
ಧಾರವಾಡ: ಕೊರಿಯನ್ ಗೇಮ್ಗಳ ಅತಿಯಾದ ಆಸಕ್ತಿಗೆ ಯುವಕ ಬಲಿಯಾದನಾ ಎಂಬ ಅನುಮಾನಕ್ಕೆ ಕಾರಣವಾದ ಘಟನೆ ಧಾರವಾಡ ದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಧಾರವಾಡ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಪ್ರಕರಣವು ಸಾರ್ವಜನಿಕ ವಲಯದಲ್ಲಿ ಆತಂಕ ಮತ್ತು ಚರ್ಚೆಗೆ ಕಾರಣವಾಗಿದೆ.
ಕಳೆದ ಫೆಬ್ರವರಿ 6ರಂದು, ಧಾರವಾಡ ನಗರದ ಮಂಗಳಗಟ್ಟಿ ಪ್ಲಾಟ್ ನಿವಾಸಿಯಾದ ವಿಕಾಸ್ ನಾಯಕ (20) ಎಂಬ ಯುವಕ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮ*ಹತ್ಯೆ ಮಾಡಿಕೊಂಡಿದ್ದ. ಆರಂಭದಲ್ಲಿ ಇದು ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ತನಿಖೆಯನ್ನು ಮುಂದುವರಿಸಿದ್ದರು. ಆದರೆ ಈ ಸಾವೀಗ ಹವು ಅನುಮಾನಗಳಿಗೆ ಕಾರಣವಾಗಿದೆ.
ವಿಕಾಸ್ ನಾಯಕ ಪಿಯುಸಿ ಸೈನ್ಸ್ ಪೂರ್ಣಗೊಳಿಸಿ, ಮುಂದಿನ ಉನ್ನತ ಶಿಕ್ಷಣಕ್ಕಾಗಿ ಮನೆಯಲ್ಲಿ ತಯಾರಿ ಮಾಡಿಕೊಂಡಿದ್ದನು. ಆದರೆ ಅವನು ಮೊಬೈಲ್ ಗೇಮ್ಗಳಿಗೆ, ವಿಶೇಷವಾಗಿ ಕೊರಿಯನ್ ಮೂಲದ ಗೇಮ್ಗಳಿಗೆ ಕ್ರಮೇಣ ಅತಿಯಾದ ಆಸಕ್ತಿಯನ್ನು ಬೆಳೆಸಿಕೊಂಡಿದ್ದನೆಂಬ ಅಂಶ ಇದೀಗ ಬಹಿರಂಗವಾಗಿದೆ. ಮನೆಯವರಿಗೆ ತಿಳಿಯದೇ, ಬಹುತೇಕ ಸಮಯವನ್ನು ಗೇಮ್ ಆಡುವುದರಲ್ಲಿ ಕಳೆಯುತ್ತಿದ್ದ ಎಂಬ ವಿಚಾರ ಪೊಲೀಸ್ ತನಿಖೆಯಿಂದ ಬೆಳಕಿಗೆ ಬಂದಿದೆ.
ಯುವಕನ ಸಾವಿನ ನಂತರ ಪೊಲೀಸರು ಅವನ ಮೊಬೈಲ್ ಫೋನ್ ಅನ್ನು ವಶಕ್ಕೆ ಪಡೆದಿದ್ದರು. ಸುಮಾರು ಆರು ದಿನಗಳ ನಂತರ ಮೊಬೈಲ್ ಪಾಸ್ವರ್ಡ್ ತೆರೆದು ಪರಿಶೀಲಿಸಿದಾಗ, ಕೊರಿಯನ್ ಗೇಮ್ಗಳು ಇರುವುದು ಪತ್ತೆಯಾಗಿದೆ. ಇದನ್ನು ಕಂಡು ಪೊಲೀಸರು ಸಹ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಇನ್ನೂ ಮಹತ್ವದ ಸಂಗತಿಯೆಂದರೆ, ಸಾವಿನ ಮೊದಲು ವಿಕಾಸ್ ತನ್ನದೇ ಮೊಬೈಲ್ನಿಂದ ಸೆಲ್ಫ್ ಮೆಸೇಜ್ ಕಳುಹಿಸಿ “ನನ್ನ ಸಾವಿಗೆ ನಾನೇ ಕಾರಣ” ಎಂದು ಬರೆದುಕೊಂಡಿದ್ದದು ಪತ್ತೆಯಾಗಿದೆ. ಪ್ರಸ್ತುತ, ಈ ಪ್ರಕರಣವನ್ನು ಅಸಹಜ ಸಾವು ಎಂದು ದಾಖಲಿಸಿಕೊಂಡಿರುವ ಧಾರವಾಡ ಉಪನಗರ ಪೊಲೀಸ್ ಠಾಣೆ ಪೊಲೀಸರು, ಗೇಮ್ ಅಡಿಕ್ಷನ್ ಹಾಗೂ ಮಾನಸಿಕ ಒತ್ತಡ ಆತ್ಮ*ಹತ್ಯೆಗೆ ಕಾರಣವಾಗಿದೆಯೇ ಎಂಬ ಎಲ್ಲಾ ಆಯಾಮಗಳಿಂದ ತನಿಖೆ ಮುಂದುವರಿಸಿದ್ದಾರೆ.
ಇದೆಲ್ಲದ ಜೊತೆಗೆ ಓದಿನಲ್ಲಿ ಯಶಸ್ಸು ಸಾಧಿಸದ ಹಿನ್ನೆಲೆಯಲ್ಲಿ ಆತ್ಮ*ಹತ್ಯೆ ಮಾಡಿಕೊಂಡಿರುವ ಕಾರಣ ಕೂಡ ಪೊಲೀಸರ ತನಿಖೆ ವೇಳೆ ಪತ್ತೆಯಾಗಿದೆ. ಸಾವಿನ ನಂತರ ಪೊಲೀಸರು ಮೊಬೈಲ್ ಪರಿಶೀಲಿಸಿದ್ದು, ಪಿಯುಸಿಯಲ್ಲಿ ಯಶಸ್ವಿಯಾಗದಿರುವ ಬಗ್ಗೆ ಕೂಡ ಪಶ್ಚಾತ್ತಾಪ ಪಟ್ಟಿದ್ದಾನೆ. ಪಿಯುಸಿ ಸೈನ್ಸ್ ವಿದ್ಯಾರ್ಥಿಯಾಗಿದ್ದ ವಿಕಾಸ್. ಜೆಇಇ, ನೀಟ್ ನಲ್ಲಿ ಉತ್ತಮ ಸಾಧನೆ ಮಾಡಲು ಅಸಾಧ್ಯವಾಗಿದ್ದರ ಬಗ್ಗೆ ನೋವು ಕೂಡ ತೋಡಿಕೊಂಡಿದ್ದಾನೆ. ಈ ಬಗ್ಗೆ ತಂದೆ-ತಾಯಿಗೆ ಸಂದೇಶ ಕಳಿಸಿದ್ದ ಯುವಕ, ಇತ್ತೀಚಿಗೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಎಂದು ತಿಳಿದುಬಂದಿದೆ.
ಈ ಘಟನೆ ಆನ್ಲೈನ್ ಗೇಮ್ಗಳಿಗೆ ಮಿತಿಮೀರಿದ ಆಸಕ್ತಿ ಯುವಕರ ಜೀವನದ ಮೇಲೆ ಹೇಗೆ ದುಷ್ಪರಿಣಾಮ ಬೀರುತ್ತದೆ ಎಂಬುದಕ್ಕೆ ಮತ್ತೊಂದು ಎಚ್ಚರಿಕೆಯ ಉದಾಹರಣೆಯಾಗಿದೆ.