ಮಳೆ ಅನಾಹುತಕ್ಕೆ ಇಲಾಖೆಗಳು ತಕ್ಷಣ ಸ್ಪಂದಿಸಿ: ಡಿ.ಕೆ.ಶಿವಕುಮಾರ್‌ ಸೂಚನೆ

Published : Jul 25, 2023, 08:27 AM IST
ಮಳೆ ಅನಾಹುತಕ್ಕೆ ಇಲಾಖೆಗಳು ತಕ್ಷಣ ಸ್ಪಂದಿಸಿ: ಡಿ.ಕೆ.ಶಿವಕುಮಾರ್‌ ಸೂಚನೆ

ಸಾರಾಂಶ

ಮಳೆ ಅನಾಹುತ ಸಂಭವಿಸಿದಾಗ ಅಲ್ಲಿ ದೂರು ದಾಖಲಾಗುವ ಪರಿ, ಅದನ್ನು ಸಂಬಂಧಪಟ್ಟಇಲಾಖೆಗೆ ವರ್ಗಾಯಿಸುವುದು, ಮಳೆ ಅವಾಂತರಕ್ಕೆ ಪರಿಹಾರ ನೀಡಿದೆಯೇ ಎಂಬ ಬಗ್ಗೆ ತಿಳಿದುಕೊಳ್ಳುವ ವಿಧಾನ ಹೀಗೆ ಹಲವು ವಿಚಾರಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದ ಡಿ.ಕೆ.ಶಿವಕುಮಾರ್‌ 

ಬೆಂಗಳೂರು(ಜು.25):  ನಗರದಲ್ಲಿ ಮಳೆ ಅನಾಹುತ ತಡೆಗೆ ಬಿಬಿಎಂಪಿಯಿಂದ ಕೈಗೊಳ್ಳಲಾಗಿರುವ ಕ್ರಮಗಳು, ಇಂಟಿಗ್ರೇಟೆಡ್‌ ಕಮಾಂಡ್‌ ಆ್ಯಂಡ್‌ ಕಂಟ್ರೋಲ್‌ ಕೇಂದ್ರ ಕಾರ್ಯವೈಖರಿ ಕುರಿತಂತೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸೋಮವಾರ ರಾತ್ರಿ ಬಿಬಿಎಂಪಿ ಕೇಂದ್ರ ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬಿಬಿಎಂಪಿ ಅನೆಕ್ಸ್‌ ಕಟ್ಟಡದಲ್ಲಿ ಸ್ಥಾಪಿಸಲಾಗಿರುವ ಇಂಟಿಗ್ರೇಟೆಡ್‌ ಕಮಾಂಡ್‌ ಆ್ಯಂಡ್‌ ಕಂಟ್ರೋಲ್‌ ಕೇಂದ್ರಕ್ಕೆ ಭೇಟಿ ನೀಡಿದ ಡಿ.ಕೆ.ಶಿವಕುಮಾರ್‌, ಮಳೆ ಅನಾಹುತ ಸಂಭವಿಸಿದಾಗ ಅಲ್ಲಿ ದೂರು ದಾಖಲಾಗುವ ಪರಿ, ಅದನ್ನು ಸಂಬಂಧಪಟ್ಟಇಲಾಖೆಗೆ ವರ್ಗಾಯಿಸುವುದು, ಮಳೆ ಅವಾಂತರಕ್ಕೆ ಪರಿಹಾರ ನೀಡಿದೆಯೇ ಎಂಬ ಬಗ್ಗೆ ತಿಳಿದುಕೊಳ್ಳುವ ವಿಧಾನ ಹೀಗೆ ಹಲವು ವಿಚಾರಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಬೆಂಗ್ಳೂರು ಬಿಟ್ಟು ಉಳಿದೆಲ್ಲೆಡೆ ಭಾರೀ ಮಳೆಯಾಗುವ ಸಾಧ್ಯತೆ

ಈ ವೇಳೆ ಅಧಿಕಾರಿಗಳಿಗೆ ನಗರದಲ್ಲಿ ದಿನದಿಂದ ದಿನಕ್ಕೆ ಮಳೆ ಪ್ರಮಾಣ ಹೆಚ್ಚುತ್ತಿದೆ. ಅದಕ್ಕೆ ಕೈಗೊಳ್ಳಬೇಕಾದ ಕ್ರಮಗಳು, ಜನರಿಂದ ದೂರು ಬಂದರೆ ಅದನ್ನು ಕೂಡಲೇ ಪರಿಹರಿಸಲು ಜಲಮಂಡಳಿ, ಅಗ್ನಿ ಶಾಮಕ ದಳ ಹೀಗೆ ವಿವಿಧ ಇಲಾಖೆಗಳ ನಡುವೆ ಸಮನ್ವಯ ಸಾಧಿಸುವುದರ ಬಗ್ಗೆ ಸೂಚಿಸಿದರು.

ಈ ವೇಳೆ ಡಿ.ಕೆ.ಶಿವಕುಮಾರ್‌ ಅವರಿಗೆ ಮಾಹಿತಿ ನೀಡಿದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಅವರು, ಬಿಬಿಎಂಪಿಯ ಇಂಟಿಗ್ರೇಟೆಡ್‌ ಕಮಾಂಡ್‌ ಆ್ಯಂಡ್‌ ಕಂಟ್ರೋಲ್‌ ಕೇಂದ್ರವು ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿದೆ. ಸಾರ್ವಜನಿಕರು ದೂರವಾಣಿ ಸಂಖ್ಯೆ 1533ಗೆ ಕರೆ ಮಾಡಿ ಮಳೆ ಅನಾಹುತ ಮತ್ತು ನೆರವಿನ ಕುರಿತು ದೂರು ದಾಖಲಿಸಬಹುದಾಗಿದೆ. ಅದರ ಜತೆಗೆ ಎಲ್ಲ 8 ವಲಯಗಳಲ್ಲೂ ಪ್ರತ್ಯೇಕ ಸೂಕ್ತ ಸಿಬ್ಬಂದಿ ಮತ್ತು ಯಂತ್ರಗಳನ್ನು ನಿಯೋಜಿಸಲಾಗಿದೆ. ಜತೆಗೆ 8 ವಲಯಗಳಲ್ಲೂ ಶಾಶ್ವತ ನಿಯಂತ್ರಣ ಕೊಠಡಿ ಹಾಗೂ 64 ಉಪವಿಭಾಗಗಳಲ್ಲಿ ತಾತ್ಕಾಲಿಕ ಸಹಾಯವಾಣಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ವಿವರಿಸಿದರು.

ಮರ ಬೀಳುವುದು, ಮನೆಗಳಿಗೆ ನೀರು ನುಗ್ಗುವುದು ಸೇರಿದಂತೆ ಇನ್ನಿತರ ದೂರುಗಳು ಬಂದ ಕೂಡಲೆ ಸ್ಥಳಕ್ಕೆ ತೆರಳಿ ಪರಿಹಾರ ಕಾರ್ಯ ಕೈಗೊಳ್ಳಲು ಸಿಬ್ಬಂದಿ ನೇಮಿಸಲಾಗಿದೆ. ಮಳೆಯಿಂದ ಬೀಳುವ ಮರ, ರೆಂಬೆಗಳ ತೆರವಿಗೆ 28 ತಂಡಗಳನ್ನು ರಚಿಸಲಾಗಿದೆ. ನಿಯಂತ್ರಣ ಕೊಠಡಿಗಳಲ್ಲಿ ಮೋಟಾರು ಪಂಪ್‌, ವಾಹನಗಳು ಸೇರಿದಂತೆ ಅಗತ್ಯ ಪರಿಕರಗಳನ್ನು ಕಾಯ್ದಿರಿಸಲಾಗಿದೆ. ಪ್ರತಿ ನಿಯಂತ್ರಣ ಕೊಠಡಿಯೊಂದಿಗೂ ಅಗ್ನಿಶಾಮಕ ದಳ ಹಾಗೂ ಎಸ್‌ಡಿಆರ್‌ಎಫ್‌ ಸಿಬ್ಬಂದಿ ನಿರಂತರ ಸಂಪರ್ಕದಲ್ಲಿರುವಂತೆ ವ್ಯವಸ್ಥೆ ಮಾಡಲಾಗಿದೆ. ಮಳೆಗಾಲದಲ್ಲಿ ಪ್ರವಾಹಕ್ಕೆ ತುತ್ತಾಗುವ 198 ಸೂಕ್ಷ್ಮ ಪ್ರದೇಶಗಳಲ್ಲಿ ಗುರುತಿಸಲಾಗಿದೆ. ಅದರಲ್ಲಿ 118 ಪ್ರದೇಶಗಳಲ್ಲಿ ಶಾಶ್ವತ ಪರಿಹಾರ ಒದಗಿಸಲಾಗಿದ್ದು, ಉಳಿದ 80 ಕಡೆ ತಾತ್ಕಾಲಿಕ ಕ್ರಮ ಕೈಗೊಳ್ಳಲಾಗಿದೆ ಎಂದರು.

ಕರ್ನಾಟಕದ 7 ಜಿಲ್ಲೆಗಳಲ್ಲಿ ನೆರೆಯಬ್ಬರ: ಮಲೆನಾಡಿನಲ್ಲಿ ಭೂಕುಸಿತ

ಬಿಬಿಎಂಪಿ ವಿಶೇಷ ಆಯುಕ್ತ ತ್ರಿಲೋಕಚಂದ್ರ, ಪ್ರಧಾನ ಎಂಜಿನಿಯರ್‌ ಬಿ.ಎಸ್‌. ಪ್ರಹ್ಲಾದ್‌ ಇತರರಿದ್ದರು.

ಕಸದ ಲಾರಿ ವಿವರ ಕೇಳಿದ ಡಿಸಿಎಂ

ಈ ವೇಳೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಘನತ್ಯಾಜ್ಯ ನಿರ್ವಹಣೆ ಕುರಿತಂತೆ ಸಂಪೂರ್ಣ ಮಾಹಿತಿ ನೀಡುವಂತೆ ಮುಖ್ಯ ಆಯುಕ್ತರಿಗೆ ಡಿ.ಕೆ.ಶಿವಕುಮಾರ್‌ ಸೂಚಿಸಿದರು. ಅದರಲ್ಲೂ ತ್ಯಾಜ್ಯ ಸಂಗ್ರಹಿಸಿ, ವಿಲೇವಾರಿ ಮಾಡುವ ಗುತ್ತಿಗೆದಾರರು, ಲಾರಿಗಳು, ಆಟೋ ಟಿಪ್ಪರ್‌ಗಳು ಸೇರಿದಂತೆ ಇನ್ನಿತರ ವಿವರವನ್ನು ನೀಡುವಂತೆ ತಿಳಿಸಿದರು.

PREV
Read more Articles on
click me!

Recommended Stories

ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ
Bengaluru Weather: ರಾಜ್ಯಕ್ಕೆ ಈಶಾನ್ಯ ಮಾರುತ- ದಶಕದ ದಾಖಲೆಯ ಚಳಿಗೆ ಸಿದ್ಧರಾಗಿ; ಬೆಂಗಳೂರು ಸ್ಥಿತಿ ಏನು ನೋಡಿ!