ಬೆಳಗಾವಿ ಜಿಲ್ಲೆಗೆ ಇನ್ನೊಂದು ಡಿಸಿಎಂ ಸ್ಥಾನ ಕೊಟ್ಟರೆ ಸಂತೋಷ: ಸವದಿ

By Suvarna NewsFirst Published Dec 9, 2019, 12:50 PM IST
Highlights

ಯಡಿಯೂರಪ್ಪ, ಲಕ್ಷ್ಮಣ ಸವದಿಯವರ ನಾಯಕತ್ವದಲ್ಲಿ ಚುನಾವಣೆ ಎದುರಿಸಿದ್ದೆವು| ಆಶೀರ್ವದಿಸಿದ ಕ್ಷೇತ್ರದ ಮತದಾರರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದ ಕುಮಟಳ್ಳಿ|  ಸ್ಪೀಕರ್ ಕಾನೂನು ಬಾಹಿರವಾಗಿ ನಮ್ಮನ್ನು ಅನರ್ಹ ಮಾಡಿದ್ದರು| ಬಿಜೆಪಿ ಹೈಕಮಾಂಡ್ ಯಾವುದೇ ಜವಾಬ್ದಾರಿ ಕೊಟ್ಟರೂ ನಿಭಾಯಿಸುತ್ತೇನೆ| ಇಂತದೇ ಸಚಿವ ಖಾತೆ ಬೇಕೆಂದು ನಾನು ಕೇಳುವುದಿಲ್ಲ|

ಬೆಳಗಾವಿ(ಡಿ.09): ಜಿಲ್ಲೆಯ ಅಥಣಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗಜಾನನ ಮಂಗಸೂಳಿ ವಿರುದ್ಧ 41 ಸಾವಿರ ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಮಹೇಶ ಕುಮಟಳ್ಳಿ ಅವರು ಭರ್ಜರಿ ಗೆಲುವು ಸಾಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ನಿವಾಸದಲ್ಲಿ  ಬಿಜೆಪಿ ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮ ಪಟ್ಟಿದ್ದಾರೆ. 

ಬೆಳಗಾವಿಯ ಸದಾಶಿವ ನಗರದಲ್ಲಿರುವ ಲಕ್ಷ್ಮಣ ಸವದಿ ನಿವಾಸಕ್ಕೆ ಆಗಮಿಸಿದ ಕಾರ್ಯಕರ್ತತು ಮಹೇಶ್ ಕುಮಟಳ್ಳಿ ಮತ್ತು ಲಕ್ಷ್ಮಣ ಸವದಿಗೆ ಮಾಲಾರ್ಪಣೆ ಮಾಡಿ, ಸಿಹಿ ತಿನ್ನಿಸಿದ ಬಿಜೆಪಿ ಪರ ಘೋಷಣೆಗಳನ್ನು ಕೂಗಿ ಸಂಭ್ರಮಾಚರಣೆ ಮಾಡಿದ್ದಾರೆ. ಈ ವೇಳೆ ಶಾಸಕ ದುರ್ಯೋಧನ ಐಹೊಳೆ, ವಿಧಾನ ಪರಿಷತ್ ಸದಸ್ಯ ಮಹಾಂತೇಶ್ ಕವಟಗಿಮಠ ಅವರು ವಿಜೇತ ಅಭ್ಯರ್ಥಿಗೆ ಕುಮಟಳ್ಳಿ ಅವರಿಗೆ ಮಾಲಾರ್ಪಣೆ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ. 

LIVE: ಮುಕ್ತಾಯದ ಹಂತಕ್ಕೆ ಮತ ಎಣಿಕೆ, 12 ಕ್ಷೇತ್ರಗಳಲ್ಲಿ ಬಿಜೆಪಿ ಗೆಲವು ಸಾಧ್ಯತೆ

ಬಳಿಕ ಸುವರ್ಣ ನ್ಯೂಸ್ ಜೊತೆ ಮಾತನಾಡಿದ ವಿಜೇತ ಅಭ್ಯರ್ಥಿ ಮಹೇಶ್ ಕುಮಟಳ್ಳಿ ಅವರು, ಮುಖ್ಯಮಂತ್ರಿ  ಯಡಿಯೂರಪ್ಪ, ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿಯವರ ನಾಯಕತ್ವದಲ್ಲಿ ಚುನಾವಣೆ ಎದುರಿಸಿದ್ದೆವು, ಆಶೀರ್ವದಿಸಿದ ಕ್ಷೇತ್ರದ ಮತದಾರರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ವಿರೋಧ ಪಕ್ಷಗಳ ಟೀಕೆಗೆ ಜನರು ತಕ್ಕ ಉತ್ತರವನ್ನೇ  ಕೊಟ್ಟಿದ್ದಾರೆ ಎಂದು ತಿಳಿಸಿದ್ದಾರೆ. 

ಕ್ಷೇತ್ರದ ಕಾರ್ಯಕರ್ತರನ್ನು ಒಟ್ಟಾಗಿ ತೆಗೆದುಕೊಂಡು ಹೋಗುತ್ತೇನೆ. ಅಂದಿನ ಸ್ಪೀಕರ್ ಆಗಿದ್ದ ರಮೇಶ್ ಕುಮಾರ್ ಅವರು ಕಾನೂನು ಬಾಹಿರವಾಗಿ ನಮ್ಮನ್ನು ಅನರ್ಹ ಮಾಡಿದ್ದರು.ಬಿಜೆಪಿ ಹೈಕಮಾಂಡ್ ಯಾವುದೇ ಜವಾಬ್ದಾರಿ ಕೊಟ್ಟರೂ ನಿಭಾಯಿಸುತ್ತೇನೆ. ಇಂತದೇ ಸಚಿವ ಖಾತೆ ಬೇಕೆಂದು ನಾನು ಕೇಳುವುದಿಲ್ಲ ಎಂದು ಹೇಳಿದ್ದಾರೆ. 

ಬಳಿಕ ಮಾತನಾಡಿದ ಲಕ್ಷ್ಮಣ ಸವದಿ ಅವರು, ಆಶೀರ್ವದಿಸಿದ ಮತದಾರರಿಗೆ, ಗೆಲುವಿಗೆ ದುಡಿದ ಬಿಜೆಪಿ ಕಾರ್ಯಕರ್ತರಿಗೆ ಧನ್ಯವಾದಗಳನ್ನು ಹೇಳುತ್ತೇನೆ. ಸುಭದ್ರ ಸರ್ಕಾರ ಇರಬೇಕು, ಒಳ್ಳೆಯ ಆಡಳಿತ ಕೊಡಬೇಕೆಂದು ಜನರು ನಮ್ಮನ್ನು ಬೆಂಬಲಿಸಿದ್ದಾರೆ‌. ಮಹೇಶ್ ಕುಮಟಳ್ಳಿಗೆ ಯಾವುದೇ ಸಚಿವ ಸ್ಥಾನ ಕೊಟ್ಟರೂ ನಿಭಾಯಿಸುತ್ತಾರೆ. ಸಹಕಾರ ಖಾತೆ ನೀಡಿದ್ರ ಅನುಕೂಲ ಎಂದು ಹೇಳಿದ್ದೇವೆ. ಯಾರಿಗೆ ಯಾವ ಸಚಿವ ಸ್ಥಾನ ಕೊಡಬೇಕೆಂಬುದನ್ನು ಸಿಎಂ ತೀರ್ಮಾನಿಸುತ್ತಾರೆ‌ ಎಂದು ಹೇಳಿದ್ದಾರೆ. 

ಎರಡು ಕ್ಷೇತ್ರದಲ್ಲೂ ಕಾರ್ಯಕರ್ತರು ದೊಡ್ಡ ಪ್ರಮಾಣದಲ್ಲಿ ಶ್ರಮಿಸಿದ್ದಾರೆ. ಅಥಣಿ, ಕಾಗವಾಡದಲ್ಲಿ ದೊಡ್ಡ ಅಂತರದ ಗೆಲುವು ಸಿಕ್ಕಿದೆ. ಉಪಚುನಾವಣೆಯಲ್ಲಿ ಗೆದ್ದವರಿಗೆಲ್ಲ‌ ಮಂತ್ರಿ ಸ್ಥಾನ ಪಕ್ಕಾ ಆಗಿದೆ. ವಿರೋಧ ಪಕ್ಷಗಳ ಆರೋಪಗಳಿಗೆ ವಿಶ್ಲೇಷಣೆಯ ಮಾಡುವ ಅಗತ್ಯವಿಲ್ಲ, ನಮ್ಮ ಜಿಲ್ಲೆಗೆ ಇನ್ನೊಂದು ಡಿಸಿಎಂ ಸ್ಥಾನ ಕೊಟ್ಟರೆ ಸಂತೋಷದಿಂದ ಸ್ವಾಗತಿಸುತ್ತೇವೆ. ಬೆಳಗಾವಿ ಜಿಲ್ಲೆಗೆ ಎರಡು ಡಿಸಿಎಂ ಸ್ಥಾನ ನೀಡಿದ ಹೊಸ ದಾಖಲೆ ಸೃಷ್ಟಿಯಾಗತ್ತದೆ ಎಂದು ಹೇಳಿದ್ದಾರೆ. 
 

click me!