Dharwad Floods: ಕಾಳಜಿ ಕೇಂದ್ರಕ್ಕೆ 1050 ಜನರ ಸ್ಥಳಾಂತರ

By Kannadaprabha NewsFirst Published Sep 7, 2022, 1:14 PM IST
Highlights

ಜಿಲ್ಲಾದ್ಯಂತ ಸೋಮವಾರ ರಾತ್ರಿ ಸುರಿದ ಭಾರೀ ಮಳೆಗೆ ಅವಾಂತರ ಸೃಷ್ಟಿಯಾಗಿದ್ದು, ಪ್ರವಾಹದಲ್ಲಿ ಸಿಲುಕಿದ್ದ 10 ಜನರನ್ನು ಜಿಲ್ಲಾಡಳಿತದಿಂದ ರಕ್ಷಿಸಲಾಗಿದೆ. 1050 ಜನರಿಗೆ ಕಾಳಜಿ ಕೇಂದ್ರದಲ್ಲಿ ಆಶ್ರಯ ನೀಡಲಾಗಿದೆ.

ಧಾರವಾಡ (ಸೆ.7): ಜಿಲ್ಲಾದ್ಯಂತ ಸೋಮವಾರ ರಾತ್ರಿ ಸುರಿದ ಭಾರೀ ಮಳೆಗೆ ಅವಾಂತರ ಸೃಷ್ಟಿಯಾಗಿದ್ದು, ಪ್ರವಾಹದಲ್ಲಿ ಸಿಲುಕಿದ್ದ 10 ಜನರನ್ನು ಜಿಲ್ಲಾಡಳಿತದಿಂದ ರಕ್ಷಿಸಲಾಗಿದೆ. 1050 ಜನರಿಗೆ ಕಾಳಜಿ ಕೇಂದ್ರದಲ್ಲಿ ಆಶ್ರಯ ನೀಡಲಾಗಿದೆ. ನವಲಗುಂದ ತಾಲೂಕಿನ ಹಂದಿಗನಹಳ್ಳದಲ್ಲಿ ಸಿಲುಕಿದ್ದ ನಾಲ್ವರು ಹಾಗೂ ಕಡಪಟ್ಟಿ-ಹಳ್ಯಾಳದಲ್ಲಿ 6 ಜನ ಸೇರಿದಂತೆ ಒಟ್ಟು 10 ಜನರನ್ನು ಪ್ರವಾಹದಿಂದ ರಕ್ಷಿಸಲಾಗಿದೆ. ನವಲಗುಂದ, ಅಣ್ಣಿಗೇರಿ ಹಾಗೂ ಕುಂದಗೋಳ ತಾಲೂಕಿನಲ್ಲಿ ಅತಿ ಹೆಚ್ಚು ಮಳೆಯಾಗಿದ್ದು ಅಪಾರ ಹಾನಿ ಸಂಭವಿಸಿದೆ.

Heavy Rain: ಧಾರವಾಡ, ಗದಗ ಜಿಲ್ಲೆಗಳಲ್ಲಿ ಭಾರಿ ಮಳೆ: ಒಂದು ಬಲಿ

ನವಲಗುಂದ ತಾಲೂಕಿನಲ್ಲಿ ತುಪರಿ ಹಳ್ಳ ಹಾಗೂ ಬೆಣ್ಣಿಹಳ್ಳಿ ಉಕ್ಕಿ ಹರಿದ ಪರಿಣಾಮ 450 ಹಾಗೂ ಅಣ್ಣಿಗೇರಿಯಲ್ಲಿ ತಾಲೂಕಿನಲ್ಲಿ 600 ಸಂತ್ರಸ್ತರಾಗಿದ್ದಾರೆ. ನವಲಗುಂದ ತಾಲೂಕಿನ ಅರೆ ಕುರಹಟ್ಟಿ, ಬೋಗಾನೂರ ಹಾಗೂ ಪಡೇಸೂರನಲ್ಲಿ (450) ಹಾಗೂ ಅಣ್ಣಿಗೇರಿ ಮತ್ತು ಶಲವಡಿಯಲ್ಲಿ (600) ಕಾಳಜಿ ಕೇಂದ್ರ ತೆರೆದಿದ್ದು ಇವರಿಗೆ ಆಶ್ರಯ ನೀಡಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ. ಶಿವಾನಂದ ಭಜಂತ್ರಿ ತಿಳಿಸಿದ್ದಾರೆ.

ಕಳೆದ 24 ಗಂಟೆಯಲ್ಲಿ ಧಾರವಾಡ ತಾಲೂಕಿನಲ್ಲಿ 21.27 ಮೀಮೀ, ಅಳ್ನಾವರ 13 ಮೀಮೀ, ಕುಂದಗೋಳದಲ್ಲಿ 82.8 ಮೀಮೀ, ನವಲಗುಂದ 36.4 ಮೀಮೀ, ಅಣ್ಣಿಗೇರಿಯಲ್ಲಿ 153.6 ಮೀಮೀ, ಹುಬ್ಬಳ್ಳಿ ತಾಲೂಕಿನಲ್ಲಿ 42.75 ಮೀಮೀ ಮಳೆಯಾದ ವರದಿಯಾಗಿದೆ.

97 ಸಾವಿರ ಹೆಕ್ಟೇರ್‌ ಬೆಳೆ ಹಾನಿ:

ಜಿಲ್ಲೆಯಲ್ಲಿ ಈ ವರೆಗೆ 400 ಮಿಮೀ ವಾಡಿಕೆ ಮಳೆಯ ಬದಲು 428 ಅಂದರೆ ಶೇ. 7ರಷ್ಟುಅಧಿಕ ಮಳೆಯಾಗಿದ್ದು, 97 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹೇಳಿದ್ದಾರೆ. ಎರಡು ದಿನಗಳ ಕಾಲ ಸುರಿದ ಮಳೆಯ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೂ. 1ರಿಂದ ಸೆ. 5ರ ವರೆಗೆ ಶೇ. 7ರಷ್ಟುಅಧಿಕ ಮಳೆಯಾಗಿದೆ. ಈ ಪೈಕಿ ನವಲಗುಂದ ಹಾಗೂ ಕುಂದಗೋಳ ತಾಲೂಕಿನಲ್ಲಿ ಹೆಚ್ಚಿನ ಮಳೆ ಹಾಗೂ ಅಧಿಕ ಪ್ರಮಾಣದ ಬೆಳೆ ಹಾನಿಯಾಗಿದೆ. ಮುಂಗಾರು ಹಂಗಾಮಿನಲ್ಲಿ ಅತೀ ಹೆಚ್ಚು (50,000 ಹೆಕ್ಟೇರ್‌) ಹೆಸರು ಮತ್ತು ಉದ್ದು ಬೆಳೆ ಹಾನಿಯಾಗಿದೆ. ಜಿಲ್ಲೆಯಲ್ಲಿ 1172 ಮನೆಗಳಿಗೆ ಹಾನಿಯಾಗಿದೆ. ಅದರಲ್ಲಿ 600ಕ್ಕೂ ಹೆಚ್ಚು ಮನೆಗಳು ಪರಿಹಾರ ಕೊಟ್ಟಿದ್ದೇವೆ. ಜತೆಗೆ ಜಿಲ್ಲೆಯಲ್ಲಿ 600 ಕಿಮೀ ರಸ್ತೆ ಹಾನಿಯಾಗಿದೆ. 15 ಸೇತುವೆ, 150 ಅಂಗನವಾಡಿ ಕಟ್ಟಡಗಳು ಹಾಗೂ 413 ಶಾಲಾ ಕಟ್ಟಡಗಳಿಗೆ ಹಾನಿಯಾಗಿದೆ. ಇದರೊಂದಿಗೆ ಇಬ್ಬರು ಮಳೆ ಹಾನಿಗೆ ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ನೀಡಿದರು.Hubballi: ಅವಳಿ ನಗರದಲ್ಲಿ ವರುಣನ ಆರ್ಭಟ: ಒಂದೇ ರಾತ್ರಿಯಲ್ಲಿ ಸುರಿಯಿತು 80ಮೀ.ಮಿ‌ ಮಳೆ!

click me!