ಅಕ್ರಮ ಮರಳು, ಮಟ್ಕಾ ದಂಧೆ ವಿರುದ್ಧ ಡಿಸಿಎಂ ಸವದಿ ಕೆಂಡಾಮಂಡಲ

By Kannadaprabha NewsFirst Published Jan 26, 2021, 3:06 PM IST
Highlights

ಭದ್ರಾದಿಂದ 4 ಟಿಎಂಸಿ ನೀರು ಪಡೆಯುವುದಕ್ಕೆ ಕ್ರಮ| ಯಾವುದೇ ಕಾರಣಕ್ಕೂ ಬೆಳೆ ಒಣಗಲು ಬಿಡಬಾರದು| ನವಲಿ ಜಲಾಶಯ ಅನುಷ್ಠಾನಕ್ಕೆ ಸಚಿವ ಸಂಪುಟದಲ್ಲಿ ಚರ್ಚಿಸಲಾಗಿದೆ. ಮುಂಬರುವ ದಿನಗಳಲ್ಲಿ ಶಾಶ್ವತ ಪರಿಹಾರ ಆಗಲಿದೆ: ಲಕ್ಷ್ಮಣ ಸವದಿ| 

ರಾಯಚೂರು(ಜ.26): ಜಿಲ್ಲೆಯಾದ್ಯಂತ ಎತೇಚ್ಛವಾಗಿ ಅಕ್ರಮ ಮರಳು ಸಾಗಾಣಿಕೆ ಹಾಗೂ ಮಟ್ಕಾ ದಂಧೆಗಳು ಸಾಗುತ್ತಿದ್ದು, ಡಿಸಿ, ಎಸ್ಪಿ ಅವರ ಗಮನಕ್ಕಿದ್ದರೂ ಅದನ್ನು ತಡೆಯುವ ಪ್ರಯತ್ನಗಳು ಸಾಗಿಸಿಲ್ಲ ಇದರಿಂದ ನಾನು ಇದಲ್ಲಿ ಶಾಮೀಲಾಗಿದ್ದೇನೆ ಎನ್ನುವ ತಪ್ಪು ಸಂದೇಶ ಸಂದೇಶ ಸಾರ್ವಜನಿಕರಿಗೆ ರವಾನೆಯಾಗಲಿದ್ದು ಈ ಕೂಡಲೇ ಅಕ್ರಮ ಚಟುವಟಿಕೆಗಳ ಕಡಿವಾಣಕ್ಕೆ ಮುಂದಾಗಬೇಕು, ಭೂ ಇಲಾಖೆಯ ಅಧಿಕಾರಿಯನ್ನು ಅಮಾನಗೊಳಿಸಬೇಕು ಇಲ್ಲವಾದಲ್ಲಿ ಅದಕ್ಕೆ ನಿಮ್ಮನ್ನೆ ಹೊಣೆಗಾರಿಕೆಯನ್ನಾಗಿ ಮಾಡಬೇಕಾಗುತ್ತದೆ.

ನಗರದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಮಾತನಾಡಿ, ಜಿಲ್ಲೆಯ ಅಕ್ರಮ ಚಟುವಟಿಕೆಗಳ ನಿಯಂತ್ರಿಸುವಲ್ಲಿ ವಿಫಲತೆ ಕಂಡಿರುವ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್‌ ಇಲಾಖೆ ವಿರುದ್ಧ ಸೋಮವಾರ ಹೀಗೆ ಕೆಂಡಮಂಡಲಗೊಂಡರು. ಜಿಲ್ಲೆ ಯಾವುದೇ ಅಧಿಕಾರಿಗಳಿಂದಲೂ ಇಲ್ಲಿವರೆಗೂ ಒಂದೇ ಒಂದು ಕಪ್‌ ಚಹ ಕುಡಿದಿಲ್ಲ. ಒಂದು ಪೈಸೆ ಹಣವನ್ನೂ ಪಡೆದಿಲ್ಲ. ಆದರೆ, ನನ್ನನ್ನು ದುರುಪಯೋಗ ಮಾಡಿಕೊಳ್ಳುವ ಕುತಂತ್ರವನ್ನು ನಡೆಸಿರುವುದು ಸಹಿಸುವುದಿಲ್ಲವೆಂದು ಗುಡುಗಿದರು.

ಜಿಲ್ಲೆಯಲ್ಲಿ ಅಕ್ರಮ ಮರಳು ಸಾಗಾಣಿಕೆ ದಂಧೆ ಹಾಗೂ ಮಟ್ಕಾ ಹಾವಳಿ ನಡೆಯುತ್ತಿದ್ದರೂ ಏಕೆ ಯಾವ ಕ್ರಮ ಕೈಗೊಂಡಿಲ್ಲ. ಎಲ್ಲ ಅಕ್ರಮಗಳಿಗೆ ಅಧಿಕಾರಿಗಳೇ ಸಹಕಾರ ನೀಡುತ್ತಿದ್ದಾರೆ ಎನ್ನುವುದಕ್ಕೆ ಪುಷ್ಟಿನೀಡುವಂತಾಹ ವರ್ತಿಸುತ್ತಿದ್ದು, ಅಕ್ರಮ ಮರಳಿಗೆ ಪರವಾನಗಿ ನೀಡುತ್ತಿರುವ ಗಣಿ ಇಲಾಖೆಯ ಹಿರಿಯ ವಿಜ್ಞಾನಿಯನ್ನು ಅಮಾನತು ಮಾಡಬೇಕು. ಯಾವುದೇ ಕಾರಣಕ್ಕೂ ಅಕ್ರಮ ಮರಳುಗಾರಿಕೆ ನಡೆಸಲು ಆಸ್ಪದ ನೀಡಬಾರದು. ಎಷ್ಟೇ ಪ್ರಭಾವಿಗಳೂ ಇದ್ದರೂ ಪ್ರಕರಣ ದಾಖಲಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಮಸ್ಕಿ: ಕಂಬಕ್ಕೆ ಡಿಕ್ಕಿ ಹೊಡೆದ ಬೈಕ್‌, ಹಸೆಮಣೆ ಏರಬೇಕಿದ್ದ ವಧು ಸೇರಿ ಮೂವರ ದುರ್ಮರಣ

ಅಧಿಕೃತ ಕೇಂದ್ರಗಳಿಂದಲೇ ಮರಳು ತೆಗೆದುಕೊಂಡು ಹೋಗಬೇಕು. ಯಾವುದೇ ರಾಜಕಾರಣಿ ದೂರವಾಣಿ ಕರೆ ಮಾಡಿದರೂ ಕಾನೂನು ಪ್ರಕಾರವೇ ಕ್ರಮ ಜರುಗಿಸಬೇಕು. ಜಿಲ್ಲೆಯಲ್ಲಿ ಒಂದೇ ಒಂದು ಮಟ್ಕಾ ಪ್ರಕರಣ ಕಂಡುಬಂದರೆ, ಸಂಬಂಧಿಸಿದ ಠಾಣೆಯ ಪಿಎಸ್‌ಐ ಅಮಾನತ್ತಿನ ಕ್ರಮ ಜರುಗಿಸುವಂತೆ ಡಿಸಿ,ಎಸ್ಪಿಗೆ ನಿರ್ದೇಶನ ನೀಡಿದರು.

ತುಂಗಭದ್ರಾ ಎಡದಂಡೆ ಕಾಲುವೆ ವ್ಯಾಪ್ತಿಯ ಸಿರವಾರ ಹಾಗೂ ಮಾನ್ವಿ ತಾಲೂಕುಗಳ ಕೊನೆಯ ಭಾಗದಲ್ಲಿ ನೀರು ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ ಎನ್ನುವುದು ಶಾಸಕರ, ರೈತರ ಆಗ್ರಹವಾಗಿದೆ. ಸದ್ಯದ ನೀರಿನ ಪ್ರಮಾಣ ಹೆಚ್ವಿಸಿ ಟಿಎಲ್‌ಬಿಸಿ 69 ಮೈಲಿಗೆ ನೀರು ತಲುಪಿಸಬೇಕಾಗಿದೆ. ಹೊಸಪೇಟೆಯಲ್ಲಿ ಭಾನುವಾರ ನೀರಾವರಿ ಇಲಾಖೆಯ ಮುಖ್ಯ ಎಂಜಿನಿಯರ್‌ ಅವರೊಂದಿಗೆ ಸಭೆ ಮಾಡಿದ್ದೇವೆ. ಅಧಿಕಾರಿಗಳು ಕಾಲುವೆ ಭಾಗಕ್ಕೆ ಪರಿಶೀಲಿಸದೆ ಇರುವುದರಿಂದ ಈ ಸಮಸ್ಯೆ ಉದ್ಭವ ಆಗುತ್ತಿದೆ. ಅನಗತ್ಯ ನೀರು ಪಡೆಯುವುದಕ್ಕೆ ಕಡಿವಾಣ ಹಾಕಬೇಕು. ಭದ್ರಾದಿಂದ 4 ಟಿಎಂಸಿ ನೀರು ಪಡೆಯುವುದಕ್ಕೆ ಕ್ರಮ ಕೈಗೊಳ್ಳಲಾಗುವುದು. ಯಾವುದೇ ಕಾರಣಕ್ಕೂ ಬೆಳೆ ಒಣಗಲು ಬಿಡಬಾರದು. ನವಲಿ ಜಲಾಶಯ ಅನುಷ್ಠಾನಕ್ಕೆ ಸಚಿವ ಸಂಪುಟದಲ್ಲಿ ಚರ್ಚಿಸಲಾಗಿದೆ. ಮುಂಬರುವ ದಿನಗಳಲ್ಲಿ ಶಾಶ್ವತ ಪರಿಹಾರ ಆಗಲಿದೆ ಎಂದು ಸಚಿವರು ತಿಳಿಸಿದರು.

ಸಭೆಯಲ್ಲಿ ಕೊಪ್ಪಳ ಸಂಸದ ಸಂಗಣ್ಣ ಕರಡಿ, ಜಿಪಂ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೇ, ಡಿಸಿ ಆರ್‌.ವೆಂಕಟೇಶ ಕುಮಾರ, ಎಸ್ಪಿ ಪ್ರಕಾಶ ನಿಕ್ಕಂ, ಸಿಇಒ ಶೇಖ್‌ ತನ್ವೀರ್‌ ಆಸಿಫ್‌, ಶಾಸಕರಾದ ಕೆ.ಶಿವನಗೌಡ ನಾಯಕ, ದದ್ದಲ ಬಸನಗೌಡ, ವೆಂಕಟರಾವ ನಾಡಗೌಡ, ರಾಜಾ ವೆಂಕಟಪ್ಪ ನಾಯಕ, ಡಾ.ಶಿವರಾಜ ಪಾಟೀಲ್‌, ಎಂಎಲ್ಸಿ ಬಸವರಾಜ ಪಾಟೀಲ್‌ ಇಟಗಿ ಸೇರಿ ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿ ವರ್ಗದವರು ಹಾಜರಿದ್ದರು.
 

click me!