
ಧಾರವಾಡ ನಗರದ ಶಿಕ್ಷಣ ವಲಯಕ್ಕೆ ಆಘಾತ ತಂದ ಘಟನೆ ನಡೆದಿದೆ. ಅಂಡಮಾನ್–ನಿಕೋಬಾರ್ ಪ್ರವಾಸಕ್ಕೆ ತೆರಳಿದ್ದ ಕೆಸಿಡಿ ಕಾಲೇಜಿನ ಅಸಿಸ್ಟೆಂಟ್ ಪ್ರೊಫೆಸರ್ ಎಸ್. ಅನ್ನಪೂರ್ಣ ಅವರು ಹೃದಯಾಘಾತದಿಂದ ಅಕಾಲಿಕವಾಗಿ ನಿಧನರಾಗಿದ್ದಾರೆ. ಮೃತರಾದ ಅನ್ನಪೂರ್ಣ ಅವರು ಧಾರವಾಡದ ಕೆಸಿಡಿ ಕಾಲೇಜಿನ ಅರ್ಥಶಾಸ್ತ್ರ ವಿಭಾಗದಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಜೊತೆಗೆ ಕಾಲೇಜಿನ ಕಾವೇರಿ ಹಾಸ್ಟೆಲ್ ವಾರ್ಡನ್ ಆಗಿಯೂ ಅವರು ಸೇವೆ ಸಲ್ಲಿಸುತ್ತಿದ್ದರು. ಅವರ ಅಕಸ್ಮಿಕ ನಿಧನ ಸುದ್ದಿ ಕಾಲೇಜು ವಲಯ ಹಾಗೂ ವಿದ್ಯಾರ್ಥಿಗಳಲ್ಲಿ ತೀವ್ರ ಆಘಾತಕ್ಕೆ ಕಾರಣವಾಗಿದೆ.
ಅನ್ನಪೂರ್ಣ ಅವರು ಸುಮಾರು ಮೂರು ದಿನಗಳ ಹಿಂದೆ ಕುಟುಂಬದೊಂದಿಗೆ ಅಂಡಮಾನ್–ನಿಕೋಬಾರ್ ದ್ವೀಪಸಮೂಹದ ಫೋರ್ಟ್ ಬ್ಲೇರ್ಗೆ ಪ್ರವಾಸಕ್ಕೆ ತೆರಳಿದ್ದರು. ಪ್ರವಾಸದ ಸಮಯದಲ್ಲಿ ಎಲ್ಲವೂ ಸಾಮಾನ್ಯವಾಗಿತ್ತು, ಆದರೆ ಕಳೆದ ರಾತ್ರಿ ಅಚಾನಕ್ ಅನ್ನಪೂರ್ಣ ಅವರಿಗೆ ಅಸ್ವಸ್ಥತೆ ಕಾಣಿಸಿಕೊಂಡಿದೆ. ಅಸ್ವಸ್ಥಗೊಂಡ ತಕ್ಷಣ ಕುಟುಂಬದವರು ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ವೈದ್ಯರು ಪರೀಕ್ಷಿಸಿದಾಗ ಅನ್ನಪೂರ್ಣ ಅವರು ಆಗಲೇ ಹೃದಯಾಘಾತದಿಂದ ಮೃತಪಟ್ಟಿರುವುದು ದೃಢಪಡಿಸಿದ್ದಾರೆ.
ಅನ್ನಪೂರ್ಣ ಅವರ ನಿಧನದ ಬಳಿಕ ಕುಟುಂಬಸ್ಥರು ತೀವ್ರ ಆಘಾತಕ್ಕೆ ಒಳಗಾಗಿದ್ದು. ಸದ್ಯ ಅವರ ಮೃತದೇಹವನ್ನು ಅಂಡಮಾನ್ನಿಂದ ಧಾರವಾಡಕ್ಕೆ ತರಲು ಅಗತ್ಯ ಸಿದ್ಧತೆಗಳನ್ನು ಕುಟುಂಬದವರು ಮಾಡಿಕೊಳ್ಳುತ್ತಿದ್ದಾರೆ. ನಾಳೆ ಧಾರವಾಡಕ್ಕೆ ಅನ್ನಪೂರ್ಣ ಅವರ ಶವ ತರುವ ಸಾಧ್ಯತೆ ಇದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಕೆಸಿಡಿ ಕಾಲೇಜಿನ ಆಡಳಿತ ಮಂಡಳಿ, ಸಹೋದ್ಯೋಗಿಗಳು ಹಾಗೂ ವಿದ್ಯಾರ್ಥಿಗಳು ಅನ್ನಪೂರ್ಣ ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಶಾಂತ ಸ್ವಭಾವ, ಕರ್ತವ್ಯನಿಷ್ಠೆ ಮತ್ತು ವಿದ್ಯಾರ್ಥಿ ಸ್ನೇಹಿ ಉಪನ್ಯಾಸಕಿಯಾಗಿ ಅವರು ಎಲ್ಲರಿಗೂ ಪರಿಚಿತರಾಗಿದ್ದರು ಎಂದು ಸಹೋದ್ಯೋಗಿಗಳು ನೆನಪಿಸಿಕೊಂಡಿದ್ದಾರೆ. ಒಟ್ಟಿನಲ್ಲಿ, ಯುವ ವಯಸ್ಸಿನಲ್ಲೇ ಅನ್ನಪೂರ್ಣ ಅವರ ಅಕಾಲಿಕ ನಿಧನವು ಕುಟುಂಬ, ಕಾಲೇಜು ಹಾಗೂ ಶಿಕ್ಷಣ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿ ಪರಿಣಮಿಸಿದೆ.