ರಾಹುಲ್ ಆಗಮನದ ವೇಳೆ ತಾರತಮ್ಯ :ಕಾಂಗ್ರೆಸ್ ಕಚೇರಿಗೆ ಬೀಗ ಜಡಿದು ಕಾರ್ಯಕರ್ತರ ಪ್ರತಿಭಟನೆ

By Suvarna NewsFirst Published Aug 4, 2022, 2:36 PM IST
Highlights

ಕಾಂಗ್ರೆಸ್ ನಾಯಕ ರಾಹುಲ್ ಭೇಟಿ ವೇಳೆ ಚಿತ್ರದುರ್ಗ ಜಿಲ್ಲಾಧ್ಯಕ್ಷ ಕಾರ್ಯಕರ್ತರಿಗೆ ಪಾಸ್‌ ವಿತರಿಸುವಲ್ಲಿ ತಾರತಮ್ಯ ತೋರಿದ್ದಾರೆ ಎಂದು ಕಾರ್ಯಕರ್ತರು ಪಕ್ಷದ ಜಿಲ್ಲಾ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.

ಚಿತ್ರದುರ್ಗ: ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ನಿನ್ನೆ ನಗರಕ್ಕೆ ಭೇಟಿ ನೀಡಿದ ವೇಳೆ ಕಾರ್ಯಕರ್ತರಿಗೆ ಪಾಸ್ ಗಳನ್ನು ನೀಡದೆ ರಾಹುಲ್ ಗಾಂಧಿ ಭೇಟಿ ಮಾಡಲು ಅನುವು ಮಾಡಿಕೊಡದ ಹಿನ್ನೆಲೆಯಲ್ಲಿ ಕಾಂಗ್ರೆಸ್  ಜಿಲ್ಲಾಧ್ಯಕ್ಷ ಎಂ.ಕೆ.ತಾಜ್ ಪೀರ್ ವಿರುದ್ಧ ಪಕ್ಷದ SC-ST ಸೆಲ್ ಸೇರಿದಂತೆ ವಿವಿಧ ವಿಭಾಗಗಳ ಮುಖಂಡರು ಜಿಲ್ಲಾ ಕಾಂಗ್ರೆಸ್  ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.

ನಗರದ ಮುರುಘಾ ಮಠಕ್ಕೆ ನಿನ್ನೆ ರಾಹುಲ್ ಡಾ.ಶಿವಮೂರ್ತಿ ಮುರುಘಾ ಶರಣರನ್ನು ಭೇಟಿ ಮಾಡಿದ ವೇಳೆ ಕಾಂಗ್ರೆಸ್  ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರನ್ನು ಭೇಟಿ ಮಾಡಿದರು. ಈ ವೇಳೆ ಬೀಗಿ ಪೊಲೀಸ್ ಬಂದೋಬಸ್ತ್ ಇದ್ದಿದ್ದರಿಂದ ಕೇವಲ ಪಾಸ್ ಗಳನ್ನು ಪಡೆದಿದ್ದ ಮುಖಂಡರು ಹಾಗೂ ಕಾರ್ಯಕರ್ಯರನ್ನು ಮಾತ್ರ ಮಠದ ಒಳಗಡೆ ಪೊಲೀಸರು ಬಿಟ್ಟಿದ್ದರು. ಪಕ್ಷದ SC-ST ಸೆಲ್ ಸೇರಿದಂತೆ ವಿವಿಧ ವಿಭಾಗಗಳ ಮುಖಂಡರು, ಪಾಸ್ ಗಳು ಸಿಗದ ಕಾರಣ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಲು ಸಾಧ್ಯವಾಗಲಿಲ್ಲ. ಇದಕ್ಕೆ ಪಕ್ಷದ ಜಿಲ್ಲಾಧ್ಯಕ್ಷ ಎಂ.ಕೆ.ತಾಜ್ ಪೀರ್ ಅವರೆ ಕಾರಣ. ನಮಗೆ ಪಾಸ್ ಗಳನ್ನು ನೀಡದೆ, ತಮಗೆ ಹತ್ತಿರ ಆದವರಿಗೆ ಮತ್ತು ಇಷ್ಟ ಬಂದವರಿಗೆ ಮಾತ್ರ ಪಾಸ್ ಗಳನ್ನು ನೀಡಿ, ತಾರತಮ್ಯ ಮಾಡಿದ್ದಾರೆ ಎಂದು ಕಾರ್ಯಕರ್ತರು ಆರೋಪಿಸಿದರು.

ಇವರ ಧೋರಣೆ ಸರಿ ಅಲ್ಲ ಎಂದು ತಾಜ್ ಪೀರ್ ವಿರುದ್ದ ಘೋಷಣೆಗಳನ್ನು ಕೂಗಿದ ಪಕ್ಷದ SC-ST ಸೆಲ್ ಸೇರಿದಂತೆ ವಿವಿಧ ವಿಭಾಗಗಳ ಮುಖಂಡರು ತಾಜ್ ಪೀರ್ ಅವರನ್ನು ಕಚೇರಿ ಒಳಗೆ ಹೋಗದಂತೆ ತಡೆದು ಕಚೇರಿಗೆ ಬೀಗ ಹಾಕಿದರು. ಈ ವೇಳೆ ತಾಜ್ ಪೀರ್ ಮತ್ತು ಮುಖಂಡರ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು. ನಂತರ ತಾಜ್ ಪೀರ್ ಮಾತನಾಡಿ, ಪಕ್ಷದ ಹೈಕಮಾಂಡ್ ಹೇಳಿದಂತೆ ನಾನು ಕಾರ್ಯನಿರ್ವಹಿಸಿದ್ದು, ಇದನ್ನು ಅವರಲ್ಲಿ ಚರ್ಚಿಸುವುದಾಗಿ ಹೇಳಿ ಪ್ರತಿಭಟನಾ ನಿರತ ಕಾರ್ಯಕರ್ತರು ಹಾಗೂ ಮುಖಂಡರನ್ನು ಸಮಾಧಾನಪಡಿಸಿದರು.

click me!