
ಬೆಂಗಳೂರು (ಸೆ.4): ದಕ್ಷಿಣ ಕನ್ನಡದ ಧರ್ಮಸ್ಥಳ ಗ್ರಾಮದಲ್ಲಿ ನಡೆದಿದೆ ಎನ್ನಲಾದ ಅಸಹಜ ಸಾವು ಪ್ರಕರಣದ ಆರೋಪಗಳ ಎಸ್ಐಟಿ ತನಿಖೆ ನಡುವೆ, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಗೆ ಮಹಿಳಾ ಸಂಘಟನೆಗಳು ಪತ್ರ ಬರೆದಿವೆ.'ಕೊಂದವರು ಯಾರು? Who killed women in Dharmasthala?' ಎಂಬ ಶೀರ್ಷಿಕೆಯಡಿ ಪತ್ರ ಬರೆಯಲಾಗಿದ್ದು, ಕೆಲವೊಂದು ಕ್ರಮಗಳಿಗೆ ಆಗ್ರಹಿಸಿದ್ದಾರೆ. ಕೆಲವು ಕಾಂಗ್ರೆಸ್ ನಾಯಕರ ವಿರುದ್ಧವೂ ಆಕ್ರೋಶ ಹೊರಹಾಕಲಾಗಿದೆ.
ಜುಲೈ 2025ರಲ್ಲಿ ಮಹಿಳಾ ಆಯೋಗದ ಅಧ್ಯಕ್ಷರು ಸಿಎಂಗೆ ಪತ್ರ ಬರೆದಿದ್ದರು. ಧರ್ಮಸ್ಥಳದಲ್ಲಿ ನಡೆದಿದ್ದ ಅಸಹಜ ಸಾವು, ಲೈಂಗಿಕ ದೌರ್ಜನ್ಯಗಳ ಬಗ್ಗೆ SIT ರಚಿಸಿ ಎಂದು ಪತ್ರ ಬರೆಯಲಾಗಿತ್ತು. ಮಾಧ್ಯಮಗಳಲ್ಲಿ ಮತ್ತು ಸ್ಥಳೀಯ ಸಾಮಾಜಿಕ ಹೋರಾಟಗಾರರು ಹೇಳುವಂತೆ ಸಾಕಷ್ಟು ದೌರ್ಜನ್ಯ ನಡೆದಿತ್ತು. 2012 ರ ಸೌಜನ್ಯ ಕೇಸ್, 1986 ಪದ್ಮಲತಾ ಕೇಸ್, 1979 ವೇದವಲ್ಲಿ ಪ್ರಕರಣ ಇವುಗಳಲ್ಲಿ ಪ್ರಮುಖವಾದದ್ದು.
RTI ದಾಖಲೆ ಅನ್ವಯ 2001-2012 ರ ನಡುವೆ ಉಜಿರೆ ಮತ್ತು ಧರ್ಮಸ್ಥಳದಲ್ಲಿ 424 ಸಾವುಗಳು ಸಂಭವಿಸಿವೆ. ಸೌಜನ್ಯ ಪ್ರಕರಣವನ್ನು ಸಿಬಿಐ ತನಿಖೆಗೆ ಒಳಪಡಿಸಿದರೂ ನಿಜವಾದ ಆರೋಪಿಗಳನ್ನು ಪತ್ತೆ ಹಚ್ಚಲು ಇದುವರೆಗೆ ಸಾಧ್ಯವಾಗಿಲ್ಲ. ಜುಲೈ ತಿಂಗಳ ಆರಂಭದಲ್ಲಿ ಧರ್ಮಸ್ಥಳದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನೊಬ್ಬ ಹಲವು ಸಾವುಗಳಿಗೆ ಸಂಬಂಧಿಸಿದ ದಾಖಲೆಗಳನ್ನು ತೋರಿಸುವುದಾಗಿ ಮಾಧ್ಯಮಗಳ ಮುಂದೆ ಬಂದಿದ್ದ.
ಮಾಧ್ಯಮಗಳು ಹಾಗೂ ಕೆಲವು ರಾಜಕೀಯ ಮುಖಂಡರು ಇದರ ಲಾಭವನ್ನು ಪಡೆದುಕೊಂಡಿದ್ದಾರೆ. ಸುಜಾತಭಟ್ ಗೆ ರಕ್ಷಣೆ ಕೊಡಬೇಕಾಗಿತ್ತು ಕೊಟ್ಟಿಲ್ಲ. ತನಿಖೆ ನಡೆಯುತ್ತಿರುವಾಗಲೇ ಹಲವು ತಿರುವುಗಳನ್ನು ಇದು ಪಡೆದುಕೊಂಡಿದ್ದು ದೂರುದಾರರನ್ನೇ ಅರೆಸ್ಟ್ ಮಾಡಲಾಯಿತು.
ಬಿಜೆಪಿ ಇದನ್ನು ಧರ್ಮಯುದ್ಧ ಎಂದು ಬಿಂಬಿಸುತ್ತಿದೆ. SIT ತನಿಖೆ ನಡೆಯುತ್ತಿರುವಾಗಲೇ ಕೆಲವು ಕಾಂಗ್ರೆಸ್ ನಾಯಕರೂ ಹೇಳಿಕೆಗಳನ್ನು ಕೊಡುವುದು ಕಂಡು ಬರುತ್ತಿದೆ.. ಡಿಸಿಎಂ ಡಿಕೆ ಶಿವಕುಮಾರ್, ಗೃಹಮಂತ್ರಿ ಪರಮೇಶ್ವರ್, ಲಕ್ಷ್ಮಿ ಹೆಬ್ಬಾಳ್ಕರ್ ಕೂಡ ಧರ್ಮಸ್ಥಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮಾತನಾಡದಂತೆ ವಾರ್ನ್ ಮಾಡಿದ್ದಾರೆ. ಹಾಗಾಗಿ ಒಬ್ಬ ವಿರೋಧಪಕ್ಷದ ಹಿರಿಯ ನಾಯಕಿಯಾಗಿ ನಾವು ನಿಮಗೆ ಪತ್ರ ಬರೆಯುತ್ತಿದ್ದೇವೆ/ 2018ರ ಉಗ್ರಪ್ಪ ವರದಿಯನ್ನು SIt ತನಿಖೆಯಲ್ಲಿ ಪರಿಗಣಿಸಬೇಕು. ಈ ಪ್ರಕರಣದ ಸಂತ್ರಸ್ಥರಿಗೆ ನ್ಯಾಯ ಸಿಗಬೇಕು. ಕಾಂಗ್ರೆಸ್ ನಾಯಕರು SIT ತನಿಖೆಯ ವಿರುದ್ಧ ಹೇಳಿಕೆಗಳನ್ನು ಕೊಡಬಾರದು. ಸೌಜನ್ಯ ಪ್ರಕರಣದ ತನಿಖೆ ನಡೆಸಿದ ಅಧಿಕಾರಿಗಳನ್ನೂ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಮಹಿಳಾ ಸಂಘಟನೆಗಳು ಪತ್ರ ಬರೆದಿವೆ.