ಕೊಪ್ಪಳ: ದೇವಲಾಪುರದಲ್ಲಿ ನಾನಾ ಜ್ವರ, ಆತಂಕದಲ್ಲಿ ಗ್ರಾಮಸ್ಥರು

By Suvarna NewsFirst Published Dec 9, 2019, 8:24 AM IST
Highlights

ಗ್ರಾಮದಲ್ಲಿ 30ರಿಂದ 40ಕ್ಕೂ ಹೆಚ್ಚು ಜನರು ನಾನಾ ಜ್ವರಗಳಿಂದ ಬಳಲುತ್ತಿದ್ದಾರೆ| ಶಂಕಿತ ಡೇಂಘಿ, ಮಲೇರಿಯಾ, ಟೈಫಾಯಿಡ್‌ ಸೇರಿದಂತೆ ನಾನಾ ಕಾಯಿಲೆಯಿಂದ ನರಳುತ್ತಿದ್ದಾರೆ| ಜ್ವರ ಕಾಣಿಸಿಕೊಂಡ ಕೆಲವರು ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ| ಇನ್ನೂ ಕೆಲವರು ಅಲ್ಲೇ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ|

ಹನುಮಸಾಗರ(ಡಿ.09): ಸಮೀಪದ ದೇವಲಾಪುರ ಗ್ರಾಮದಲ್ಲಿ ಸೊಳ್ಳೆಗಳ ಹಾವಳಿ ಹೆಚ್ಚಾಗಿ ಜನರು ನಾನಾ ಜ್ವರಗಳಿಂದ ಬಳಲುತ್ತಿದ್ದು, ಕಳೆದ ತಿಂಗಳಿನಿಂದ ಜನರು ಆಸ್ಪತ್ರೆಗೆ ಅಲೆದಾಡುತ್ತಿದ್ದಾರೆ.

ಗ್ರಾಮದಲ್ಲಿ ಅಂದಾಜು 96 ಕುಟುಂಬಗಳು 500ಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದು, ಸಧ್ಯಕ್ಕೆ 30ರಿಂದ 40ಕ್ಕೂ ಹೆಚ್ಚು ಜನರು ಜ್ವರದಿಂದ ಬಳಲುತ್ತಿದ್ದಾರೆ. ಇದರಲ್ಲಿ ಶಂಕಿತ ಡೇಂಘಿ, ಮಲೇರಿಯಾ, ಟೈಫಾಯಿಡ್‌ ಸೇರಿದಂತೆ ನಾನಾ ಕಾಯಿಲೆಯಿಂದ ನರಳುತ್ತಿದ್ದಾರೆ. ಜ್ವರ ಕಾಣಿಸಿಕೊಂಡ ಕೆಲವರು ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ನಂತರ ಪಕ್ಕದ ಇಳಕಲ್‌, ಹುಬ್ಬಳ್ಳಿ ಮತ್ತು ಬಾಗಲಕೋಟೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹಿಂದಿರುಗಿದ್ದಾರೆ. ಇನ್ನೂ ಕೆಲವರು ಅಲ್ಲೇ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಸೊಳ್ಳೆಗಳ ಹಾವಳಿ:

ಗ್ರಾಮವು ಸ್ವಚ್ಛತೆಯಿಲ್ಲದೆ ಮಲೀನತೆಯಿಂದ ಕೂಡಿದ್ದು, ಯಾವುದೇ ಬೀದಿಗಳಿಗೆ ಹೋದ್ರು ಒಂದು ಕಡೆಯು ಸಿಸಿ ರಸ್ತೆ ಹಾಗೂ ಚರಂಡಿಯು ಇಲ್ಲದೆ, ನೀರು ನಿಂತಲ್ಲೆ ನಿಂತು ಸಾಂಕ್ರಮಿಕ ರೋಗಗಳ ತಾಣವಾಗಿದೆ. ಮನೆ, ರಸ್ತೆ, ಬೀದಿ ಸೇರಿದಂತೆ ಅಲ್ಲಲ್ಲಿ ನೀರು ನಿಂತು ಸೊಳ್ಳೆಗಳ ಹಾವಳಿ ಹೆಚ್ಚಾಗಿದೆ. ಸೊಳ್ಳೆಗಳ ನಿಯಂತ್ರಣಕ್ಕೆ ಅಡವಿಬಾವಿ ಗ್ರಾಮ ಪಂಚಾಯಿತಿ ಯಾವುದೇ ಕ್ರಮವನ್ನುಕೈಗೊಳ್ಳುತ್ತಿಲ್ಲ. ಕೇವಲ ಒಬ್ಬ ಸದಸ್ಯರನ್ನು ಹೊಂದಿರುವ ಗ್ರಾಮವನ್ನು ಗ್ರಾಪಂ ನಿರ್ಲಕ್ಷ್ಯವನ್ನು ತಾಳುತ್ತಿದೆ ಎಂಬ ಆರೋಪವನ್ನು ಗ್ರಾಮಸ್ಥರು ವ್ಯಕ್ತಪಡಿಸಿದ್ದಾರೆ.

ಗ್ರಾಮದಲ್ಲಿ ಸಿಸಿ ರಸ್ತೆಯಿಲ್ಲದೆ ಮಲೀನತೆಯಿಂದ ಕೂಡಿದೆ. ಗ್ರಾಪಂಯ ಅಕಾರಿಗಳು ಒಂದು ಬಾರಿಯು ಗ್ರಾಮದ ಬಗ್ಗೆ ಗಮನ ಹರಿಸಿರುವದಿಲ್ಲ. ಚರಂಡಿಯ ನೀರು ನಿಂತು ರೋಗಗಳು ಹರಡುತ್ತಿವೆ ಎಂದು ಗ್ರಾಮಸ್ಥ ಬಸವರಾಜ ಅವರು ಹೇಳಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಈಗಾಗಲೇ ಕೆಲವು ಗ್ರಾಮ ಪಂಚಾಯಿತಿ ಪಿಡಿಒ ಅವರಿಗೆ ಫಾಗಿಂಗ್‌ ಮಾಡಲು ತಿಳಿಸಲಾಗಿದೆ. ಅವರು ಮಾಡಿರದಿದ್ರೆ, ಮತ್ತೊಮ್ಮೆ ಅವರ ಫಾಗಿಂಗ್‌ ಮಾಡಲು ಗಮನಕ್ಕೆ ತರಲಾಗುವದು ಎಂದು ಕುಷ್ಟಗಿ ಇಒ ತಿಮ್ಮಪ್ಪ.ಕೆ ಅವರು ತಿಳಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ಹನುಮಸಾಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಕಾರಿ ಡಾ. ನೀಲಮ್ಮ ಅವರು, ಈಗಾಗಲೇ ಗ್ರಾಮದಲ್ಲಿ ಸರ್ವೆ ಮಾಡಲಾಗಿದ್ದು, ಖಾಸಗಿ ಆಸ್ಪತ್ರೆಯ ವರದಿಯಲ್ಲಿ ಇಬ್ಬರಿಗೆ ಡೆಂಘೀ ಅಂತದ ಉಲ್ಲೇಖವಾಗಿದೆ. ಅದನ್ನು ನಾವು ಕನ್ಸಿಡರ್‌ ಮಾಡುವುದಿಲ್ಲ. ಸದ್ಯ ಜ್ವರ ಬಂದಿರುವವರ ಹತ್ತಿರ ರಕ್ತ ತಪಾಸಣೆಗೆ ತೆಗೆದು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿಯನ್ನು ಆಧರಿಸಿ ಮುಂದಿನ ಕ್ರಮವನ್ನು ಕೈಗೊಳ್ಳಲಾಗುವುದು. ಇದರ ಬಗ್ಗೆ ಪಿಡಿಒ ಅವರ ಗಮನಕ್ಕೆ ತರಲಾಗಿದೆ ಎಂದು ತಿಳಿಸಿದ್ದಾರೆ. 

click me!