ಹಿರೇಬೆಣಕಲ್‌ ಬಳಿ ಅಣು ವಿದ್ಯುತ್ ಸ್ಥಾವರ: ಡಿ.20ರಂದೇ ಎಸಿ ಕಚೇರಿಗೆ ದಾಖಲೆ ರವಾನೆ!

Published : Dec 31, 2024, 11:20 AM ISTUpdated : Dec 31, 2024, 11:22 AM IST
ಹಿರೇಬೆಣಕಲ್‌ ಬಳಿ ಅಣು ವಿದ್ಯುತ್ ಸ್ಥಾವರ: ಡಿ.20ರಂದೇ ಎಸಿ ಕಚೇರಿಗೆ ದಾಖಲೆ ರವಾನೆ!

ಸಾರಾಂಶ

ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಕಂದಾಯ ಮತ್ತು ಭೂಮಾಪನ ಇಲಾಖೆಯ ಅಧಿಕಾರಿಗಳು ಚಿಕ್ಕಬೆಣಕಲ್-ಹಿರೇಬೆಣ ಕಲ್ ಗ್ರಾಮದ ಬಳಿ ಸ್ಥಾವರ ಸ್ಥಾಪನೆಗೆ ಗುರುತಿಸಿರುವ ನಕಾಶೆ ಮತ್ತು ವರದಿಯನ್ನು ಸಹಾಯಕ ಆಯುಕ್ತರಿಗೆ ಡಿ. 20ರಂದು ಸಲ್ಲಿಸಿದ್ದಾರೆ. 

ರಾಮಮೂರ್ತಿ ನವಲಿ

ಗಂಗಾವತಿ(ಡಿ.31):  ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಚಿಕ್ಕಬೆಣಕಲ್ -ಹಿರೇಬೆಣಕಲ್‌ನ ಐತಿಹಾಸಿಕ ಮೋರೇರ ಶಿಲಾ ಸಮಾಧಿಗಳ ಬಳಿ ಅಣು ವಿದ್ಯುತ್ ಸ್ಥಾವರ ಬಗ್ಗೆ ಪ್ರಸ್ತಾಪನೆಯೇ ಇಲ್ಲ ಎಂದಿದ್ದ ಜಿಲ್ಲಾಡಳಿತ ಈಗ ತಹಸೀಲ್ದಾ‌ರ್ ಕಚೇರಿಯಿಂದ ಕೊಪ್ಪಳ ಸಹಾಯಕ ಆಯುಕ್ತರಿಗೆ ದಾಖಲೆಗಳನ್ನು ರವಾನಿಸಿರುವುದು ಸ್ಥಾವರ ಸ್ಥಾಪನೆಯ ಪ್ರಕ್ರಿಯೆಗೆ ಪುಷ್ಟಿ ನೀಡಿದಂತಾಗಿದೆ. 

ನ. 11ರಂದು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿದ್ಯುತ್ ಸ್ಥಾವರಕ್ಕೆ ಜಮೀನು ಗುರುತಿ ಸಬೇಕೆಂಬ ಸೂಚನೆ ಹಿನ್ನೆಲೆ ಗಂಗಾವತಿ ತಾಲೂಕಿನ ವೆಂಕಟಗಿರಿ ಹೋಬಳಿಯ ವ್ಯಾಪ್ತಿಯಲ್ಲಿ ಚಿಕ್ಕಬೆಣಕಲ್-ಹಿರೇಬೆಣಕಲ್‌ಗೆ ಹೊಂದಿಕೊಂಡಿರುವ ಅರಣ್ಯ ಇಲಾಖೆಯ ಸರ್ವೆ ನ 35ರಲ್ಲಿ ಗುರುತಿಸಿದೆ. 

ಹಿರೇಬೆಣಕಲ್ ಬಳಿ ಅಣುಸ್ಥಾವರ: ಹತ್ತು ಹಳ್ಳಿಗಳ ಬಂಡಾಯ, ಯೋಜನೆ ನಿಲ್ಲದಿದ್ದರೆ ಉಗ್ರ ಹೋರಾಟ

ಬರುವ ಡಿ.17ರಂದು ಸರ್ವೇ: 

ಚಿಕ್ಕಬೆಣಕಲ್ ಸನಿಹದಲ್ಲಿರುವ ಕಾಯ್ದಿಟ್ಟ ಅರಣ್ಯ ಪ್ರದೇಶದ ಸರ್ವೇ ನಂ.35ರಲ್ಲಿ ವಿಸ್ತೀರ್ಣ 2117 ಎಕರೆ, 31 ಗುಂಟೆ ಪ್ರದೇಶದ ಪೈಕಿ 1200 ಎಕರೆ ಜಮೀನನ್ನು ವಿದ್ಯುತ್ ಸ್ಥಾವರಕ್ಕೆ ಗುರುತಿಸಲಾಗಿದೆ. ಕಂದಾಯ, ತಾಲೂಕು ಭೂ ಮಾಪನ ಇಲಾಖೆ ಅಧಿಕಾರಿಗಳು ಡಿ. 17ರಂದು ಜಂಟಿಯಾಗಿ ಸರ್ವೇ ಮಾಡಿ ನಕಾಶೆ ಮೂಲಕ ವರದಿ ಸಿದ್ಧಪಡಿಸಿದ್ದಾರೆ. ಸರ್ವೇ ಮಾಡಿದ ಸರಹದ್ದಿನಲ್ಲಿಯೇ ತೆಂಟಾ ಸೀಮೆಗಳು ಹೊಂದಿಕೊಂಡಿವೆ. 

ಎಸಿ ಕಚೇರಿಗೆ ದಾಖಲೆ ರವಾನೆ: 

ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಕಂದಾಯ ಮತ್ತು ಭೂಮಾಪನ ಇಲಾಖೆಯ ಅಧಿಕಾರಿಗಳು ಚಿಕ್ಕಬೆಣಕಲ್-ಹಿರೇಬೆಣ ಕಲ್ ಗ್ರಾಮದ ಬಳಿ ಸ್ಥಾವರ ಸ್ಥಾಪನೆಗೆ ಗುರುತಿಸಿರುವ ನಕಾಶೆ ಮತ್ತು ವರದಿಯನ್ನು ಸಹಾಯಕ ಆಯುಕ್ತರಿಗೆ ಡಿ. 20ರಂದು ಸಲ್ಲಿಸಿದ್ದಾರೆ. 

ಸರ್ವೆ ನಂ.35ರಲ್ಲಿ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ 1200 ಎಕರೆ ಪ್ರದೇಶ ಗುರುತಿಸಿರುವುದು, ಚಿಕ್ಕಬೆಣಕಲ್ ಗ್ರಾಮದಿಂದ 2ರಿಂದ 3 ಕಿಮೀ ದೂರದ ಅಂತರ, ಪ್ರಸ್ತಾಪಿತ ಜಮೀನಿನಲ್ಲಿ ಐತಿಹಾಸಿಕ ಕಟ್ಟಡಗಳು, ಹೈಟೆನ್ಸನ್ ತಂತಿಗಳುಹೋಗದೆ ಇರುವುದು, ಈ ಜಮೀನಿನಲ್ಲಿ ಫಾರಂ 50, 53, 55ಕ್ಕೆ ಅರ್ಜಿ ಹಾಕದೇ ಇರುವುದು, ಸಣ್ಣ ಪುಟ್ಟ ಕೆರೆಗಳು ಕಲ್ಲಿನಿಂದ ಕೂಡಿರುವುದನ್ನು ವರದಿಯಲ್ಲಿ ಪ್ರಸ್ತಾಪಿಸಲಾಗಿದೆ. ಅಲ್ಲದೇ ಸ್ಥಾವರ ಸ್ಥಾಪನೆಗೆ ಜಮೀನು ಗುರುತಿಸುವುದಕ್ಕಾಗಿ ಪಂಚನಾಮೆ, ನಕ್ಷೆ, ಚೆಕ್ ಲಿಸ್ಟ್ ನೊಂದಿಗೆ ಅರಣ್ಯ ಇಲಾಖೆಯ ಅನುಮತಿ ಪಡೆದು ಕಾಯ್ದಿರಿಸಬೇಕು ಎಂದು ಸಹಾಯಕ ಆಯುಕ್ತರಿಗೆ ಸಲ್ಲಿಸಿದ ವರದಿಯಲ್ಲಿ ತಿಳಿಸಲಾಗಿದೆ. 

ಆದರೆ ಕಂದಾಯ ಮತ್ತು ಭೂಮಾಪನ ಇಲಾಖೆಯ ಅಧಿಕಾರಿಗಳು ಗುರುತಿಸಿರುವ ಪ್ರದೇಶದ 10 ಕಿಮೀ ಅಂತರದಲ್ಲಿಯೇ ಹಿರೇಬೆಣಕಲ್ ಐತಿಹಾಸಿಕ ಮೋರೇರ ಶಿಲಾ ಸಮಾಧಿಗಳು, ಹೇಮಗುಡ್ಡ, ಕುಮಾರರಾಮನ ಬೆಟ್ಟ, 20 ಕಿಮೀನಲ್ಲಿ ಪ್ರಸಿದ್ಧ ಅಂಜನಾದ್ರಿ ಸೇರಿದಂತೆ ವಿವಿಧ ಐತಿಹಾಸಿಕ ಸ್ಮಾರಕ ಗಳು ಇರುವುದು ಪರಿಸರವಾದಿಗಳು, ಗ್ರಾಮಸ್ಥರು, ಸಂಶೋಧಕರ ಆಕ್ರೋಶಕ್ಕೆ ಕಾರಣವಾಗಿದೆ. ಈಗ ಇಷ್ಟೆಲ್ಲ ಪ್ರಕ್ರಿಯೆ ನಡೆದಿದ್ದರೂ ಅಧಿಕಾರಿಗಳು ಸ್ಥಾವರದ ಬಗ್ಗೆ ಪ್ರಸ್ತಾವನೆಯೇ ಇಲ್ಲ ಎಂದು ಹೇಳಿ ರುವುದು ಸಮಂಜಸವೇ ಎನ್ನುತ್ತಾರೆ ಗ್ರಾಮಸ್ಥರು.

ಗಂಗಾವತಿ: ಹಿರೇಬೆಣಕಲ್‌ ಶಿಲೆಗಳ ಬಳಿ ಅಣು ವಿದ್ಯುತ್ ಸ್ಥಾವರ!

• ಅಧಿಕಾರಿಗಳು ಗುರುತಿಸಿರುವ ಪ್ರದೇಶದ 10 ಕಿಮೀ ಅಂತರದಲ್ಲಿಯೇ ಹಿರೇಬೆಣಕಲ್ ಐತಿಹಾಸಿಕ ಮೋರೇರ ಶಿಲಾ ಸಮಾಧಿಗಳು, ಹೇಮಗುಡ್ಡ, ಕುಮಾರರಾಮನ ಬೆಟ್ಟ, 20 ಕಿಮೀನಲ್ಲಿ ಪ್ರಸಿದ್ಧ ಅಂಜನಾದ್ರಿ ಸೇರಿದಂತೆ ವಿವಿಧ ಐತಿಹಾಸಿಕ ಸ್ಮಾರಕಗಳು ಇರುವುದು ಪರಿಸರವಾದಿಗಳು, ಗ್ರಾಮಸ್ಥರು, ಸಂಶೋಧಕರ ಆಕ್ರೋಶಕ್ಕೆ ಕಾರಣವಾಗಿದೆ. 

• ಕಂದಾಯ, ತಾಲೂಕು ಭೂ ಮಾಪನ ಇಲಾಖೆ ಅಧಿಕಾರಿಗಳು ಡಿ. 17ರಂದು ಜಂಟಿಯಾಗಿ ಸರ್ವೇ ಮಾಡಿ ನಕಾಶೆ ಮೂಲಕ ವರದಿ ಸಿದ್ಧಪಡಿಸಿದ್ದಾರೆ.

PREV
Read more Articles on
click me!

Recommended Stories

ಸಿಸೇರಿಯನ್‌ ಹೆರಿಗೆ ಹೆಚ್ಚಳ ಏಕೆ ಎಂದು ತಿಳಿಯಲು ಆಡಿಟ್‌: ಸಚಿವ ದಿನೇಶ್‌ ಗುಂಡೂರಾವ್
ಮಂಗಳಮುಖಿಯರಿಂದ ಯುವಕನ ಅಪಹರಣ; ಶಸ್ತ್ರಚಿಕಿತ್ಸೆ ನಡೆಸಿ ಪರಿವರ್ತನೆಗೆ ಯತ್ನ?