
ಧಾರವಾಡ (ಮಾ.11): ನಗರದ ಶ್ರಮಿಕ ವರ್ಗ, ವಿದ್ಯಾರ್ಥಿಗಳು ಹಾಗೂ ಬಡವರ ಹಸಿವು ನೀಗಿಸುವ ಅಕ್ಷಯ ಪಾತ್ರೆ ಎಂದೇ ಕರೆಸಿಕೊಳ್ಳುವ ಇಂದಿರಾ ಕ್ಯಾಂಟೀನ್ಗೆ ಈಗ ಸಿಲಿಂಡರ್ ಸಂಕಷ್ಟ ಎದುರಾಗಿದೆ. ಧಾರವಾಡದ ಇಂದಿರಾ ಕ್ಯಾಂಟೀನ್ನಲ್ಲಿ ಸಿಲಿಂಡರ್ ಖಾಲಿಯಾದ ಪರಿಣಾಮ, ಮಧ್ಯಾಹ್ನದ ಊಟಕ್ಕೆ ಜನ ಸಾಮಾನ್ಯರು ಪರದಾಡುವಂತಾಗಿದ್ದು, ಅನಿವಾರ್ಯವಾಗಿ ಕೇವಲ ಮೊಸರನ್ನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಧಾರವಾಡದಲ್ಲಿರುವ ಇಂದಿರಾ ಕ್ಯಾಂಟೀನ್ನಲ್ಲಿ ಪ್ರತಿನಿತ್ಯ ನೂರಾರು ಜನರು ರೊಟ್ಟಿ, ಚಪಾತಿ, ಅನ್ನ-ಸಾಂಬಾರ್ ಸವಿಯುತ್ತಿದ್ದರು. ಆದರೆ, ಇಂದು ಮಧ್ಯಾಹ್ನ 12 ಗಂಟೆಯಿಂದ ಕ್ಯಾಂಟೀನ್ನಲ್ಲಿ ಸಿಲಿಂಡರ್ ಸಪ್ಲೈ ಇಲ್ಲದೆ ಅಡುಗೆ ಮನೆ ಸ್ತಬ್ಧವಾಗಿದೆ. ಸಿಲಿಂಡರ್ಗಳು ಖಾಲಿಯಾದ ಕಾರಣ ಚಪಾತಿ ಅಥವಾ ಬಿಸಿ ಬಿಸಿ ಅನ್ನ-ಸಾಂಬಾರ್ ಮಾಡಲು ಸಾಧ್ಯವಾಗುತ್ತಿಲ್ಲ. ಇದರ ನೇರ ಪರಿಣಾಮ ಗ್ರಾಹಕರ ಮೇಲೆ ಬಿದ್ದಿದ್ದು, ಹಸಿದು ಬಂದವರಿಗೆ ಸಿಬ್ಬಂದಿಗಳು ಕೇವಲ ಮೊಸರನ್ನವನ್ನು ಮಾತ್ರ ಬಡಿಸುತ್ತಿದ್ದಾರೆ.
ಸಾಮಾನ್ಯವಾಗಿ ಇಂದಿರಾ ಕ್ಯಾಂಟೀನ್ನಲ್ಲಿ ನಿಗದಿತ ದರಕ್ಕೆ ಪೌಷ್ಟಿಕಾಂಶಯುಕ್ತ ವೈವಿಧ್ಯಮಯ ಆಹಾರ ನೀಡಲಾಗುತ್ತದೆ. ಆದರೆ ಇಂದು ಮಧ್ಯಾಹ್ನ 12 ಗಂಟೆಯ ನಂತರ ಬಂದ ಗ್ರಾಹಕರಿಗೆ 10 ರೂಪಾಯಿ ಕೂಪನ್ ನೀಡಿ, ಕೇವಲ ಮೊಸರನ್ನ ನೀಡಲಾಗುತ್ತಿದೆ. ದೂರದ ಊರುಗಳಿಂದ ಕೆಲಸಕ್ಕೆ ಬಂದವರು ಹಾಗೂ ಕೂಲಿ ಕಾರ್ಮಿಕರು ಚಪಾತಿ, ರೊಟ್ಟಿ ಸಿಗದೆ ನಿರಾಸೆಯಿಂದ ಮೊಸರನ್ನವನ್ನೇ ತಿಂದು ಹೋಗುತ್ತಿದ್ದಾರೆ.
ಈ ಕುರಿತು 'ಏಷ್ಯಾನೆಟ್ ಸುವರ್ಣ ನ್ಯೂಸ್' ಪ್ರತಿನಿಧಿ ಪರಮೇಶ್ ಅಂಗಡಿ ಅವರೊಂದಿಗೆ ಮಾತನಾಡಿದ ಕ್ಯಾಂಟೀನ್ ಸಿಬ್ಬಂದಿ ಶಿಲ್ಪಾ ಅವರು, 'ಬೆಳಿಗ್ಗೆ ಇಡ್ಲಿ ಮತ್ತು ವಡಾ ತಯಾರಿಸಿ ಗ್ರಾಹಕರಿಗೆ ನೀಡಿದ್ದೇವೆ. ಆದರೆ ಮಧ್ಯಾಹ್ನ 12 ಗಂಟೆ ಸುಮಾರಿಗೆ ಸಿಲಿಂಡರ್ ಸಂಪೂರ್ಣವಾಗಿ ಖಾಲಿಯಾಗಿದೆ. ಹೊಸ ಸಿಲಿಂಡರ್ ಸಪ್ಲೈ ಆಗುವವರೆಗೂ ನಮಗೆ ಅಡುಗೆ ಮಾಡಲು ಸಾಧ್ಯವಿಲ್ಲ. ಅಲ್ಲಿಯವರೆಗೆ ನಾವು ಮೊಸರನ್ನವನ್ನೇ ನೀಡಬೇಕಾದ ಅನಿವಾರ್ಯತೆ ಇದೆ' ಎಂದು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಇಂದಿರಾ ಕ್ಯಾಂಟೀನ್ಗಳು ಸಿದ್ದರಾಮಯ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದರೂ, ನಿರ್ವಹಣೆಯಲ್ಲಿ ಇಂತಹ ಸಣ್ಣಪುಟ್ಟ ಲೋಪಗಳು ಬಡವರ ಹೊಟ್ಟೆಯ ಮೇಲೆ ಹೊಡೆಯುತ್ತಿವೆ. ಸಮಯಕ್ಕೆ ಸರಿಯಾಗಿ ಸಿಲಿಂಡರ್ ಪೂರೈಕೆಯಾಗದಿದ್ದರೆ, ಕ್ಯಾಂಟೀನ್ ನಂಬಿಕೊಂಡಿರುವ ನೂರಾರು ಜನರಿಗೆ ತೊಂದರೆಯಾಗುತ್ತದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಸಿಲಿಂಡರ್ ಪೂರೈಕೆಗೆ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಮಧ್ಯಾಹ್ನದ ಹೊತ್ತಿಗೆ ಸಿಲಿಂಡರ್ ಖಾಲಿಯಾಗಿರುವುದು ಮತ್ತು ಮುನ್ನೆಚ್ಚರಿಕಾ ಕ್ರಮವಾಗಿ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳದಿರುವುದು ಕ್ಯಾಂಟೀನ್ ನಿರ್ವಹಣಾ ಮಂಡಳಿಯ ವೈಫಲ್ಯವನ್ನು ಎತ್ತಿ ತೋರಿಸುತ್ತಿದೆ. ಹೊಸ ಸಿಲಿಂಡರ್ ಬರುವವರೆಗೂ ಈ 'ಮೊಸರನ್ನ' ಪುರಾಣ ಮುಂದುವರಿಯಲಿದೆ ಎಂಬುದು ಸ್ಪಷ್ಟವಾಗಿದೆ.