ನಿರ್ಬಂಧ ಸಡಿಲ: ತಲಕಾವೇರಿ ತೀರ್ಥೋದ್ಭವ ವೀಕ್ಷಣೆಗೆ ಅವಕಾಶ

By Kannadaprabha NewsFirst Published Oct 7, 2021, 9:24 AM IST
Highlights

*  ತಲಕಾವೇರಿ ತೀರ್ಥೋದ್ಭವ: ಭಕ್ತರಿಗೆ ವಿಧಿಸಿದ್ದ ನಿರ್ಬಂಧ ಸಡಿಲ
*  ಉತ್ಸವ ವೀಕ್ಷಣೆಗೆ ಭಕ್ತರಿಗೆ ಅವಕಾಶ
*  ವಾಹನಗಳು ತೆರಳಲು ಅನುಮತಿ
 

ಮಡಿಕೇರಿ(ಅ.07): ತಲಕಾವೇರಿ(Kaveri) ತೀರ್ಥೋದ್ಭವ ವೇಳೆ ಭಕ್ತರಿಗೆ ವಿಧಿಸಿದ್ದ ನಿಯಮಗಳನ್ನು ಸಡಿಲಗೊಳಿಸಲಾಗಿದೆ. ಸರ್ಕಾರ ಭಕ್ತರ ಭಾವನೆಗೆ ಗೌರವ ನೀಡಿದ್ದು, ಅ.17ರ ತೀರ್ಥೋದ್ಭವ ವೀಕ್ಷಣೆಗೆ ಭಕ್ತರಿಗೆ(Devotees) ಅವಕಾಶ ನೀಡಲಾಗಿದೆ. ಆದರೆ ಪುಣ್ಯಸ್ನಾನ ಮಾಡಲು ಅವಕಾಶವಿಲ್ಲ ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ್‌ ಪೂಜಾರಿ(Kota Shrinivas Poojari) ತಿಳಿಸಿದ್ದಾರೆ.

ಮಡಿಕೇರಿಯಲ್ಲಿ(Madikeri) ಬುಧವಾರ ಶಾಸಕರು, ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಲಕಾವೇರಿ ತೀರ್ಥೋದ್ಭವಕ್ಕೆ ಭಕ್ತರ ವಾಹನಗಳಿಗೆ ತಲಕಾವೇರಿ ವರೆಗೂ ಪ್ರವೇಶಾವಕಾಶ ಮಾಡಲಾಗಿದೆ. ಕೋವಿಡ್‌ ಪರೀಕ್ಷಾ ವರದಿ(Covid Report), ಲಸಿಕೆ(Vaccine) ಕಡ್ಡಾಯದಿಂದ ವಿನಾಯಿತಿ ನೀಡಲಾಗಿದೆ. ಕೋವಿಡ್‌ ನಿಯಮಗಳನ್ನು ಸ್ವಯಂ ಪಾಲಿಸಿ ಭಕ್ತರು ಕಾವೇರಿ ಕ್ಷೇತ್ರಕ್ಕೆ ಮುಕ್ತವಾಗಿ ಬರಬಹುದು ಎಂದು ಹೇಳಿದರು.

ಭಕ್ತರ ಭಾವನೆಗೆ ಗೌರವ: 

ಕೊಡಗಿನ(Kodagu) ಭಕ್ತರ ಭಾವನೆಗೆ ಸರ್ಕಾರ ಗೌರವ ನೀಡಿದೆ. ಪವಿತ್ರ ತೀರ್ಥವನ್ನು ಕೊಂಡೊಯ್ಯಲು ಅವಕಾಶ ನೀಡಲಾಗಿದೆ. ಕೊಡಗಿನ ಜನ ಸ್ವಯಂ ನಿಯಮ ಪಾಲಿಸಿ ತೀರ್ಥೋದ್ಭವ ವೀಕ್ಷಿಸುತ್ತಾರೆ ಎಂಬ ನಂಬಿಕೆ ಇದೆ. ಈ ಬಾರಿ ಪುಣ್ಯ ಸ್ನಾನ ಮಾಡಲು ಅವಕಾಶ ಇಲ್ಲ. ಇನ್ನೂ ಹಲವು ದಿನಗಳಿದೆ. ಮುಂದೆ ನೋಡಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು. ಹೊರಗಿನ ಭಕ್ತರಿಗೆ ಯಾವುದೇ ನಿರ್ಬಂಧ ವಿಧಿಸಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.

 ತಲಕಾವೇರಿ ದರ್ಶನಕ್ಕೆ ನಿರ್ಬಂಧ : ಕುಲದವರಿಗೆ ಎದುರಾಗಿದೆ ಅವಕೃಪೆ ಆತಂಕ

ಶಾಸಕ ಅಪ್ಪಚ್ಚು ರಂಜನ್‌ ಮಾತನಾಡಿ, ತೀರ್ಥೋದ್ಭವ ಸಂದರ್ಭದಲ್ಲಿ ಭಕ್ತರಿಗೆ ತೊಂದರೆಯಾಗದಂತೆ ಸಭೆ ನಡೆಸಿ ಕೋವಿಡ್‌ ನಿಯಮದೊಂದಿಗೆ ತಲಕಾವೇರಿಗೆ ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.

ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ, 17ರಂದು ಮಧ್ಯಾಹ್ನ 1 ಗಂಟೆ 11 ನಿಮಿಷಕ್ಕೆ ಪವಿತ್ರ ಕಾವೇರಿ ತೀರ್ಥೋದ್ಭವ ಸಂಭವಿಸಲಿದ್ದು, ಜನರ ಬೇಡಿಕೆಗೆ ಮನ್ನಣೆ ನೀಡಿ ಕೈಗೊಳ್ಳಲಾದ ತೀಮಾನ ಮಾಡಲಾಗಿದೆ ಎಂದರು.

ವ್ಯವಸ್ಥಾಪನಾ ಸಮಿತಿ ಇಲ್ಲ:

ತಲಕಾವೇರಿ ವ್ಯವಸ್ಥಾಪನಾ ಸಮಿತಿಯಿಲ್ಲದೆ ಮೊದಲ ಬಾರಿಗೆ ತೀರ್ಥೋದ್ಭವ ಆಯೋಜಿಸಬೇಕಾಗಿದೆ. ಅ.7 ರಂದು ಭಾಗಮಂಡಲದಲ್ಲಿ ಸಭೆ ನಡೆಸಿ ತೀರ್ಥೋದ್ಭವ ವ್ಯವಸ್ಥಿತವಾಗಿ ನಡೆಯುವ ಬಗ್ಗೆ ಚರ್ಚಿಸಲಾಗುತ್ತದೆ. ತಲಕಾವೇರಿಯಲ್ಲಿ ಕೊಳದಲ್ಲಿ ತೀರ್ಥಸ್ನಾನಕ್ಕೆ ಅವಕಾಶ ಇಲ್ಲ. ಭಾಗಮಂಡಲದಲ್ಲಿ ಪುಣ್ಯ ಸ್ನಾನಕ್ಕೆ ಅವಕಾಶ ನೀಡುವ ಬಗ್ಗೆ ಸಭೆಯಲ್ಲಿ ತೀರ್ಮಾನ ಮಾಡಲಾಗುವುದು. ಸಭೆಯಲ್ಲಿ ಸಾಕಷ್ಟುಚರ್ಚೆಯ ಬಳಿಕ ತೀರ್ಥೋದ್ಭವ ಸಂದರ್ಭ ಕೈಗೊಳ್ಳಬೇಕಾದ ವ್ಯವಸ್ಥೆಗಳನ್ನು ಅಂತಿಮಗೊಳಿಸಲಾಗುತ್ತದೆ ಎಂದು ಹೇಳಿದರು.

ನಾನು ಯಾವುದೇ ಗೊಂದಲದ ಹೇಳಿಕೆ ನೀಡಿಲ್ಲ ಎಂದು ಶಾಸಕ ಕೆ.ಜಿ.ಬೋಪಯ್ಯ, ಗೊಂದಲ ಮಾಡಿದವರಿಂದಲೇ ಉತ್ತರ ಕೇಳಿ ಎಂದು ಬೋಪಯ್ಯ ಸುದ್ದಿಗಾರರಿಗೆ ಹೇಳಿಕೆ ನೀಡಿದರು. ಈ ಮೊದಲು ಉಸ್ತುವಾರಿ ಸಚಿವರ ಸಭೆಯಲ್ಲಿ ‘ಭಕ್ತರಿಗೆ ಅವಕಾಶ ಮಾಡಿಕೊಡಿ’ ಎಂದು ನೀವು ಹೇಳಿದ್ದೀರಲ್ಲ ಎಂಬ ಪತ್ರಕರ್ತರ ಪ್ರಶ್ನೆಗೆ, ‘ನೋ ಕಾಮೆಂಟ್ಸ್‌ , ಉಸ್ತುವಾರಿ ಸಚಿವರ ತೀಮಾರ್ನಗಳ ಬಗ್ಗೆ ಉತ್ತರಿಸಲಾರೆ’ ಎಂದು ಬೋಪಯ್ಯ ಹೇಳಿದರು.

ವಿಧಾನ ಪರಿಷತ್‌ ಸದಸ್ಯ ಸುನಿಲ್‌ ಸುಬ್ರಮಣಿ, ಜಿಲ್ಲಾಧಿಕಾರಿ ಚಾರುಲತಾ ಸೋಮಲ್‌, ಕರ್ನಾಟಕ ಪಶ್ಚಿಮಘಟ್ಟ ಕಾರ್ಯಪಡೆ ಸಮಿತಿ ಅಧ್ಯಕ್ಷ ರವಿ ಕುಶಾಲಪ್ಪ, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ರಮೇಶ್‌ ಹೊಳ್ಳ ಹಾಜರಿದ್ದರು.
ವಿರೋಧ ವ್ಯಕ್ತವಾಗಿತ್ತು

ತಲಕಾವೇರಿ ತೀರ್ಥೋದ್ಭವ ಸಂದರ್ಭದಲ್ಲಿ ಭಕ್ತರಿಗೆ ಹಲವು ನಿಯಮಗಳನ್ನು ಹೇರಲಾಗಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿತ್ತು. ವರ್ಷಕ್ಕೊಮ್ಮೆ ತಲಕಾವೇರಿಯಲ್ಲಿ ತೀರ್ಥೋದ್ಭವ ಸಂಭವಿಸುತ್ತದೆ. ಆದ್ದರಿಂದ ಭಕ್ತರಿಗೆ ಅವಕಾಶ ನೀಡಬೇಕೆಂಬ ಆಗ್ರಹ ಕೇಳಿ ಬಂದಿತ್ತು. ಶಾಸಕ ಕೆ.ಜಿ. ಬೋಪಯ್ಯ ಅವರು ಮುಖ್ಯಮಂತ್ರಿ ಅವರ ಬಳಿ ಭಕ್ತರಿಗೆ ಅವಕಾಶ ನೀಡಬೇಕೆಂದು ಮನವಿ ಮಾಡಿಕೊಂಡಿದ್ದರು.

ಸರ್ಕಾರ ಭಕ್ತರ ಭಾವನೆಗೆ ಗೌರವ ನೀಡಿದೆ. ಈ ಹಿನ್ನೆಲೆಯಲ್ಲಿ ತಲಕಾವೇರಿ ತೀರ್ಥೋದ್ಭವ ಸಂದರ್ಭ ಕೋವಿಡ್‌ ನಿಯಮಗಳನ್ನು ಪಾಲಿಸುವುದರೊಂದಿಗೆ ಭಕ್ತರಿಗೆ ತಲಕಾವೇರಿ ತೀರ್ಥೋದ್ಭವ ವೀಕ್ಷಣೆಗೆ ಅವಕಾಶ ನೀಡಲಾಗಿದೆ. ಕೋವಿಡ್‌ ಪರೀಕ್ಷಾ ವರದಿ ವಿನಾಯಿತಿ ನೀಡಲಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ್‌ ಪೂಜಾರಿ ತಿಳಿಸಿದ್ದಾರೆ.  

ಕಳೆದ ಸಭೆಯಲ್ಲಿ ಕೋವಿಡ್‌ ಹಿನ್ನೆಲೆ ಆರೋಗ್ಯದ ಹಿತದೃಷ್ಟಿಯಿಂದ ಕೆಲವು ನಿರ್ಬಂಧಗಳನ್ನು ವಿಧಿಸಲಾಗಿತ್ತು, ಆದರೆ ಕೋವಿಡ್‌ 19 ಪ್ರಕರಣಗಳು ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿರುವ ಹಿನ್ನಲೆ ಭಕ್ತಾದಿಗಳು ತಲಕಾವೇರಿಗೆ ತೆರಳಲು ಅವಕಾಶ ಮಾಡಲಾಗಿದೆ ಎಂದು ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್‌ ಹೇಳಿದ್ದಾರೆ.   

ಮೊದಲ ಬಾರಿಗೆ ತೀರ್ಥೋದ್ಭವ ಆಯೋಜಿಸಬೇಕಾಗಿದೆ. ಅ.7 ರಂದು ಭಾಗಮಂಡಲದಲ್ಲಿ ಸಭೆ ನಡೆಸಿ ತೀರ್ಥೋದ್ಭವ ವ್ಯವಸ್ಥಿತವಾಗಿ ನಡೆಯುವ ಬಗ್ಗೆ ಚರ್ಚಿಸಲಾಗುತ್ತದೆ ಎಂದು ವಿರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಹೇಳಿದ್ದಾರೆ. 
 

click me!