕೇರಳ ಹಿಂದೂ ಐಕ್ಯ ವೇದಿಕೆಯ ಶ್ರೀಧರನ್‌, ವಿಶ್ವ ಹಿಂದು ಪರಿಷತ್‌ ಜಿಲ್ಲಾಧ್ಯಕ್ಷ ಗೋಪಾಲ್ ಕುತ್ತಾರ್‌, ಮಂಗಳೂರು ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂನ ಅಧ್ಯಕ್ಷ ಗಣೇಶ್‌ ಪೊದುವಾಳ್‌, ಗೌರವಾಧ್ಯಕ್ಷ ವಿಶ್ವನಾಥ ಕಾಯರ್‌ಪಳಿಕೆ, ಗೌರವಾಧ್ಯಕ್ಷ ಮೋಹನ್‌ ಪಡೀಲ್ ಮತ್ತಿತರರಿದ್ದರು.

click me!