Karnataka Politics: ಡೆಲ್ಲಿಯಲ್ಲಿ ರಾಹುಲ್ 'ಫೈಟ್'; ಬೆಂಗಳೂರಲ್ಲಿ ಡಿಕೆಶಿ 'ಊಟ್-ಬೈಟ್'! ಅದಾನಿ ಭೇಟಿಗೆ ಬಿಜೆಪಿ ಛಾಟಿ!

Published : Aug 23, 2026, 10:52 PM IST
Dk Shivakumar

ಸಾರಾಂಶ

ಬೆಂಗಳೂರಿನಲ್ಲಿ ಉದ್ಯಮಿ ಗೌತಮ್ ಅದಾನಿ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ನಡುವೆ ನಡೆದ ಗೌಪ್ಯ ಸಭೆಯು ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಬೆಂಗಳೂರು ಸುರಂಗ ರಸ್ತೆ ಯೋಜನೆಯ ಟೆಂಡರ್ ಪ್ರಕ್ರಿಯೆಯ ನಿರ್ಣಾಯಕ ಹಂತದಲ್ಲಿ ಈ ಭೇಟಿ ನಡೆದಿದ್ದು, ಇದು ಕಾಂಗ್ರೆಸ್‌ನ ದ್ವಂದ್ವ ನೀತಿ ಎಂದು ಬಿಜೆಪಿ ತೀವ್ರವಾಗಿ ಟೀಕಿಸಿದೆ.

ಬೆಂಗಳೂರಿನಲ್ಲಿ ಪ್ರಮುಖ ಕೈಗಾರಿಕೋದ್ಯಮಿ ಗೌತಮ್ ಅದಾನಿ ಹಾಗೂ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವೆ ನಡೆದ ಒಂದು ಗಂಟೆಯ ಗೌಪ್ಯ ಸಭೆ, ಈಗ ರಾಜ್ಯ ರಾಜಕಾರಣದಲ್ಲಿ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ನಡುವಿನ ಸೈದ್ಧಾಂತಿಕ ಸಮರಕ್ಕೆ ಈ ಭೇಟಿ ಮತ್ತೊಮ್ಮೆ ಬೆಂಕಿಗೆ ತುಪ್ಪ ಸುರಿದಂತಾಗಿದೆ. ನಾಯಕರ ನಡುವೆ ಸಾರ್ವಜನಿಕವಾಗಿ ವಾಗ್ದಾಳಿಗಳು ಶುರುವಾಗಿವೆ.

ಆರ್ಟ್ ಆಫ್ ಲಿವಿಂಗ್‌ನಿಂದ ನೇರ ಶಿವಕುಮಾರ್ ಮನೆಗೆ!

ಅದಾನಿ ಗ್ರೂಪ್‌ನ ಅಧ್ಯಕ್ಷ ಗೌತಮ್ ಅದಾನಿ ಅವರು ಬೆಂಗಳೂರಿನ 'ಆರ್ಟ್ ಆಫ್ ಲಿವಿಂಗ್' ಆಶ್ರಮದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದರು. ಆದರೆ, ಕಾರ್ಯಕ್ರಮ ಮುಗಿದ ತಕ್ಷಣ ಅವರು ನೇರವಾಗಿ ಸದಾಶಿವನಗರದಲ್ಲಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಖಾಸಗಿ ನಿವಾಸಕ್ಕೆ ತೆರಳಿ ಸಭೆ ನಡೆಸಿದರು. ಈ ಭೇಟಿಯ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದ್ದಂತೆ, ಡಿಕೆಶಿ ಆಪ್ತ ವಲಯ ಹಾಗೂ ಮುಖ್ಯಮಂತ್ರಿ ಕಚೇರಿ "ಇದು ಕೇವಲ ಸೌಜನ್ಯದ ಭೇಟಿ, ಇದರಲ್ಲಿ ಯಾವುದೇ ರಾಜಕೀಯ ಅಥವಾ ವಾಣಿಜ್ಯ ಉದ್ದೇಶವಿಲ್ಲ ಎಂದು ಸ್ಪಷ್ಟನೆ ನೀಡಲು ಯತ್ನಿಸಿದವು. ಆದರೆ, ಈ ಭೇಟಿ ನಡೆದ 'ಸಮಯ'ವೇ ಈಗ ಹತ್ತಾರು ಅನುಮಾನಗಳಿಗೆ ಹಾದಿಮಾಡಿಕೊಟ್ಟಿದೆ.

ಸುರಂಗ ರಸ್ತೆ ಯೋಜನೆ ಮತ್ತು ಡೀಲ್ ಊಹಾಪೋಹ!

ಬೆಂಗಳೂರು ನಗರದ ಸಂಚಾರ ದಟ್ಟಣೆ ಶಮನಕ್ಕಾಗಿ ಪ್ರಸ್ತಾಪಿಸಲಾಗಿರುವ, ಹೆಬ್ಬಾಳದಿಂದ ಸಿಲ್ಕ್ ಬೋರ್ಡ್‌ವರೆಗಿನ ಕೋಟ್ಯಂತರ ರೂಪಾಯಿ ಮೌಲ್ಯದ 'ಮೆಗಾ ಸುರಂಗ ರಸ್ತೆ ಯೋಜನೆ'ಯ ಟೆಂಡರ್ ಪ್ರಕ್ರಿಯೆಯಲ್ಲಿ ಅದಾನಿ ಎಂಟರ್‌ಪ್ರೈಸಸ್ ಸಂಸ್ಥೆಯು ಅತ್ಯಂತ ಕಡಿಮೆ ಮೊತ್ತ ನಮೂದಿಸಿದ (L1) ಬಿಡ್ಡರ್ ಆಗಿ ಹೊರಹೊಮ್ಮಿದೆ. ಟೆಂಡರ್ ಪ್ರಕ್ರಿಯೆಗೆ ಇನ್ನು ಅಧಿಕೃತ ಮುದ್ರೆ ಬಿದ್ದಿಲ್ಲ. ಇಂತಹ ನಿರ್ಣಾಯಕ ಘಟ್ಟದಲ್ಲೇ ಈ ಭೇಟಿ ನಡೆದಿರುವುದರಿಂದ, "ಇದು ಸೌಜನ್ಯದ ಸಭೆಯಲ್ಲ, ಟೆಂಡರ್ ಪ್ರಕ್ರಿಯೆಯನ್ನು ವೇಗಗೊಳಿಸಲು ಮತ್ತು ಯೋಜನೆಯನ್ನು ತಮ್ಮದಾಗಿಸಿಕೊಳ್ಳಲು ನಡೆದ ಒಳ ಒಪ್ಪಂದ" ಎಂದು ವಿರೋಧ ಪಕ್ಷಗಳು ಗಂಭೀರವಾಗಿ ಆರೋಪಿಸುತ್ತಿವೆ.

ಕಾಂಗ್ರೆಸ್‌ನ ದ್ವಂದ್ವ ನೀತಿಗೆ ಬಿಜೆಪಿ ಛಾಟಿ!

ಭೇಟಿಯ ಬೆನ್ನಲ್ಲೇ ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ. ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಕಾಂಗ್ರೆಸ್‌ನ ನಡವಳಿಕೆಯನ್ನು ತೀವ್ರವಾಗಿ ತೊಳಗೆದಿದ್ದಾರೆ. ದೆಹಲಿಯಲ್ಲಿ ರಾಹುಲ್ ಗಾಂಧಿ ದಿನವೂ ಅದಾನಿ ಗ್ರೂಪ್ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುತ್ತಾ ಪ್ರತಿಭಟನೆ ನಡೆಸುತ್ತಾರೆ. ಆದರೆ, ಕರ್ನಾಟಕದಲ್ಲಿ ಅವರದ್ದೇ ಕಾಂಗ್ರೆಸ್ ಸರ್ಕಾರ ಅದಾನಿಗೆ 'ರೆಡ್ ಕಾರ್ಪೆಟ್' ಸ್ವಾಗತ ಕೋರುತ್ತಿದೆ. ಶಿವಕುಮಾರ್ ಅವರಿಗೆ ಅದಾನಿ ಜೊತೆ ಚಹಾ ಕುಡಿಯಲು ರಾಹುಲ್ ಗಾಂಧಿ ಅನುಮತಿ ನೀಡಿದ್ದಾರೆಯೇ? ಎಂದು ಅಶೋಕ್ ವ್ಯಂಗ್ಯವಾಡಿದ್ದಾರೆ. ಅಷ್ಟೇ ಅಲ್ಲದೆ, ಸುರಂಗ ರಸ್ತೆಗೆ ಕಡಿಯಲಾಗುವ ಗಿಡ-ಮರಗಳನ್ನು ತಬ್ಬಿಕೊಳ್ಳಲು ರಾಹುಲ್ ಗಾಂಧಿ ಶೀಘ್ರವೇ ಬೆಂಗಳೂರಿಗೆ ಬರಲಿ ಎಂದೂ ಕಾಲೆಳೆದಿದ್ದಾರೆ.

ನ್ಯಾಯಾಲಯದ ಮೆಟ್ಟಿಲೇರಿದ ಯೋಜನೆ!

ಮತ್ತೊಂದೆಡೆ, ಸುರಂಗ ರಸ್ತೆ ಯೋಜನೆಯನ್ನು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ತೀವ್ರವಾಗಿ ವಿರೋಧಿಸಿದ್ದು, ಈಗಾಗಲೇ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಯೋಜನೆಯ ವೈಜ್ಞಾನಿಕತೆ ಮತ್ತು ಪಾರದರ್ಶಕತೆಯನ್ನು ಪ್ರಶ್ನಿಸಲಾಗುತ್ತಿದೆ. ಒಟ್ಟಿನಲ್ಲಿ, ದೆಹಲಿಯಲ್ಲಿ ಅದಾನಿ ವಿರುದ್ಧ 'ಫೈಟ್' ಮಾಡುತ್ತಾ, ಬೆಂಗಳೂರಿನಲ್ಲಿ 'ಬೈಟ್' (ಸಭೆ) ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದ ಈ ನಡೆ, ವಿಪಕ್ಷಗಳಿಗೆ ದೊಡ್ಡ ಅಸ್ತ್ರವಾಗಿ ಸಿಕ್ಕಿದೆ. ಮುಂಬರುವ ದಿನಗಳಲ್ಲಿ ಈ ಚಹಾ ಚರ್ಚೆಯು ರಾಜ್ಯ ರಾಜಕಾರಣದಲ್ಲಿ ಇನ್ನಷ್ಟು ದೊಡ್ಡ ಬಿರುಗಾಳಿ ಎಬ್ಬಿಸುವುದು ಖಚಿತ ಎಂಬಂತಾಗಿದೆ.

PREV
Read more Articles on
click me!

Recommended Stories

Koppal: ಚಿರತೆ ಆತಂಕದ ಬೆನ್ನಲ್ಲೇ ಗಂಗಾವತಿಯಲ್ಲಿ ಹುಲಿ ಪ್ರತ್ಯಕ್ಷ: ಅರಣ್ಯ ಇಲಾಖೆ ಹೈ ಅಲರ್ಟ್!
ನಾಳೆ ದಾವಣಗೆರೆ ಬಂದ್.. ತುರ್ತು ಸೇವೆ ಬಿಟ್ಟ ಎಲ್ಲಾ ಬಂದ್ ಬಂದ್! ಕಾರಣ ಏನು..?