ಆರ್ಥಿಕ ಸದೃಢತೆಗೆ ಸ್ವದೇಶಿ ಉತ್ಪನ್ನ ಬಳಕೆ ಹೆಚ್ಚಾಗಬೇಕು: ಸಚಿವ ಎಂಟಿಬಿ ನಾಗರಾಜ್‌

By Govindaraj SFirst Published Dec 18, 2022, 7:44 PM IST
Highlights

ಮಹಾತ್ಮ ಗಾಂಧೀಜಿ ಕಂಡಿದ್ದ ಗ್ರಾಮ ಸ್ವರಾಜ್ಯದ ಪರಿಕಲ್ಪನೆ ಈಡೇರಬೇಕಾದರೆ ಸ್ವದೇಶಿ ಉತ್ಪನ್ನಗಳಿಗೆ ಪ್ರೋತ್ಸಾಹದ ಜೊತೆಗೆ ಹೆಚ್ಚು ಬಳಕೆ ಹೆಚ್ಚಾಗಬೇಕಿದೆಯೆಂದು ಜಿಲ್ಲಾ ಉಸ್ತುವಾರಿ ಸಚಿವ ಎಂಟಿಬಿ ನಾಗರಾಜ್‌ ಹೇಳಿದರು. 

ಚಿಕ್ಕಬಳ್ಳಾಪುರ (ಡಿ.18): ಮಹಾತ್ಮ ಗಾಂಧೀಜಿ ಕಂಡಿದ್ದ ಗ್ರಾಮ ಸ್ವರಾಜ್ಯದ ಪರಿಕಲ್ಪನೆ ಈಡೇರಬೇಕಾದರೆ ಸ್ವದೇಶಿ ಉತ್ಪನ್ನಗಳಿಗೆ ಪ್ರೋತ್ಸಾಹದ ಜೊತೆಗೆ ಹೆಚ್ಚು ಬಳಕೆ ಹೆಚ್ಚಾಗಬೇಕಿದೆಯೆಂದು ಜಿಲ್ಲಾ ಉಸ್ತುವಾರಿ ಸಚಿವ ಎಂಟಿಬಿ ನಾಗರಾಜ್‌ ಹೇಳಿದರು. ನಗರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಶನಿವಾರ ರಾಜ್ಯ ಖಾದಿ ಗ್ರಾಮೋದ್ಯೋಗ ಮಂಡಳಿ ವತಿಯಿಂದ ಆಯೋಜಿಸಲಾಗಿದ್ದ 9 ದಿನಗಳ ಜಿಲ್ಲಾ ಮಟ್ಟದ ಖಾದಿ ಉತ್ಸವ-2022ಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಆಧುನಿಕ ತಂತ್ರಜ್ಞಾನದ ಪರಿಣಾಮ ಎಲ್ಲವೂ ಮಾಯವಾಗುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಖಾದಿ ಉತ್ಪನ್ನ ವಿನ್ಯಾಸ ಬದಲಾಗಬೇಕು: ಖಾದಿಯಲ್ಲಿ ಸುಧಾರಣೆ ಕೆಲಸ ಮಾಡಲಾಗುತ್ತಿದೆ. ಖಾದಿ ಉತ್ಪನ್ನಗಳಲ್ಲಿ ಕೂಡ ವಿನ್ಯಾಸ ಬದಲಾಗಬೇಕಿದೆ. ಇಂದಿನ ಯುವಕರನ್ನು ಆಕರ್ಷಿಸುವ ನಿಟ್ಟಿನಲ್ಲಿ ಖಾದಿ ಸಮವಸ್ತ್ರಗಳು ತಯಾರಾಗಬೇಕೆಂದ ಅವರು, ಕೋವಿಡ್‌ ಪರಿಣಾಮ ಎರಡು ವರ್ಷ ಖಾದಿ ಉತ್ಪನ್ನಗಳಿಗೆ ಸೂಕ್ತ ಮಾರಾಟ ವ್ಯವಸ್ಥೆ ಇರಲಿಲ್ಲ. ಈಗ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಖಾದಿ ಉತ್ಸವ ಆಚರಿಸಲಾಗುತ್ತಿದೆ ಎಂದರು.

ಸಮಾಜದ ಎಲ್ಲಾ ಕ್ಷೇತ್ರಗಳೂ ತಾಂತ್ರಿಕತೆ ಅವಲಂಬಿಸಿವೆ: ಸಚಿವ ಸುಧಾಕರ್‌

ಸಾರ್ವಜನಿಕರು ಕೂಡ ಖಾದಿ ಬಳಸುವ ಮೂಲಕ ಗುಡಿ ಕೈಗಾರಿಕೆಗಳಿಗೆ ಶಕ್ತಿ ತುಂಬುವ ಕೆಲಸ ಮಾಡಬೇಕು. ಖಾದಿ ಗ್ರಾಮೋದ್ಯೋಗ ಮಂಡಳಿಯಲ್ಲಿ ಉದ್ಯೋಗ ಸೃಷ್ಟಿಗೆ ವಿಫುಲವಾದ ಅವಕಾಶಗಳಿವೆ. ಸರ್ಕಾರದಿಂದ ಸಬ್ಸಿಡಿ ಸಿಗುತ್ತದೆ. ಹಳ್ಳಿ ಹಳ್ಳಿಗೂ ಖಾದಿ ಉತ್ಪನ್ನಗಳ ಬಳಕೆ ಮಾಡುವಂತೆ ಪ್ರಚಾರ ಮಾಡಬೇಕಿದೆ. ಖಾದಿ ಗ್ರಾಮೋದ್ಯೋಗದ ಮೂಲಕ ವಿವಿಧ ಸಂಸ್ಥೆಗಳಿಗೆ ಸರ್ಕಾರ 24 ಕೋಟಿ ರು, ಪ್ರೋತ್ಸಾಹ ಧನ ಬಾಕಿ ಇದ್ದು ಸಿಎಂ ಜೊತೆ ಚರ್ಚಿಸಿ ಬಿಡುಗಡೆಗೆ ಕ್ರಮ ವಹಿಸುವುದಾಗಿ ಹೇಳಿದರು.

ಜನವರಿಯಲ್ಲಿ ಖಾದಿ ಉತ್ಸವ: ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದಂತೆ ಮೇಕ್‌ ಇನ್‌ ಇಂಡಿಯಾ, ಮೇಡ್‌ ಇನ್‌ ಇಂಡಿಯಾ ಮೂಲಕ ದೇಶದಲ್ಲಿ ಉತ್ಪಾದನೆಯಾಗುವ ವಸ್ತುಗಳನ್ನೇ ಬಳಸುವ ಮೂಲಕ ದೇಶವನ್ನು ಆರ್ಥಿಕವಾಗಿ ಸದೃಢ ಮಾಡಬೇಕು. ಗ್ರಾಮ ಸ್ವರಾಜ್ಯದ ಕನಸನ್ನು ಗಾಂಧೀಜಿಯವರು ಕಂಡಿದ್ದರು. ನಮ್ಮದೇ ಹತ್ತಿಯಿಂದ ತಯಾರಿಸಿದ ವಸ್ತುಗಳನ್ನು ನಮಗೇ ಮಾರಿ ಬ್ರಿಟಿಷರು ಆರ್ಥಿಕವಾಗಿ ಸದೃಢರಾಗುತ್ತಿದ್ದರು. ಇದನ್ನು ಅರ್ಥ ಮಾಡಿಕೊಂಡ ಗಾಂಧೀಜಿಯವರು ಸ್ವದೇಶಿ ವಸ್ತ್ರ ಚಳವಳಿ ಮೂಲಕ ದೇಶದ ಜನರಲ್ಲಿ ಅರಿವು ಮೂಡಿಸಿದರು ಎಂದರು.

ಮೋದಿಯವರು ಪ್ರಧಾನಿಯಾದ ನಂತರ ಖಾದಿ ಮಂಡಳಿ ಸಾಕಷ್ಟು ಸುಧಾರಣೆಯಾಗಿದೆ, 2014 ಮತ್ತು 2015ರಲ್ಲಿ ಶೇ.170 ರಷ್ಟಿದ್ದ ಖಾದಿ ಮಂಡಳಿ ವಹಿವಾಟು ಇಂದು ಶೇ.24 ಆಗಿದೆ. ಅಂದರೆ ವಹಿವಾಟಿನಲ್ಲಿ ದ್ವಿಗುಣವಾಗಿದೆ. ಜೊತೆಗೆ 3,528 ಕೋಟಿ ಕೋಟಿಯನ್ನು ಮಂಡಳಿ ಗಳಿಸಿದೆ ಎಂದು ಡಾ.ಕೆ.ಸುಧಾಕರ್‌ ಅಂಕಿ ಅಂಶ ಸಮೇತ ವಿವರಿಸಿದರು. ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಕೆ.ವಿ. ನಾಗರಾಜ್, ಬಿಎಂಟಿಸಿ ಉಪಾಧ್ಯಕ್ಷ ಕೆ.ವಿ. ನವೀನ್‌ ಕಿರಣ, ಜಿಪಂ ಮಾಜಿ ಅಧ್ಯಕ್ಷ ಪಿ.ಎನ್. ಕೇಶವರೆಡ್ಡಿ, ಮರಳುಕುಂಟೆ ಕೃಷ್ಣಮೂರ್ತಿ, ನಗರಸಭೆ ಅಧ್ಯಕ್ಷ ಆನಂದರೆಡ್ಡಿ, ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೃಷ್ಣಮೂರ್ತಿ, ಮುನಿರಾಜು, ನಿರ್ಮಲಾಪ್ರಭು, ರಾಮಸ್ವಾಮಿ, ರಾಜಣ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.

Chikkaballapur: ಮಹಾರಾಷ್ಟ್ರದವರು ಉದ್ಧಟತನ ಬಿಡಬೇಕು: ಸಚಿವ ಸುಧಾಕರ್‌

ಉತ್ಸವದಲ್ಲಿ ಸೀರೆ ಖರೀಸಿದ ಸಚಿವದ್ವಯರು: ಖಾದಿ ಉತ್ಸವದ ಸಾರ್ವಜನಿಕ ವೇದಿಕೆ ಕಾರ್ಯಕ್ರಮ ಉದ್ಘಾಟನೆಗೂ ಮೊದಲು ಸಚಿವರಾದ ಡಾ.ಕೆ.ಸುಧಾಕರ್‌ ಮತ್ತು ಎಂಟಿಬಿ ನಾಗರಾಜ್‌, ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಆಯೋಜಿಸಿರುವ 9 ದಿನಗಳ ಖಾದಿ ಉತ್ಸವಕ್ಕೆ ಚಾಲನೆ ನೀಡಿದರು. ಈ ವೇಳೆ ಖಾದಿ ಉತ್ಪನ್ನಗಳನ್ನು ವೀಕ್ಷಿಸಿದ ಸಚಿವರು, ಬಳಿಕ ತಲಾ ಒಂದೊಂದಿಗೆ ಸೀರೆಯನ್ನು ಖರೀದಿಸಿದರು.

click me!